Advertisement

ಗ್ರಾಹಕ ಸೇವೆಗಳಿಗೆ ಶೀಘ್ರ ಬರಲಿದೆ ಪ್ರತ್ಯೇಕ ಆ್ಯಪ್‌

09:57 PM Jul 28, 2021 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ಕೊನೆಗೂ ಡಿಜಿಟಲ್‌ ವ್ಯವಸ್ಥೆಯತ್ತ ಒಗ್ಗಿಕೊಳ್ಳುತ್ತಿದ್ದು, ಪಾಲಿಕೆ ಸೇವೆಗಳನ್ನು ಆನ್‌ಲೈನ್‌ ಮುಖೇನ ರೂಪಿಸಲು ಮುಂದಾಗಿದೆ.

Advertisement

ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ನೀರಿನ ಬಿಲ್‌, ಉದ್ದಿಮೆ ಪರವಾನಿಗೆ ಆನ್‌ಲೈನ್‌ ಮುಖೇನ ಕಾರ್ಯನಿರ್ವ ಹಿಸುತ್ತಿದ್ದು, ಇದೀಗ ಆ ಸಾಲಿಗೆ ಆಸ್ತಿ ತೆರಿಗೆ ಕೂಡ ಸೇರಲಿದೆ. ಇದರೊಂದಿಗೆ ಇಂದಿನ ಅಗತ್ಯಗಳಿಗೆ ತಕ್ಕಂತೆ ಆನ್‌ಲೈನ್‌ ವ್ಯವಸ್ಥೆಗೆ ಒಗ್ಗಿಕೊಳ್ಳಲು ಮನಪಾ ನಿರ್ಧರಿಸಿದೆ. ಆಸ್ತಿ ತೆರಿಗೆ ಪಾವತಿಗೆ ಪ್ರತ್ಯೇಕ ಆ್ಯಪ್‌ ಕುರಿತಂತೆ ಕಿಯೋನಿಕ್ಸ್‌ ಸಂಸ್ಥೆಯ ಜತೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಪ್ರತ್ಯೇಕ ಆ್ಯಪ್‌ ರೂಪುಗೊಳ್ಳುತ್ತಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ರೂಪಿತಗೊಂಡಂತಹ ನೀರಿನ ಬಿಲ್‌ ಆನ್‌ಲೈನ್‌ ವ್ಯವಸ್ಥೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಲಾಕ್‌ಡೌನ್‌ ವೇಳೆ ಅನೇಕ ಮಂದಿ ಪಾಲಿಕೆಗೆ ಬಂದು ನೀರಿನ ಬಿಲ್‌ ಪಾವತಿಸಲು ಕಷ್ಟವಾಗುತ್ತಿತ್ತು. ಈ ವೇಳೆ ಆನ್‌ಲೈನ್‌ ವ್ಯವಸ್ಥೆಯ ಲಾಭ ಪಡೆದಿದ್ದಾರೆ. ಅದೇ ರೀತಿ, ಮನೆಯಲ್ಲಿ ಇಬ್ಬರಿದ್ದು, ಕೆಲಸಕ್ಕೆ ತೆರಳುವ ಮಂದಿ ಪಾಲಿಕೆ ಆಗಮಿಸಿ ಹಣ ಪಾವತಿ ಕಷ್ಟ. ಅಂತಹವರೂ ಇದರ ಲಾಭ ಪಡೆಯುತ್ತಿದ್ದಾರೆ. ಇನ್ನು, ಈ ಹಿಂದೆ ಉದ್ದಿಮೆ ಪರವಾನಿಗೆಗೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ಆದರೆ ಇದೀಗ ಆ್ಯಪ್‌ ಮುಖೇನ ಈ ವ್ಯವಸ್ಥೆ ನೀಡಲಾಗಿದ್ದು, ಸಾರ್ವಜನಿಕರಿಗೆ ಉಪಯೋಗವಾಗಿದೆ. ಆ್ಯಪ್‌ನಲ್ಲಿ ಈಗಾಗಲೇ ಇರುವಂತಹ ಕೆಲವೊಂದು ನ್ಯೂನತೆಗಳನ್ನು ಸರಿಪಡಿಲು ಪಾಲಿಕೆ ನಿರ್ಧರಿಸಿದೆ.

ಸ್ಮಾರ್ಟ್‌ಸಿಟಿಯಿಂದಲೂ ಪ್ರತ್ಯೇಕ ಆ್ಯಪ್‌:

ಸ್ಮಾರ್ಟ್‌ಸಿಟಿ ಯೋಜನೆಯ ಮುಖೇ ನವೂ ಇದೀಗ “ಒನ್‌ ಟಚ್‌ ಮಂಗಳೂರು’ ಎಂಬ ಆ್ಯಪ್‌ ಸಿದ್ಧಗೊಳ್ಳಲಿದೆ. ಸ್ಮಾರ್ಟ್‌ ಸಿಟಿ ಆಗುವ ಸ್ಥಳವನ್ನು ಕೇಂದ್ರೀಕರಿಸಿ ಈ ಆ್ಯಪ್‌ ಮುಖ್ಯವಾಗಿ ಕಾರ್ಯನಿರ್ವ ಹಿಸಿದರೂ ಕೂಡ, ಪಾಲಿಕೆಯ 60 ವಾರ್ಡ್‌ಗಳಲ್ಲಿಯೂ ಇದು ಕಾರ್ಯಾ ಚರಿಸುವಂತೆ ಮಾಡಬೇಕು ಎನ್ನುವುದು ಸ್ಮಾರ್ಟ್‌ಸಿಟಿ ಆಶಯವಾಗಿದೆ. ಅದರಂತೆ “ಮಂಗಳೂರಿನಲ್ಲಿ ಇವತ್ತು ನೀರಿಲ್ಲ, ವಿದ್ಯುತ್‌ ಇಲ್ಲ, ಕಸ ಸಂಗ್ರಹಕ್ಕೆ ಬರಲ್ಲ, ನಾಳೆ ಒಣಕಸ ಸಂಗ್ರಹಿಸುತ್ತೇವೆ’ ಸಹಿತ ಹೀಗೆ ನಾನಾ ರೀತಿಯ ಸಾರ್ವಜನಿಕ ಮಾಹಿತಿಗಳು ಮಂಗಳೂರು ಜನರ ಮೊಬೈಲ್‌ಗೆ ಬರಲಿದೆ.

Advertisement

ಅದೇ ರೀತಿ, ಪಾನ್‌ಸಿಟಿ ಸೌಲಭ್ಯಗಳು ದೊರೆಯಲಿದೆ. ಸಿಟಿ ಗೈಡ್‌, ಎಮರ್ಜೆನ್ಸಿ ಸರ್ವಿಸ್‌, ಕಟ್ಟಡ ಪರವಾನಿಗೆ, ಸೌಲಭ್ಯಗಳ ಮಾಹಿತಿ, ಪಾರ್ಕಿಂಗ್‌ ಸ್ಥಳಗಳು, ಪಾಸ್‌ಪೋರ್ಟ್‌ ಪರಿಶೀಲನೆ, ಡ್ರೈವಿಂಗ್‌ ಲೈಸೆನ್ಸ್‌ ವಿವರ, ರಸ್ತೆಗಳ ಮಾಹಿತಿ, ನೀರಿನ ಸೌಲಭ್ಯದ ಮಾಹಿತಿ, ಉದ್ದಿಮೆ ಮಾಹಿತಿ, ಪಡಿತರ ವಿವರ, ಮಹಿಳಾ ವಾಣಿ, ಆದಾಯ ವಿವರಗಳು, ಮತದಾರರ ಗುರುತಿನ ಚೀಟಿ, ನಗರ ಪ್ರದಕ್ಷಿಣೆ, ಆರ್‌ಟಿಒ ದಂಡಗಳು, ಕಾಣೆಯಾದವರ ಮಾಹಿತಿ, ಸಾರ್ವಜನಿಕ ಅಹವಾಲು, ವಿಚಾರಣೆ, ದಂಡ ಕಟ್ಟುವ ವಿಧಾನಗಳು, ಉದ್ಯೋಗ ವಿವರಗಳು, ಜನ್ಮದಿನಾಂಕ ಸರ್ಟಿಫಿಕೆಟ್‌, ಆಸ್ಪತ್ರೆ, ಆರೋಗ್ಯ ವಿವರಗಳು ಮೊಬೈಲ್‌ ಆ್ಯಪ್‌ನಲ್ಲಿ ಬರುವ ಸಾಧ್ಯತೆ ಇದೆ.

ಮಹಾನಗರ ಪಾಲಿಕೆಯಲ್ಲಿ ಆನ್‌ಲೈನ್‌ ವ್ಯವಸ್ಥೆಗೆ ಒತ್ತು ನೀಡಲಾಗುವುದು. ನೀರಿನ ಬಿಲ್‌ ಪಾವತಿ, ಉದ್ದಿಮೆ ಪರವಾನಿಗೆ ಈಗಾಗಲೇ ಡಿಜಿಟಲ್‌ ವ್ಯವಸ್ಥೆ ಇದೆ. ಸದ್ಯದಲ್ಲಿಯೇ ಆಸ್ತಿತೆರಿಗೆ ಕೂಡ ಆನ್‌ಲೈನ್‌ ಆಗಲಿದ್ದು, ಈಗಾಗಲೇ ಪ್ರತ್ಯೇಕ ಆ್ಯಪ್‌ ರೂಪುಗೊಳ್ಳುತ್ತಿದೆ. ಇನ್ನು, ಪಾಲಿಕೆಯಲ್ಲಿ ಪೇಪರ್‌ಲೆಸ್‌ ವ್ಯವಸ್ಥೆಗೂ ಒತ್ತು ನೀಡಲಾಗುತ್ತಿದೆ. –ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next