Advertisement

ಲೈಂಗಿಕ ಕಿರುಕುಳ ಇಲ್ಲಿ ನಿತ್ಯ ನಿರಂತರ

11:25 AM Aug 24, 2018 | Team Udayavani |

ಬೆಂಗಳೂರು: ದೈಹಿಕ, ಮಾನಸಿಕ ಹಾಗೂ ಲೈಂಗಿಕ ಕಿರುಕುಳ ಇಲ್ಲಿ ನಿತ್ಯ ನಿರಂತರ. ಆದರೂ ಯಾರಿಗೂ ಹೇಳುವಂತಿಲ್ಲ, ಅನುಭವಿಸುವಂತೆಯೂ ಇಲ್ಲ. ಇದು ಗಾರ್ಮೆಂಟ್ಸ್‌ ಮಹಿಳೆಯರ ಪಾಡು. ಗಾರ್ಮೆಂಟ್ಸ್‌ ಕಾರ್ಖಾನೆಗಳಲ್ಲಿ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲ
ಸೌಕರ್ಯಗಳ ಕೊರತೆ, ವೇತನ ತಾರತಮ್ಯ, ಅಭದ್ರತೆ ಇವಿಷ್ಟೇ ಸಮಸ್ಯೆಯಲ್ಲ. ಅಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ನೆಮ್ಮದಿಯಿಂದ ಉಸಿರಾಡುವಂತಹ ವಾತಾವರಣವೂ ಇಲ್ಲ. ಒಂದು ರೀತಿಯಲ್ಲಿ ಮೂಕ ವೇದನೆ. 

Advertisement

ಮಹಿಳಾ ಕ್ಷೇಮಾಭಿವೃದ್ಧಿ ಸಂಘ ಎಂಬುದು ಇದೆಯಾದರೂ ಅದರ ಅಧ್ಯಕ್ಷೆ ಪ್ರೊಡಕ್ಷನ್‌ ಮ್ಯಾನೇಜರ್‌, ಫ್ಲೋರ್‌ ಮೇಲ್ವಿಚಾರಕ ಸೇರಿದಂತೆ ವಿವಿಧ ಮೇಲಾಧಿಕಾರಿಗಳು ನೀಡುವ ಮಾನಸಿಕ ಹಾಗೂ ದೈಹಿಕ ಕಿರುಕುಳ ಹಾಗೂ ಅದನ್ನು ಮೌನವಾಗಿ ಸಹಿಸಿಕೊಳ್ಳಿ ಎಂದು ಪುಕ್ಕಟೆ ಸಲಹೆ
ನೀಡುತ್ತಾರೆ. ಹೀಗಾಗಿ, ತಮ್ಮ ಗೋಳು ಯಾರಿಗೆ ಹೇಳಿದರೂ ನಮ್ಮ ಹಣೆಬರಹ ಇಷ್ಟೆ ಎಂದು ನೋವು ಹಾಗೂ ಯಾತನೆಯಲ್ಲೇ ಕೆಲಸ ಮಾಡುತ್ತಿದ್ದಾರೆ.

ಬೆಳಗ್ಗೆ 9ಕ್ಕೆ ಕೆಲಸ ಶುರುವಾದರೆ ಸಂಜೆ 5.30 ಅಥವಾ 7ಕ್ಕೆ ಮುಗಿಯಲಿದೆ. ಅಲ್ಲಿಯವರೆಗೂ ಫ್ಯಾಕ್ಟರಿಯಲ್ಲಿ ಆಸೆಬುರುಕ ಪುರುಷ ಮೇಲಧಿಕಾರಿಗಳೊಂದಿಗೆ ಹೆಣಗಾಡುವುದೇ ಒಂದು ದೊಡ್ಡ ಸಾಹಸ ಆಗಿರುತ್ತದೆ. ಕ್ವಾಲಿಟಿ ಇನ್‌ಚಾರ್ಜ್‌, ಮೇಲ್ವಿಚಾರಕ ಸೇರಿದಂತೆ ಇತರೆ ಅಧಿಕಾರಿಗಳ ಕೈಸನ್ನೆ ಮುಜುಗರ ಉಂಟಾಗುವ ರೀತಿಯಲ್ಲಿರುತ್ತದೆ. ಕೆಲವೊಮ್ಮೆ ಮೈ ಕೈ ತಾಗಿಸಿ ಮಾತನಾಡುತ್ತಾರೆ.

ಇವುಗಳನ್ನು ಹೇಳುವಂತಿಲ್ಲ, ಬಿಡು ವಂತಿಲ್ಲ. ಮೌನವಾಗಿ ಅನುಭವಿಸ ಬೇಕಷ್ಟೆ ಎಂದು ಮಹಿಳೆಯೊಬ್ಬರು ಕಣ್ಣೀರಿಡುತ್ತಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುವ ಮೇಲಾಧಿಕಾರಿಗಳ ವಿರುದ್ಧ ದನಿ ಎತ್ತರಿಸಿ ಮಾತನಾಡಿದರೆ ಇಡೀ ದಿನ ನೆಮ್ಮದಿಯಿಂದ ಇರುವಂತಿಲ್ಲ, ಅವರು ಬೈಗುಳಕ್ಕೆ
ಬಳಸುವ ಪದಗಳನ್ನು ಕೇಳಿ ಕಣ್ಣೀರಾಕುವುದಷ್ಟೇ ಕೆಲಸವಾಗಿಬಿಡುತ್ತದೆ. ಅನ್ಯ ರಾಜ್ಯದಿಂದ ಕೆಲಸಕ್ಕೆಂದು ಇಲ್ಲಿಗೆ ಬರುವ ಹೊಸ ಹೆಣ್ಣು ಮಕ್ಕಳಿಗೆ ಕೆಲಸ ಕಲಿಸುವ ನೆಪದಲ್ಲಿ ವಿವಿಧ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗುತ್ತಾರೆ.

ಅವರಿಗೆ ಮುಜುಗರವಾದರೂ ಸಹಿಸಿಕೊಂಡಿರುತ್ತಾರೆ. ಅದನ್ನು ನೋಡಲು ಅಸಹನೀಯವಾಗಿರುತ್ತದೆ ಎನ್ನುತ್ತಾರೆ ಒರಿಸ್ಸಾದಿಂದ ಕೆಲಸಕ್ಕೆ ಬಂದ ಸುಮನಾ (ಹೆಸರು ಬದಲಾಯಿಸಲಾಗಿದೆ). ಮೇಲಾಧಿಕಾರಿಗಳ ಲೈಂಗಿಕ ದೌರ್ಜನ್ಯ ಸಹಿಸಿಕೊಂಡು ಸಹಕರಿಸಿದರೆ ಕೆಲಸ ಕಡಿಮೆ
ನೀಡುತ್ತಾರೆ. ಅವರಿಗೆ ಯಾವುದೇ ಬೈಗುಳ ಇರುವುದಿಲ್ಲ. ಪ್ರತಿಭಟಿಸಿದರೆ ತೇಜೋವಧೆ ಮಾಡುತ್ತಾರೆ. ಹಾಗೆಂದು ನಾವು ಸುಮ್ಮನಿರುವುದಿಲ್ಲ. ನಮ್ಮದೇ ನೆಲೆಗಟ್ಟಿನಲ್ಲಿ ಪ್ರತಿಭಟಿಸುತ್ತಲೇ ಇರುತ್ತೇವೆ. ಆದರೆ, ಆ ಪ್ರತಿಭಟನೆ ಅನ್ಯರಿಗೆ ತಿಳಿಯುವುದಿಲ್ಲ ಎನ್ನುತ್ತಾರೆ ಪ್ರಮೀಳಾ (ಹೆಸರು
ಬದಲಾಯಿಸಲಾಗಿದೆ). 

Advertisement

ಮದ್ಯಪಾನ ಮಾಡಿ ಅನುಚಿತ ವರ್ತನೆ ಬೇರೆ ರಾಜ್ಯದಿಂದ ಬಂದು ಇಲ್ಲಿನ ಗಾರ್ಮೆಂಟ್ಸ್‌ಗಳಲ್ಲಿ ದುಡಿಯುವ ಮಹಿಳೆಯರು ಗಾರ್ಮೆಂಟ್ಸ್‌ಗೆ ಸಂಬಂಧಪಟ್ಟ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳಬೇಕು. ಹಾಸ್ಟೆ-ಲ್‌ ಗಾರ್ಮೆಂಟ್ಸ್‌ ಹಾಗೂ ಮೇಲಧಿಕಾರಿಗಳು ಮದ್ಯಪಾನ ಮಾಡಿ ಅನುಚಿತವಾಗಿ ವರ್ತಿಸುತ್ತಾರೆ. ಮಹಿಳಾ ಉದ್ಯೋಗಿಗಳ ಫೋನ್‌ ನಂಬರ್‌ ಸಂಗ್ರಹಿಸಿ ತೀರಾ ಅಸಭ್ಯ ರೀತಿಯಲ್ಲಿ ಮಾತನಾಡುತ್ತಾರೆ. ಈ ನರಕದಿಂದ ನಾವು ತಪ್ಪಿಸಿಕೊಂಡು ನಮ್ಮ ಊರುಗಳಿಗೆ ತೆರಳಿದರೆ ಅಲ್ಲಿನ ಏಜೆಂಟರು ನಾವು ಪರಪುರಷನೊಂದಿಗೆ ಸಂಬಂಧ ಹೊಂದಿದ್ದಕ್ಕೆ ನಮ್ಮನ್ನು ಗಾರ್ಮೆಂಟ್ಸ್‌ನಿಂದ ಹೊರಹಾಕಿದ್ದಾರೆ ಎಂಬ ಕೆಟ್ಟ ಸುದ್ದಿಯನ್ನು ಹಬ್ಬಿಸಿಬಿಡುತ್ತಾರೆ. ಹೀಗಾಗಿ ನಮ್ಮ ಗ್ರಾಮಗಳಲ್ಲೂ ನಮಗೆ ಶಿಕ್ಷೆ. ಊರಿನಿಂದ ಬಹಿಷ್ಕರಿಸಿದ ಪ್ರಕರಣಗಳೂ ಇವೆ. ಹೀಗಾಗಿ, ನಾವು ಅವರು ಹೇಳಿದನ್ನೆಲ್ಲಾ ಸಹಿಸಿಕೊಂಡು ಬದುಕು ನಡೆಸುವ ಸಾಹಸ ಮಾಡುತ್ತಿದ್ದೇವೆ ಎಂದು ವಿವರಿಸುತ್ತಾರೆ ಪಂಜಾಬ್‌ನ ಸೀತಾ (ಹೆಸರು ಬದಲಾಯಿಸಲಾಗಿದೆ).

ಕನಿಷ್ಠ ಶುದ್ಧ ನೀರು ಕೂಡ ಸಿಗೋಲ ಫ್ಯಾಕ್ಟರಿಯಲ್ಲಿ ಶುದ್ಧ ಕುಡಿಯುವ ನೀರು ದೊರೆಯದಿರುವುದರಿಂದ ಬಹುತೇಕ ಮಹಿಳೆಯರು ಮನೆಯಿಂದ ನೀರನ್ನು ತೆಗೆದುಕೊಂಡು ಹೋಗುತ್ತಾರೆ. ಅವರು ತೆಗೆದುಕೊಂಡ ಹೋದ ನೀರು ಖಾಲಿಯಾದರೆ ಮನೆಗೆ ಬರುವವರೆಗೂ ಬಾಯಾರಿ
ಇರಬೇಕು. ಪದೇ ಪದೇ ಶೌಚಾಲಯಕ್ಕೆ ಹೋಗಲು ಅವಕಾಶ ಇಲ್ಲದ ಕಾರಣ ಅಲ್ಲಿ ಕೆಲಸ ಮಾಡುವ ಮಹಿಳೆಯರು ನೀರು ಕಡಿಮೆ ಕುಡಿಯುತ್ತಾರೆ. ಶೌಚಾಲಯಕ್ಕೆಂದು ತೆರಳಿದಾಗ ಅಲ್ಲಿರುವ ಪುರುಷ ಭದ್ರತಾ ಸಿಬ್ಬಂದಿ ಸಮಯ ನೋಡಿಕೊಳ್ಳುತ್ತಾರೆ. ಎರಡೇ ನಿಮಿಷಕ್ಕೆ ಬಂದು ಬಾಗಿಲು ತಟ್ಟುತ್ತಾರೆ. ಋತುಸ್ರಾವದ ದಿನಗಳಲ್ಲಿ ನಮ್ಮ ಕಷ್ಟ ಹೇಳತೀರದು. ಆ ಸಮಯದಲ್ಲಿ ನ್ಯಾಪ್‌ಕಿನ್‌ ಬದಲಾವಣೆಗೆ ಸಮಯ ಹಿಡಿಯುತ್ತದೆ ಆದರೆ, ಪುರುಷ ಭದ್ರತಾ ಸಿಬ್ಬಂದಿ ಬಳಿ ಈ ವಿಚಾರ ಹೇಳಿಕೊಳ್ಳಬೇಕಾಗುತ್ತದೆ ಎಂದು ಮಹಿಳೆಯರು ತಮ್ಮ ನೋವು ತೋಡಿಕೊಳ್ಳುತ್ತಾರೆ. 

 ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next