Advertisement

ತೀವ್ರ ಮಳೆ ಕೊರತೆ: ಕಂಗಾಲಾದ ಅನ್ನದಾತರು

07:22 AM Jul 11, 2019 | Lakshmi GovindaRaj |

ಹೊಸಕೋಟೆ: ತಾಲೂಕಿನಲ್ಲಿ ತೀವ್ರ ಮಳೆಯ ಕೊರತೆಯಿಂದಾಗಿ ಬಿತ್ತನೆ ಕಾರ್ಯ ಕೈಗೊಳ್ಳಲು ಸಾಧ್ಯವಾಗದೆ ರೈತರು ಕಂಗಾಲಾಗಿದ್ದಾರೆ. ಜೂನ್‌ ಅಂತ್ಯಕ್ಕೆ ವಾಡಿಕೆಯಾಗಿ 804 ಮಿ.ಮೀ. ನಷ್ಟು ಮಳೆ ನಿರೀಕ್ಷಿಸಿದ್ದು 824 ಮಿ.ಮೀ. ನಷ್ಟಾಗಿದ್ದಾಗ್ಯೂ ಸಹ ಜೂನ್‌ನಲ್ಲಿ 276 ಮಿ.ಮೀ.ಗೆ ಕೇವಲ 200 ಮಿ.ಮೀ. ನಷ್ಟು ಕಡಿಮೆ ಮಳೆಯಾಗಿರುವ ಕಾರಣದಿಂದಾಗಿ ಬಿತ್ತನೆಗೆ ಅಗತ್ಯವಾದ ಮಳೆಯಾಗದೆ ಕೃಷಿ ಚಟುವಟಿಕೆ ಕುಂಠಿತಗೊಂಡಿದ್ದು ರೈತರಲ್ಲಿ ಆತಂಕ ಮೂಡಿಸಿದೆ.

Advertisement

ಕೊಳವೆ ಬಾವಿ ಸೌಲಭ್ಯ: ಹೊಸಕೋಟೆ ಕಸಬಾ ಮತ್ತು ಜಡಿಗೇನಹಳ್ಳಿಯಲ್ಲಿ ವಾಡಿಕೆಗಿಂತಲೂ ಗಣನೀಯ ಪ್ರಮಾಣದ ಮಳೆ ಕೊರತೆಯಾಗಿದೆ. ತಾಲೂಕಿನಲ್ಲಿರುವ ಒಟ್ಟು 8560ರಲ್ಲಿ 6419 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಭತ್ತ, ರಾಗಿ, ಮುಸುಕಿನ ಜೋಳ, ತೊಗರಿ, ಅಲಸಂದಿ, ನೆಲಗಡಲೆಯನ್ನು ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ತಾಲೂಕಿನಲ್ಲಿ 6594 ಹೆಕ್ಟೇರ್‌ ಪ್ರದೇಶವು ಮಳೆಯನ್ನೇ ಅವಲಂಬಿಸಿದ್ದು 4002 ಹೆಕ್ಟೇರ್‌ಗಳಿಗೆ ಕೊಳವೆ ಬಾವಿ ಸೌಲಭ್ಯ ಕಲ್ಪಿಸಿಕೊಳ್ಳಲಾಗಿದೆ.

10942 ಹೆಕ್ಟೇರ್‌ಗಳಿಗೆ ಸೀಮಿತ: ಮಳೆಯ ಅಭಾವದಿಂದಾಗಿ ಅಂತರ್ಜಲ ಮಟ್ಟ ಸಹ ಕುಸಿದಿದ್ದು 1600 ರಿಂದ 1800 ಅಡಿಗಳಷ್ಟು ಆಳದಲ್ಲಿ ಮಾತ್ರ ನೀರು ದೊರಕುತ್ತಿದೆ. ಈ ಎಲ್ಲಾ ಸಮಸ್ಯೆಗಳ ನಡುವೆ ದಿನೇ ದಿನೆ ವ್ಯವಸಾಯೇತರ ಪ್ರದೇಶದ ವಿಸ್ತೀರ್ಣ ಸಹ ಏರಿಕೆಯಾಗುತ್ತಿದ್ದು ಪ್ರಸ್ತುತ 10942 ಹೆಕ್ಟೇರ್‌ಗಳಿಗೆ ಸೀಮಿತಗೊಂಡಿದ್ದು ಬಹಳಷ್ಟು ಜಮೀನುಗಳು ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆಗೊಂಡಿದೆ.

396 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ: ತಾಲೂಕಿನಲ್ಲಿ ಪ್ರಮುಖವಾದ ರಾಗಿಗೆ 8228 ಹೆಕ್ಟೇರ್‌ ಪ್ರದೇಶ ಒಳಗೊಂಡಿದ್ದು ಇದುವರೆವಿಗೂ 6178 ಹೆಕ್ಟೇರ್‌ ಪ್ರದೇ ಶವನ್ನು ಬಿತ್ತನೆಗೆ ಸಜ್ಜುಗೊಳಿಸಿದ್ದು ಕೇವಲ 71 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಇದರಲ್ಲಿ ಬಹಳಷ್ಟು ಪ್ರದೇಶವು ರೈತರು ಕೃಷಿ ಹೊಂಡಗಳನ್ನು ಹೊಂದಿರುವ ಪ್ರದೇಶವಾಗಿದೆ. ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯಲ್ಲಿ ವರ್ತೂರು ಕೆರೆಯ ವ್ಯರ್ಥ ನೀರು ಹರಿದುಬರುತ್ತಿರುವ ಕಾರಣ 396 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಮುಂಗಾರು ಕೃಷಿಯನ್ನು 9800 ಹೆಕ್ಟೇರ್‌, ಹಿಂಗಾರು 580 ಹೆಕ್ಟೇರ್‌, ಬೇಸಿಗೆ ಕೃಷಿಯನ್ನು 200 ಹೆಕ್ಟೇರ್‌ ಪ್ರದೇಶದಲ್ಲಿ ಕೈಗೊಳ್ಳಲಾಗುತ್ತಿದೆ.

ಬಿತ್ತನೆ ಬೀಜ ಪಡೆಯಲು ನಿರಾಸಕ್ತಿ: ಮಳೆಯ ಅಭಾವದಿಂದಾಗಿ ರೈತರು ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ನೀಡುವ ಬಿತ್ತನೆ ಬೀಜ ಪಡೆಯಲು ಸಹ ರೈತರು ನಿರಾಸಕ್ತಿ ತೋರುತ್ತಿದ್ದಾರೆ. ಇಲಾಖೆಯು ವಿತರಣೆಗಾಗಿ ಸ್ವೀಕರಿಸಿರುವ 147 ಕ್ವಿಂಟಲ್‌ಗ‌ಳಲ್ಲಿ ಇದುವರೆಗೂ 6 ಕ್ವಿಂಟಲ್‌ಗ‌ಳಷ್ಟು ಮಾತ್ರ ಪಡೆದಿರುವುದೇ ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

Advertisement

42455 ಹೆಕ್ಟೇರ್‌ನಷ್ಟು ಹಿಡುವಳಿ: ರೈತರು ತಾಲೂಕಿನಲ್ಲಿ 26199 ಅತಿ ಸಣ್ಣ ರೈತರಿದ್ದು 11057 ಹೆಕ್ಟೇರ್‌, 7053 ಸಣ್ಣ ರೈತರು 9621 ಹೆಕ್ಟೇರ್‌, 2473 ಅರೆ ಮದ್ಯಮ ರೈತರು 9102 ಹೆಕ್ಟೇರ್‌, 1632 ಮದ್ಯಮ ವರ್ಗದ ರೈತರು 9073, 271 ದೊಡ್ಡ ಪ್ರಮಾಣದ ರೈತರು 3602 ಹೆಕ್ಟೇರ್‌ ಜಮೀನು ಒಳಗೊಂಡಂತೆ ಒಟ್ಟು 42455 ಹೆಕ್ಟೇರ್‌ನಷ್ಟು ಹಿಡುವಳಿ ಹೊಂದಿದ್ದಾರೆ.

ಇಲಾಖೆಯಿಂದ ದೊರಕುವ ಸೌಲಭ್ಯಗಳು: ರೈತರಿಗೆ ಸಹಾಯಧನದಡಿ ಸಣ್ಣ ಟ್ರಾಕ್ಟರ್‌, ಪವರ್‌ ಟಿಲ್ಲರ್‌ ಮತ್ತು ಭೂಮಿ ಸಿದ್ಧತೆ ಉಪಕರಣಗಳನ್ನು ಪಡೆಯಬಹುದಾಗಿದೆ. ಮಣ್ಣು ಪರೀಕ್ಷೆಯ ಫಲಿತಾಂಶ ಆಧರಿಸಿ ರೈತರಿಗೆ ಅನುಸರಿಸಬೇಕಾದ ಬೆಳೆ ಪದ್ಧತಿ, ಒದಗಿಸಬೇಕಾದ ಪೋಷಕಾಂಶಗಳ ಬಗ್ಗೆ ಸೂಕ್ತ ಮಾಹಿತಿ, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಸಹಾಯಧನದಡಿ ಹಸಿರೆಲೆ ಗೊಬ್ಬರದ ಬೀಜ, ಸಾವಯವ, ಜೈವಿಕ ಗೊಬ್ಬರ, ಸಿಟಿ ಕಾಂಪೋಸ್ಟ್‌, ಲಘು ಪೋಷಕಾಂಶಗಳಾದ ಜಿಂಕ್‌, ಬೋರಾನ್‌ನಂತಹ ಕೃಷಿಗೆ ಉಪಯುಕ್ತವಾದ ಪದಾರ್ಥಗಳನ್ನು ಪಡೆಯಬಹುದಾಗಿದೆ. ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ, ನೀರೆತ್ತುವ ಡೀಸಲ್‌ ಪಂಪ್‌ಸೆಟ್‌ ಮತ್ತು ಲಘು ನೀರಾವರಿ ಘಟಕಗಳ ಸ್ಥಾಪನೆಗೆ ಆರ್ಥಿಕ ನೆರವು ನೀಡಲಾಗುವುದು.

ಹೆಸರು ನೋಂದಾಯಿಸಿಕೊಳ್ಳಲು ಅವಕಾಶ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ರೈತರು ಕೃಷಿ ಹೊಂಡ, ಬದು ನಿರ್ಮಿಸಿಕೊಳ್ಳಬಹುದಾಗಿದ್ದು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ರೈತರು ಆಯಾ ಪ್ರದೇಶದ ಗ್ರಾಮ ಪಂಚಾಯಿತಿ, ನಾಡಕಚೇರಿ, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆಗಳಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.  ಬೆಳೆ ವಿಮೆಗೆ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ರೈತರು ಆಧಾರ್‌ ಕಾರ್ಡ್‌ / ಪಹಣಿಯ ಪ್ರತಿ, ಬ್ಯಾಂಕ್‌ ಪಾಸ್‌ಪುಸ್ತಕದೊಂದಿಗೆ ನಾಗರೀಕ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

ಕಳೆದ ಮೂರು ವರ್ಷಗಳಿಂದಲೂ ಪ್ರತಿ ವರ್ಷ ಮಳೆಯ ಅಭಾವ ಉಂಟಾಗುತ್ತಿರುವ ಕಾರಣ ಗ್ರಾಮಗಳಲ್ಲಿ ಹೆಚ್ಚಿನ ಜನರು ಪರ್ಯಾಯ ಹುದ್ದೆಗಳಲ್ಲಿ ತೊಡಗಿದ್ದು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಸರಕಾರ ಸಹ ರೈತರಿಗೆ ಉಪಯುಕ್ತವಾದ ಉದ್ಯೋಗ ಸƒಷ್ಟಿಯಂತಹ ಯೋಜನೆಗಳನ್ನು ಜಾರಿಗೊಳಿಸಿದಲ್ಲಿ ಮಾತ್ರ ಕುಟುಂಬ ಪೋಷಣೆಗೆ ಸಹಕಾರಿಯಾಗಲಿದೆ.
-ನಂಜುಂಡಪ್ಪ, ರೈತ, ಉಪ್ಪಾರಹಳ್ಳಿ

ತಾಲೂಕಿನಲ್ಲಿ ರಾಗಿಯೊಂದಿಗೆ ಅವರೆ ಬಿತ್ತನೆಗೆ ಸೆ.10ರವರೆಗೂ ನಿರೀಕ್ಷಿಸಿರುವ ಮಳೆಗಾಗಿ ರೈತರು ಕಾಯುತ್ತಿದ್ದಾರೆ. ಮಳೆ ಕೊರತೆ, ವಿಫಲವಾದ ಪರಿಸ್ಥಿತಿಯಲ್ಲಿ ಹುರುಳಿಯಂತಹ ಪರ್ಯಾಯ ಬೆಳೆಗೆ ಗಮನಹರಿಸಬೇಕಾಗುತ್ತದೆ. ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಬಗ್ಗೆ ರೈತರಿಗೆ ತಾಲೂಕಿನ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ.
-ಎಚ್‌.ವಿ.ನಾಗರಾಜ್‌, ತಾಲೂಕು ಕೃಷಿ ಸಹಾಯಕ ನಿರ್ದೇಶಕ, ಹೊಸಕೋಟೆ

Advertisement

Udayavani is now on Telegram. Click here to join our channel and stay updated with the latest news.

Next