Advertisement

ಶಿವಮೊಗ್ಗ ಲೋಕಸಭಾ ಉಪ ಚುನಾವಣೆ: ಪ್ರತಿಷ್ಠೆಯ ಕಣ

03:46 PM Oct 31, 2018 | Team Udayavani |

ಕುಂದಾಪುರ: ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಅಖಾಡ ಸಿದ್ಧಗೊಂಡಿದೆ. ಕೇವಲ 4-5 ತಿಂಗಳ ಅಧಿಕಾರವಧಿ ಮಾತ್ರವಿದ್ದರೂ, ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟ ಈ ಚುನಾವಣೆಯಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರಕಾರ ಹಾಗೂ ವಿಪಕ್ಷ ಬಿಜೆಪಿಯು ತಮ್ಮ – ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲೇ ಬೇಕು ಎನ್ನುವ ಪಣ ತೊಟ್ಟಿದೆ.

Advertisement

ಕಳೆದ 4 ವರ್ಷಗಳಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣಕ್ಕೆ ಖಾಲಿಯಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. 2019 ರಲ್ಲಿ ಮತ್ತೆ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಅದಕ್ಕೂ ಮುಂಚಿತವಾಗಿ ನಡೆಯುತ್ತಿರುವ ಸೆಮಿಫೈನಲ್‌ ಹಣಾಹಣಿ ಇದಾಗಿದೆ.

ಮಾಜಿ ಸಿಎಂ ಪುತ್ರರ ಪೈಪೋಟಿ
ಒಂದೆಡೆ ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ, ಮತ್ತೂಂದೆಡೆ ಮತ್ತೋರ್ವ ಮಾಜಿ ಮುಖ್ಯಮಂತ್ರಿ ದಿ| ಎಸ್‌. ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇನ್ನೊಂದೆಡೆ ರಾಜ್ಯದ ಮತ್ತೂಬ್ಬ ಮಾಜಿ ಸಿಎಂ ಜೆ.ಎಚ್‌. ಪಟೇಲ್‌ ಪುತ್ರ ಮಹೀಮಾ ಪಟೇಲ್‌ ಅವರು ಜೆಡಿಯು ಅಭ್ಯರ್ಥಿಯಾಗಿದ್ದಾರೆ.

ಬಂಗಾರಪ್ಪ – ಯಡಿಯೂರಪ್ಪ ಅವರ ಕುಟುಂಬಗಳ ಕದನ ಕಣವಾಗಿರುವ ಈ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ಶುರುವಾಗಿದ್ದು, ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿಯು ಈಡಿಗ, ಕುರುಬ, ಒಕ್ಕಲಿಗ, ಮುಸ್ಲಿಂ ಸಹಿತ ಜಾತ್ಯತೀತ ಮತಗಳನ್ನು ನೆಚ್ಚಿಕೊಂಡಿದ್ದರೆ, ಬಿಜೆಪಿ ಬಹುಸಂಖ್ಯಾತ ಲಿಂಗಾಯತ, ಬ್ರಾಹ್ಮಣ, ಜತೆಗೆ ತನ್ನ ಸಾಂಪ್ರದಾಯಿಕ ಮತಗಳನ್ನು ನಂಬಿಕೊಂಡಿದೆ.

ಪ್ರಭಾವಿಗಳಿಂದ ಪ್ರಚಾರ 
ಶಿವಮೊಗ್ಗ ಲೋಕಸಭೆ ವ್ಯಾಪ್ತಿಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರವು ಸೇರಿಕೊಂಡಿದ್ದು, ಈ ಭಾಗದಲ್ಲಿ ಜೆಡಿಎಸ್‌ ಅಷ್ಟೇನೂ ಪ್ರಭಾವವಿಲ್ಲದೆ ಇರುವುದರಿಂದ ಬೈಂದೂರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇಲ್ಲದಿದ್ದರೂ, ಇಲ್ಲಿ ಕಾಂಗ್ರೆಸ್‌ – ಬಿಜೆಪಿ ನಡುವಿನ ಕದನವಾಗಿ ಕೌತುಕವನ್ನು ಹೆಚ್ಚಿಸಿದೆ. ಇದಿಷ್ಟೇ ಅಲ್ಲದೇ ಬಿಜೆಪಿ ಪರ ಮಾಜಿ ಸಿಎಂಗಳಾದ ಬಿ.ಎಸ್‌. ಯಡಿಯೂರಪ್ಪ, ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಹಿತ ಅನೇಕ ಘಟಾನುಘಟಿಗಳು ಪ್ರಚಾರಕ್ಕಿಳಿದರೆ, ಮಧು ಬಂಗಾರಪ್ಪ ಪರ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ವೀರಪ್ಪ ಮೊಯಿಲಿ, ಸಹಿತ ಅನೇಕ ಪ್ರಭಾವಿ ಸಚಿವರು ಮತಯಾಚನೆಗೆ ಬಂದಿದ್ದರು. 

Advertisement

ಬೈಂದೂರಲ್ಲಿಯೇ ಅಧಿಕ ಮುನ್ನಡೆ
2014 ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ವೈ 6,06,216 ಮತ ಪಡೆದು, ಕಾಂಗ್ರೆಸ್‌ನ ಮಂಜುನಾಥ್‌ ಭಂಡಾರಿಯವರನ್ನು 3,63,305 ಮತಗಳ ಅಂತರದಿಂದ ಸೋಲಿಸಿದ್ದರು. ಜೆಡಿಎಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ 2,40,636 ಮತ ಪಡೆದಿದ್ದರು. ಮತಗಳಿಕೆಯಲ್ಲಿ ಬೈಂದೂರಲ್ಲಿ ಬಿಜೆಪಿ 91,163 ಮತ ಪಡೆದು ಕಾಂಗ್ರೆಸ್‌ಗಿಂತ (44,428 ಪಡೆದ ಮತ), 46,735 ಮತಗಳ ಮುನ್ನಡೆ ಸಾಧಿಸಿತ್ತು. ಇದು ಬಿಜೆಪಿಯು ಇತರೆ 7 ವಿಧಾನಸಭಾ ಕ್ಷೇತ್ರಗಳಿಗಿಂತ ಹೆಚ್ಚಿನ ಅಂತರ ಹಾಗೂ ಮತಗಳನ್ನು ಪಡೆದಂತಾಗಿತ್ತು. 2018 ರ ವಿಧಾನಸಭೆಯಲ್ಲಿ ಬಿಜೆಪಿಯ ಸುಕುಮಾರ್‌ ಶೆಟ್ಟಿ 96,029 ಮತ, ಕಾಂಗ್ರೆಸ್‌ನ ಗೋಪಾಲ ಪೂಜಾರಿ 71,636 ಮತ ಹಾಗೂ ಜೆಡಿಎಸ್‌ನ ರವಿ ಶೆಟ್ಟಿ 1,911 ಮತ ಪಡೆದಿದ್ದರು. ಕಾಂಗ್ರೆಸ್‌ಗಿಂತ ಬಿಜೆಪಿಗೆ 24,393 ಮತಗಳ ಮುನ್ನಡೆ ಸಿಕ್ಕಿತ್ತು.

ಬೈಂದೂರಲ್ಲಿ 50 ಸಾವಿರ ಮುನ್ನಡೆ
ರಾಜ್ಯದಲ್ಲಿ ಅಧಿಕಾರದಲ್ಲಿರುವ ಮೈತ್ರಿ ಸರಕಾರವು ಕರಾವಳಿಯನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಶಾಸಕರಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಮರಳು ಸಮಸ್ಯೆಗೆ ಉತ್ತರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಪರ ಬೈಂದೂರು ಜನರ ಒಲವು ಹೆಚ್ಚಿದ್ದು, ಬಿ.ವೈ. ರಾಘವೇಂದ್ರ ಅವರಿಗೆ ಬೈಂದೂರು ಕ್ಷೇತ್ರವೊಂದರಲ್ಲಿಯೇ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಮುನ್ನಡೆ ಸಿಗುತ್ತದೆ ಎನ್ನುವ ವಿಶ್ವಾಸವಿದೆ.
ಬಿ.ಎಂ. ಸುಕುಮಾರ್‌ ಶೆಟ್ಟಿ,
ಬೈಂದೂರು ಶಾಸಕರು

15ರಿಂದ 20 ಸಾವಿರ ಮುನ್ನಡೆ
ಹಿಂದೆ ಶಾಸಕನಾಗಿದ್ದಾಗ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಈಗಿನ ಶಾಸಕರ ಆಡಳಿತ ಬಗ್ಗೆ ಇಲ್ಲಿನ ಜನ ಭ್ರಮನಿರಸನಗೊಂಡಿದ್ದಾರೆ. ರಾಜ್ಯ ಸರಕಾರ ಉತ್ತಮ ಕಾರ್ಯ ಮಾಡುತ್ತಿದ್ದು, ರೈತರ ಸಾಲಮನ್ನಾ ಮಾಡಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರು ಮೈತ್ರಿ ಸರಕಾರದ ಒಮ್ಮತದ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಬೆಂಬಲಿಸಲಿದ್ದು, ಬೈಂದೂರಲ್ಲಿ ಕನಿಷ್ಠ 15 ರಿಂದ 20 ಸಾವಿರ ಮುನ್ನಡೆ ಸಿಗಲಿದೆ. 
– ಕೆ. ಗೋಪಾಲ ಪೂಜಾರಿ,
ಬೈಂದೂರಿನ ಮಾಜಿ ಶಾಸಕರು

 ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next