Advertisement

ಶೇಷಗಿರಿ ಎಂಬ ಕಲಾಗ್ರಾಮ 

01:20 PM Apr 09, 2020 | |

ಹಾನಗಲ್‌ ತಾಲೂಕಿನ ಶೇಷಗಿರಿ, ಒಂದು ಕುಗ್ರಾಮ. ಈ ಊರಿನ ವಿಶೇಷವೇನೆಂದರೆ- ಇಲ್ಲಿ
ಮನೆಗೊಬ್ಬ ಕಲಾವಿದ ಸಿಗುತ್ತಾನೆ. ಇದೇ ಊರಿನ “ಶೇಷಗಿರಿ ಕಲಾತಂಡ’, ಎಲ್ಲರಿಗೂ ವೇದಿಕೆ ಒದಗಿಸಿದೆ. ಪರಿಣಾಮವಾಗಿ, ನೀನಾಸಂ, ರಂಗಾಯಣದ ಕಲಾವಿದರಿಗೆ ಪೈಪೋಟಿ ನೀಡುವ ಮಟ್ಟಕ್ಕೆ
ಶೇಷಗಿರಿ ಕಲಾತಂಡದ ಕಲಾವಿದರು ಅಭಿನಯಿಸುತ್ತಿದ್ದಾರೆ. 

Advertisement

ಈ ಊರಲ್ಲಿ ಓಡಾಡಿದರೆ ಎಲ್ಲೆಡೆ ರಂಗಾಸಕ್ತರೇ ಕಾಣಸಿಗುತ್ತಾರೆ. ನೀವು ಇನ್ನಷ್ಟು ಸೂಕ್ಷ್ಮಗ್ರಾಹಿಗಳಾಗಿದ್ದರೆ, ಈ ಊರಲ್ಲಿ ಕಲಾವಿದರನ್ನು ಕಂಡರೂ ಆಶ್ಚರ್ಯವಿಲ್ಲ. ಮಗದಷ್ಟು ಮನಬಿಚ್ಚಿ ನೋಡಿದರೆ, ನಾಟಕದ ಅಭಿರುಚಿಯ ಸೊಬಗು ತೆರೆದುಕೊಳ್ಳುತ್ತಾ ಹೋಗುತ್ತದೆ. ಈ ಊರು ಒಂಥರಾ ನೀನಾಸಂ ಶಿಬಿರದಂತೆ. ಪ್ರತಿ ಮನೆಗಳಲ್ಲೂ ನಾಟಕದ ಸೊಲ್ಲುಗಳು, ಜನರ ಮನಸಲ್ಲಿ ಬರೀ ಪಾತ್ರಗಳು. ಎಲ್ಲರಲ್ಲೂ ಬಣ್ಣ ಹಚ್ಚುವ ಇರಾದೆ. ಚಿಕ್ಕ ಮಕ್ಕಳಲ್ಲಿ ನಾಟಕದ ಕಿಚ್ಚು.  ಇಂಥ ವಿಶಿಷ್ಟ ಗ್ರಾಮದ ಹೆಸರು “ಶೇಷಗಿರಿ’. ರಾಜ್ಯದ ಯಾವುದೋ ಒಂದು ಮೂಲೆಯಲ್ಲಿರುವ ಈ ಕುಗ್ರಾಮ ಇಷ್ಟೊಂದು ಹೆಸರಾಗಿರುವುದು ಇಲ್ಲಿಯ ಕಲಾತಂಡದಿಂದ. “ಕಲೆ’ ಎಂಬುದಕ್ಕೆ ಗಡಿ ಎಂಬುದೇ ಇಲ್ಲ. ಅದೊಂದು ವಿಶಾಲ ಹೃದಯವಂತಿಕೆಯುಳ್ಳದ್ದಾಗಿದ್ದು, ಅದು ಕೇವಲ ಯಾವುದೇ ಒಬ್ಬ ವ್ಯಕ್ತಿಯನ್ನು ಮಾತ್ರ ಎತ್ತರಕ್ಕೇರಿಸುವುದಿಲ್ಲ. ಬದಲಾಗಿ ಕಲೆ ತನ್ಮೂಲಕ ಊರು, ನಾಡು, ದೇಶವನ್ನು ಜಗತ್ತಿನೆತ್ತರಕ್ಕೆ ಕೊಂಡೊಯ್ಯುತ್ತದೆ. ಇದಕ್ಕೊಂದು ತಾಜಾ ಉದಾಹರಣೆ ನಮ್ಮ ನಾಡಿನ “ಶೇಷಗಿರಿ ಕಲಾ ತಂಡ’.

ಗದಗ ಜಿಲ್ಲೆಯಲ್ಲಿ ಎಲ್ಲೇ ಕಲ್ಲೆಸೆದರೂ ಅದು ಮುದ್ರಣಾಲಯದ ಮೇಲೆ ಬೀಳುತ್ತದೆ. ಶಿರಸಿಯಲ್ಲಿ ಕಲ್ಲೆಸೆದರೆ ಅದು ಪತ್ರಕರ್ತರ ಮನೆ ಮೇಲೆ ಬೀಳುತ್ತದೆ. ಧಾರವಾಡದಲ್ಲಿ ಕಲ್ಲೆಸೆದರೆ ಅದು ಸಾಹಿತಿಗಳ ಮನೆ ಮೇಲೆ ಬೀಳುತ್ತದೆ ಎಂಬ ಮಾತು ರೂಢಿಯಲ್ಲಿದೆ. ಅದೇ ರೀತಿ ಹೇಳುವುದಾದರೆ, ಹಾವೇರಿ ಜಿಲ್ಲಾ ಕೇಂದ್ರದಿಂದ 35ಕಿಮೀ ದೂರ ಇರುವ ಶೇಷಗಿರಿ ಗ್ರಾಮದ ಮೇಲೆ ಕಲ್ಲು ಎಸೆದರೆ ಅದು ಕಲಾವಿದರ ಮನೆ ಮೇಲೆಯೇ ಬೀಳುತ್ತದೆ. ಅಷ್ಟರ ಮಟ್ಟಿಗೆ ಈ ಗ್ರಾಮದಲ್ಲಿ ಮನೆಗೊಬ್ಬರಂತೆ ಕಲಾವಿದರು ಇದ್ದಾರೆ.

“ಶೇಷಗಿರಿ ಕಲಾತಂಡ’ ಎಂದರೆ ಅದೊಂದು ಅಪ್ಪಟ ಗ್ರಾಮೀಣ ಪ್ರತಿಭೆಗಳಿಂದ ತುಂಬಿದ ನಾಟಕ ತಂಡ. ಈ ತಂಡ, ನಾಡಿನಾದ್ಯಂತ ತನ್ನ ಅಭೂತಪೂರ್ವ ನಾಟಕ ಪ್ರದರ್ಶನಗಳ ಮೂಲಕ ಮನೆಮಾತಾಗಿದೆ. ಗ್ರಾಮೀಣ ಸಂಘಟನೆಯಾದ ಶೇಷಗಿರಿ ತಂಡ, ಈಗ ಸಾಮಾಜಿಕ ನಾಟಕಗಳ ಜೊತೆಜೊತೆಯಲ್ಲಿಯೇ ನವೀನ ನಾಟಕ ಶೈಲಿ ಮೈಗೂಡಿಸಿ ಕೊಂಡು ಕಥೆ, ಕಾದಂಬರಿ ಆಧಾರಿತ ನಾಟಕಗಳನ್ನು ಬೆಳಕು-ಧ್ವನಿ ಸಂಯೋಜನೆಯಲ್ಲಿ ಪ್ರದರ್ಶಿಸುತ್ತಾ ನೋಡುಗರ ಕಣ್ಮನ ಸೆಳೆಯುತ್ತಿದೆ. ಹೀಗಾಗಿಯೇ, ಇದು ಶಾಸ್ತ್ರೀಯ ರಂಗಶಾಲೆ ಎನಿಸಿದ “ನೀನಾಸಂ’, “ರಂಗಾಯಣ’ಗಳ ಸಾಲಿಗೆ ಸೇರಿಕೊಳ್ಳುವಷ್ಟು ಎತ್ತರಕ್ಕೆ ಬೆಳೆದಿದೆ. ಈ ಊರಿನ ತಂಡದವರು ಮುಂಬಯಿಯಲ್ಲೂ ಪ್ರದರ್ಶನ ನೀಡಿ  ಸೈ ಎನಿಸಿಕೊಂಡಿದ್ದಾರೆ. ಈ ಕುಗ್ರಾಮದ ಜನ ಹೇಗೆ ಕಲಾವಿದರಾದರು? ಅವರಿಗೆ ನಾಟಕದಲ್ಲಿ ಆಸಕ್ತಿ ಹುಟ್ಟಿಸಿದವರಾರು? ಊರ ಜನಕ್ಕೆ ರಂಗಾಸಕ್ತಿ ಬೆಳೆದದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ ಬೇರೆಯದೇ ಕಥೆ ತೆರೆದುಕೊಳ್ಳುತ್ತದೆ. 35ವರ್ಷಗಳ ಹಿಂದೆ “ಗಜಾನನ ಯುವಕ ಮಂಡಳಿ’ ಇದೇ ಊರಲ್ಲಿ ಆರಂಭವಾಗಿತ್ತು. ಅದೇ ಈಗ “ಶೇಷಗಿರಿ ಕಲಾತಂಡ’ವಾಗಿ ಬದಲಾಗಿದೆ, ಖ್ಯಾತಿ ಪಡೆದಿದೆ.

Advertisement

ನಾಟಕ “ಪ್ರಭು’…
ಹಳ್ಳಿಯ ಜನರಲ್ಲಿ ನಾಟಕದ ಆಸಕ್ತಿ ಹುಟ್ಟಿಸಿ ಅವರನ್ನು ನಾಟಕ ಕಲಾವಿದರನ್ನಾಗಿಸಿದ್ದರ ಹಿಂದಿರುವ ದೊಡ್ಡ ವ್ಯಕ್ತಿ-ಶಕ್ತಿ ಪ್ರಭು ಗುರಪ್ಪನವರ. ಇವರೇ ಈ ಕಲಾತಂಡದ ಅಧ್ಯಕ್ಷರು. ಇವರೇ ಈ ತಂಡದ ತಾಯಿಬೇರು.

35 ವರ್ಷಗಳ ಹಿಂದೆ ಗಜಾನನ ಯುವಕ ಮಂಡಳ ಕಟ್ಟಿ ಅದನ್ನು ಪರಿಪೂರ್ಣ ಕಲಾ ತಂಡವಾಗಿ ನಿರ್ಮಿಸಿದ್ದೇ ಇವರು. ವೃತ್ತಿಯಲ್ಲಿ ಶೇಷಗಿರಿಯ ಪೋಸ್ಟ್‌ ಮಾಸ್ಟರ್‌ ಆಗಿರುವ ಇವರಿಗೆ ನಾಟಕ ಕಲೆಯಲ್ಲಿ ಅತೀವ ಆಸಕ್ತಿ. ಈ ಆಸಕ್ತಿಯೇ ಇಂದು ನಾಟಕ ಕಲಾ ತಂಡವೊಂದು ಬೆಳೆಯುವಂತೆ ಮಾಡಿತು.

ಶೇಷಗಿರಿಯಲ್ಲಿನ ರಂಗ ಚಟುವಟಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಇಲ್ಲಿ ಧ್ವನಿ, ಬೆಳಕು, ವಸತಿ ಹೀಗೆ ಸಕಲ ಸೌಕರ್ಯದೊಂದಿದ ರಂಗಮಂದಿರ ನಿರ್ಮಿಸಿದೆ. ಆ ಮೂಲಕ ಗ್ರಾಮದ ರಂಗಚಟುವಟಿಕೆಯನ್ನು ಬೆಂಬಲಿಸಿದೆ. ಪ್ರಸ್ತುತ 30ಕ್ಕೂ ಹೆಚ್ಚು ಮಕ್ಕಳು, 40ಕ್ಕೂ ಹೆಚ್ಚು ಯುವ ಕಲಾವಿದರು ತಂಡದಲ್ಲಿದ್ದು ಬೇರೆ ತಂಡಗಳೊಂದಿಗೆ, ಸ್ವತಂತ್ರವಾಗಿ ನಾಟಕ ಪ್ರದರ್ಶನದಲ್ಲಿ ತೊಡಗಿಕೊಂಡಿದ್ದಾರೆ.

ಈ ತಂಡದಲ್ಲಿರುವವರು ಬಹುಪಾಲು ಅನಕ್ಷರಸ್ಥರು, ಕೃಷಿ ಕೂಲಿಕಾರ್ಮಿಕರು. ಆದರೆ, ಇವರೊಳಗಿರುವ ಕಲಾ ಪ್ರತಿಭೆಗೆ ಯಾವುದೇ ಬಡತನವಿಲ್ಲ. ಇವರು ರಂಗ ವೇದಿಕೆಗೆ ಪ್ರವೇಶಿಸಿದರೆ ಅಲ್ಲಿ ಕಲಾ ಸರಸ್ವತಿಯೂ ತಲೆದೂಗುವಂತೆ ಪ್ರೌಢಿಮೆ ಮೆರೆಯುತ್ತಾರೆ. ಶೇಷಗಿರಿಯ ರಂಗಾಸಕ್ತರಿಗೆ, ರಂಗಕರ್ಮಿ ಸತೀಶ ಕುಲಕರ್ಣಿ, ಶ್ರೀಪಾದ ಭಟ್ಟ, ನಾಗರಾಜ ಧಾರೇಶ್ವರ, ಡಾ. ಗಣೇಶ್‌ ಸೇರಿದಂತೆ ಅನೇಕ ರಂಗ ಪರಿಣಿತರು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಈ ತಂಡ ಈಗ ನೀನಾಸಂ, ರಂಗಾಯಣ, ಧಾರವಾಡದ ಆಟಮಾಟ, ಬೆಂಗಳೂರಿನ ರಂಗಶಂಕರ…ಹೀಗೆ ಅನೇಕ ಕಲಾ ತಂಡದೊಂದಿಗೆ ಸೇರಿಕೊಂಡು ಪ್ರದರ್ಶನದಲ್ಲಿ ತೊಡಗಿದೆ.

ಹೋಗ್ತಾ ಇರ್ತಾರೆ, ಬರ್ತಾ ಇರ್ತಾರೆ
ಪ್ರಭು ಗುರಪ್ಪನವರ, ಆರಂಭದಲ್ಲಿ ಗ್ರಾಮದ ಯುವಕರು, ಮಕ್ಕಳು, ಆಸಕ್ತರನ್ನು ಸೇರಿಸಿಕೊಂಡು ಯುವಜನೋತ್ಸವ, ಜಾತ್ರೆ, ಸ್ಪರ್ಧೆಗಳಲ್ಲಿ ಮನರಂಜನೆಗಾಗಿ ನಾಟಕವಾಡಿಸುತ್ತಿದ್ದರು. ತನ್ಮೂಲಕ ಗ್ರಾಮದ ಜನರಲ್ಲಿ ನಾಟಕಾಸಕ್ತಿ ಮೂಡಿಸಿದರು. ತಜ್ಞರನ್ನು ಕರೆಸಿ ರಂಗ ತರಬೇತಿ, ಬೇಸಿಗೆ ಶಿಬಿರಗಳ ಮೂಲಕ ಅವರಿಗೆ ತರಬೇತಿ ನೀಡಿ ಕಲಾವಿದರನ್ನಾಗಿ ಮಾಡಿದರು. ಈ ತರಬೇತಿ ಆಧರಿಸಿ ರಾಜ್ಯದ ತುಂಬೆಲ್ಲ ಬೀದಿ ನಾಟಕ ನೀಡಿದರು. ಇವರ ಈ ತಂಡದಲ್ಲಿ ಮೂರು ತಲೆಮಾರಿನ ಕಲಾವಿದರು ಇದ್ದಾರೆ. ಮಕ್ಕಳು ಶಿಕ್ಷಣಕ್ಕಾಗಿ, ಕಾಲೇಜು ಹುಡುಗರು ಉದ್ಯೋಗಕ್ಕಾಗಿ, ಮಧ್ಯಮ ವಯಸ್ಸಿನವರು ವಯೋಸಹಜ ನಿರಾಸಕ್ತಿಯಿಂದಾಗಿ ತಂಡದಿಂದ ಹೊರಹೋಗಿದ್ದಾಗೆಲ್ಲ ಮತ್ತೆ ಹೊಸ ಮಕ್ಕಳು, ಯುವಕರು, ಆಸಕ್ತರು ಸೇರಿಕೊಳ್ಳುತ್ತಲೇ ಇದ್ದಾರೆ. ಇವರ ಈ ಕಲಾ ಸೇವೆಗೆ ಕಾರ್ಯದರ್ಶಿ ನಾಗರಾಜ ಧಾರೇಶ್ವರರ ನೆರವೂ ಇದೆ.

ನಡೆದು ಬಂದ ಹಾದಿ
“ಕಪ್ಪು ನೆಲದ ಕೆಂಪು ಕಥೆ’ಯಿಂದ ಹಿಡಿದು ಇಲ್ಲಿಯವರೆಗೆ ಶೇಷಗಿರಿ ಕಲಾತಂಡದವರು ಹಲವಾರು ನಾಟಕಗಳನ್ನು ಆಡಿದ್ದಾರೆ. “ಕತ್ತಲಿನಿಂದ ಬೆಳಕಿನೆಡೆಗೆ’, “ರಕ್ತ ಸಿಂಧೂರ’, ಮಾಯಾ ಕನ್ನಡಿ, ದೀಪಾವಳಿ, ಕಥೆಯಾದ ಕಾಳ, ಕುವೆಂಪು ಕಾವ್ಯದೃಶ್ಯ, “ತುಂಡು ದನ’ ಮುಂತಾದ ನಾಟಕಗಳಿಂದ ರಂಗ ತಂಡಕ್ಕೂ, ಊರಿಗೂ ಹೆಸರು ಬಂದಿದೆ. “ಇವ ನಮ್ಮವ’ ನಾಟಕ 75 ಪ್ರದರ್ಶನ ಕಂಡಿದೆ. “ವಾಲಿವಧೆ’ನಾಟಕದ 40ನೇ ಪ್ರದರ್ಶನ ಬೆಂಗಳೂರು ಇನ್‌ಫೋಸಿಸ್‌ನಲ್ಲಿ ನಡೆಯಲಿದೆ.

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next