Advertisement

ಶಿವಮೊಗ್ಗ ಸಮಗ್ರ ಏಳ್ಗೆ ಕ್ರಮ

07:09 PM May 10, 2020 | Naveen |

ಶಿವಮೊಗ್ಗ: ರಸ್ತೆ, ರೈಲು, ವಿಮಾನ ನಿಲ್ದಾಣಗಳ ಅಭಿವೃದ್ಧಿ, ನೀರಾವರಿ, ಕೈಗಾರಿಕೆಗಳಿಗೆ ಅವಕಾಶ, ಮೂಲ ಸೌಕರ್ಯ ಕಲ್ಪಿಸುವುದು, ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗವಕಾಶ ಒದಗಿಸುವುದು, ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ವಿಕಾಸಕ್ಕೆ ಅಗತ್ಯವಾಗಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಕೈಗೊಳ್ಳಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Advertisement

ಶಿವಮೊಗ್ಗ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ 34 ಕಿಮೀ ಉದ್ದದ ವರ್ತುಲ ರಸ್ತೆ ಹಾಗೂ ತುಂಗಾನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ವಹಿಸಲಾಗುತ್ತಿರುವ ತುಮಕೂರು-ಶಿವಮೊಗ್ಗ ರಸ್ತೆ ನಿರ್ಮಾಣದ ಭಾಗವಾಗಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

ಪ್ರಸ್ತುತ ಎಂ.ಆರ್‌.ಎಸ್‌ ಸರ್ಕಲ್‌ನಿಂದ ಶ್ರೀರಾಂಪುರದವರೆಗಿನ 15 ಕಿಮೀ ಹಾಗೂ ಹೊಳೆಹೊನ್ನೂರು ರಸ್ತೆ (ಸುಬ್ಬಯ್ಯ ಮೆಡಿಕಲ್‌ ಕಾಲೇಜಿನ ಹಿಂಭಾಗ)ಯಿಂದ ಎಂ.ಆರ್‌.ಎಸ್‌.ವರೆಗಿನ 4 ಕಿಮೀ ರಸ್ತೆ ನಿರ್ಮಾಣ ಕಾರ್ಯಕ್ಕೆ ಅನುಮೋದನೆ ದೊರೆತಿದೆ. ಉಳಿದಂತೆ ಶ್ರೀರಾಮಪುರದಿಂದ ಹೊಳೆಹೊನ್ನೂರುವರೆಗಿನ 15 ಕಿಮೀ ವರ್ತುಲ ರಸ್ತೆಯ ಕಾಮಗಾರಿಯ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಮಂಜೂರಾತಿ ದೊರೆಯುವ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.

ರಾಜ್ಯ ರಾಜಧಾನಿಗೆ ಸಂಪರ್ಕ ಕಲ್ಪಿಸುವ ಶಿವಮೊಗ್ಗ-ತುಮಕೂರು 216 ಕಿಮೀಗಳ ಚತುಷ್ಪಥ ರಸ್ತೆ ಕಾಮಗಾರಿಯು 4425
ಕೋ.ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಭದ್ರಾವತಿ-ಶಿವಮೊಗ್ಗ ನಡುವಿನ ನಾಲ್ಕನೇ ಹಂತದ ಕಾಮಗಾರಿಯು
ಆರಂಭಗೊಳಿಸುವಲ್ಲಿ ಇರಬಹುದಾದ ತಾಂತ್ರಿಕ ಸಮಸ್ಯೆ, ಭೂಸ್ವಾಧೀನ ಪ್ರಕ್ರಿಯೆ, ಅರಣ್ಯ ಇಲಾಖೆ, ರಸ್ತೆ ಬದಿಯ ಮರಕಡಿತಲೆ ಮುಂತಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದ್ದು, ತ್ವರಿತವಾಗಿ ಕಾಮಗಾರಿಗಳನ್ನು ಆರಂಭಿಸಿ, ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದ ಅವರು, ಹೆದ್ದಾರಿಯ ಕಾಮಗಾರಿ ಪೂರ್ಣಗೊಳಿಸುವಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು ಜಿಲ್ಲೆಗಳ ಜಿಲ್ಲಾ ಧಿಕಾರಿಗಳ ಶ್ರಮ ಮಹತ್ವದ್ದಾಗಿದೆ ಎಂದರು.

1550 ಕೋಟಿ ಮಂಜೂರು: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಆಯನೂರು-ಕುಂಸಿ-ತಮ್ಮಡಿಹಳ್ಳಿ ಸೇರಿದಂತೆ ನೂರಾರು ಗ್ರಾಮಗಳಿಗೆ ನೀರು ಒದಗಿಸುವ ಹೊಸಳ್ಳಿ ಏತ ನೀರಾವರಿ ಯೋಜನೆಗೆ ತುಂಗಾನದಿ ತೀರದಲ್ಲಿ ಕಾಮಗಾರಿಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿ ಮಾತನಾಡಿದರು. ಇದರೊಂದಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾರ್ಯವೂ ಜತೆಜತೆಗೆ ಸಾಗಿದ್ದು, ಮುಂದಿನ ಬೇಸಿಗೆ ಅವ ಧಿಯೊಳಗಾಗಿ ಕೈಗೊಂಡ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ಇದೆ. ಶಿಕಾರಿಪುರ ತಾಲೂಕಿನ 3 ಹೋಬಳಿಗಳ 225 ಕೆರೆಗಳಿಗೆ ನೀರು ಒದಗಿಸುವ 850ಕೋಟಿ ರೂ. ವೆಚ್ಚದ ಪುರದಕೆರೆ ಏತ ನೀರಾವರಿ, ಸೊರಬ ತಾಲೂಕಿನ ಮೂಗೂರು ಮತ್ತು ಮೂಡಿ ಏತ ನೀರಾವರಿ ಯೋಜನೆಗಳು ಸೇರಿದಂತೆ ಒಟ್ಟು 1550 ಕೋಟಿ ರೂ. ಸರ್ಕಾರ ಈಗಾಗಲೇ ಅನುದಾನ ಮಂಜೂರು ಮಾಡಿದ್ದು, ಈ ಎಲ್ಲಾ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

Advertisement

ಕೊರೊನಾ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವು ಅಭಿವೃದ್ಧಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿವೆ. ಪ್ರಸ್ತುತ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಚಾಲನೆಯಲ್ಲಿದೆ. ಶರಾವತಿ ಹಿನ್ನೀರಿನ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ 423ಕೋ. ರೂ. ವೆಚ್ಚದ ಸಿಗಂದೂರು-ಕಳಸವಳ್ಳಿ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ನಿರ್ಮಿಸಲಾಗುತ್ತಿರುವ ಈ ಸೇತುವೆಯು ದೇಶದ ಕೆಲವೇ ಮಾದರಿ ತುವೆಗಳಲ್ಲೊಂದಾಗಲಿದೆ ಎಂದರು.

ಶಿವಮೊಗ್ಗ-ಚಿತ್ರದುರ್ಗದ ಬಾಕಿ ರಸ್ತೆ ಕಾಮಗಾರಿಗೆ 528.00ಕೋ ರೂ. ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಿವಮೊಗ್ಗ ವಿದ್ಯಾನಗರದ ಬಳಿ ರಾ.ಹೆ 13ರಲ್ಲಿ ಬರುವ ಎಲ್‌.ಸಿ 46ಕ್ಕೆ ಮೇಲ್ಸೇತುವೆ ನಿರ್ಮಾಣಕ್ಕೆ 42 ಕೋ.ರೂ. ಬಿಡುಗಡೆ ಮಾಡುವಂತೆಯೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಶಿವಮೊಗ್ಗದ ಮಹಾನಗರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಯು ದೇಶದಲ್ಲಿ 35ನೇ ಹಾಗೂ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಲಾಗುತ್ತಿದೆ. ಈ ಯೋಜನೆಯಡಿ ಕೈಗೊಳ್ಳಲಾಗುವ ಕಾಮಗಾರಿಗಳು ಸೀಮಿತ ಅವ ಧಿಯೊಳಗಾಗಿ ಪೂರ್ಣಗೊಳ್ಳಲಿವೆ ಎಂದರು.

ಜಿಲ್ಲೆಯಲ್ಲಿ ಟೆಲಿಫೋನ್‌ ತರಂಗಾಂತರ ವಿಸ್ತರಿಸುವ ಸಂಬಂಧ ಖಾಸಗಿ ವಲಯದ ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಜಿಯೋ ಸಂಸ್ಥೆಯು ನಿರ್ಮಿಸಬೇಕಾಗಿದ್ದ 63 ಟವರ್‌ಗಳ ಪೈಕಿ 37ಟವರ್‌ಗಳನ್ನು, ಏರ್‌ಟೆಲ್‌ ಸಂಸ್ಥೆಯು 61ರ ಪೈಕಿ 25 ಸ್ಥಾವರಗಳನ್ನು ಈಗಾಗಲೆ ನಿರ್ಮಿಸಿದ್ದು, ಉಳಿದವುಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದರು. ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ವಿಕಾಸಕ್ಕೆ 10 ಕೋಟಿ ರೂ. ಮಂಜೂರು ಮಾಡಿದೆ. ಜೋಗ ಅಭಿವೃದ್ಧಿಗೆ 10ಕೋಟಿ ರೂ. ಮಂಜೂರು ಮಾಡಿದ್ದು, ಜಿಪ್‌ಲೈನ್‌ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಡಿಸಿ ಕೆ.ಬಿ.ಶಿವಕುಮಾರ್‌, ಹೆದ್ದಾರಿ ಪ್ರಾಧಿಕಾರದ ಅಭಿಯಂತರ ಪೀರ್‌ಪಾಶ, ಜ್ಯೋತಿಪ್ರಕಾಶ್‌, ದತ್ತಾತ್ರಿ, ಬಳ್ಳೆಕೆರೆ ಸಂತೋಷ್‌, ದಿವಾಕರಶೆಟ್ಟಿ, ಮಾಲತೇಶ್‌, ಕಾಮತ್‌ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next