Advertisement

ಸಿಜಿಕೆಯೆಂಬ ಮೂರಕ್ಷರದಲ್ಲಿದೆ ಮೋಡಿ: ಪಂಡಿತಾರಾಧ್ಯ ಶ್ರೀ

05:58 PM Jan 13, 2021 | Team Udayavani |

ಹೊಸದುರ್ಗ: ಸಿಜಿಕೆ ಎನ್ನುವ ಮೂರು ಅಕ್ಷರಗಳಲ್ಲಿ ಏನೋ ಮೋಡಿ ಇದೆ. ಈ ಕಾರಣಕ್ಕಾಗಿಯೇ ನಮ್ಮ ಅವರ ನಡುವೆ ಅವಿನಾಭಾವ ಸಂಬಂಧ ಇತ್ತು. ವ್ಯಕ್ತಿ ದೊಡ್ಡವನಾಗೋದು ಅವನಲ್ಲಿರೋ ಸಂಪತ್ತಿನಿಂದ ಅಲ್ಲ, ಒಳ್ಳೆ ಗುಣ, ನಡತೆಗಳಿಂದ ಎಂದು ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಸಾಣೆಹಳ್ಳಿಯ ಎಸ್‌.ಎಸ್‌. ರಂಗಮಂದಿರದಲ್ಲಿ ನಡೆದ “ಸಿಜಿಕೆ ನೆನಪು’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಸಿಜಿಕೆ ಯಾವುದೇ ಸ್ವಾಮಿಗಳನ್ನು ನಂಬುವವರಲ್ಲ. ಆದರೆ ನಮ್ಮನ್ನು ಅವರು ಸಂಪೂರ್ಣವಾಗಿ ನಂಬಿದ್ದರು. ಅಷ್ಟೇ ಅಲ್ಲ, ಅವರು ಇರುವವರೆಗೂ ಶಿವಸಂಚಾರದ ಹೊಣೆಗಾರಿಕೆಯನ್ನು ತಾವೇ ತೆಗೆದುಕೊಂಡು ನಿರ್ವಹಿಸುತ್ತಿದ್ದರು ಎಂದು ಸ್ಮರಿಸಿದರು.

ನಮ್ಮ ಮಠಕ್ಕೆ ಬಂದ ಹಲವರು ತಮ್ಮ ಬದುಕನ್ನು ಸನ್ಮಾರ್ಗದತ್ತ ತೆಗೆದುಕೊಂಡು ಹೋಗಿದ್ದಾರೆ. ಸಿಜಿಕೆ ತಾವು ಸನ್ಮಾರ್ಗದತ್ತ ನಡೆದಿದ್ದೇ ಅಲ್ಲದೆ ಸಾಣೇಹಳ್ಳಿಯ ರಂಗ ಪರಿಸರವನ್ನೇ ಎತ್ತರಕ್ಕೇರಿಸಿದರು. ಸಿಜಿಕೆ ಮತ್ತವರ ಅನೇಕ ಗೆಳೆಯರು ಸ್ವಾಮಿಗಳನ್ನು, ಮಠ ಪರಂಪರೆಯನ್ನು ವಿರೋ ಧಿಸುತ್ತಿದ್ದರು. ಆದರೆ ಅವರು ನಮ್ಮೊಟ್ಟಿಗೆ ಸಂಪರ್ಕ ಬೆಳೆಸಿದ ಮೇಲೆ ನಾವು ಇಷ್ಟು ದಿನ ಮಠಗಳಿಂದ ದೂರ ಇದ್ದು ತಪ್ಪು ಮಾಡಿದೆವು ಎನ್ನುತ್ತಿದ್ದರು ಎಂದರು.

ಇದನ್ನೂ ಓದಿ:ಬರೋಬ್ಬರಿ ಏಳು ಕೆಜಿ ತೂಕದ ಗೆಣಸು ಬೆಳೆದ ರೈತ

ಸಿಜಿಕೆ ಕುರಿತು “ನುಡಿ ನಮನ’ ಸಲ್ಲಿಸಿದ ಅಧ್ಯಾಪಕ ಎಚ್‌.ಎಸ್‌. ದಾಮೇಶ್‌ ಮಾತನಾಡಿ,ಅಂಗವೈಕಲ್ಯ ಸಿ.ಜಿ. ಕೃಷ್ಣಸ್ವಾಮಿಯವರ ದೇಹಕ್ಕಿತ್ತೇ ಹೊರತು ಮನಸ್ಸಿಗಲ್ಲ. ಅವರ ಕನಸಿಗೆ ಮಿತಿ ಇರಲಿಲ್ಲ. ಕಂಡ ಕನಸನ್ನು ನನಸು ಮಾಡುವ ತನಕ ವಿರಮಿಸುತ್ತಿರಲಿಲ್ಲ. ಇದಕ್ಕೆ ಉದಾಹರಣೆ ಸಾಣೇಹಳ್ಳಿಯಲ್ಲಿರುವ ಶ್ರೀ ಶಿವಕುಮಾರ ಬಯಲು ರಂಗಮಂದಿರ. ಇದರ ಶಂಕುಸ್ಥಾಪನೆಯ ಆಹ್ವಾನ ಪತ್ರಿಕೆಯಲ್ಲಿಯೇ ಅದರ ಉದ್ಘಾಟನಾ ದಿನವನ್ನೂ ನಮೂದಿಸಿದ್ದರು. ಅದರಂತೆ ಉದ್ಘಾಟನೆಯೂ ಆಯಿತು. ಪಂಡಿತಾರಾಧ್ಯ ಶ್ರೀಗಳಿಗೆ ರೆಪರ್ಟರಿಯೊಂದನ್ನು ಆರಂಭಿಸುವಂತೆ ಪ್ರೇರಣೆ ನೀಡಿ ಅದಕ್ಕೆ “ಶಿವಸಂಚಾರ’ ಎಂದು ಹೆಸರಿಟ್ಟವರೂ ಅವರೇ. ಇದುವರೆಗೂ ಅವರು ಇದ್ದಿದ್ದರೆ ಈಗಿರುವ ಸಾಣೇಹಳ್ಳಿಗಿಂತ ಹತ್ತು ಪಟ್ಟು ಹೆಚ್ಚು ಬೆಳೆಯುತ್ತಿತ್ತು ಎಂದು ಹೇಳಿದರು.

Advertisement

ಜಾನಪದ ಅಕಾಡೆಮಿಯ ಸದಸ್ಯೆ ಲಕ್ಷ್ಮೀದೇವಮ್ಮ ಉಪಸ್ಥಿತರಿದ್ದರು. ಸುಪ್ರಭೆ ಮತ್ತು ಮುಕ್ತ ವಚನಗೀತೆಗಳನ್ನು, ರಂಗಶಾಲೆಯ ಪ್ರಾಚಾರ್ಯ ಆರ್‌. ಜಗದೀಶ್‌ ಮತ್ತು ಸಂಗಡಿಗರು ರಂಗಗೀತೆಗಳನ್ನು ಹಾಡಿದರು. ಕಾರ್ಯಕ್ರಮದ ನಂತರ ವೈ.ಡಿ. ಬದಾಮಿ ನಿರ್ದೇಶನದ, ಶೃತಿ ಶರಣ್‌ಕುಮಾರ ಅಭಿನಯಿಸಿದ “ಬಣ್ಣ ಮಾಸಿದ ಮೇಲೆ’ ಏಕವ್ಯಕ್ತಿ ರಂಗಪ್ರದರ್ಶನ ನಡೆಯಿತು. ಅಧ್ಯಾಪಕ ಜಯಪ್ಪ ಕಾರ್ಯಕ್ರಮ ನಡೆಸಿಕೊಟ್ಟರು. ಸಿಜಿಕೆ ಸಮಾಧಿಗೆ ಪುಷ್ಪ ನಮನ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next