Advertisement

ವಿದ್ಯುತ್‌ಗಾಗಿ ಶರಾವತಿ ಕಣಿವೆ ಭೂ ಗರ್ಭಕ್ಕೆ ಕನ್ನ!

11:01 PM Oct 16, 2019 | Lakshmi GovindaRaju |

ಶಿವಮೊಗ್ಗ: ರಾಜ್ಯದ ವಿದ್ಯುತ್‌ ಜಾಲಕ್ಕೆ ಅತಿ ಹೆಚ್ಚು ಜಲ ವಿದ್ಯುತ್‌ ಪೂರೈಸುವ ಶರಾವತಿ ಕಣಿವೆಯಲ್ಲಿ ದೇಶದಲ್ಲೇ ಅತಿ ದೊಡ್ಡದಾದ ಮತ್ತೊಂದು ವಿದ್ಯುತ್‌ ಯೋಜನೆ ಜಾರಿಗೊಳಿಸಲು ಸರ್ಕಾರ ಸಿದ್ಧವಾಗಿದೆ. ಮಲೆನಾಡಿನ ಜನ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಸರ್ಕಾರ ಮಾತ್ರ ಬೃಹತ್‌ ಭೂಗರ್ಭ ಯೋಜನೆಗೆ ಆಸಕ್ತಿ ತೋರಿದೆ.

Advertisement

2017ನೇ ಏಪ್ರಿಲ್‌ನಲ್ಲಿ ಈ ಯೋಜನೆಗೆ 4,862 ಕೋಟಿ ರೂ.ಅಂದಾಜು ವೆಚ್ಚ ರೂಪಿಸಲಾಗಿತ್ತು. ಅದಾದ ಒಂದು ವರ್ಷದಲ್ಲಿ ಅಂದಾಜು ವೆಚ್ಚ 5,500 ಕೋಟಿ ರೂ.ಗಳಿಗೆ ಏರಿಕೆಯಾಗಿತ್ತು. ಈಗ ಯೋಜನೆ 6,000 ಕೋಟಿ ರೂ.ಮೀರುವ ಸಾಧ್ಯತೆ ಇದೆ. ಯೋಜನೆಗೆ ತೊಡ ರು ಗಾಲು ಆಗಬಹುದಾಗಿದ್ದ ವನ್ಯಜೀವಿ ಮಂಡಳಿ ಯಿಂದಲೂ ಯೋಜನೆಗೆ ಒಪ್ಪಿಗೆ ಸಿಕ್ಕ ಹಿನ್ನೆಲೆಯಲ್ಲಿ ಸಮಗ್ರ ಯೋಜನಾ ವರದಿ (ಡಿಪಿಆರ್‌) ತಯಾರಿಸು ವಂತೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

800 ಎಕರೆ ಅರಣ್ಯನಾಶ?: ಶರಾವತಿ ಕಣಿವೆಯ ಸಾವಿರಾರು ಹೆಕ್ಟೇರ್‌ ಅರಣ್ಯವನ್ನು ನೀರೊಳಗೆ ಮುಳು ಗಿಸಿ ಲಿಂಗನಮಕ್ಕಿ, ಚಕ್ರಾ, ಸಾವೇಹಕ್ಲು, ತಲಕಳಲೆ, ಗೇರುಸೊಪ್ಪಾ ಅಣೆಕಟ್ಟುಗಳನ್ನು ನಿರ್ಮಿಸಲಾಗಿದ್ದು, ಈಗ ಮತ್ತೆ ಈ ಯೋಜನೆಗೆ 800 ಎಕರೆ ಅರಣ್ಯವನ್ನು ಅಪೋಶನ ನೀಡಲು ಸರ್ಕಾರ ಮುಂದಾಗಿದೆ. ಲಿಂಗನ ಮಕ್ಕಿ, ಮಹಾತ್ಮ ಗಾಂಧಿ, ಶರಾವತಿ, ಗೇರು ಸೊಪ್ಪಾ ಮತ್ತು ಅಂಬುತೀರ್ಥ ವಿದ್ಯುದಾಗಾರಗಳ ಮೂಲಕ 1,490 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದ್ದು, ಈಗ 2,000 ಮೆಗಾವ್ಯಾಟ್‌ ಸಾಮರ್ಥ್ಯದ ಅತಿದೊಡ್ಡ ಯೋಜನೆ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ.

ಹೇಗಿದೆ ಲೆಕ್ಕಾಚಾರ?: ಯೋಜನೆಗೆ 378 ಎಕರೆ ಅರಣ್ಯ ಭೂಮಿ ಸಾಕು ಎಂದು ಅಂದಾಜಿಸಲಾಗಿದೆ. ಆದರೆ, 15 ಕಿ.ಮೀ. ಉದ್ದದ, 10 ಮೀ.ಅಗಲದ, 6 ಟನೆಲ್‌ಗ‌ಳ ನಿರ್ಮಾಣಕ್ಕೆ 140 ಎಕರೆ, ಪವರ್‌ಹೌಸ್‌ಗೆ ಸುಮಾರು 60 ಎಕರೆ, ಅಲ್ಲಿಗೆ ತಲುಪುವ 20 ಕಿ.ಮೀ. ರಸ್ತೆಗಾಗಿ 110 ಎಕರೆ, 60 ಕಿ.ಮೀ. ಉದ್ದದ ಬೃಹತ್‌ ತಂತಿ ಮಾರ್ಗಕ್ಕೆ 490 ಎಕರೆ ಅರಣ್ಯ ನಾಶವಾಗಲಿದೆ ಎಂದು ಹೇಳಲಾಗುತ್ತಿದೆ. ಜತೆಗೆ, ವಿದ್ಯುತ್‌ ಲೈನ್‌ ತೆಗೆದುಕೊಂಡು ಹೋಗಲು ನಾಶವಾಗುವ ಅರಣ್ಯದ ಬಗ್ಗೆ ಯೋಜನೆಯಲ್ಲಿ ಪ್ರಸ್ತಾಪವಿಲ್ಲ. ಒಂದು ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ 2.5 ಕೋಟಿ ರೂ.ವೆಚ್ಚ ತಗುಲಲಿದ್ದು ಒಂದು ಕಿ.ಲೋ. ವ್ಯಾಟ್‌ಗೆ 5.73 ರೂ.ದರದಲ್ಲಿ ವಿದ್ಯುತ್‌ ಮಾರಾಟ ಮಾಡಬಹುದಾಗಿದೆ ಎಂಬುದು ಅ ಧಿಕಾರಿಗಳ ಲೆಕ್ಕಾಚಾರ.

ಈ ಯೋಜನೆ ವಿಶೇಷ ಏಕೆ?: ಏಷ್ಯಾದ ಮೊಟ್ಟ ಮೊದಲ ಭೂಗರ್ಭ ವಿದ್ಯುದಾಗಾರವನ್ನು ಉಡುಪಿ ಜಿಲ್ಲೆ ಉಪ್ಪಿನಂಗಡಿ ಬಳಿ ನಿರ್ಮಿಸಲಾಗಿದೆ. ತೀರ್ಥಹಳ್ಳಿ ತಾಲೂಕು ಮಾಣಿಯಲ್ಲಿ ವರಾಹಿ ಜಲಾಶಯ ನಿರ್ಮಿಸಲಾಗಿದೆ. ಆದರೆ, ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆಯು ವಿಶಿಷ್ಟವಾಗಿದ್ದು, ಭಾರತದಲ್ಲಿ ಅತಿ ದೊಡ್ಡದೆನಿಸಿಕೊಳ್ಳಲಿದೆ. ತಲಕಳಲೆ ಮತ್ತು ಗೇರುಸೊಪ್ಪ ಜಲಾಶಯಗಳ ನಡುವೆ ಭೂಮಿಯ ಆಳದಲ್ಲಿ ಸುರಂಗ ಕೊರೆದು, ವಿದ್ಯುದಾಗಾರ ನಿರ್ಮಿಸಲಾಗುತ್ತದೆ. ತಲಾ 250 ಮೆಗಾವ್ಯಾಟ್‌ ಸಾಮರ್ಥ್ಯದ 8 ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

Advertisement

6 ತಾಸು ಉತ್ಪಾದನೆ: ಈ ವಿದ್ಯುದಾಗಾರದಲ್ಲಿ ವಿದ್ಯುತ್‌ಗೆ ಹೆಚ್ಚಿನ ಬೇಡಿಕೆ ಬರುವ ಸಮಯದಲ್ಲಿ ಅಂದರೆ, ದಿನಕ್ಕೆ 6 ಗಂಟೆ ಮಾತ್ರ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ತಲಕಳಲೆ ಜಲಾಶಯ ಎತ್ತರದಲ್ಲಿದ್ದು ಸುರಂಗ ಮಾರ್ಗದ ಮೂಲಕ ಟರ್ಬೈನ್‌ಗಳಿಗೆ ನೀರು ಹರಿಸಿ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಅದಾದ ಬಳಿಕ ನೀರು ಸುರಂಗ ಮಾರ್ಗದ ಮೂಲಕವೇ ಗೇರುಸೊಪ್ಪ ಜಲಾಶಯ ತಲುಪುತ್ತದೆ. ಮತ್ತೆ ಅದೇ ಟರ್ಬೈನ್‌ಗಳನ್ನು ಪಂಪ್‌ಸೆಟ್‌ನಂತೆ ಬಳಸಿ ಗೇರುಸೊಪ್ಪದಿಂದ 500 ಮೀ. ಎತ್ತರದ ತಲಕಳಲೆಗೆ ಹರಿಸಲಾಗುತ್ತದೆ. ಅಂದರೆ ನೀರನ್ನು ವ್ಯರ್ಥ ಮಾಡದಂತೆ ಮರುಬಳಕೆ ಮಾಡಲಾಗುತ್ತದೆ. ವ್ಯಾಪ್‌ಕೋಸ್‌ ಲಿಮಿಟೆಡ್‌ ಸಂಸ್ಥೆ ಕಾರ್ಯಸಾಧ್ಯತೆ ವರದಿ ತಯಾರಿಸಿದ್ದು, ಅದರ ಆಧಾರದ ಮೇಲೆ ಡಿಪಿಆರ್‌ ಸಿದ್ಧಪಡಿಸಲು ಸೂಚಿಸಲಾಗಿದೆ.

ಮತ್ತೊಂದು ಹೋರಾಟಕ್ಕೆ ಸಜ್ಜು: ಮೂರು ತಿಂಗಳ ಹಿಂದಷ್ಟೆ ಹಿಂದಿನ ಸಮ್ಮಿಶ್ರ ಸರ್ಕಾರ ಪ್ರಸ್ತಾಪಿಸಿದ್ದ ಲಿಂಗನಮಕ್ಕಿ ಜಲಾಶಯದ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆಗೆ ಮಲೆನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅದರ ವಿರುದ್ಧ ಸಂಘಟಿತ ಹೋರಾಟ ರೂಪಿಸಿದ್ದಲ್ಲದೆ ಬಂದ್‌ ಸಹ ನಡೆಸಿ ರಾಜ್ಯದ ಗಮನ ಸೆಳೆಯಲಾಗಿತ್ತು. ಈ ಹೋರಾಟಕ್ಕೆ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಬೆಂಬಲ ನೀಡಿತ್ತು. ಪಕ್ಷದ ಶಾಸಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಆದರೆ, ಈ ಹೊಸ ಯೋಜನೆಗೆ ಬಿಜೆಪಿ ಸರ್ಕಾರವೇ ಆಸಕ್ತಿ ವಹಿಸಿದೆ. ಸ್ಥಳೀಯರು ಮತ್ತೆ ಹೋರಾಟ ನಡೆಸಲು ಸಜ್ಜಾಗಿದ್ದಾರೆ.

ಈಗಾಗಲೇ ವನ್ಯಜೀವಿ ವಲಯ ಎಂದು ಘೋಷಣೆ ಮಾಡಿರುವುದರಿಂದ ಯಾವುದೇ ಯೋಜನೆಗಳನ್ನು ಈ ಭಾಗದಲ್ಲಿ ಕೈಗೊಳ್ಳುವಂತಿಲ್ಲ. ನಾವು ಈಗಾಗಲೇ ಪರಿಶೀಲನೆ ನಡೆಸಿದ್ದೇವೆ. ಅಣೆಕಟ್ಟು ಕಟ್ಟುವುದಿಲ್ಲ ಎಂಬ ಮಾತು ಬಿಟ್ಟರೆ ಉಳಿದೆಲ್ಲ ರೀತಿಯೂ ಇದು ಪ್ರಭಾವ ಬೀರಲಿದೆ. ಈ ಯೋಜನೆ ಎಲ್ಲ ರೀತಿಯಿಂದಲೂ ಪರಿಸರಕ್ಕೆ ಹಾನಿ ಮಾಡುತ್ತದೆ.
-ಅನಂತ ಹೆಗಡೆ ಆಶೀಸರ, ಅಧ್ಯಕ್ಷರು, ವೃಕ್ಷಲಕ್ಷ ಆಂದೋಲನ

* ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next