Advertisement

ಶ್ರೀನಗರ: ಬರೋಬ್ಬರಿ 31 ವರ್ಷಗಳ ಬಳಿಕ ಶೀತಲ್‌ನಾಥ್‌ ದೇಗುಲ ಓಪನ್‌

02:53 AM Feb 19, 2021 | Team Udayavani |

ಶ್ರೀನಗರ: ಬರೋಬ್ಬರಿ 31 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ದೇವಾಲಯದಲ್ಲಿ ಗಂಟೆಯನಾದ ಕೇಳಿಸಿದೆ!

Advertisement

ಕ್ರಲಾಖುದ್‌ ಪ್ರದೇಶದಲ್ಲಿರುವ ಶೀತಲ್‌ನಾಥ್‌ ದೇವಾಲಯವನ್ನು ವಸಂತ ಪಂಚಮಿಯ ಹಿನ್ನೆಲೆಯಲ್ಲಿ ಭಕ್ತರಿಗಾಗಿ ತೆರೆಯಲಾಗಿದೆ. 1990ರ ಅವಧಿಯಲ್ಲಿ ಕಣಿವೆ ರಾಜ್ಯದಲ್ಲಿ ಉಗ್ರರ ಉಪಟಳ ಆರಂಭ ಆದಾಗಿನಿಂದ ಈ ದೇಗುಲದ ಬಾಗಿಲನ್ನು ಮುಚ್ಚಲಾಗಿತ್ತು. ಅಂದಿನಿಂದ ಇಲ್ಲಿ ಯಾವುದೇ ಪೂಜೆ, ಹವನಗಳು ನಡೆದಿರಲಿಲ್ಲ. ಆದರೆ, ಸತತ 31 ವರ್ಷಗಳ ಬಳಿಕ ದೇಗುಲವನ್ನು ಭಕ್ತಾದಿಗಳಿಗೆ ಮುಕ್ತವಾಗಿಸಲಾಗಿದೆ. ಸುಮಾರು 30 ಮಂದಿ ಕಾಶ್ಮೀರಿ ಪಂಡಿತರು ಪೂಜೆಯಲ್ಲಿ ಪಾಲ್ಗೊಂಡಿದ್ದು, ನಂತರ ಭಕ್ತರಿಗೆ ಪ್ರಸಾದವನ್ನೂ ಹಂಚಲಾಗಿದೆ.

ಇದೊಂದು ಆತ್ಮವಿಶ್ವಾಸ ಮೂಡಿಸುವ ಮಹತ್ವದ ಹೆಜ್ಜೆಯಾಗಿದ್ದು, “ಕಾಶ್ಮೀರವು ಸುರಕ್ಷಿತವಾಗಿದೆ’ ಎಂಬ ಸಂದೇಶವನ್ನು ಹೊರ ಜಗತ್ತಿಗೆ ರವಾನಿಸಲಿದೆ ಎಂದು ಇಲ್ಲಿನ ಅರ್ಚಕ ಉಪೇಂದ್ರ ಹಂದೂ ಹೇಳಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ಆರಂಭವಾಗುವುದಕ್ಕೂ ಮೊದಲು ಶೀತಲ್‌ನಾಥ್‌ ದೇಗುಲದಲ್ಲಿ ವಸಂತ ಪಂಚಮಿ ಪೂಜೆ ಅದ್ಧೂರಿಯಾಗಿ ನಡೆಯುತ್ತಿತ್ತು. ನೂರಾರು ಕಾಶ್ಮೀರಿ ಪಂಡಿತರು ಭಾಗಿಯಾಗುತ್ತಿದ್ದರು. ಪಟಾಕಿಗಳನ್ನು ಸಿಡಿಸಲಾಗುತ್ತಿತ್ತು. ಹಲವು ವ್ಯಾಪಾರಿಗಳು ಅಂಗಡಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದರು ಎಂದೂ ಅರ್ಚಕರು ತಿಳಿಸಿದ್ದಾರೆ.

“1991ರಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ದೇವಾಲಯಕ್ಕೆ ಹಾನಿಯಾಗಿತ್ತು. ಹವನ ಶಾಲೆಯೂ ಹಾನಿಗೀಡಾಗಿತ್ತು. ಸಂಕಷ್ಟದ ಸಮಯದಲ್ಲಿ ಭೂ ಮಾಫಿಯಾವು ಈ ದೇವಾಲಯವನ್ನು ಕಬಳಿಸಲೂ ಯತ್ನಿಸಿತ್ತು. ಆದರೆ, ಈ ಪ್ರದೇಶದಲ್ಲಿರುವ ಮುಸ್ಲಿಂ ಬಾಂಧವರು ದೇವಾಲಯವನ್ನು ಮತ್ತು ಅದಕ್ಕೆ ಸೇರಿದ ಜಾಗವನ್ನು ರಕ್ಷಣೆ ಮಾಡಿದರು’ ಎಂದು ಪೂಜೆಯಲ್ಲಿ ಭಾಗಿಯಾಗಿದ್ದ ರವೀಂದರ್‌ ರಜಾªನ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next