Advertisement

ಶಿರ್ವ ಪಂಜಿಮಾರು ಪಾಲಮೆ: ಬಾವಿಗೆ ಬಿದ್ದ ಚಿರತೆ ರಕ್ಷಣೆ

01:00 AM Mar 08, 2019 | Team Udayavani |

ಶಿರ್ವ: ಇಲ್ಲಿಗೆ ಸಮೀಪದ ಪಂಜಿಮಾರು ಪಾಲಮೆ ಪಿಯೂಸ್‌ ಮೋನಿಸ್‌ ಅವರ ಮನೆಯಂಗಳದ ಆವರಣವಿರುವ ಬಾವಿಗೆ ಬಿದ್ದ ಸುಮಾರು 5 ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಗುರುವಾರ ಊರವರ ಸಹಕಾರದಿಂದ ಬಾವಿಯಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ.

Advertisement

ಬೆಳಗ್ಗೆ ಮನೆಯಂಗಳದ ಬಾವಿಯ ಪಂಪ್‌ಸೆಟ್‌ ಚಾಲೂ ಆಗದೇ ಇದ್ದುದನ್ನು ಗಮನಿಸಿದ ಮೋನಿಸ್‌ ಅವರು ಬಾವಿಗೆ ಇಣುಕಿದಾಗ ಯಾವುದೋ ಪ್ರಾಣಿ ಬಾವಿಗೆ ಬಿದ್ದಿದೆ ಎಂದು ತನ್ನ  ಅಳಿಯ ಫಲ್ಕೆ ವಿನ್ಸೆಂಟ್‌ಗೆ ಸುದ್ದಿ ಮುಟ್ಟಿಸಿದ್ದಾರೆ. ಅವರು ಬಂದು ನೋಡಿದಾಗ ಬಾವಿಯಲ್ಲಿ ಚಿರತೆ ಇದ್ದುದು ಕಂಡು ಬಂದಿದೆ. ತಕ್ಷಣ ಗ್ರಾ.ಪಂ.ಸದಸ್ಯ ಕೆ.ಆರ್‌.ಪಾಟ್ಕರ್‌ ಅವರ ಮೂಲಕ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದರು. ಚಿರತೆ ಯಾವಾಗ ಬಾವಿಗೆ ಬಿದ್ದಿದೆ ಎಂಬ ಖಚಿತ ಮಾಹಿತಿ ಇರದೆ ರಾತ್ರಿ ಬಾವಿಯ ಬದಿಯಿರುವ ಗೂಡಿನಲ್ಲಿರುವ ನಾಯಿ ಮರಿ ಕಾಣೆಯಾಗಿದ್ದು ತಿಂದು ಹೋಗುವಾಗ ಆಯ ತಪ್ಪಿ ಬಾವಿಗೆ ಬಿದ್ದಿದೆ ಎಂದು ಶಂಕಿಸಲಾಗಿದೆ. ಬಂಟಕಲ್ಲು, ಪಂಜಿಮಾರು ಪಾಲಮೆ ಪರಿಸರದ ನಾಗರಿಕರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಕೆಲವು ಸಮಯದಿಂದ ಪರಿಸರದ ನಾಟಿಕೋಳಿ, ಸಾಕು ನಾಯಿಗಳನ್ನು ಕೊಂದು ತಿನ್ನುತ್ತಿತ್ತು.

ಸುದ್ದಿ ತಿಳಿದ ಕೂಡಲೇ ಪಡುಬಿದ್ರಿ ವಲಯ ಅರಣ್ಯಾಧಿಕಾರಿ ನಾಗೇಶ್‌ ಬಿಲ್ಲವ ಅವರ ನೇತೃತ್ವದಲ್ಲಿ ಅರಣ್ಯ ರಕ್ಷಕರ ತಂಡ ಬೋನು ಬಾವಿಗಿಳಿಸಿದಾಗ ಚಿರತೆ ಬೋನು ಸೇರಿಕೊಂಡಿತ್ತು. ಬಳಿಕ ಬೋನನ್ನು ಬಾವಿಯಿಂದ ಮೇಲಕ್ಕೆತ್ತಿ ಚಿರತೆಯನ್ನು ಉಡುಪಿ ಅರಣ್ಯ ಇಲಾಖೆಗೆ ಕೊಂಡೊಯ್ಯಲಾಯಿತು. ಅರಣ್ಯ ಇಲಾಖೆಯ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಚಿರತೆಯನ್ನು ಕೊಲ್ಲೂರು ವನ್ಯಜೀವಿ ವಿಭಾಗದ ಅಭಯಾರಣ್ಯಕ್ಕೆ ಬಿಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

Advertisement

ಕಾರ್ಯಾಚರಣೆಯಲ್ಲಿ ಪಡುಬಿದ್ರಿ ಉಪವಲಯ ಅರಣ್ಯಾಧಿಕಾರಿ ನಾಗೇಶ್‌ ಬಿಲ್ಲವ, ಉಡುಪಿ ಉಪ ವಲಯ ಅರಣ್ಯಾಧಿಕಾರಿಗಳಾದ ಸುರೇಶ್‌ ಗಾಣಿಗ,ಜಯರಾಮ, ಅರಣ್ಯ ರಕ್ಷಕರಾದ ಜಯರಾಮ ಶೆಟ್ಟಿ, ಅಭಿಲಾಷ್‌, ಮಂಜು, ಗಣಪತಿ ನಾಯಕ್‌, ವಾಹನ ಚಾಲಕ ಜಾಯ್‌ ಭಾಗವಹಿಸಿದ್ದರು.

ಶಿರ್ವ ಗ್ರಾ. ಪಂ.ಸದಸ್ಯರಾದ ಕೆ.ಆರ್‌.ಪಾಟ್ಕರ್‌,ಕೊನ್ರಾಡ್‌ ಕ್ಯಾಸ್ತಲಿನೊ, ಉಮೇಶ್‌ಪಾಲಮೆ, ಅಬೂಬಕ್ಕರ್‌, ಪ್ರಸಾದ್‌ ಶೆಟ್ಟಿ ವಳದೂರು,ಪ್ರಕಾಶ್‌ ಪಾಲಮೆ ಹಾಗೂ ಊರವರು ಸಹಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next