Advertisement

ಆಪರೇಷನ್‌ ಆಡಿಯೋ: ಸ್ಪೀಕರ್‌ ಬಳಿಗೆ ಚೆಂಡು

12:30 AM Feb 13, 2019 | |

ಬೆಂಗಳೂರು: ಆಪರೇಷನ್‌ ಆಡಿಯೋ ಪ್ರಕರಣದ ತನಿಖೆ ವಿಷಯ ಮತ್ತೆ ಸ್ಪೀಕರ್‌ ಅಂಗಳಕ್ಕೆ ಹೋಗಿದೆ. ಯಾವ ತನಿಖೆಗೆ ವಹಿಸಬೇಕು ಎನ್ನುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಬುಧವಾರ ಬೆಳಗ್ಗೆ ಸ್ಪೀಕರ್‌ ರಮೇಶ್‌ಕುಮಾರ್‌ ತಮ್ಮ ಕಚೇರಿಯಲ್ಲಿ ಆಡಳಿತ-ಪ್ರತಿಪಕ್ಷ ನಾಯಕರ ಸಭೆ ಕರೆದಿದ್ದಾರೆ.

Advertisement

ಎರಡು ದಿನಗಳೂ ಇದೇ ವಿಚಾರದಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಹಗ್ಗ ಜಗ್ಗಾಟ ಮುಂದುವರಿದು ಎಸ್‌ಐಟಿ ತನಿಖೆಗೆ ಬಿಜೆಪಿ ಪ್ರತಿರೋಧ ವ್ಯಕ್ತಪಡಿಸಿದರೆ, ಆಡಳಿತ ಪಕ್ಷದವರು ಎಸ್‌ಐಟಿ ತನಿಖೆಯೇ ಇರಲಿ ಎಂದು ಪಟ್ಟು ಹಿಡಿದಿದ್ದರಿಂದ ಅಂತಿಮವಾಗಿ ಸ್ಪೀಕರ್‌ ರಮೇಶ್‌ ಕುಮಾರ್‌ ಸಂಧಾನ ಸಭೆ ನಿಗದಿಪಡಿಸಿದ್ದಾರೆ. ಆದರೆ, ಸ್ಪೀಕರ್‌ ನೀಡಿದ್ದ ಸಲಹೆ ಮೇರೆಗೆ ಎಸ್‌ಐಟಿ ಮೂಲಕವೇ ತನಿಖೆ ನಡೆಸಿ ಪ್ರಕರಣಕ್ಕೆ ಇತಿಶ್ರೀ ಹಾಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪುನರುಚ್ಚರಿಸಿದರು. ಕೊನೆಗೆ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರು, ಪ್ರತಿಪಕ್ಷ‌ ನಾಯಕ ಯಡಿಯೂರಪ್ಪ ಅವರ ಮನವಿ ಮೇರೆಗೆ ಬುಧವಾರ ಬೆಳಿಗ್ಗೆ 10.30ಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ಸಭೆ ನಿಗದಿ ಮಾಡಿದರು. ಈ ಸಭೆಯಲ್ಲಿ ನಾಯಕರ ನಡುವೆ ಸಂಧಾನವಾದರೆ ಸದನ ಸಮಿತಿ ರಚನೆಗೆ ಸಲಹೆ ನೀಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

ಭೋಜನ ವಿರಾಮದ ನಂತರ ಕಲಾಪ ಆರಂಭವಾದ ಕೂಡಲೇ ಮಾಜಿ ಮುಖ್ಯಮಂತ್ರಿ, ಬಿಜೆಪಿ ಸದಸ್ಯ ಜಗದೀಶ್‌ ಶೆಟ್ಟರ್‌, ಸಭಾಧ್ಯಕ್ಷರನ್ನು ಮೊದಲು ಬೀದಿಗೆ ತಂದವರು ಮುಖ್ಯಮಂತ್ರಿ ಕುಮಾರಸ್ವಾಮಿ, ಸಭಾಧ್ಯಕ್ಷರ ಹೆಸರು ಬಂದಿರುವಾಗ ಅದನ್ನು ನಿಮ್ಮ ಗಮನಕ್ಕೆ ತಾರದೇ ಪತ್ರಿಕಾಗೋಷ್ಠಿ ಮಾಡಿ ಬಹಿರಂಗ ಪಡೆಸಿರುವುದು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಎಂದು ಆರೋಪಿಸಿದರು. ರೇವಣ್ಣರ ಒಳ್ಳೆಯ ಟೈಂ: ಬಿಜೆಪಿಯ ಸಿ.ಟಿ.ರವಿ ಮಾತ ನಾಡುವಾಗ ಮಧ್ಯಪ್ರವೇಶ ಮಾಡಿದ ಜೆಡಿಎಸ್‌ನ ಎಚ್‌.ಡಿ.ರೇವಣ್ಣ, ನಾನು ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂದು ಮೊದಲೇ ಹೇಳಿದ್ದೆ. ಅದಕ್ಕೆ ಒಳ್ಳೆಯ ಸಮಯ ನಿಗದಿ ಮಾಡಿದ್ದೆ. ಬಿಜೆಪಿಯ ಆರ್‌. ಅಶೋಕ್‌ ಅವರು ಕುಮಾರಸ್ವಾಮಿ ಬಜೆಟ್‌ ಮಂಡಿಸುವುದಿಲ್ಲ ಎಂದು ಹೇಳಿದ್ದರು. ಈಗ ಬಜೆಟ್‌ ಮಂಡಿ‌ಸಲಿಲ್ಲವೇ ಎಂದು ಪ್ರಶ್ನಿಸಿದರು.

ಸ್ಪೀಕರ್‌ ಅವರನ್ನು ಕುರಿತು, ನೀವು ಹದಿನೈದು ದಿನಗಳಲ್ಲಿ ಆಡಿಯೋ ಪ್ರಕರಣ ತನಿಖೆಗೆ ಹೇಳಿದ್ದೀರಿ, ಕುಮಾರಸ್ವಾಮಿ ಅದಕ್ಕೆ ಕ್ರಮ ಕೈಗೊಳ್ಳುತ್ತಾರೆ, ಇಲ್ಲದಿದ್ದರೆ ನಿಮ್ಮ ಮೇಲೆಯೇ ಅನುಮಾನ ಬರುತ್ತದೆ ಎಂದು ಹೇಳಿದರು. ರೇವಣ್ಣವರ ಮಾತಿಗೆ ಬಿಜೆಪಿ ಸದಸ್ಯರು ಅಡ್ಡಿಪಡಿಸಲು ಯತ್ನಿಸಿ  ದಾಗ ಸ್ಪೀಕರ್‌ ಅವರು, ಅಯ್ಯೋ ಬಿಡ್ರಪ್ಪಾ, ರೇವಣ್ಣ ಇಂತದ್ದೇ ಸಮಯಕ್ಕೆ ಮಾತನಾಡಬೇಕು ಎಂದು ನಿಂತಿದಾರೆ, ನೀವು ಅಡ್ಡಿ ಪಡಿಸಿದರೆ ಅವರ ಒಳ್ಳೆಯ ಟೈಂ ಕಳೆದುಹೋಗುತ್ತದೆ ಎಂದು ಚಟಾಕಿ ಹಾರಿಸಿದರು.

ಸಿದ್ದರಾಮಯ್ಯ ನಮ್ಮ ನಾಯಕ: ಈ ಮಧ್ಯೆ ಸಿದ್ದರಾಮಯ್ಯ ನಮ್ಮ ನಾಯಕ ಎಂದು ಒಪ್ಪಿಕೊಂಡಿದ್ದೇವೆ.ಅವರ ಆಶೀರ್ವಾದದಿಂದಲೇ ನಮ್ಮ ಸರ್ಕಾರ ನಡೆಯುತ್ತಿದೆ. ಸಿದ್ದರಾಮಯ್ಯ ಅವರ ಶ್ರಮದಿಂದ ಹಲವು ಶಾಸಕರು ಗೆದ್ದು ಬಂದಿದ್ದಾರೆ. ಹೀಗಾಗಿ, ಕಾಂಗ್ರೆಸ್‌ನ ಕೆಲವು ಶಾಸಕರು ಸಿದ್ದರಾಮಯ್ಯ ಅವರೊಂದಿಗೆ ಭಾವನಾತ್ಮಕ ವಾಗಿ ಒಳ್ಳೆಯ ಸಂಬಂಧ ಹೊಂದಿದ್ದು ಅವರೇ ನಮ್ಮ ಮುಖ್ಯಮಂತ್ರಿ ಎಂದು ಪ್ರೀತಿಯಿಂದ ಹೇಳುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು. ಸಮ್ಮಿಶ್ರ ಸರ್ಕಾರ ರಚನೆ ಮಾಡಿರುವ ಉದ್ದೇಶ, ಇಡೀ ರಾಷ್ಟ್ರಕ್ಕೆ ಒಂದು ಸಂದೇಶ ರವಾನೆ ಮಾಡಲು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಮೂಲಕವೇ ಒಂದು ಸಂದೇಶ ರವಾನೆ ಮಾಡುತ್ತೇವೆ. ಈ ಸರ್ಕಾರ ಕಲ್ಲು ಬಂಡೆಯಂತೆ ಇದೆ. ಸರ್ಕಾರಕ್ಕೆ ಏನೂ ಆಗುವುದಿಲ್ಲ. ಏನೇ ಸಮಸ್ಯೆಯಾದರೂ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದೂ ಹೇಳಿದರು.

Advertisement

ಎಸ್‌ಐಟಿ ರಚನೆಗೆ ಒಪ್ಪಲ್ಲ:ಯಡಿಯೂರಪ್ಪ ಪಟ್ಟು
ಎರಡು ದಿನದಿಂದ ಚರ್ಚೆಯನ್ನು ಮೌನವಾಗಿಯೇ ಆಲಿಸುತ್ತಿದ್ದ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಆಪರೇಷನ್‌ ಆಡಿಯೋ ಪ್ರಕರಣದ ಕುರಿತು ಸದನದಲ್ಲಿ ಮೊದಲ ಬಾರಿಗೆ ಮಾತನಾಡಿ, ಸರ್ಕಾರ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದಟಛಿ ಹತ್ತು ಆರೋಪಗಳನ್ನು ಮಾಡಿದರು. ಎಸ್‌ಐಟಿ ಮುಖ್ಯಮಂತ್ರಿ ಅಧೀನದಲ್ಲಿಯೇ ಇರುವುದರಿಂದ ಎಸ್‌ಐಟಿಗೆ ವಿರೋಧವಿದೆ ಎಂದು ಸ್ಪಷ್ಟವಾಗಿ ಹೇಳಿದರು.

ಅಲ್ಲದೇ ಸ್ಪೀಕರ್‌ ಅವರಿಗೆ 50 ಕೋಟಿ ರೂ. ಕೊಟ್ಟಿದ್ದೇವೆ ಎನ್ನುವ ಸಂಭಾಷಣೆ ನಡೆಯುವ ಸಂದರ್ಭದಲ್ಲಿ ನಾನು ಇದ್ದೆ ಎನ್ನುವುದನ್ನು ಸಾಬೀತು ಪಡಿಸಿದರೆ, ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ ಎಂದು ಪುನರುಚ್ಚರಿಸಿದರು. ಈ ಪ್ರಕರಣದಲ್ಲಿ ಮುಖ್ಯಮಂತ್ರಿಯೇ ಮೊದಲ ಆರೋಪಿಯಾಗಿದ್ದಾರೆ ಎಂದು ದೂರಿದ ಅವರು, ಶರಣುಗೌಡನಿಗೆ ಇಂತ ಕೆಲಸಕ್ಕೆ ಕೈ ಹಾಕಬೇಡ ಎಂದು ಹೇಳಬಹುದಿತ್ತು. ಶರಣುಗೌಡನಿಂದ ರೆಕಾರ್ಡ್‌ ಮಾಡಿರುವ ಆಡಿಯೋ ಎಡಿಟ್‌ ಮಾಡಿರುವ ಆರೋಪ, ನಕಲಿ ದಾಖಲೆ ಸೃಷ್ಟಿ, ಸುಳ್ಳು ದಾಖಲೆ, ಮೋಸ ಮಾಡುವ ಉದ್ದೇಶ ಹೊಂದಿರುವುದು, ನಕಲಿ ಎಂದು ಗೊತ್ತಿದ್ದರೂ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದು ಐಪಿಸಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ದಂಡನಾರ್ಹ ಅಪರಾಧ ಎಂದು ಆರೋಪಿಸಿದರು. 35 ನಿಮಿಷದ ಆಡಿಯೋವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಎಡಿಟ್‌ ಮಾಡಿ ರಾಜಕೀಯ ಷಡ್ಯಂತ್ರ ಮಾಡಿದ್ದಾರೆ ಎಂದರು.

ಸಭಾಧ್ಯಕ್ಷರನ್ನು ರಕ್ಷಣೆ ಮಾಡುವ ಪ್ರಾಮಾಣಿಕ ಪ್ರಯತ್ನ ಮುಖ್ಯಮಂತ್ರಿ ಮಾಡಿದ್ದರೆ, ಈ ಪ್ರಕರಣ ಇಷ್ಟು ದೊಡ್ಡ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಮುಖ್ಯಮಂತ್ರಿಯಾಗಿ ರಾಜಕೀಯ ಕುತಂತ್ರ ಮಾಡಿದ್ದೀರಿ, ನಾನು ಹೋರಾಟದ ಮೂಲಕ ರಾಜಕೀಯದಲ್ಲಿ ಮೇಲೆ ಬಂದಿದ್ದೇನೆ. ನಮ್ಮ ಕುಟುಂಬದ ಹಿರಿಯರು ಯಾರೂ ಅಧಿಕಾರದಲ್ಲಿ ಇರಲಿಲ್ಲ. ನನಗೂ ಜವಾಬ್ದಾರಿ ಇದೆ. ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಈ ಕುತಂತ್ರ ಮಾಡಿದ್ದಾರೆ ಎಂದು ದೂರಿದರು. ಅಲ್ಲದೇ ಆಳಂದ ಶಾಸಕ ಸುಭಾಷ್‌ ಗುತ್ತೇದಾರ್‌ಗೆ ಆಮಿಷ ಒಡ್ಡಿರುವುದು, ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಲು 25 ಕೋಟಿ, ರಾಜ್ಯಸಭಾ ಸದಸ್ಯರನ್ನಾಗಿ ಮಾಡಲು 50 ಕೋಟಿ ವ್ಯವಹಾರ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಈ ರೀತಿ ನಡೆದುಕೊಂಡರೆ ಪ್ರಜಾಪ್ರಭುತ್ವದ ಕತೆ ಏನಾಗಬೇಕು ಎಂದು ಪ್ರಶ್ನಿಸಿದರು.

ನನ್ನ ವಿರುದ್ಧವೂ ತನಿಖೆ ಆಗಲಿ: ಕುಮಾರಸ್ವಾಮಿ
ಬಿಎಸ್‌ವೈ ಆರೋಪಗಳಿಗೆ ಉತ್ತರಿಸಿದ ಸಿಎಂ ಕುಮಾರಸ್ವಾಮಿ, ಈ ಪ್ರಕರಣದಲ್ಲಿ ನನ್ನನ್ನೇ ಮೊದಲ ಆರೋಪಿ ಎನ್ನುತ್ತಿದ್ದಾರೆ. ನನ್ನ ವಿರುದ್ಧವೂ ತನಿಖೆಯಾಗಲಿ, ನಾನು ಎಲ್ಲದಕ್ಕೂ ಸಿದಟಛಿನಿದ್ದೇನೆ. ನಾನು ಈ ಕುರ್ಚಿಗೆ ಅಂಟಿಕೊಂಡು ಕುಳಿತಿಲ್ಲ. ನಾವೇ ನೇಮಿಸಿಕೊಂಡಿರುವ ಅಧಿಕಾರಿಗಳ ಮೇಲೆ ಸಂಶಯ ಪಡುವುದು ಬೇಡ. ನಾಗನಗೌಡರ ಕುಟುಂಬಕ್ಕೂ ನಮ್ಮ ಕುಟುಂಬಕ್ಕೂ ಐವತ್ತು ವರ್ಷದ ಸಂಬಂಧ ಇದೆ. ಶರಣುಗೌಡ , ಬಿಜೆಪಿಯವರು ಫೋನ್‌ ಮಾಡಿ ಕರೆಯುತ್ತಿದ್ದಾರೆ ಎಂದು ಹೇಳಿದಾಗ ಹೋಗಿ ಕೇಳಿಕೊಂಡು ಬಾ ಎಂದು ನಾನೇ ಹೇಳಿದ್ದೆ. ಕಳೆದ 15 ವರ್ಷಗಳಿಂದ ಶಾಸಕರನ್ನು ಮಾರಾಟದ ಸರಕುಗಳನ್ನಾಗಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಬಿಜೆಪಿಯವರು ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನಿಸಿ ದರೆ, ನಾವೂ ಬಿಜೆಪಿಯ ಕೆಲವು ಶಾಸಕರನ್ನು ಸಂಪರ್ಕಿಸುತ್ತೇವೆ ಎಂದು ನಮ್ಮ ಸಚಿವರು ಹೇಳಿದ್ದಾರೆ. ಈ ರೀತಿಯ ಬೆಳವಣಿಗೆಗೆ ತಾರ್ಕಿಕ ಅಂತ್ಯ ಕಾಣಿಸಬೇಕು. ನಾನು ತನಿಖೆಯಲ್ಲಿ ಯಾವುದೇ ರೀತಿಯ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವುದಿಲ್ಲ. ಎಸ್‌ಐಟಿ ಮೂಲಕ ತನಿಖೆ ನಡೆಸುತ್ತೇನೆ ಎಂದು ಪುನರುಚ್ಚರಿಸಿದರು. ಎರಡೂ ಕಡೆಯವರ ಅಭಿಪ್ರಾಯ ಆಲಿಸಿದ ಸ್ಪೀಕರ್‌ ರಮೇಶ್‌ ಕುಮಾರ್‌ ಈ ಬಗ್ಗೆ ಚರ್ಚಿಸಲು ಬುಧವಾರ ಬೆಳಿಗ್ಗೆ 10.30ಕ್ಕೆ ತಮ್ಮ ಕಚೇರಿಯಲ್ಲಿ ಸಭೆ ಕರೆದು, ಉಭಯ ಪಕ್ಷಗಳ ನಾಯಕರಿಗೂ ಸಭೆಗೆ ಹಾಜರಾಗುವಂತೆ ಸೂಚಿಸಿ, ಸದನವನ್ನು ಬುಧವಾರ 11.30ಕ್ಕೆ ಮುಂದೂಡಿದರು.

ಬಿಜೆಪಿಯಿಂದ 7 ಮಂದಿ ಭಾಗಿ
 ಆಡಿಯೋ ಪ್ರಕರಣ ತನಿಖೆ ಕುರಿತಂತೆ ಸಭಾಧ್ಯಕ್ಷರ ಕಚೇರಿಯಲ್ಲಿ ಬುಧವಾರ ಬೆಳಗ್ಗೆ ನಡೆಯಲಿರುವ ಸಭೆಯಲ್ಲಿ ಬಿಜೆಪಿಯಿಂದ ಏಳು ಮಂದಿ ಪಾಲ್ಗೊಳ್ಳಲಿದ್ದಾರೆ. ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ, ಹಿರಿಯ ಶಾಸಕರಾದ ಜಗದೀಶ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಜೆ.ಸಿ.ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಕೆ.ಜಿ.ಬೋಪಯ್ಯ ಹಾಗೂ ಆರ್‌.ಅಶೋಕ್‌ ಅವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಎಸ್‌ಐಟಿ ತನಿಖೆ ನಿರ್ಧಾರ ಕೈ ಬಿಡಬೇಕು ಎಂಬುದು ನಮ್ಮ ಆಗ್ರಹ. ಅದಕ್ಕೆ ಸ್ಪಂದನೆ ಸಿಗುವ ನಿರೀಕ್ಷೆ ಇದೆ. ಒಂದೊಮ್ಮೆ ನಿರ್ಧಾರ ಬದಲಾಯಿಸದಿದ್ದರೆ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿ ಮುಂದುವರಿಯಲಾಗುವುದು ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

ಸದನ ಸಮಿತಿ - ನ್ಯಾಯಾಂಗ ತನಿಖೆಯಿಂದ ಅಪರಾಧಿಗಳಿಗೆ ಶಿಕ್ಷೆ ಸಾಧ್ಯವಿಲ್ಲ. ಅವರು ಕೇವಲ ವರದಿ ಮಾತ್ರ ನೀಡುತ್ತಾರೆ. ಎಸ್‌ಐಟಿ ತನಿಖೆಯಿಂದ ಚಾರ್ಜ್‌ಶೀಟ್‌ ಸಲ್ಲಿಸಲು ಅವಕಾಶವಿದೆ.
ಸಿದ್ದರಾಮಯ್ಯ, ಮಾಜಿ ಸಿಎಂ

ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಯಂತಾಗಿದೆ ನನ್ನ ಸ್ಥಿತಿ. ಪೊಲೀಸ್‌ ಠಾಣೆಯಲ್ಲಿ ಆಕೆಗೆ ಯಾವ ರೀತಿ ಅತ್ಯಾ ಚಾರ ಆಯಿತು, ಹೇಗೆ ಆಯಿತು ಎಂದು ಪ್ರಶ್ನಿಸಿ ಮಾನಸಿಕ ಹಿಂಸೆ ನೀಡಿದಂತಾಗಿದೆ.
● ರಮೇಶ್‌ ಕುಮಾರ್‌, ಸ್ಪೀಕರ್‌

ಸಿಎಂ ಎ1 ಆರೋಪಿ. ಸಭಾಧ್ಯಕ್ಷರ ವಿರುದ್ಧ  ಆರೋಪ ಕೇಳಿ ಬಂದರೂ, ಅವರ ಗಮನಕ್ಕೆ ತಾರದೇ ನೇರವಾಗಿ ಮಾಧ್ಯಮಗಳಿಗೆ ಬಹಿರಂಗಗೊಳಿಸಿ, ಸಭಾಧ್ಯಕ್ಷರನ್ನು ಬೀದಿಗೆ ತಂದಿದ್ದಾರೆ.
 ಜಗದೀಶ್‌ ಶೆಟ್ಟರ್‌, ಮಾಜಿ ಸಿಎಂ

ಶಾಸಕರನ್ನು ಪೊಲೀಸರ ತನಿಖೆಗೆ ಒಳಪಡಿಸುವುದು ಬೇಡ. ಅವರು ಶಾಸಕರಿಗೆ ನೋಟಿಸ್‌ ನೀಡಬಹುದು. ಅದನ್ನು ಪ್ರಶ್ನಿಸಿ ನಾಯಾಲಯದಿಂದ ಜಾಮೀನು ಪಡೆಯಬಹುದಾಗಿದೆ.
 ಮಾಧುಸ್ವಾಮಿ, ಬಿಜೆಪಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next