Advertisement

ಸರಣಿ ಕಳ್ಳತನ, ಧನಿವರ್ಧಕದ ಮೂಲಕ ಪೊಲೀಸರ ಜಾಗೃತಿ 

11:01 AM Oct 15, 2017 | |

ಹಳೆಯಂಗಡಿ: ಎಚ್ಚರ… ಎಚ್ಚರ.. ಸಜ್ಜನ ಬಾಂಧವರೇ ಇಲ್ಲಿ ಕಿವಿ ಕೊಟ್ಟು ಕೇಳಿರಿ… ಎಂದು ಮೈಕ್‌ ಕಟ್ಟಿದ ರಿಕ್ಷಾದಿಂದ ಈ ಧ್ವನಿ ಕಳೆದ ಎರಡು ದಿನದಿಂದ ಮೂಲ್ಕಿ, ಕಿನ್ನಿಗೋಳಿ, ಹಳೆಯಂಗಡಿ ಸಹಿತ ಅನೇಕ ಕಡೆಗಳಲ್ಲಿ ಕೇಳಿಸುತ್ತಿದೆ. ಇದು ಯಾವುದೇ ಗ್ರಾಮ ಪಂಚಾಯತ್‌ನ ಗ್ರಾಮ ಸಭೆಯ ಮಾಹಿತಿಯಲ್ಲ, ಚುನಾವಣಾ ಪ್ರಚಾರವೂ ಅಲ್ಲ, ಯಕ್ಷಗಾನ, ನಾಟಕದ ಪ್ರಚಾರವಂತೂ ಅಲ್ಲವೇ ಅಲ್ಲ. ಇದು ಈ ಪರಿಸರದಲ್ಲಿ ಸಂಭವಿಸುತ್ತಿರುವ ಕಳ್ಳತನದ ಬಗ್ಗೆ ಮೂಲ್ಕಿ ಪೊಲೀಸರಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ.

Advertisement

ಮೂಲ್ಕಿಯ ರಿಕ್ಷಾ ಚಾಲಕ ವಿಲ್‌ಫ್ರೆಡ್‌ ಕೊಲ್ಲೂರು ಎಂಬವರ ರಿಕ್ಷಾಕ್ಕೆ ಮೈಕ್‌ ಸಹಿತ ಸ್ಪೀಕರ್‌ ಕಟ್ಟಿ ಪ್ರಮುಖ ಜಂಕ್ಷನ್‌ಗಳಲ್ಲಿ ಕಳ್ಳರ ಬಗ್ಗೆ ಹಾಗೂ ಕಳ್ಳತನ ಆಗುವ ಮೊದಲೇ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎಂಬ ಬಗ್ಗೆ ಠಾಣೆಯ ಸಿಬಂದಿಯೊಬ್ಬರು ಬೆಳಗ್ಗೆಯಿಂದ ಸಂಜೆಯವರೆಗೆ ಪ್ರಚಾರ ನಡೆಸುತ್ತಿದ್ದಾರೆ.

ಕೇಳಿರಣ್ಣ,. ಇಲ್ಲಿ.. ಕೇಳಿರಿ.. 
ಬೆಲೆಬಾಳುವ ಚಿನ್ನಾಭರಣಗಳು ಹಾಗೂ ಅಗತ್ಯಕ್ಕಿಂತ ಹೆಚ್ಚು ನಗದನ್ನು ಮನೆಯಲ್ಲಿನ ಕಪಾಟಿನಲ್ಲಿಡುವ ಬದಲು ಸುರಕ್ಷಿತ (ಲಾಕರ್‌) ಜಾಗದಲ್ಲಿಟ್ಟರೆ ಉತ್ತಮ, ತೆರೆದ ಕಿಟಕಿಯಿಂದ ಅಮೂಲ್ಯ ವಸ್ತುಗಳು ಕೈಗೆಟುಕದಿರಲಿ, ಮನೆ, ದೇವಸ್ಥಾನ, ಅಂಗಡಿಗಳ ಸುತ್ತಮುತ್ತ ಸಾಕಷ್ಟು ಬೆಳಕಿನ ವ್ಯವಸ್ಥೆಯಿರಲಿ, ಆಪರಿಚಿತರನ್ನು ಮನೆಯ ಒಳಗೆ ಕರೆಯಬೇಡಿ, ಮನೆಯಿಂದ ಹೊರತೆರಳಿದರೆ ಅಕ್ಕಪಕ್ಕದ ಅಥವಾ ಪೊಲೀಸ್‌ ಠಾಣೆಗೆ ತಿಳಿಸಿರಿ, ಮನೆಗೆ ಅಥವಾ ಸಂಸ್ಥೆಗಳಿಗೆ ಸೇರುವ ಸಿಬಂದಿ ಬಗ್ಗೆ ಪೂರ್ವಾಪರ ತಿಳಿದುಕೊಳ್ಳಿ, ಬಾಗಿಲು ಗಟ್ಟಿಯಾಗಿರಲಿ, ಬೀಗ ಸುರಕ್ಷಿತವಾಗಿರಿಸಿ. ರಾತ್ರಿ ಸಮಯದಲ್ಲಿ ಬರುವವರನ್ನು ಮೊದಲು ಹೊರಗಿನ ಲೈಟ್‌ನಿಂದ ಗುರುತಿಸಿಕೊಳ್ಳಿರಿ, ವಯಸ್ಸಾದವರನ್ನು, ಅಪ್ರಾಪ್ತರನ್ನು, ಅಂಗವಿಕಲರನ್ನು ಮನೆಯಲ್ಲಿ ಒಂಟಿಯಾಗಿ ಬಿಡದಿರಿ, ಮಹಿಳೆಯರು ಚಿನ್ನಾಭರಣ ಧರಿಸಿಕೊಂಡು ಒಂಟಿಯಾಗಿ ಹೋಗದಿರಿ, ರಸ್ತೆಯಲ್ಲಿ ನಕಲಿ ವಿಳಾಸ, ಅಪರಿಚಿತರೊಂದಿಗೆ ಮಾತನಾಡುವುದು, ಬೈಕ್‌ನಲ್ಲಿ ಬಂದು ಮಾತನಾಡುವಾಗ ಎಚ್ಚರಿಕೆ ಇರಲಿ, ರೈಲು, ಬಸ್ಸಿನಲ್ಲಿ ಪ್ರಯಾಣಿಸುವಾಗ ಸಹ ಪ್ರಯಾಣಿಕರ ಬಗ್ಗೆ ಎಚ್ಚರವಿರಲಿ… ಹೀಗೆ ಅನೇಕ ಜಾಗೃತಿ ಮೂಡಿಸುವ ಘೋಷಣೆಗಳೊಂದಿಗೆ ಸಲಹೆ, ಸಹಕಾರ ಬೇಕಾದಲ್ಲಿ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಕಳೆದ ಕೆಲವು ದಿನಗಳ ಹಿಂದೆ ಕಾರ್ನಾಡು ಹರಿಹರ ದೇವಸ್ಥಾನದ ಬಳಿಯ ಮನೆಗಳಲ್ಲಿ ನಡೆದ ಕಳ್ಳತನದ ಅನಂತರ ಮೂಲ್ಕಿ ಇನ್ಸ್‌ಪೆಕ್ಟರ್‌ ಅನಂತ ಪದ್ಮನಾಭ ಅವರ ಮಾರ್ಗದರ್ಶನದಲ್ಲಿ ಈ ಧ್ವನಿವರ್ಧಕದ ಮೂಲಕ ಎಚ್ಚರಿಕೆ ಹಾಗೂ ಜಾಗೃತಿ ಮೂಡಿಸುವ ಪ್ರಚಾರ ನಡೆಯುತ್ತಿದೆ. ಜತೆಗೆ ಪ್ರತಿ ಗ್ರಾಮ ಬೀಟ್‌ನ ಮೂಲಕ ಅಲ್ಲಲ್ಲಿ ಸಭೆಗಳನ್ನು ಸಹ ನಿರಂತರವಾಗಿ ನಡೆಸಲಾಗುತ್ತಿದೆ. ಕಳ್ಳರ ಬಗ್ಗೆ ಜಾಗೃತಿಯ ಜತೆಗೆ ಸ್ಥಳೀಯರ ಆತಂಕವನ್ನೂ ದೂರ ಮಾಡಲು ಪೊಲೀಸರು ಶ್ರಮಿಸುತ್ತಿದ್ದಾರೆ.

ಜನರಲ್ಲಿ ಜಾಗೃತಿ ಮೂಡಲಿ
ಕಾನೂನು ರಕ್ಷಣೆ ಕೇವಲ ಪೊಲೀಸರಿಗೆ ಸೀಮಿತವಲ್ಲ. ನಮ್ಮೊಂದಿಗೆ ನಾಗರಿಕರು ಸಹಕಾರ ನೀಡಬೇಕು. ಠಾಣಾ ವ್ಯಾಪ್ತಿಯ ಗ್ರಾಮ ಬೀಟ್‌ ಸಮಿತಿಗಳನ್ನು ಅಲರ್ಟ್‌ ಮಾಡಿದ್ದೇವೆ. ಸಭೆಗಳನ್ನು ನಡೆಸಿ ಜನರಲ್ಲಿ ಯಾವುದೇ ರೀತಿಯ ಆತಂಕ ಮೂಡಬಾರದು ಎಂದು ಕ್ರಮ ಕೈಗೊಳ್ಳುತ್ತಿದ್ದೇವೆ. ಕಳ್ಳತನ ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ. 
ಅನಂತ ಪದ್ಮನಾಭ, 
ಇನ್ಸ್‌ಪೆಕ್ಟರ್‌, ಮೂಲ್ಕಿ ಪೊಲೀಸ್‌ ಠಾಣೆ

Advertisement

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next