Advertisement

ಅನೀಶ್ ಜೋಡಿಯಾದ ಶರಣ್ಯಾ ಶೆಟ್ಟಿ

05:35 PM Jul 23, 2023 | Team Udayavani |

ಇತ್ತೀಚೆಗಷ್ಟೇ ಗಣೇಶ್‌ ಅಭಿನಯದ “ಕೃಷ್ಣಂ ಪ್ರಣಯ ಸಖೀ’ ಸಿನಿಮಾದ ಸುದ್ದಿ ಹೊರಬಂದಿದ್ದು, ಈ ಸಿನಿಮಾದ ಮೂವರು ನಾಯಕಿಯರ ಪೈಕಿ ಶರಣ್ಯಾ ಶೆಟ್ಟಿ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಶರಣ್ಯಾ ಶೆಟ್ಟಿ ನಾಯಕಿಯಾಗಿ ಅಭಿನಯಿಸುತ್ತಿರುವ ಮತ್ತೂಂದು ಸಿನಿಮಾ ಸದ್ದಿಲ್ಲದೆ ಶುರುವಾಗಿದೆ.

Advertisement

ಹೌದು, “ಅಕಿರ’, “ರಾಮಾರ್ಜುನ’, “ವಾಸು ನಾನು ಪಕ್ಕಾ ಕಮರ್ಷಿಯಲ್’ ಸಿನಿಮಾಗಳ ಖ್ಯಾತಿಯ ಅನೀಶ್‌ ತೇಜೇಶ್ವರ್‌ ನಾಯಕನಾಗಿ ಅಭಿನಯಿಸುತ್ತಿರುವ ಇನ್ನೂ ಹೆಸರಿಡದ ಹೊಸ ಸಿನಿಮಾಕ್ಕೆ ಶರಣ್ಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಈಗಾಗಲೇ ಸದ್ದಿಲ್ಲದೆ ಈ ಹೊಸ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಸಿನಿಮಾದ ಚಿತ್ರೀಕರಣವನ್ನೂ ಆರಂಭಿಸಿದೆ. ಮೊದಲ ಹಂತದಲ್ಲಿ ಬೆಂಗಳೂರು ಸುತ್ತಮುತ್ತ ಅದಾದ ನಂತರ ಕೊಡಗು ಮತ್ತು ಮಲೆಮಹಾದೇಶ್ವರ ಬೆಟ್ಟದ ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು, ಅಂತಿಮ ಹಂತದ ಚಿತ್ರೀಕರಣ ಥೈಲ್ಯಾಂಡ್‌ನ‌ಲ್ಲಿ ನಡೆಸುವ ಯೋಚನೆಯಲ್ಲಿದೆ ಚಿತ್ರತಂಡ. ಅಂದಹಾಗೆ, ಈ ಹಿಂದೆ “ಬಾಂಬೆ ಮಿಠಾಯಿ’, “ಬ್ರಹ್ಮಾಚಾರಿ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಚಂದ್ರ ಮೋಹನ್‌ ಈ ಹೊಸ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ.

ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡುವ ನಟಿ ಶರಣ್ಯಾ ಶೆಟ್ಟಿ, “ಇದೊಂದು ಕಾಮಿಡಿ ಥ್ರಿಲ್ಲರ್‌ ಶೈಲಿಯ ಸಿನಿಮಾ. ಈ ಸಿನಿಮಾದಲ್ಲಿ ನಾನು ಲಂಗ-ಧಾವಣಿ ಪಕ್ಕಾ ಹಳ್ಳಿಯ ಹುಡುಗಿ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಳ್ಳಿಯ ಹಿನ್ನೆಲೆಯಲ್ಲೇ ನನ್ನ ಪಾತ್ರ ಸಾಗುತ್ತದೆ. ನಟನೆಗೆ ಹೆಚ್ಚು ಪ್ರಾಮುಖ್ಯತೆ ಇರುವಂಥ ಪಾತ್ರ ಇದಾಗಿದೆ. ಮೊದಲ ಬಾರಿಗೆ ಇಂಥದ್ದೊಂದು ಸಾಂಪ್ರ ದಾಯಿಕ ಲುಕ್‌ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿಯಿದೆ. ಸದ್ಯ ಸಿನಿಮಾದ ಶೂಟಿಂಗ್‌ ಶುರುವಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಈ ಹೊಸ ಸಿನಿಮಾದಲ್ಲಿ ಅನೀಶ್‌, ಶರಣ್ಯಾ ಶೆಟ್ಟಿ ಅವರೊಂದಿಗೆ ಗುರುನಂದನ್‌, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು, ಚಿಕ್ಕಣ್ಣ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಕೆಲಸಗಳು ಭರದಿಂದ ನಡೆಯುತ್ತಿದ್ದು, ಈ ವರ್ಷದ ಕೊನೆಯೊಳಗೆ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಲ್ಲಿದ್ದಾರೆ ಶರಣ್ಯಾ ಶೆಟ್ಟಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next