Advertisement

Session: ಹತ್ತು ದಿನದಲ್ಲಿ 66 ತಾಸು ಕಲಾಪ: ಸ್ಪೀಕರ್‌ ಯು.ಟಿ. ಖಾದರ್‌ ಮಾಹಿತಿ

10:53 PM Dec 15, 2023 | Team Udayavani |

ಬೆಳಗಾವಿ: ಬೆಳಗಾವಿಯಲ್ಲಿ ನಡೆದ 16ನೇ ವಿಧಾನಸಭೆಯ ಎರಡನೇ ಅಧಿವೇಶನವು ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಿದ್ದು, ಹತ್ತು ದಿನಗಳಲ್ಲಿ 66 ತಾಸು ಕಾಲ ಕಲಾಪ ನಡೆದಿದೆ ಎಂದು ಸ್ಪೀಕರ್‌ ಯು.ಟಿ.ಖಾದರ್‌ ಸಂತಸ ವ್ಯಕ್ತಪಡಿಸಿದರು.

Advertisement

ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಶಾಸಕರು ಸರಿ ಯಾದ ಸಮಯಕ್ಕೆ ಬರುವುದಿಲ್ಲ, ಹಾಜರಾತಿ ಇರುವುದಿಲ್ಲ ಎಂಬ ಆರೋಪ ಗಳು ಈ ಬಾರಿ ದೂರ ವಾಗಿದ್ದು, ಬೆಳಗ್ಗೆ 9 ಗಂಟೆಗೆ ಅಧಿ ವೇಶನ ಕರೆದರೂ ಸಮಯ ಪಾಲಿಸಿದ್ದಾರೆ. ಶೇ.80 ಶಾಸಕರು ಹಾಜರಾಗಿದ್ದು, ಬಸವರಾಜ ಬೊಮ್ಮಾಯಿ ಹಾಗೂ ಪ್ರಿಯಾ ಕೃಷ್ಣ ಗೈರುಹಾಜರಿಗೆ ಅನುಮತಿ ಕೇಳಿದ್ದರು. ಒಟ್ಟು 17 ಮಸೂದೆಗಳಿಗೆ ಅನುಮೋದನೆ ದೊರೆತಿದ್ದು, 150ಕ್ಕೂ ಅಧಿಕ ಗಮನ ಸೆಳೆಯುವ ಸೂಚನೆಗಳಿಗೆ ಉತ್ತರಿಸಲಾಗಿದೆ ಎಂದು ವಿವರಿಸಿದರು.

ವಿಪಕ್ಷಗಳು ಧರಣಿ ನಡೆಸುವುದು ಪ್ರಜಾಪ್ರಭುತ್ವದ ಸೌಂದರ್ಯ. ನ್ಯಾಯಯುತವಾದದ್ದನ್ನು ಸರಕಾರ ಈಡೇರಿಸುತ್ತದೆ. ಈ ಬಾರಿ ಬೆಳಗ್ಗೆ ಬೇಗ ಬಂದ ಶಾಸಕರಿಗೆ ಬಹುಮಾನ ನೀಡಿದಂತೆ, ಕೊನೆಯವರೆಗೂ ಕುಳಿತವರನ್ನು ಅಭಿನಂದಿಸುವ ಬಗ್ಗೆ ಚಿಂತನೆ ಇದೆ. ಶಾಸಕ, ಮಂತ್ರಿ, ಸ್ಪೀಕರ್‌ ಸ್ಥಾನಗಳು ಸಿಕ್ಕಾಗ ಹೆಚ್ಚು ಸಮಯವನ್ನು ಆ ಕಾರ್ಯಗಳಿಗೇ ಮೀಸಲಿಡಬೇಕು. ಮಲಗಿದವರನ್ನು ಎಬ್ಬಿಸಬಹುದು, ಆದರೆ ನಟಿಸುವವರನ್ನು ಏನು ಮಾಡುವುದು ಎಂದು ಪ್ರಶ್ನಿಸಿದರು.

ಶಾಸಕರ ಹುರುಪು, ಸಚಿವರ ಗೈರು
ಆರಂಭದಿಂದಲೂ ಸಚಿವರಿಲ್ಲ ದೆ ಚರ್ಚೆ, ಕಲಾಪ ನಡೆದದ್ದೇ ಹೆಚ್ಚು. ಅದರಲ್ಲೂ ಮೊದಲ ವಾರ ತೆಲಂಗಾಣ ವಿಧಾನಸಭಾ ಚುನಾವಣೆ ಫ‌ಲಿತಾಂಶ ಬಂದ ಹಿನ್ನೆಲೆಯಲ್ಲಿ ಸರಕಾರ ಪ್ರತಿಷ್ಠಾಪನೆ ಆಗುವವರೆಗೆ ಡಿಸಿಎಂ ಶಿವಕುಮಾರ್‌, ವಸತಿ ಸಚಿವ ಜಮೀರ್‌ ಖಾನ್‌ ಸಹಿತ ಕೆಲವು ಸಚಿವರು ಅಧಿವೇಶನದತ್ತ ಸುಳಿಯಲೂ ಇಲ್ಲ. ಹೈದರಾಬಾದ್‌ನಲ್ಲಿ ಕುಳಿತು ತೆಲಂಗಾಣ ಸರಕಾರ ರಚನೆಯ ಕಸರತ್ತಿನಲ್ಲಿ ಮುಳುಗಿದ್ದರು. ಮೊದಲ ವಾರ ನಿತ್ಯ ಆರೇಳು ಗಂಟೆಗಳ ಕಾಲ ಕಲಾಪ ನಡೆಸಿದರೆ, ಎರಡನೇ ವಾರ ನಿತ್ಯವೂ 10-11 ಗಂಟೆಗಳ ಕಲಾಪ ನಡೆಸಲಾಯಿತು.

ಧರಣಿಯೊಂದಿಗೆ ಅಂತ್ಯಗೊಂಡ ವಿಧಾನಸಭೆ ಕಲಾಪ
ಉತ್ತರ ಕರ್ನಾಟಕದ ಮೇಲಿನ ಚರ್ಚೆಗೆ ಸಿಎಂ ಉತ್ತರಿಸಿದ ಬಳಿಕ ಹಲವು ವಿಷಯಗಳನ್ನು ಚರ್ಚೆಗೆತ್ತಿಕೊಳ್ಳಲು ವಿಪಕ್ಷ ಬಿಜೆಪಿ ಸಿದ್ಧತೆ ನಡೆಸಿತ್ತು. ಅಷ್ಟರಲ್ಲಿ ಸ್ಪೀಕರ್‌ ಖಾದರ್‌ ಕಾರ್ಯಕಲಾಪದ ಸಂಕ್ಷಿಪ್ತ ವರದಿ ವಾಚಿಸಲು ಶುರು ಮಾಡಿದ್ದನ್ನು ವಿರೋಧಿಸಿ ವಿಪಕ್ಷ ಬಿಜೆಪಿ ಸದಸ್ಯರು ಧರಣಿಗೆ ನಡೆಸಿದರು. ಧರಣಿ ನಡುವೆಯೇ ವರದಿ ಓದಿ ಮುಗಿಸಿದ ಸ್ಪೀಕರ್‌, ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಸಿಎಂ ಸಿದ್ದರಾಮಯ್ಯ ಕೊಟ್ಟಿರುವ ಉತ್ತರಗಳು ಸಮಾಧಾನಕರವಾಗಿಲ್ಲ ಎಂದು ಸಭಾತ್ಯಾಗ ನಡೆಸಿದ್ದ ಬಿಜೆಪಿ ಸದಸ್ಯರು, ಸ್ಪೀಕರ್‌ ಅವರ ಸಂಕ್ಷಿಪ್ತ ವರದಿ ವಾಚನ ಕೇಳಿಸಿಕೊಂಡು ಒಳಬಂದರು. ನಾವಿನ್ನೂ ಸಾಕಷ್ಟು ವಿಚಾರಗಳ ಮೇಲೆ ಚರ್ಚೆ ನಡೆಸಬೇಕು. ನಿಯಮ 69ರಡಿ ಹಲವು ಪ್ರಸ್ತಾವನೆಗಳನ್ನು ಸಲ್ಲಿಸಿದ್ದೆವು. ಸಚಿವ ಜಮೀರ್‌ ನೀಡಿರುವ ಹೇಳಿಕೆ, ಡಿಸಿಎಂ ವಿರುದ್ಧದ ಸಿಬಿಐ ತನಿಖೆ ಕೈಬಿಟ್ಟಿರುವ ಬಗ್ಗೆ ಚರ್ಚಿಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿ ಧರಣಿ ನಡೆಸಿದರು. ಅಷ್ಟರಲ್ಲಿ ಸಂಕ್ಷಿಪ್ತ ವರದಿ ಓದಿ ಮುಗಿಸಿದ ಸ್ಪೀಕರ್‌, ಕಲಾಪ ಮುಂದೂಡಿದರು. ರಾಷ್ಟ್ರಗೀತೆ ಮೊಳಗಿತು. ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ವಿಪಕ್ಷ ಬಿಜೆಪಿ ಸದಸ್ಯರ ಧರಣಿಯೊಂದಿಗೆ ಕಲಾಪ ಅಂತ್ಯಗೊಂಡಿತು.

Advertisement

ಮೇಲ್ಮನೆಯಲ್ಲಿ ಚರ್ಚೆ ನಡೆದಿದ್ದು 2 ಗಂಟೆ!
ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮೇಲ್ಮನೆಯಲ್ಲಿ ಕೊನೆಯ ದಿನ “ಶಾಸ್ತ್ರಕ್ಕೆಂಬಂತೆ’ ಕೇವಲ ತಾಸು ಮಾತ್ರ ಚರ್ಚೆ ನಡೆಯಿತು. ಈ ವೇಳೆ ಬರೀ ಆರೇಳು ಸದಸ್ಯರು ಮಾತ್ರ ಮಾತನಾಡಿದರು. ವಿಪಕ್ಷಗಳ ಗದ್ದಲ ಮತ್ತು ಧರಣಿ ನಡುವೆ ಮುಖ್ಯಮಂತ್ರಿ ಉತ್ತರ ಕೊಟ್ಟರು. ಬಳಿಕ ಸದನ ವನ್ನು ಅನಿರ್ದಿಷ್ಟಾವಧಿಗೆ ಮುಂದೂಡ ಲಾಯಿತು. ಆ ಪ್ರಕಾರ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆಯ ವಾರ್ಷಿಕ ಸಂಪ್ರಾದಾಯ ಮುಗಿಯಿತು.

ಶುಕ್ರವಾರ ಮಧ್ಯಾಹ್ನ 1.30ಕ್ಕೆ ಸದನದಲ್ಲಿ ಉ.ಕ.ಅಭಿವೃದ್ಧಿಯ ಬಗ್ಗೆ ಚರ್ಚೆ ಆರಂಭವಾದಾಗ ಬಿಜೆಪಿಯ ಕೆಲವು ಸದಸ್ಯರು ಹಾಜರಿದ್ದರು. 2.30ರ ವರೆಗೆ ಚರ್ಚೆ ನಡೆಯಿತು. ಒಟ್ಟು 12 ಸದಸ್ಯರ ಪೈಕಿ ಮೂವರು ಮಾತನಾಡಿದ್ದರು. ಊಟದ ವಿರಾಮದ ಬಳಿಕ ಮೂರು ಗಂಟೆಗೆ ಕಲಾಪ ಆರಂಭವಾದ ಬಳಿಕ ಮೂವರು ಸದಸ್ಯರು ಉ.ಕ.ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆದರು. ಇನ್ನೂ ಏಳು ಸದಸ್ಯರು ಮಾತನಾಡುವುದು ಬಾಕಿ ಇದ್ದರೂ ಮುಖ್ಯಮಂತ್ರಿಗಳು ಉತ್ತರ ನೀಡಲು ಆರಂಭಿಸಿದರು. ಮುಖ್ಯಮಂತ್ರಿಗಳ ಉತ್ತರಕ್ಕೆ ವಿಪಕ್ಷ ಸದಸ್ಯ ಕೋಟ ಶ್ರೀನಿ ವಾ ಸ‌ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು.

ಗೊಂದಲಗಳಿಂದ ಹೈರಾಣಾದ ವಿಪಕ್ಷ
ಸರಕಾರ ರಚನೆಯಾದ 6 ತಿಂಗಳ ಬಳಿಕ ಆರ್‌.ಅಶೋಕ್‌ ವಿಧಾನಸಭೆ ವಿಪಕ್ಷ ನಾಯಕರಾಗಿ ನೇಮಕಗೊಂಡರೂ ವಿಧಾನಸಭೆಗೆ ಅವರನ್ನು ಪರಿಚಯಿಸುವ ಕೆಲಸವೇ ಆಗಿರಲಿಲ್ಲ. ಸದಸ್ಯರ ಆಗ್ರಹದ ಮೇರೆಗೆ ಅವರ ನೇಮಕವನ್ನು ಪ್ರಕಟಿಸಲಾಯಿತು. ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಇದ್ದರೂ ಪರಿಷತ್ತಿನಲ್ಲಿ ಇರಲಿಲ್ಲ. ಎರಡೂ ಮನೆಯಲ್ಲಿ ಸಚೇತಕರಿಲ್ಲದೆ ಸಂವಹನದ ಭಾರೀ ಕೊರತೆ ಎದ್ದು ಕಂಡಿತ್ತು.

ಧರಣಿ ನಡೆಸಿ ಕೈ ಕಟ್ಟಿ ಹಾಕಿಸಿಕೊಂಡ ವಿಪಕ್ಷ
ಅಧಿವೇಶನ ನಡೆಯುವ ಸಂದರ್ಭದಲ್ಲೇ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಚೂರಿ ಇರಿತ ಸಂಭವಿಸಿತ್ತು. ಈ ವಿಚಾರ ಪ್ರಸ್ತಾವಿಸುವಲ್ಲಿ ಎಡವಿದ ಬಿಜೆಪಿ, ಒಂದು ಬಣ ಧರಣಿಗೆ ಮುಂದಾದರೆ, ಮತ್ತೂಂದು ಬಣ ಸಭಾತ್ಯಾಗ ನಡೆಸಿ ಹೊಂದಾಣಿಕೆ ಕೊರತೆ ಪ್ರದರ್ಶಿಸಿತು. ಮುಸ್ಲಿಮರಿಗೆ 10 ಸಾವಿರ ಕೋಟಿ ರೂ. ಘೋಷಿಸಿದ ಆರೋಪ ಹೊರಿಸಿ ಸಿಎಂ ವಿರುದ್ಧ ಹರಿಹಾಯ್ದು ಸಭಾತ್ಯಾಗ ಮಾಡಿತಾದರೂ ಎಸ್‌.ಟಿ. ಸೋಮಶೇಖರ್‌ ಬೆಂಬಲಿಸಲಿಲ್ಲ. ಸ್ಪೀಕರ್‌ ಪೀಠದ ಬಗ್ಗೆ ಕಾಂಗ್ರೆಸ್‌ ಶಾಸಕ ಜಮೀರ್‌ ಖಾನ್‌ ಹೇಳಿಕೆ ಇಟ್ಟುಕೊಂಡು ಧರಣಿ ನಡೆಸಿದ ಬಿಜೆಪಿಯನ್ನು ಇಡೀ ದಿನ ಬಾವಿಯಲ್ಲಿ ನಿಲ್ಲಿಸಿ ಕಲಾಪ ನಡೆಯಿತು. ವಿಪಕ್ಷದ ಕರಾವಳಿ ಶಾಸಕರು ಪ್ರಸ್ತಾವಿಸಿದ ಕೆಲ ವಿಚಾರಗಳು ಗಟ್ಟಿಯಾಗಿದ್ದವು. ಸಿಬಿಐ ತನಿಖೆಗೆ ನೀಡಿದ್ದ ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಹಿಂಪಡೆದ ವಿಚಾರವಾಗಲೀ, ವರ್ಗಾವಣೆ ದಂಧೆ, ಭ್ರಷ್ಟಾಚಾರದಂತಹ ವಿಚಾರಗಳನ್ನು ಚರ್ಚೆಗೆ ತರಲೇ ಇಲ್ಲ.

ಜೆಡಿಎಸ್‌ ಜಂಟಿ ಹೋರಾಟ ನಿರೀಕ್ಷೆ ಠುಸ್‌
ಜೆಡಿಎಸ್‌ನ ಕುಮಾರಸ್ವಾಮಿ ಒಂದೆರಡು ಬಾರಿ ಕಲಾಪದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಕಲಾಪದ ಕಡೆಗೆ ತಲೆ ಹಾಕಿಯೂ ಮಲಗಲಿಲ್ಲ. ಎನ್‌ಡಿಎ ಜತೆಗೆ ಚುನಾವಣಪೂರ್ವ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌, ವಿಧಾನಮಂಡಲ ಅಧಿವೇಶನದಲ್ಲಿ ಯಾವುದೇ ಜಂಟಿ ಹೋರಾಟ ನಡೆಸಲಿಲ್ಲ. ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಹಿತ ಕೆಲವು ಶಾಸಕರು, ಮಾಜಿ ಸಚಿವರು ಕಲಾಪಕ್ಕೆ ಹಾಜರಾಗುವುದರಿಂದ ವಿನಾಯಿತಿ ಪಡೆದಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next