Advertisement

ಚಿತ್ರದ ಛಾಯಾ ಕಥನ

10:13 AM Mar 16, 2020 | mahesh |

ಡಿಜಿಟಲ್‌ ಕೆಮರಾ ಬಂದ ಮೇಲೆ ಫೊಟೊ ತೆಗೆಯುವುದು ಬಹಳ ಸುಲಭವಾಗಿ ಬಿಟ್ಟಿದೆ. ಹಳ್ಳಿಗಳಿಗೆ ಹೋಗಿ ಹಳ್ಳಿ ಜನಜೀವನವನ್ನು ತಮ್ಮ ಕೆಮರಾಗಳಲ್ಲಿ ಸೆರೆಹಿಡಿಯುವುದೊಂದು ಸಾಮಾನ್ಯ ಹವ್ಯಾಸ. ಸುಮ್ಮನೆ ಒಂದು ಪ್ರಶ್ನೆಯನ್ನು ಎತ್ತಿಕೊಳ್ಳೋಣ : ಒಂದು ವೇಳೆ ಒಳ್ಳೆಯ ಫೊಟೊಗಳಿಗೆ ಪ್ರಶಂಸೆಯಾಗಲಿ, ಬಹುಮಾನವಾಗಲಿ ಬಂದರೆ ಅದರ ಯಶಸ್ಸು ಕೇವಲ ಫೊಟೊಗ್ರಾಫ‌ರ್‌ಗಳಿಗೆ ಸಲ್ಲಬೇಕಾದುದೇ ಅಥವಾ ಆ ಫೊಟೊದಲ್ಲಿರುವವರಿಗೂ ಅದರಲ್ಲಿ ಪಾಲಿದೆಯೆ?

Advertisement

ನದಿಯ ಬಗ್ಗೆ ಕವಿತೆ ಬರೆದು ಹಿಗ್ಗಿದನಂತೆ ಒಬ್ಬ ಕವಿ. ಯಾರೋ ಕೇಳಿದರು, “ಆ ಕವಿತೆ ನಿಜವಾಗಿ ಯಾರದು? ನಿನ್ನದೆ? ನದಿಯದ್ದೆ?’
ಕವಿತೆ ಕವಿಯದ್ದೇ. ಆದರೆ, ನದಿಯದ್ದಲ್ಲ ಎಂದು ಹೇಳುವುದು ಹೇಗೆ?
ಅಥವಾ ತನ್ನ ಕವಿತೆಯಲ್ಲಿ ನದಿಗೂ ಪಾಲಿದೆ ಎಂಬ ವಿನಯವಾದರೂ ಕವಿಗೆ ಇಲ್ಲದಿದ್ದರೆ ಹೇಗೆ !

ಒಮ್ಮೆ ಲಂಡನ್‌ನಿಂದ ಹಿಂತಿರುಗುತ್ತ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಳಿದಿದ್ದೆ. ಮುಂದಿನ ವಿಮಾನಕ್ಕೆ ನಾಲ್ಕು ಗಂಟೆ ಅಂತರವಿತ್ತು. ಕಾಲಕ್ಷೇಪವಾಗಬೇಕಲ್ಲ, ಅಲ್ಲಿ ಕಲಾತ್ಮಕವಾದ ಭಿತ್ತಿಚಿತ್ರಗಳಿದ್ದವು. ಕೆಮರಾ ತೆಗೆದು ಅವುಗಳನ್ನು ಶೂಟ್‌ ಮಾಡಲಾರಂಭಿಸಿದೆ. ಅಷ್ಟರಲ್ಲಿ ಕೆಲವು ಮಕ್ಕಳು ಲಗೇಜನ್ನು ನೂಕಿಕೊಂಡು, ಅತ್ತಿತ್ತ ಓಡಾಡುತ್ತ ಆಡುತ್ತಿರುವುದು ಕಂಡಿತು. ತುಂಬ ಮೋಹಕ ದೃಶ್ಯವದು. ಭಿತ್ತಿಚಿತ್ರಗಳೊಂದಿಗೆ, ನನಗರಿವಿಲ್ಲದಂತೆಯೇ ಆ ಮಕ್ಕಳ ಕೆಲವು ಫೊಟೊಗಳನ್ನೂ ತೆಗೆಯಲಾರಂಭಿಸಿದೆ. ಕೆಲವು ಕ್ಷಣಗಳಾಗುತ್ತ, ಆ ಮಕ್ಕಳ ತಂದೆ ಇರಬೇಕು, ನನ್ನ ಬಳಿ ಬಂದು, “ಮಕ್ಕಳ ಫೋಟೊ ತೆಗೆಯಬೇಡಿ’ ಎಂದು ಆಕ್ಷೇಪಿಸಿದ. ಈಗಾಗಲೇ ತೆಗೆದಿರುವ ಫೋಟೊಗಳನ್ನು ಡಿಲೀಟ್‌ ಮಾಡುವಂತೆಯೂ ಸೂಚಿಸಿದ. ಅವನ ಮುಂದೆಯೇ ಕೆಮರಾದಲ್ಲಿ ಆ ಫೋಟೊಗಳನ್ನು ಡಿಲೀಟ್‌ ಮಾಡಿದೆ. ಬಳಿಕ, ವಿನಯಪೂರ್ವಕವಾಗಿ ಹೇಳಿದೆ, “”ನಾನು ಭಾರತೀಯ. ನಮ್ಮಲ್ಲಿ ಇಂಥ ನಿಬಂಧನೆಗಳಿಲ್ಲ. ತಿಳಿಯದೆ, ನಿಮ್ಮ ಮಕ್ಕಳ ಫೊಟೊಗಳನ್ನು ಕ್ಲಿಕ್ಕಿಸಿದೆ. ಕ್ಷಮಿಸಿ” ಎಂದೆ.

ಅನುಮತಿ ವಿನಃ ಫೊಟೋ ಸಲ್ಲ
ಮತ್ತೂಂದು ಘಟನೆಯನ್ನು ಹೇಳುತ್ತೇನೆ. ಅಯರ್ಲೆಂಡ್‌ನ‌ ರಸ್ತೆ ಬದಿಯಲ್ಲಿ ಫೊಟೊಗ್ರಫಿ ಮಾಡುತ್ತಿದ್ದೆ. ಒಬ್ಟಾಕೆ ಹೆಣ್ಣುಮಗಳು ಅತ್ತಿತ್ತ ನೋಡುತ್ತ ರಸ್ತೆ ದಾಟುತ್ತಿರುವ ದೃಶ್ಯ ನನ್ನನ್ನು ಸೆಳೆಯಿತು. ಕೂಡಲೇ ನನ್ನ ಕೆಮರಾ ಆ ಸುಂದರ ಕ್ಷಣವನ್ನು ಸೆರೆಹಿಡಿಯಿತು. ಬಳಿಕ, ನಾನು ಆಕೆಯ ಬಳಿ ಹೋಗಿ, “ಎಕ್ಸ್‌ ಕ್ಯೂಸ್‌ಮಿ, ನಿಮ್ಮ ಅನುಮತಿ ಇಲ್ಲದೆ ನಿಮ್ಮ ಫೊಟೊ ತೆಗೆದಿದ್ದೇನೆ. ಅದನ್ನು ನಾನು ಯಾವುದಾದರೂ ಪ್ರದರ್ಶನದಲ್ಲಿ ಬಳಸಬಹುದೆ?’ ಎಂದು ಕೇಳಿದೆ. ಆಕೆ, “ಖಂಡಿತ, ಬಳಸಿಕೊಳ್ಳಿ’ ಎಂದು ಮುಂದೆ ಹೋದಳು. ಅವಳಿಗದು ದೊಡ್ಡ ಸಂಗತಿಯೇ ಅಲ್ಲ. ಆ ಫೊಟೊವನ್ನು ನಾನು ಹಲವೆಡೆ ಬಳಸಿಕೊಂಡೆ.

ಡಿಜಿಟಲ್‌ ಫೊಟೊಗ್ರಫಿ ಬಂದ ಮೇಲೆ ಛಾಯಾಗ್ರಹಣ ಬಹಳ ಸುಲಭವಾಗಿಬಿಟ್ಟಿದೆ. ರೋಲ್‌ ಕೆಮರಾ ಇರುವಾಗ ಕ್ಲಿಕ್ಕಿಸಿದ ಬಳಿಕ ದೀರ್ಘ‌ ಪ್ರಕ್ರಿಯೆಯನ್ನು ಮುಗಿಸುವುದೇ ದೊಡ್ಡ ವಿಷಯವಾಗಿತ್ತು. ಈಗ ಕ್ಲಿಕ್ಕಿಸಿದ ಅರೆಕ್ಷಣದಲ್ಲಿಯೇ ಫೊಟೊ ಲಭ್ಯ! ಕೆಮರಾದಲ್ಲಿ, ಮೊಬೈಲ್‌ನಲ್ಲಿ ಫೊಟೊ ತೆಗೆಯದವರೇ ಇಲ್ಲ. ಅನೇಕ ಛಾಯಾಗ್ರಾಹಕರ ಫೊಟೊಗಳಿಗೆ ಬಹುಮಾನಗಳೂ ಬರುತ್ತವೆ. ಬಹುಮಾನ ಬಂದ ಫೊಟೊ ಯಾವುದು ಎಂಬುದನ್ನು ಗಮನಿಸುತ್ತೇವೆ, ಅದನ್ನು ನೋಡಿ ಸಂತೋಷ ಪಡುತ್ತೇವೆ. ಬಹುಮಾನಿತ ಫೊಟೊವನ್ನು ಸೆರೆಹಿಡಿದ ಛಾಯಾಗ್ರಾಹಕ ಯಾರು ಎಂಬುದನ್ನು ಪರಿಗಣಿಸುತ್ತೇವೆ. ಆ ಫೊಟೊದಲ್ಲಿರುವವರು ಯಾರು ಎಂಬುದರ ಬಗೆೆY ಎಂದಾದರೂ ತಲೆಕೆಡಿಸಿಕೊಳ್ಳುತ್ತೇವೆಯೆ? ಒಂದು ಭಾವಚಿತ್ರವನ್ನು ಅಥವಾ ಪೋಟ್ರೈಟನ್ನು ಸೆರೆಹಿಡಿದ ಛಾಯಾಗ್ರಾಹಕನನ್ನು ಅಭಿನಂದಿಸುವ ಭರದಲ್ಲಿ ಆ ಭಾವಚಿತ್ರದಲ್ಲಿರುವ ಮುಖ ಯಾರದು ಎಂಬುದನ್ನು ಮರೆತೇಬಿಡುತ್ತೇವೆ.

Advertisement

ಸುಮ್ಮನೆ ಯೋಚಿಸೋಣ, ಒಳ್ಳೆಯ ಫೊಟೊಕ್ಕಾಗಿ ಫೊಟೊಗ್ರಫಿ ಮಾಡಿದವನಿಗೆ ಮನ್ನಣೆ ಸಿಗುವುದಾದರೆ ಆ ಫೊಟೊದಲ್ಲಿರುವ ವ್ಯಕ್ತಿಗೂ ಅದರ ಪಾಲು ಸಿಗಬೇಡವೆ?
ನಾನೇ ಸೆರೆಹಿಡಿದ ಎಷ್ಟೋ ಛಾಯಾಚಿತ್ರಗಳಿವೆ. ಅವುಗಳನ್ನು ತೆಗೆದ ನನಗೆ ಪ್ರಶಂಸೆಗಳು ಸಲ್ಲುತ್ತವೆಯೇ ಹೊರತು ಆ ಫೊಟೊದಲ್ಲಿರುವ ವ್ಯಕ್ತಿಗಳಿಗ‌ಲ್ಲ.
ಇದೊಂದು ಬಗೆಯ ಸೈದ್ಧಾಂತಿಕ ಪ್ರಶ್ನೆಯಾಗಿ ನನ್ನನ್ನು ಕಾಡುತ್ತದೆ. ಇದು ಕೇವಲ ಛಾಯಾಗ್ರಹಣದ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆ ಅಲ್ಲ; ಸಾಹಿತ್ಯ-ಕಲಾ ವಿಚಾರಗಳ ಆವರಣಕ್ಕೂ ಸಲ್ಲುವಂಥಾದ್ದೇ. ಒಂದು ಸರಳ ವಿಚಾರವನ್ನು ಗಮನಿಸೋಣ: ಒಬ್ಬ ಕವಿ ನದಿಯ ಬಗ್ಗೆ ಪದ್ಯ ಬರೆದು ಎಲ್ಲರೆದುರಿಗೆ ಅದನ್ನು ಒದಿ ಹೆಮ್ಮೆಯಿಂದ ಬೀಗುತ್ತಾನೆ.

ಆದರೆ, ಆ ಕವಿತೆಯ ಯಶಸ್ಸಿನಲ್ಲಿ ಕವಿಗೆ ಎಷ್ಟು ಪಾಲು ಇದೆಯೋ ಅಷ್ಟು ಭಾಗ ನದಿಗೂ ಇದೆಯಲ್ಲವೆ? ಹಾಗೆಂದು ನದಿ ಹಕ್ಕು ಸಾಧಿಸುವುದಿಲ್ಲ, ಆ ಮಾತು ಬೇರೆ. ಸಾಹಿತ್ಯದಲ್ಲಾದರೋ ಇದೊಂದು ಅಸಂಗತ ಪ್ರಶೆೆ° ಎಂದೂ ಕೆಲವರು ಹೇಳಬಹುದು. ಯಾಕೆಂದರೆ, ಕವಿಯೊಬ್ಬ ಒಂದು ವಿಚಾರ ಅಥವಾ ವಸ್ತುವನ್ನು ತನ್ನ ಒಳಗು ಮಾಡಿಕೊಳ್ಳುತ್ತ, ಹೊಸ ರೂಪದಲ್ಲಿ ಅದನ್ನು ಅಭಿವ್ಯಕ್ತಿಸುತ್ತಾನೆ. ಒಂದು ಬಗೆಯ ಪರೋಕ್ಷ ಪ್ರಕಟಣೆ ಇದು. ನಿಜದಲ್ಲಿರುವ ನದಿ, ಕವಿತೆಯಲ್ಲಿಯೂ ಅದೇ ರೂಪದಲ್ಲಿ ಬರಬೇಕೆಂದಿಲ್ಲ. ಅದೊಂದು ರೂಪಕವಾಗಿ, ಅಪ್ರತ್ಯಕ್ಷ ರೂಪದಲ್ಲಿ ಪ್ರಕಟವಾಗಬಹುದು. ಆದರೆ, ಫೋಟೊಗ್ರಫಿಯಲ್ಲಿ ಹಾಗಲ್ಲ , ವ್ಯಕ್ತಿಯ ಮುಖ ನೇರವಾಗಿ ಆತನದ್ದೇ ಎಂದು ಗುರುತಿಸಬಹುದಾದಷ್ಟು ಸ್ಪಷ್ಟವಿರುತ್ತದೆ.

ಹೀಗೆ ಮಾತನಾಡುವಾಗಲೆಲ್ಲ ನನಗೆ ಡಿ.ವಿ. ರಾಯರ ನೆನಪಾಗುತ್ತದೆ. ದೊಡ್ಡೇರಿ ವೆಂಕಟಗಿರಿರಾಯರು. ನಾಡಿನ ಹಿರಿಯ ಪೀಳಿಗೆಯ ಛಾಯಾಗ್ರಹಕರಿಗೆಲ್ಲ ಗುರುಸ್ಥಾನದಲ್ಲಿ ನಿಲ್ಲಬಲ್ಲವರು. ಒಳ್ಳೆಯ ಛಾಯಾಗ್ರಾಹಕರು ಹೇಗೋ ಹಾಗೆಯೇ ಒಳ್ಳೆಯ ಬರಹಗಾರರು ಕೂಡ. ಅವರು ಯಾರದೇ ಫೋಟೊ ತೆಗೆಯುವ ಮುನ್ನ ಅವರ ಅನುಮತಿ ಕೇಳುತ್ತಿದ್ದರು. “ದಯವಿಟ್ಟು ಒಂದು ಫೋಟೊ ತೆಗೆಯಬಹುದಾ’ ಎಂದು ಕೇಳಿದರೆ ಯಾರು ಬೇಡವೆನ್ನುತ್ತಾರೆ! ಫೋಟೊ ತೆಗೆದ ಮೇಲೆ ಒಂದು ಕಾಗದದ ಮೇಲೆ ಅವರ ಹೆಸರು ನಮೂದಿಸಿ, “ಇದನ್ನು ಎಲ್ಲಿಯೂ ಬಳಸಬಹುದು’ ಎಂಬ ಅನುಮತಿ ಸಹಿತ ಸಹಿ ಹಾಕಿಸಿಕೊಳ್ಳುತ್ತಿದ್ದರು. ಅಂಥ ಕಾಗದಪತ್ರಗಳನ್ನು ಭದ್ರವಾಗಿ ಇರಿಸಿಕೊಳ್ಳುತ್ತಿದ್ದರು. ಮುಂದೆ ತೊಂದರೆಯಾಗಬಾರದು ಎಂಬ ರೀತಿಯ ಮುಂಜಾಗರೂಕತೆ ಇದು ಎಂದು ನಾವು ಭಾವಿಸಬಹುದು, ಅದಷ್ಟೇ ಅಲ್ಲ, ನನ್ನ ಫೊಟೊದ ಯಶಸ್ಸಿನಲ್ಲಿ ನಿಮಗೂ ಪಾಲು ಇದೆ’ ಎಂದು ವಿನಯಪೂರ್ವಕವಾಗಿ ಹೇಳುವ ರೀತಿ ಕೂಡ ಹೌದು.

ಆಲಂಕಾರಿಕ ಚಿತ್ರ ಫೊಟೊ: ಪವನ್‌ ಸುಳ್ಯ

ಪತ್ರಿಕೆಯ ಜವಾಬ್ದಾರಿಯೆ?

ಪ್ರಸಿದ್ಧ ಛಾಯಾಗ್ರಾಹಕರೊಬ್ಬರು ಹಿರಿಯ ಸಾಹಿತಿಗಳ ಫೊಟೊ ತೆಗೆದು, ಅದನ್ನು ಬಳಸಿದ್ದಕ್ಕಾಗಿ ಅವರ ಮಗನ ಮೇಲೆಯೇ ನ್ಯಾಯಾಲಯದಲ್ಲಿ ದಾವೆ ಹೂಡಿ ಪರಿಹಾರ ಪಡೆದುಕೊಂಡ ಘಟನೆ ನೆನಪಾಗುತ್ತಿದೆ. ಹಾಗೆಂದು ಆ ಹಿರಿಯ ಛಾಯಾಗ್ರಾಹಕ ನನಗೆ ಗುರು ಸಮಾನರೇ. ಆದರೆ, ಅವರ ನಿಲುವು ನನಗೆ ಸರಿಕಂಡಿರಲಿಲ್ಲ. ನಾನು ಇದನ್ನು ಆಕ್ಷೇಪಿಸಿದೆ ಕೂಡ. “”ನೀವು ಫೊಟೊ ತೆಗೆಯುವಾಗ ಆ ಹಿರಿಯ ಸಾಹಿತಿಯ ಅನುಮತಿ ಪಡೆದಿದ್ದೀರಾ?” ಎಂದು ಕೇಳಿದೆ. ಅವರ ಅನುಮತಿ ಕೇಳುವ ಅಗತ್ಯವಿಲ್ಲ, ನನ್ನನ್ನು ಫೊಟೊ ತೆಗೆಯಲು ನಿಯೋಜಿಸಿದ ಪತ್ರಿಕಾ ಸಂಸ್ಥೆಗೆ ಸಂಬಂಧಪಟ್ಟ ವಿಚಾರ’ ಎಂಬರ್ಥದಲ್ಲಿ ಅವರು ಉತ್ತರಿಸಿದರು. ಆದರೆ, ಈ ವಿಚಾರ ನನ್ನನ್ನು ಬಹಳ ಗಾಢವಾಗಿ ಕಾಡಲಾರಂಭಿಸಿತ್ತು. ಯಾವುದೇ ವಿಚಾರವನ್ನು ನಾವು ಕಾನೂನಾತ್ಮಕವಾಗಿ ನೋಡಬೇಕೆ, ಮಾನವೀಯವಾಗಿ ಅಥವಾ ಭಾವನಾತ್ಮಕವಾಗಿ ನೋಡಬೇಕೆ ಎಂಬುದು ಜಟಿಲವಾದ ಪ್ರಶ್ನೆ. ಅಂದ ಹಾಗೆ ಒಂದು ವಿಚಾರವನ್ನು ಹೇಳಿಬಿಡುತ್ತೇನೆ- ಮಹಾತ್ಮಾಗಾಂಧೀಜಿಯವರ ಫೊಟೊ ತೆಗೆಯಲು ಅವರ ಅನುಮತಿ ಪಡೆಯಬೇಕಿತ್ತಂತೆ. ಮಾತ್ರವಲ್ಲ, ಎರಡು ರೂಪಾಯಿ ಶುಲ್ಕವನ್ನೂ ವಿಧಿಸುತ್ತಿದ್ದರಂತೆ. ಅದನ್ನು ಅವರ ಟ್ರಸ್ಟ್‌ಗೆ ಬಳಸುತ್ತಿದ್ದರು, ಆ ಮಾತು ಬೇರೆ. ಆದರೆ, ಫೊಟೊ ತೆಗೆಯುವಾಗ ಅದನ್ನು ಯಾರು ತೆಗೆಯುತ್ತಿದ್ದಾರೆ ಎಂಬುದು ಮುಖ್ಯವೋ ಯಾರ ಫೊಟೊ ತೆಗೆಯುತ್ತಿದ್ದಾರೆ ಎಂಬುದು ಕೂಡ ಅಷ್ಟೇ ಮುಖ್ಯವಾಗಿತ್ತು.

ಬಡತನ ಸದರವಲ್ಲ
ಎಷ್ಟೋ ಬಾರಿ ಅನ್ನಿಸುತ್ತದೆ, ಗ್ರಾಮೀಣ ಫೊಟೊಗ್ರಫಿ ಎಂದುಕೊಂಡು ಹಳ್ಳಿಗಳಲ್ಲಿ ಓಡಾಡುತ್ತ ಅಲ್ಲಿನ ಜನರ ಮುಖಭಾವಗಳನ್ನು ಕೆಮರಾದಲ್ಲಿ ಸೆರೆಹಿಡಿಯುತ್ತೇವೆ. ಅವರಿಗೆಲ್ಲ ಫೊಟೊಗೆ ಫೋಸ್‌ ಕೊಡುವುದೆಂದರೆ ಬಹಳ ಖುಷಿ. ಆದರೆ, ಫೊಟೊ ತೆಗೆಯುತ್ತಿರುವ ಅಥವಾ ತನ್ನ ಫೊಟೊಗೆ ರೂಪದರ್ಶಿಯಾಗುತ್ತಿರುವ ವ್ಯಕ್ತಿ, ಆತನ ಹೆಸರು, ವಿವರಗಳನ್ನು ತಿಳಿದುಕೊಳ್ಳಬೇಕೆಂದು ಫೊಟೊಗ್ರಾಫ‌ರನಿಗೆ ಅನ್ನಿಸುವುದೇ ಇಲ್ಲ. ನಾನು ಎಷ್ಟೋ ಕಾರ್ಯಕ್ರಮಗಳಲ್ಲಿ ನೋಡಿದ್ದೇನೆ; ಛಾಯಾಗ್ರಾಹಕರು ಸಭೆಯ ಮಧ್ಯದಲ್ಲಿ ನಿಂತುಕೊಂಡು ಫೊಟೊ ಹೊಡೆಯುತ್ತಾರೆ. ಕುಳಿತವರಿಗೆ ವೇದಿಕೆ ಕಾಣಿಸದೇ ತೊಂದರೆಯಾಗುತ್ತದೆ. ಕೆಲವರು ವೇದಿಕೆಯ ಮುಂಭಾಗದಲ್ಲಿ ಅಥವಾ ಮೇಲೆ ಓಡಾಡುತ್ತ ಫೊಟೊ ತೆಗೆಯುತ್ತಾರೆ. ಇದು ಕೂಡ ವೇದಿಕೆಯ ಶಿಸ್ತನ್ನು ಭಂಗಗೊಳಿಸುತ್ತದೆ. ಆಕ್ಷೇಪಿಸಿದರೆ, ನಾವು ಫೊಟೊ ತೆಗೆಯದಿದ್ದರೆ ನಿಮಗೆ ಪ್ರಚಾರ ಸಿಗುವುದು ಹೇಗೆ? ನಿಮ್ಮ ಕಾರ್ಯಕ್ರಮದ ವಿವರಗಳು ದಾಖಲಾಗುವುದು ಹೇಗೆ?’ ಎಂದು ವಾದಿಸುತ್ತಾರೆ.

ಕೆಲವು ದೇಶಗಳಲ್ಲಿ ಎಲ್ಲ ಕಡೆ ಫೊಟೊ ತೆಗೆಯಲು ಅನುಮತಿ ಇಲ್ಲ. ನಮ್ಮಲ್ಲಿಯೂ ಕೆಲವು ದೇವಸ್ಥಾನಗಳ ಒಳಗಡೆ ಕೆಮರಾ ಒಯ್ಯಲು ಬಿಡುವುದಿಲ್ಲ. ಉಳಿದಂತೆ ಫೊಟೊ ತೆಗೆಯಬಾರದು ಎಂಬ ನಿಷೇಧವಿರುವುದು ಬಹಳ ವಿರಳ. ಆದರೆ, ತೆಗೆದ ಫೊಟೊವನ್ನು ಕಮರ್ಷಿಯಲ್ ಆಗಿ ಬಳಸಬಾರದು ಎಂಬುದನ್ನು ಫೊಟೊಗ್ರಫಿಯ ಪ್ರೈವೇಟ್‌ ಪಾಲಿಸಿ ಸೂಚಿಸುತ್ತದೆ. ಇವತ್ತು ಮೊಬೈಲ್‌ನಲ್ಲಿ ಕೆಮರಾಗಳು ಬಂದ ಮೇಲೆ “ಖಾಸಗಿತನ’, “ಖಾಸಗಿ ಕ್ಷಣ’ಗಳು ಘಾಸಿಗೊಳ್ಳುತ್ತಲೇ ಇವೆ. ತೆಗೆದ ಫೊಟೊಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿದಾಗ ಅಥವಾ ಇದರ ವಿರುದ್ಧ ಮನುಷ್ಯ ಮೊಕದ್ದಮೆ ಹೂಡಿದಾಗ ಕಾನೂನು ವಿಚಾರಗಳು ವಿಶೇಷವಾಗಿ ಪರಿಗಣಿಸಲ್ಪಡುತ್ತವೆ.

ಸೂಡಾನ್‌ನಲ್ಲಿ ಬಡತನದ ಭೀಕರತೆಯ ಫೊಟೊಗ್ರಫಿ ಮಾಡಿದ ಕೆಲ್ವಿನ್‌ ಕಾರ್ಟರ್‌ ಗೆ ಪುಲಿಟ್ಜರ್‌ ಪ್ರಶಸ್ತಿ ಬಂದಿತ್ತು. ಒಂದು ಮಗು ಹಸಿವಿನಿಂದ ಸಾಯುತ್ತಿರುವುದು ಮತ್ತು ಅದು ಸಾಯುತ್ತಿರುವುದನ್ನೇ ಕಾದು ಕುಳಿತಿರುವ ಹದ್ದು- ಈ ದೃಶ್ಯ ಇಡೀ ಜಗತ್ತಿನ ಅಂತಸ್ಸಾಕ್ಷಿಯನ್ನು ಕಲಕಿತ್ತು. ಪುಲಿಟ್ಜರ್‌ ಪ್ರಶಸ್ತಿ ಬಂದು ಜಗತ್ಪ್ರಸಿದ್ಧವಾದರೂ ಈ ಫೊಟೊ ತೆಗೆದ ಕ್ಷಣವನ್ನೇ ನೆನೆಯುತ್ತ ಫೊಟೊಗ್ರಾಫ‌ರ್‌ ಖನ್ನನಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ಕೆಲ್ವಿನ್‌ ಕಾರ್ಟರ್‌ ತಾನು ಸೆರೆಹಿಡಿದ ಫೊಟೊದೊಂದಿಗೆ ಭಾವನಾತ್ಮಕವಾಗಿ ಎಷ್ಟೊಂದು ಒಳಗೊಂಡಿರಬಹುದು! ಛಾಯಾಗ್ರಾಹಕನೊಬ್ಬ ತಾನು ಸೆರೆಹಿಡಿದಿರುವ ದೃಶ್ಯ, ವ್ಯಕ್ತಿಯೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಳ್ಳದೇ ಇದ್ದರೆ ಆತನ ಛಾಯಾಚಿತ್ರಗಳಿಗೆ ಅರ್ಥಪೂರ್ಣತೆಯ ಚೌಕಟ್ಟು ಒದಗಲಾರದು.

ಡಿಜಿಟಲ್‌ ಫೊಟೊಗ್ರಫಿಯ ಮೂಲಕ ಎಲ್ಲರೂ ಛಾಯಾಗ್ರಾಹಕರಾಗುತ್ತಿರುವ ದಿನಗಳಿವು. ಆದರೆ, ಕೆಮರಾ ಕೈಯಲ್ಲಿರುವಾಗ ಕಾನೂನು ಹೇಳುವ “ಪ್ರೈವೇಟ್‌ ಪಾಲಿಸಿ’ಯನ್ನು ಮರೆಯಬಾರದು, ವಿನಯವಂತಿಕೆಯನ್ನು ಮರೆಯದಿರುವುದು ಅಷ್ಟೇ ಮುಖ್ಯ.

ಕೆ.ಎಸ್‌. ರಾಜಾರಾಮ್‌

Advertisement

Udayavani is now on Telegram. Click here to join our channel and stay updated with the latest news.

Next