Advertisement

ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ ವಿಧಿವಶ

11:54 AM Nov 07, 2020 | keerthan |

ಉಡುಪಿ: ಯಕ್ಷಗಾನ ರಂಗದ ಹಿರಿಯ ಕಲಾವಿದ, ಸಂಘಟಕರಾದ ಮಲ್ಪೆ ವಾಸುದೇವ ಸಾಮಗ ಅವರು ಶನಿವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ.

Advertisement

ಯಕ್ಷಗಾನ ಕ್ಷೇತ್ರದಲ್ಲಿ ತನ್ನ ವಾಕ್ಪಟುತ್ವದಿಂದ ಹೆಸರು ಗಳಿಸಿದ್ದ ವಾಸುದೇವ ಸಾಮಗ (71) ಅವರು ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು. ಅಲ್ಪ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ತೆಂಕು-ಬಡಗು ತಿಟ್ಟಿನ ಸವ್ಯಸಾಚಿ ಕಲಾವಿದರೆಂದು ಗುರುತಿಸಲ್ಪಟ್ಟ ವಾಸುದೇವ ಸಾಮಗರ ತಂದೆ ಮತ್ತು ದೊಡ್ಡಪ್ಪ ಆಗಿನ ಮಹಾನ್‌ ಕಲಾವಿದರು ಮತ್ತು ಹರಿದಾಸರಾದ ಕಾರಣ ಇವರು ಸಹಜವಾಗಿಯೇ ಯಕ್ಷಗಾನದ ಒಲವು ಹೊಂದಿದ್ದರು. ಕೋಟ ಶ್ರೀಧರ ಹಂದೆಯವರ ಒತ್ತಾಸೆಯ ಮೇರೆಗೆ ಪ್ರಥಮ ಬಾರಿಗೆ ದೊಡ್ಡ ಕೂಟದಲ್ಲಿ ಅರ್ಥದಾರಿಯಾಗಿ ಗಮನ ಸೆಳೆದು ಅವರದ್ದೇ ಯಜಮಾನಿಕೆಯ ಅಮೃತೇಶ್ವರಿ ಮೇಳದಲ್ಲಿ ವೃತ್ತಿರಂಗಕ್ಕೆ ಕಾಲಿಟ್ಟರು.

ನಾರಣಪ್ಪ ಉಪ್ಪೂರರ ಒಡನಾಟದದಲ್ಲಿ ಪರಿಪೂರ್ಣ ಕಲಾವಿದರಾಗಿ ಆ ಮೇಳದಲ್ಲಿ ಗುರುತಿಸಿಕೊಂಡರು.ಅಲ್ಲಿ ದೊಡ್ಡ ಸಾಮಗರು, ಚಿಟ್ಟಾಣಿಯವರು, ಕೋಟ ವೈಕುಂಠ, ಎಂ.ಎ.ನಾಯಕ್‌, ನಗರ ಜಗನ್ನಾಥ ಶೆಟ್ಟಿ, ಗೋಡೆ ನಾರಾಯಣ ಹೆಗಡೆಯವರಂತ ಘಟಾನುಘಟಿಗಳ ಸಾಂಗತ್ಯ ದೊರೆಯಿತು. ಆಗ ಪ್ರದರ್ಶನಗೊಳ್ಳುತ್ತಿದ್ದ ಯಕ್ಷಲೋಕ ವಿಜಯ ಪ್ರಸಂಗದ ಪ್ರದೀಪನ ಪಾತ್ರ ಅವರಿಗೆ ಅಪಾರ ಜನಮನ್ನಣೆ ಗಳಿಸಿಕೊಟ್ಟಿತು.

Advertisement

ಧರ್ಮಸ್ಥಳ, ಕದ್ರಿ, ಕರ್ನಾಟಕ ಸುರತ್ಕಲ್‌ ಮೇಳ ಬಳಿಕ ಕಾಳಿಂಗ ನಾವಡರ ಪ್ರಸಿದ್ಧಿಯ ಕಾಲದಲ್ಲಿ ಸಾಲಿಗ್ರಾಮ ಮೇಳ ಸೇರಿದ ಅವರ ಭಾನುತೇಜಸ್ವಿ ಪ್ರಸಂಗದ ಭಾನುತೇಜಸ್ವಿ, ಚೈತ್ರಪಲ್ಲವಿಯ ಪಾತ್ರಗಳು ಪ್ರಸಿದ್ಧಿ ಪಡೆದವು. ನಾಗಶ್ರೀ ಪ್ರಸಂಗ ಶುಬ್ರಾಂಗನ ಪಾತ್ರಕ್ಕೆ ಶಿರಿಯಾರ ಮಂಜು ನಾಯ್ಕರ ನಂತರ ಹೊಸ ರೂಪವನ್ನು ನೀಡಿದ ಇವರು, ಯಕ್ಷಗಾನದಲ್ಲಿ ಪ್ರಥಮ ಬಾರಿಗೆ ಕೋರ್ಟು ಸನ್ನಿವೇಷವನ್ನು ಸೃಷ್ಟಿಸಿ ಹೊಸ ದಾಖಲೆ ಮೂಡಿಸಿದರು. ಪೆರ್ಡೂರು ಮೇಳದಲ್ಲು ಹೊಸ ಪ್ರಸಂಗಗಳಲ್ಲಿ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಮತ್ತು ಇವರ ಜೋಡಿವೇಷಗಳು ಮಾತಿನ ಚಕಮಕಿಯಿಂದ ಹೊಸ ಹೊಸ ಪ್ರೇಕ್ಷಕರನ್ನು ಯಕ್ಷಗಾನದತ್ತ ಸೆಳೆದಿತ್ತು. ಬಳಿಕ ಬಗ್ವಾಡಿ, ಸೌಕೂರು ಮುಂತಾದ ಬಯಲಾಟ ಮೇಳದಲ್ಲಿ ಭಾಗವಹಿಸಿ ಮೇಳದ ಯಜಮಾನಿಕೆಯನ್ನೂ ಮಾಡಿ ಸಿಹಿ ಕಹಿ ಉಂಡವರು.

ಅನೇಕ ಪ್ರಸಂಗಗಳಲ್ಲಿ ನಾಯಕ, ಪ್ರತಿನಾಯಕ, ಹಾಸ್ಯ ಸ್ತ್ರೀವೇಷವನ್ನೂ ನಿರ್ವಹಿಸಿದ್ದಾರೆ. ವಿಭಿನ್ನ ನಿಲುವಿನ ಕೈಕೆ, ದಶರಥ, ದೇವವ್ರತ-ಭೀಷ್ಮ,ಕಂಸ ಕೃಷ್ಣ, ರುಕ್ಮಾಂಗದ-ಮೋಹಿನಿ, ಅಂಬೆ-ಪರಶುರಾಮ, ಮಂಥರೆ ಮುಂತಾದ ಪಾತ್ರಗಳನ್ನು ತನ್ನ ವೈಚಾರಿಕ ನಿಲುವಿನಿಂದ ಸಮರ್ಥಿಸಿಕೊಳ್ಳುವುದರಲ್ಲಿ ನಿಸ್ಸೀಮರು. ಉತ್ತರ ಕುಮಾರ ಅವರಿಗೆ ಆಟ ಕೂಟದಲ್ಲಿ ಅಪಾರ ಮನ್ನಣೆ ತಂದುಕೊಟ್ಟ ಪಾತ್ರ.

ಸಂಯಮಂ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ತನ್ನ ಧ್ಯೇಯ ಧೋರಣೆಯಂತೆ ಸಮಯ ಮಿತಿಯ ತಾಳಮದ್ದಳೆ ಕಾರ್ಯಕ್ರಮಗಳನ್ನು ನಡೆಸಿಕೊಳ್ಳುತ್ತಾ ತಾಳಮದ್ದಳೆಗೆ ಹೊಸ ರೂಪ, ಹೊಸ ಶಿಸ್ತನ್ನು ತಂದಿತ್ತ ಸಾಹಸಿ ವಾಸುದೇವ ಸಾಮಗರು.

Advertisement

Udayavani is now on Telegram. Click here to join our channel and stay updated with the latest news.

Next