Advertisement

ಯಕ್ಷಗಾನ ಪ್ರಶಸ್ತಿಗೆ ‘ಸಂಖ್ಯಾ’ಗ್ರಹಣ!

03:17 PM Dec 14, 2018 | |

ಶಿರಸಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ಘೋಷಿಸಿದ 2017ರ ಪ್ರಶಸ್ತಿ ಪ್ರದಾನಕ್ಕೆ ಮುಹೂರ್ತ ಫಿಕ್ಸ್‌ ಆಗದೇ ಇರುವ ಬೆನ್ನಲ್ಲೇ ಇದೀಗ 2018ರ ವರ್ಷ ಮುಗಿಯುತ್ತ ಬಂದರೂ ಪ್ರಸಕ್ತ ಸಾಲಿನ ಪ್ರಶಸ್ತಿ ಇನ್ನೂ ಪ್ರಕಟವಾಗಿಲ್ಲ.

Advertisement

2017ರ ಪ್ರಶಸ್ತಿ ಘೋಷಣೆಗೆ ವಿಧಾನ ಸಭೆ ಚುನಾವಣೆ, ಸದಸ್ಯರ ನೇಮಕಾತಿ ವಿಳಂಬಗಳು ಕಾರಣವಾಗಿದ್ದರೆ ಅದರ ಪ್ರದಾನಕ್ಕೆ ಸಚಿವೆ ಜಯಮಾಲರ ದಿನಾಂಕ ಹೊಂದಾಣಿಕೆ ಆಗದೇ ಇರುವದು ವಿಳಂಬವಾಗಿದೆ. ಇನ್ನೊಂದೆಡೆ ಸರ್ಕಾರ ಅಕಾಡೆಮಿ ಪ್ರಶಸ್ತಿ ಸಂಖ್ಯೆ ಹೆಚ್ಚಳಗೊಳಿಸಿ ಸಲ್ಲಿಸಿದ ನೂತನ ಪ್ರಸ್ತಾವನೆಗೆ ಇನ್ನೂ ಅಧಿಕೃತ ಮುದ್ರೆ ಬೀಳದೇ ಇರುವುದು 2018ನೇ ಸಾಲಿನ ಗೌರವ ಪ್ರಶಸ್ತಿ ಘೋಷಣೆಗೂ ಮೀನಮೇಷ ಎಣಿಸಲಾಗುತ್ತಿದೆ.

ಯಕ್ಷಗಾನ ಅಕಾಡೆಮಿ ಕಳೆದ ಬಜೆಟ್‌ನಲ್ಲಿ ಬಯಲಾಟ ಅಕಾಡೆಮಿಯಿಂದ ಬೇರೆಯಾಗಿತ್ತು. ಬಯಲಾಟ ಹಾಗೂ ಯಕ್ಷಗಾನ ಅಕಾಡೆಮಿ 10ರ ಸಂಖ್ಯೆಯಲ್ಲಿದ್ದ ಪ್ರಶಸ್ತಿಯನ್ನೂ ಹಿಸ್ಸೆ ಮಾಡಲಾಯಿತು. ಯಕ್ಷಗಾನ ಅಕಾಡೆಮಿಗೆ 5 ಗೌರವ ಪ್ರಶಸ್ತಿ ಹಾಗೂ ಒಂದು ಪಾರ್ತಿಸುಬ್ಬ ಪ್ರಶಸ್ತಿಯನ್ನಷ್ಟೇ 2017ನೇ ಸಾಲಿನಲ್ಲಿ ಘೋಷಿಸಿತು. ಪಾರ್ತಿ ಸುಬ್ಬ 1 ಲಕ್ಷ ರೂ. ಆದರೆ, ಗೌರವ ಪ್ರಶಸ್ತಿ 50 ಸಾ.ರೂ. ಆಗಲಿದೆ.

ಆದರೆ, ಯಕ್ಷಗಾನ, ಮೂಡಲಪಾಯ, ಗೊಂಬೆಯಾಟದಂತಹ ಅಪರೂಪದ ಹಾಗೂ ಇನ್ನೂ ಸರ್ಕಾರದ ಪ್ರೋತ್ಸಾಹ ಬೇಕಾದ ಕಲಾ ಪ್ರಕಾರದಲ್ಲಿ ಐದಾರು ದಶಕಗಳ ಕಾಲ ನಿರಂತರವಾಗಿ ಕಾರ್ಯ ಮಾಡಿದ ಸಾಧಕರಿಗೆ, ಕಲಾವಿದರಿಗೆ ಪ್ರಶಸ್ತಿ ಕೊಡಬೇಕಾದದ್ದು ಅವರ ಕಲಾರ್ಹತೆ ದೃಷ್ಟಿಯಲ್ಲಿ ಕೂಡ ಅಕಾಡೆಮಿ ಜವಾಬ್ದಾರಿ. ಆದರೆ, ಪ್ರಶಸ್ತಿ ಕೇವಲ ಐದು ಇದ್ದರೆ ಇರುವ ಸಾವಿರಾರು ಕಲಾವಿದರಿಗೆ ನ್ಯಾಯ ಕೊಡಲು ಸಾಧ್ಯವಿಲ್ಲ. ಈ ಕಾರಣದಿಂದ ಅಕಾಡೆಮಿ ಕಳೆದ ಆಗಸ್ಟ್‌ನಲ್ಲಿ ನೂತನ ಪ್ರಸ್ತಾವನೆ ಕಳುಹಿಸಿ ಪ್ರಶಸ್ತಿ ಸಂಖ್ಯೆ ಹೆಚ್ಚಳಕ್ಕೆ ಅನುಮತಿ ಕೊಡುವಂತೆ ಹಾಗೂ ಸರ್ಕಾರಕ್ಕೆ ವಿಶೇಷ ಹೊರೆ ಬಾರದಂತೆ ನೋಡಿಕೊಳ್ಳುವುದಾಗಿ ಭರವಸೆ ಕೊಟ್ಟಿದೆ.

ಇಲ್ಲಿ ಮಾತ್ರ ಕಡಿಮೆ: ನಾಟಕ ಅಕಾಡೆಮಿ ಗೌರವ ಪ್ರಶಸ್ತಿ 10, ವಾರ್ಷಿಕ ಪ್ರಶಸ್ತಿ 25, ಜಾನಪದ ಅಕಾಡೆಮಿ ಜಿಲ್ಲೆಗೊಂದು ವಾರ್ಷಿಕ ಪ್ರಶಸ್ತಿ (30), ಸಂಗೀತ ಅಕಾಡೆಮಿ ವಾರ್ಷಿಕ ಪ್ರಶಸ್ತಿ 16, ಲಲಿತಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ 10 ಹೊಂದಿದೆ. ಆದರೆ ತೆಂಕು, ಬಡಗು, ಬಡಾ ಬಡಗಿ, ಮೂಡಲಪಾಯ, ಘಟ್ಟದ ಕೋರೆ, ಕೇಳಿಕೆ, ಗೊಂಬೆಯಾಟ, ತಾಳಮದ್ದಲೆ, ಯಕ್ಷಗಾನದಲ್ಲಿ ಹಿಮ್ಮೇಳ, ಮುಮ್ಮೇಳ, ಮುಮ್ಮೇಳದಲ್ಲಿ ನಾಯಕ, ಪ್ರತಿನಾಯಕ, ಹಾಸ್ಯ, ಪುಂಡು ವೇಷ, ಹಿಮ್ಮೇಳದಲ್ಲಿ ಭಾಗವತರು, ಮದ್ದಲೆ, ಚಂಡೆಯವರು, ಸಾಹಿತ್ಯ ರಚನೆ ಹೀಗೆ ವಿಭಾಗಗಳು ಹತ್ತು ಹಲವು. ಒಂದೊಂದು ವಿಭಾಗದಲ್ಲಿ ಒಬ್ಬರಿಗೆ ಅಂದರೂ 5 ಪ್ರಶಸ್ತಿ ಯಾವುದಕ್ಕೂ ಸಾಲದು. ಅಕಾಡೆಮಿ ಕಲಾವಿದರನ್ನು ತಲುಪುವದು ಕೇವಲ ಪ್ರಶಸ್ತಿಗಳ ಮೂಲಕ ಮಾತ್ರ. ರಾಜ್ಯ ಮಟ್ಟದಲ್ಲಿ ಸರ್ಕಾರ ಗುರುತಿಸಬೇಕಾದ ಕಾರ್ಯ ಕೂಡ ಇರುತ್ತವೆ. ಅದರ ಜೊತೆಗೆ ಕನಿಷ್ಠ 25 ವಾರ್ಷಿಕ ಪ್ರಶಸ್ತಿ ನೀಡಬೇಕು.

Advertisement

ಕಾರಣ ಇದೇ!: ಯಕ್ಷಗಾನ ಅಕಾಡೆಮಿ 2018ರ ಪ್ರಶಸ್ತಿ ಘೋಷಣೆ ಮಾಡದೇ ಹಿಂದೇಟು ಹಾಕುವದಕ್ಕೂ ಸರ್ಕಾರ ಪ್ರಶಸ್ತಿ ಸಂಖ್ಯೆ ನಿಗದಿಗೊಳಿಸದೇ ಇರುವುದು ಕಾರಣ ಎನ್ನಲಾಗಿದೆ. ಸರ್ಕಾರಕ್ಕೆ ಆರ್ಥಿಕ ಹೊರೆ ಆಗದಂತೆ ಅಕಾಡೆಮಿ ಪ್ರಶಸ್ತಿ ಸಂಖ್ಯೆ ಹೆಚ್ಚಳಕ್ಕೆ ಬದ್ಧವಾಗಿದೆ. ತಲಾ 25 ಸಾವಿರ ರೂ.ಗಳ ಹೆಚ್ಚುವರಿ ವಾರ್ಷಿಕ ಪ್ರಶಸ್ತಿಗಾಗಿ ಸರ್ಕಾರದ ಅನುಮತಿಗೆ ಅಕಾಡೆಮಿ ಕಾಯುತ್ತಿದೆ. ಈ ಮೂಲಕ ಕಲೆಯ ಅನಾವರಣದಲ್ಲಿ ತೊಡಗಿಕೊಂಡವರಿಗೆ ಬೆಂಬಲ ಕೊಡಬೇಕು ಎಂಬುದು ಯಕ್ಷಗಾನ ಪ್ರಿಯರ ಒತ್ತಾಸೆಯಾಗಿದೆ.

ಗೌರವ ಪ್ರಶಸ್ತಿ ಜತೆಗೆ ಹತ್ತು ವಾರ್ಷಿಕ ಪ್ರಶಸ್ತಿಗಳಿಗೆ ಅನುಮತಿ ಕೇಳಿದ್ದೇವೆ. ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಇಲ್ಲ. ಅಕಾಡೆಮಿ ಅನುದಾನದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅನುಮತಿ ಬಳಿಕ ಪ್ರಶಸ್ತಿ ಘೋಷಣೆ ಮಾಡುತ್ತೇವೆ.
 ಪ್ರೊ. ಎಂ.ಎ.ಹೆಗಡೆ,
ಅಧ್ಯಕ್ಷರು ಯಕ್ಷಗಾನ ಅಕಾಡೆಮಿ

ಕನಿಷ್ಟ 10 ಯಕ್ಷಶ್ರೀ ಪ್ರಶಸ್ತಿ ನೀಡಲು ಅವಕಾಶ ನೀಡುವಂತೆ ಅವಕಾಶ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ನಿಜ. ಶೀಘ್ರ ಅನುಮತಿ ಸಿಗುವ ನಿರೀಕ್ಷೆ ಇದೆ.
ಬಲವಂತರಾವ್‌ ಪಾಟೀಲ,
ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ 

ರಾಘವೇಂದ್ರ ಬೆಟ್ಟಕೊಪ್ಪ 

Advertisement

Udayavani is now on Telegram. Click here to join our channel and stay updated with the latest news.

Next