Advertisement

ಶಾಲಾ ಕಾಲೇಜುಗಳಲ್ಲಿ ಸೇವಾಧಾರಿತ ಶಿಕ್ಷಣ ಅಗತ್ಯ

11:11 PM Jul 31, 2019 | mahesh |

ಭಾರತದ ಎರಡು ಆದರ್ಶಗಳೆಂದರೆ ಅದು ತ್ಯಾಗ ಮತ್ತು ಸೇವೆ. ಏಕೆಂದರೆ ಈ ಎರಡೂ ಮಹತ್ವಪೂರ್ಣ ಸಂಗತಿಗಳು ಭಾರತೀಯರ ಮನಸ್ಥಿತಿ ಯಲ್ಲಿ ನೆಲೆಸಿದೆ. ಇತ್ತೀಚಿನ ದಿನಗಳಲ್ಲಿ ಈ ಆದರ್ಶಗಳಿಗೆ ನಾಗರಿಕರಾಗಿ ನಮ್ಮ ಕೊಡುಗೆ ಕಡಿಮೆ ಯಾಗುತ್ತಿದೆಯೋ ಏನೋ ಎಂದು ಭಾಸವಾಗುತ್ತಿದೆ. ಇದಕ್ಕೆ ಕಾರಣ ಯಾವುದೇ ದೇಶದ ಮುಂದಿನ ಭವಿಷ್ಯವೆಂದು ಕರೆಯಲ್ಪಡುವ ವಿದ್ಯಾರ್ಥಿಗಳ ಪಾತ್ರ ಈ ಆದರ್ಶಗಳನ್ನು ಎಷ್ಟರ ಮಟ್ಟಿಗೆ ಮೈಗೂಡಿಸಿ ಕೊಂಡಿದ್ದಾರೆ ಎನ್ನುವುದು.

Advertisement

ಭಾರತದಲ್ಲಿ ಬದಲಾಗುತ್ತಿರುವ ಶಿಕ್ಷಣ ಪದ್ಧತಿ, ಹೆಚ್ಚಾಗುತ್ತಿರುವ ಆಕರ್ಷಣೆಗಳು,ವಿದ್ಯಾರ್ಥಿಗಳಿಗೆ ದೊರಕಬೇಕಾದ ಮೌಲ್ಯಯುತ ಶಿಕ್ಷಣದ ಕೊರತೆ, ಸಮಾಜಕ್ಕೆ ತಾನು ಕೊಡಬೇಕಾದ ಸೇವೆಗಳೇನು ಎಂಬ ಅರಿವಿಲ್ಲದೇ ಇರುವುದು, ರಾಷ್ಟ್ರದ ನಾಗರಿಕನಾಗಿ ತನ್ನ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳದಿರುವುದು ಎಂಬಿತ್ಯಾದಿ ಕಾರಣದಿಂದಾಗಿ ಸೇವೆಯ ಅಥವಾ ಸಾಮಾಜಿಕ ಚಟುವಟಿಕೆಗಳ ಬಗ್ಗೆ ತಿಳುವಳಿಕೆ ಮತ್ತು ಈ ಕ್ಷೇತ್ರಗಳಲ್ಲಿ ಅವರ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ ಎಂದೆನಿಸುತ್ತಿದೆ.

ಹೆಚ್ಚಿನ ವಿದ್ಯಾರ್ಥಿಗಳ ಮನೋಭಾವ ಆಟ, ಪಾಠ, ಊಟಗಳಿಗೆ ಸೀಮಿತವಾಗಿದ್ದು, ಈ ರಾಷ್ಟ್ರದ ಜಟಿಲ ಸಮಸ್ಯೆಗಳಿಗೂ ಪರಿಹಾರ ನೀಡಬಹುದಾದ, ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬಲ್ಲ, ಸುಂದರ ಸಮಾಜದ ನಿರ್ಮಾತೃಗಳಾಗುವ ಸಾಮರ್ಥ್ಯ ಮತ್ತು ಅವಕಾಶ ನಮಗಿದೆ ಎನ್ನುವುದರ ಕುರಿತು ಆಲೋಚಿಸುವ ಕಡಿಮೆಯಾಗಿದೆ.

ಶಾಲಾ ಕಾಲೇಜುಗಳಲ್ಲಿ ಸಮಾಜ ಸೇವಾ ಸಂಘಟನೆಗಳು ಹಲವಾರಿದೆ. ಉದಾಹರಣೆಗೆ ಎನ್ನೆಸ್ಸೆಸ್‌, ಎನ್‌.ಸಿ.ಸಿ., ಸ್ಕೌಟ್ ಮತ್ತು ಗೈಡ್ಸ್‌, ರೋವರ್-ರೇಂಜರ್, ನೇಚರ್‌ ಕ್ಲಬ್‌, ರೆಡ್‌ಕ್ರಾಸ್‌ಇತ್ಯಾದಿ. ಈ ಸಂಘಟನೆಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆ, ಕಾಲೇಜುಗಳ ವತಿಯಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿ ಸುವ ಅವಕಾಶಗಳು ಇರುತ್ತದೆ. ಉಳಿದ ವಿದ್ಯಾರ್ಥಿಗಳಿಗೆ ಈ ಚಟುವಟಿಕೆಗಳಲ್ಲಿ ಅವರು ಮಾತ್ರ ಭಾಗವಹಿಸಬೇಕು ಎಂಬ ಮನೋಭಾವ ಬೆಳೆಯುತ್ತದೆ.

ಸ್ವಚ್ಛಭಾರತ, ಸಾಕ್ಷರತಾ ಭಾರತ, ಯೋಗ, ಆರೋಗ್ಯ, ಜೀವಜಲ, ರಕ್ತದಾನ, ಮತದಾನ, ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಎಚ್ಚರಿಕೆ, ಡ್ರಗ್ಸ್‌ ಸೇವನೆಯ ದುರಂತ ಮುಂತಾದ ಕಲ್ಪನೆಗಳಬಗ್ಗೆ ಮಾಹಿತಿ ನೀಡುವುದರ ಮೂಲಕ ಹಲವು ಶಾಲಾ-ಕಾಲೇಜುಗಳು ಸಾಮಾಜಿಕ ಚಟುವಟಿಕೆ ಗಳಲ್ಲಿ ಭಾಗವಹಿಸಿದರೂ ನಿಗದಿತ ಸಮಾಜಸೇವೆಗೆ ಸೀಮಿತವಾದಂತಿದೆ. ಭಜನಾ ಮಂದಿರಗಳು, ವಿವಿಧ ಸಂಘಟನೆಗಳು, ಯುವ ಸಂಘಟನೆಗಳು ಮನೆ ಮನೆ ಸಂಪರ್ಕ, ದೇವಾಲಯಗಳ ಸ್ವಚ್ಛತೆ, ರಸ್ತೆಗುಂಡಿ ಮುಚ್ಚುವಿಕೆ, ಕಲ್ಯಾಣಿಗಳ ಹೂಳೆತ್ತುವಿಕೆ, ಶೈಕ್ಷಣಿಕವಾಗಿ ಜಾಗೃತಿ ಕಾರ್ಯಕ್ರಮಗಳು ಮುಂತಾದವುಗಳನ್ನು ಮಾಡಿದರೂ ಅದರಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಕಡಿಮೆ.

Advertisement

ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಸಂಖ್ಯೆ ಹೆಚ್ಚಾಗಬೇಕಿದ್ದರೆ ಅನೇಕ ಬದಲಾವಣೆಗಳು ವಿದ್ಯಾಸಂಸ್ಥೆಗಳ ವ್ಯವಸ್ಥೆಯಲ್ಲಾ ಗಬೇಕು. ಮೊಟ್ಟಮೊದಲಿಗೆ ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ ನಿಜಾರ್ಥವನ್ನು ಕಲಿಸಬೇಕು. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ಪ್ರೇರಣೆ ಸಿಗುವಂತಾಗಬೇಕು. ನಿನ್ನ ಕನಸಿನ ಗ್ರಾಮ/ರಾಷ್ಟ್ರ ಹೇಗಿರಬೇಕು ಅನ್ನುವುದನ್ನು ಕೇಳುವ ಬದಲು, ನಿನ್ನ ಗ್ರಾಮ/ರಾಷ್ಟ್ರ ನೀನು ಕನಸು ಕಂಡಂತೆ ಇರುವುದಕ್ಕೆ ನಿನ್ನ ಕೊಡುಗೆ ಏನು? ಎನ್ನುವುದನ್ನು ಕೇಳುವಂತಾಗಬೇಕು.

ಸಾಮಾಜಿಕ ಕಾರ್ಯಗಳು ಪಠ್ಯದ ಭಾಗವಾಗಬೇಕು. ಮನೆಯಲ್ಲಿಯೂ ಬದಲಾವಣೆ ಆದಾಗ ಸಾಮಾಜಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಹೆಚ್ಚಾಗಬಹುದು. ಆಕರ್ಷಣೆಗೆ ಒಳಗಾಗುವ ಸಾಮಾಜಿಕ ಜಾಲತಾಣಗಳನ್ನೂ ಸಹ ಸಾಮಾಜಿಕ ಕಾರ್ಯಗಳಿಗಾಗಿ ಬಳಸುವಂತೆ ಪ್ರೇರಣೆ ದೊರೆತಾಗ ವಿದ್ಯಾರ್ಥಿಗಳ ಭಾಗವಹಿಸುವಿಕೆ ಪ್ರಾಮುಖ್ಯವನ್ನು ಪಡೆಯುತ್ತದೆ.

•ಅರುಣ್‌ ಕಿರಿಮಂಜೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next