Advertisement

ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಕ್ರಮ: ಸಚಿವೆ ಶಶಿಕಲಾ ಜೊಲ್ಲೆ

12:02 PM Aug 19, 2021 | Team Udayavani |

ಬೆಂಗಳೂರು: ರಾಜ್ಯದ ವಕ್ಫ್ ಆಸ್ತಿ ಕಬಳಿಕೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ಗುರುವಾರ ವಿಕಾಸಸೌಧದಲ್ಲಿ ವಕ್ಫ್ ಮತ್ತು ಹಜ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವರು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಜರಾಯಿ ಹಾಗೂ ಹಜ್ ಮತ್ತು ವಕ್ಫ್ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ್ದೇನೆ.

ರಾಜ್ಯದಲ್ಲಿ ವಕ್ಫ್ 105885 ಎಕರೆ ಜಮೀನು ಗುರುತಿಸಲಾಗಿದೆ. ರಾಜ್ಯದಲ್ಲಿ 32192 ವಕ್ಫ್ ಆಸ್ತಿ ನೊಂದಣಿಯಾಗಿದೆ. 8480 ಎಕರೆ ಒತ್ತುವರಿಯಾಗಿರುವ ಮಾಹಿತಿ ಇದೆ. ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಆದಷ್ಟು ಶೀಘ್ರ ಈ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದ 149 ತಾಲೂಕುಗಳ ವಕ್ಫ್ ಆಸ್ತಿ ಗೆಜೆಟ್ ಹೊರಡಿಸಲಾಗಿದೆ.  ವಕ್ಫ್ ಇಲಾಖೆಯಲ್ಲಿ 355 ಸಿಬ್ಬಂದಿ ಇದ್ದು ಇನ್ನು 84 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಹಜ್ ಯಾತ್ರೆಗೆ ಪ್ರತಿ ವರ್ಷ ಹೋಗಲು ಅವಕಾಶ ಇದೆ. ಸೌದಿ ಅರೇಬಿಯಾಕ್ಕೆ ಹೋಗಲು ಬೇಕಾದ ಅವಶ್ಯ ಮಾಹಿತಿಯನ್ನು ಹಜ್ ಮಂಡಳಿ ಮಾಡುತ್ತದೆ. 1965 ರಲ್ಲಿ 8 ಜನ ಸದಸ್ಯರನ್ನೊಳಗೊಂಡ ಹಜ್ ಸಮಿತಿ ರಚನೆಯಾಗಿದೆ. 2019-2021 ರಲ್ಲಿ  ಕೊವಿಡ್ ಕಾರಣದಿಂದ ಹಜ್ ಯಾತ್ರಿಕರು ಹಜ್ ಪ್ರವಾಸ ಕೈಗೊಂಡಿಲ್ಲ. ಹೀಗಾಗಿ ಹಜ್ ಭವನವನ್ನು ಕೊವಿಡ್ ಕೇರ್ ಸೆಂಟರ್ ಮಾಡಿ ಎಲ್ಲ ಸಮುದಾಯದವರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

Advertisement

ಇದನ್ನೂ ಓದಿ:ಸಿ.ಟಿ.ರವಿ ಅರೆ ಹುಚ್ಚ..! ಆರ್‌ಎಸ್‌ಎಸ್‌ ಚಡ್ಡಿಗಳು ಸ್ವಾತಂತ್ರ ತಂದು ಕೊಟ್ಟವರಲ್ಲ..!

ವಕ್ಫ್ ಕಮಿಟಿಯಲ್ಲಿ 105 ಕೋಟಿ ಅನುದಾನ ಇದೆ. ಬಡ ಮುಸ್ಲೀಂ ಸಮುದಾಯದವರಿಗೆ ಶೇ 5 % ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಮುಸ್ಲಿಂ ಮಹಿಳೆಯರಿಗೆ ಹೃದಯ ಹಾಗೂ ಕ್ಯಾನ್ಸರ್ ರೋಗ ಚಿಕಿತ್ಸೆಗೆ 1 ಲಕ್ಷ ರೂ. ಸಹಾಯಧನ ನೀಡಲಾಗುವುದು. ವಕ್ಪ್ ಮಂಡಳಿಗೆ ಈ ಸಾರಿ 1.74 ಕೋಟಿ ರೂ. ಅನುದಾನ ನೀಡಲಾಗಿದೆ. ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ನೀಡುವುದು ವಿಳಂಬವಾಗದಂತೆ ನೋಡಿಕೊಳ್ಳಲಾಗುವುದು. ಈ ಬಗ್ಗೆ ಹೆಚ್ಚಿನ ಪ್ರಚಾರ ಮಾಡಿ ಎಲ್ಲರಿಗೂ ಯೋಜನೆ ತಲುಪಿಸಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ವಕ್ಪ್ ಆಸ್ತಿ ಕಬಳಿಕೆ ಕುರಿತು ಅನ್ವರ್ ಮಾನಿಪ್ಪಾಡಿ ನೀಡಿರುವ ವರದಿ ಇನ್ನೂ ನೋಡಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಯಾತ್ರಿ ನಿವಾಸ ನಿರ್ಮಾಣಕ್ಕೆ ಕ್ರಮ: ರಾಜ್ಯದಲ್ಲಿರುವ ದೇವಸ್ಥಾನಗಳು, ಹೊರ ರಾಜ್ಯದಲ್ಲಿರುವ ದೇವಸ್ಥಾನಗಳ ಸ್ವಚತ್ತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ದೇವಸ್ಥಾನಗಳ ಆಸ್ತಿ ಸಮೀಕ್ಷೆ ಹಾಗೂ ಯಾತ್ರಿ ನಿವಾಸಗಳ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ 34563 ಮುಜರಾಯಿ ದೇವಸ್ಥಾನಗಳಿವೆ. 25 ಲಕ್ಷ ವರಮಾನ ಮೀರಿದ ದೇವಸ್ಥಾನಗಳನ್ನು ಎ ಕೆಟಗೆರಿ, 5 ಲಕ್ಷ ಮೇಲ್ಪಟ್ಟು ವರಮಾನ ಇರುವ ದೇವಸ್ಥಾನಗಳನ್ನು ಬಿ ಹಾಗೂ 5 ಲಕ್ಷ ಕ್ಕಿಂತ ಕಡಿಮೆ ವರಮಾನ ಇರುವ ದೇವಸ್ಥಾನಗಳನ್ನು ಸಿ ಕೆಟಗೆರಿಯಲ್ಲಿ ವಿಂಗಡಿಸಲಾಗಿದೆ. ಇದಲ್ಲದೇ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆ ಮಾಡಿ 25 ಕೋಟಿ ರೂ. ಮೀಸಲಿಸಲಾಗಿದೆ ಎಂದು ಹೇಳಿದರು.

ನಮ್ಮ ರಾಜ್ಯದ ದೇವಸ್ಥಾನಗಳಲ್ಲಿ ಸ್ವಚ್ಛತೆ ಮತ್ತು ಮೂಲಭೂತ ಸೌಲಭ್ಯ ಒದಗಿಸುವ ಕೆಲಸ ಮಾಡಲಾಗುವುದು. ರಾಜ್ಯದ ಯಾವ ದೇವಸ್ಥಾನಗಳಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಅವಕಾಶ ಇದೆ ಎನ್ನುವುದನ್ನು ವರದಿ ನೀಡಲಿ ಸೂಚಿಸಿದ್ದೇನೆ. ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶದ ಶ್ರೀಶೈಲಂ, ತಿರುಪತಿ, ಮರಾಹಾಷ್ಟ್ರದ ಫಂಡರಪುರ, ತುಳಜಾಭವಾನಿ, ಗುಡ್ಡಾಪುರ ದಾನಮ್ಮ ದೇವಸ್ಥಾನಗಳಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೇ ಮುಜರಾಯಿ ಇಲಾಖೆಯ ದೇವಸ್ಥಾನಗಳ ಆಸ್ತಿ ಸಮೀಕ್ಷೆ ನಡೆಸಲು ಸೂಚಿಸಿದ್ದೇನೆ ಎಂದು ತಿಳಿಸಿದರು.

ಹಿಂದಿನ ಮುಜರಾಯಿ ಸಚಿವರು ಸಪ್ತಪದಿ ಯೋಜನೆ ಜಾರಿಗೆ ತಂದಿದ್ದಾರೆ. ಅದನ್ನು ಮುಂದುವರೆಸಲು ತೀರ್ಮಾನಿಸಲಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಇದರ ಪ್ರಚಾರ ಕಡಿಮೆ ಇದೆ. ಹೆಚ್ಚಿನ ಪ್ರಚಾರ ಮಾಡಿ ಸಪ್ತಪದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮುಜರಾಯಿ ಇಕಾಖೆಯಲ್ಲಿಯೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಖಾತೆ ಬದಲಾವಣೆಗೆ ಬೇಸರವಿಲ್ಲ: ಖಾತೆ ಬದಲಾವಣೆಯ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ. ಪಕ್ಷದ ನಾಯಕರು ಯಾವ ಜವಾಬ್ದಾರಿ ವಹಿಸುತ್ತಾರೆಯೋ ಅದನ್ನು ನಿಭಾಯಿಸುತ್ತೇನೆ.  ನಾನು ಆಧ್ಯಾತ್ಮದಲ್ಲಿ ಇರುವುದರಿಂದ ಮುಜರಾಯಿ ಇಲಾಖೆ ಬಗ್ಗೆ ಬೇಸರ ಇಲ್ಲ. ಹಜ್ ಮತ್ತು ವಕ್ಫ್ ಖಾತೆ ನೀಡಿರುವುದೂ ಖುಷಿ ತಂದಿದೆ. ಎರಡೂ ಇಲಾಖೆಗಳ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಂಡು ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next