Advertisement

ಅಕ್ರಮ ಮರಳುಗಾರಿಕೆ: ಸ್ಥಳೀಯಾಡಳಿತದಿಂದ ಪರಿಶೀಲನೆ

07:12 PM Oct 22, 2021 | Team Udayavani |

ಶಿರ್ವ: ಶಿರ್ವ ಕಲ್ಲೊಟ್ಟು ತೆಂಕಬೆಟ್ಟು ಸೇತುವೆಯ ಸಮೀಪ ಕೇರಳ ಮೂಲದ ಕೋಶಿ ಎಂಬಾತನ ತೋಟದ ಬಳಿಯ ಜಾಗದಲ್ಲಿ ಪಾಪನಾಶಿನಿ ನದಿಯಿಂದ ದೋಣಿ ಹಾಗೂ ಹಿಟಾಚಿ ಯಂತ್ರ ಬಳಸಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ.

Advertisement

ರಾತ್ರಿ ಹಗಲು ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ನಾಗರಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್‌.ಪಾಟ್ಕರ್‌,ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್‌ ಮತ್ತು ಸಿಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಅಕ್ರಮ ದಂಧೆಕೋರರು ಯಂತ್ರ ಬಳಸಿ ಮರಳುಗಾರಿಕೆ ನಡೆಸುತ್ತಿದ್ದು ನಾಗರಿಕರಿಂದ ಗ್ರಾ.ಪಂ.ಗೆ  ದೂರು ಬಂದಿತ್ತು. ಪರಿಶೀಲನೆ ವೇಳೆ ಸ್ಥಳದಲ್ಲಿ 2 ಹಿಟಾಚಿ,1 ಲಾರಿ ಮತ್ತು 1 ದೋಣಿ ಇದ್ದು ನದಿಗೆ ಪೈಪ್‌ ಅಳವಡಿಸಿ ಯಂತ್ರದಿಂದ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಜಾಗದ ಮಾಲಕ ಕೋಶಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ:ಬಾಕಿ ಪಿಂಚಣಿ ಬಿಡುಗಡೆಗೆ ದೇವದಾಸಿಯರ ಒತ್ತಾಯ

ಅಧಿಕಾರಿಗಳಿಂದ ಉಡಾಫೆಯ ಉತ್ತರ

Advertisement

ಅಕ್ರಮ ಮರಳುಗಾರಿಕೆ ನಡೆಸಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವ ಬಗ್ಗೆ ಗಣಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲು ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಹಲವು ಬಾರಿ ಕರೆ ಮಾಡಿದಾಗ ಸ್ವೀಕರಿಸಿದ ಅಧಿಕಾರಿಯೋರ್ವರು ಸ್ಥಳೀಯ ಅಧಿಕಾರಿಗಳಿಗೆ ಮರಳುಗಾರಿಕೆಯ ಬಗ್ಗೆ ಮಾಹಿತಿ ಸಿಗದೇ ಇರುವಾಗ ಮಪಾಲದಲ್ಲಿರುವ ಇಲಾಖೆಯ ಅಧಿಕಾರಿಗಳಿಗೆ ಹೇಗೆ ಮಾಹಿತಿ ಸಿಗುತ್ತದೆ ಎಂಬ ಉಡಾಫೆಯ ಉತ್ತರ ಸಿಗುತ್ತದೆ.

ಕಳೆದ ಜುಲೈ ತಿಂಗಳಲ್ಲಿ ಕಾಪು ತಹಶೀಲ್ದಾರ್‌ ಪ್ರತಿಭಾ ಆರ್‌. ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಶಿರ್ವ ಪೊಲೀಸರ ಸಮಕ್ಷಮದಲ್ಲಿ 3 ಲಾರಿ ಮತ್ತು ಒಂದು ಜೆಸಿಬಿಯನ್ನು ವಶಪಡಿಸಿಕೊಂಡಿದ್ದು, ದಾಳಿಯ ವೇಳೆ ಆರೋಪಿಗಳು ಪರಾರಿಯಾಗಿದ್ದರು. ಇದೀಗ ಅದೇ ಸ್ಥಳದಲ್ಲಿ ಗಣಿ ಇಲಾಖಾಧಿಕಾರಿಗಳ ಕೃಪಾಕಟಾಕ್ಷದಲ್ಲಿ ರಾಜಾರೋಷವಾಗಿ ಹಗಲು ರಾತ್ರಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಸುಲಭವಾಗಿ ಕೈಗೆಟಕುವ ದರದಲ್ಲಿ ಬಡ ಜನರಿಗೆ ಮರಳು ಸಿಗುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂಚಾಯತ್‌ ಸಿಬಂದಿಗಳಾದ ಪ್ರೇಮನಾಥ್‌,ಮಾಧವ ಮತ್ತು ಗ್ರಾಮ ಕರಣಿಕರ ಸಹಾಯಕ ಭಾಸ್ಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next