Advertisement

Mangaluru ಕಲಾಸೇವೆಯ ಹಿರಿಯ ನಾಟ್ಯಾಚಾರ್ಯ ಪ್ರೇಮನಾಥ್‌

11:54 PM Oct 13, 2023 | Team Udayavani |

ಮಂಗಳೂರು: ಕರಾವಳಿಯಲ್ಲಿ ಭರತನಾಟ್ಯದಲ್ಲಿ ಸುದೀರ್ಘ‌ ಕಲಾಸೇವೆ ಹಾಗೂ ಅನನ್ಯ ಸಾಧನೆಗಳನ್ನು ಮೆರೆದು ಕಣ್ಮರೆಯಾದವರು ಕರ್ನಾಟಕ ಕಲಾಶ್ರೀ ನಾಟ್ಯಾಚಾರ್ಯ ಗುರು ಬಿ. ಪ್ರೇಮನಾಥ್‌.

Advertisement

1936ರ ಜ.1ರಂದು ಮಂಗಳೂರಿನ ಉರ್ವದಲ್ಲಿ ಜನಿಸಿದ ಅವರು ಆರಂಭ ದಲ್ಲಿ ಮಾಸ್ಟರ್‌ ವಿಟ್ಠಲ್‌ ಅವರಲ್ಲಿ ಭರತ ನಾಟ್ಯ ಅಭ್ಯಾಸ ಮಾಡಿದ್ದರು. ಕಮಲಾ ಲಕ್ಷ್ಮಣ್‌ ಅವರ ಭರತನಾಟ್ಯ ಪ್ರದರ್ಶನ ವೀಕ್ಷಿಸಿದ ಅವರಿಗೆ ಅದು ಮನಸ್ಸಿನಲ್ಲಿ ಅಚ್ಚೊತ್ತಿತು.

ಹೆಚ್ಚಿನ ಸಾಧನೆಗಾಗಿ ಕೇರಳದ ತ್ರಿಪುಣಿತುರೈ ಶ್ಯಾಡೋ ಗೋಪಿನಾಥರ ಬಳಿ ಅಭ್ಯಾಸಕ್ಕೆ ತೆರಳಿದರು. ಆದರೆ ಅದು ಕಥಕ್ಕಳಿ ತರಬೇತಿಯಾಗಿತ್ತು. ಆದರೆ ಅಲ್ಲೇ ಶ್ಯಾಡೋ ಅವರ ಮಿತ್ರ ಗುರು ರಾಜರತ್ನಂ ಪಿಳ್ಳೈ ಅವರ ಭರತನಾಟ್ಯ ಸಂಯೋಜನೆಯನ್ನು ಕಂಡರು. ತಾನು ಅರಸುತ್ತ ಬಂದ ನೃತ್ಯ ಪ್ರಕಾರ ಇದೇ ಎಂದು ಅರಿವಾಯಿತು.

ಗೋಪಿನಾಥರಲ್ಲಿ ಅವರು ಮನದ ಹಂಬಲವನ್ನು ತಿಳಿಸಿದರು. ಅವರ ಶಿಫಾರಸಿನಂತೆ ಕೇರಳದ ಶೋರ್ನೂರಿನಲ್ಲಿ ಇರುವ ರಾಜರತ್ನಂ ಪಿಳ್ಳೈ ಅವರ ಮನೆಗೆ ತೆರಳಿ ಗುರುಶಿಷ್ಯ ಪರಂಪರೆಯಲ್ಲಿ ನೃತ್ಯಾ ಭ್ಯಾಸ ಪ್ರಾರಂಭಿಸಿದರು.

ಹೀಗೆ ಆರಂಭವಾದ ಕಠಿನ ಅಭ್ಯಾಸವನ್ನು ಗುರುಗಳು ಮಂಗಳೂರಿನ ಶಿಷ್ಯನ ಮನೆಗೂ ಬಂದು ಮುಂದುವರಿಸಿದರು. ಹೀಗೆ ಪಂದನಲ್ಲೂರು ಶೈಲಿಯ ಭರತನಾಟ್ಯ ಅಭ್ಯಾಸವನ್ನು ಹಲವು ವರ್ಷಗಳ ಕಠಿನ ಪರಿಶ್ರಮದಿಂದ ಕರಗತ ಮಾಡಿಕೊಂಡರು. ಪಂದನಲ್ಲೂರು ಪಾಣಿ ಹಾಗೂ ಗುರು ರಾಜರತ್ನಂ ಪಿಳ್ಳೈ ಅವರು ಮಂಗಳೂರಿಗೆ ಪರಿಚಯಿಸಲ್ಪಟ್ಟರು.

Advertisement

1954ರಿಂದ ಭರತನಾಟ್ಯ ಕಲಾ ಶಿಕ್ಷಕರಾಗಿ ಜೀವನ ಆರಂಭಿಸಿದ ಅವರು 1961ರಲ್ಲಿ ಗುರುಗಳ ಶಾಲೆಯ ಹೆಸರಿನಲ್ಲೇ ಲಲಿತ ಕಲಾ ಸದನ ಎಂಬ ನೃತ್ಯ ಸಂಗೀತ ತಾಳವಾದ್ಯಗಳ ವಿದ್ಯಾಲಯ ಆರಂಭಿಸಿದರು. ಬಿಎ ಬಿಎಡ್‌ ಪದವೀಧರರಾಗಿದ್ದ ಪ್ರೇಮನಾಥರು 1954ರಿಂದ 1994ರ ವರೆಗೆ ಸಂತ ಅಲೋಶಿಯಸ್‌ ಪ್ರೌಢಶಾಲೆ ಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಪತ್ನಿ ವನಜಾಕ್ಷಿ ಅವರು ಲಲಿತ ಕಲಾಸದನಕ್ಕೆ ಅಮೂಲ್ಯ ಸೇವೆ ನೀಡಿದ್ದಾರೆ. ಮಕ್ಕಳಾದ ವಿದ್ವಾನ್‌ ಸುದರ್ಶನ್‌, ವೃತ್ತಿಯಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿದ್ದರೂ, ತಂದೆ ಸ್ಥಾಪಿಸಿರುವ ಸಂಸ್ಥೆಯಲ್ಲಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ಪುತ್ರಿಯರಾದ ನಯನಾ ಸತ್ಯನಾರಾಯಣ್‌ ಮತ್ತು ವಿದುಷಿ ಪ್ರತಿಮಾ ಅವರು ನೃತ್ಯದಲ್ಲಿ ವಿದ್ವತ್‌ ಪದವೀಧರೆಯರು ಮತ್ತು ನೃತ್ಯ ಶಿಕ್ಷಕಿಯರು.

1997ರಲ್ಲಿ ಶೃಂಗೇರಿ ಮಹಾ ಸಂಸ್ಥಾನದಿಂದ “ನೃತ್ಯ ಕಲಾಸಾಗರ’ ಬಿರುದು, 1998ರಲ್ಲಿ ಮೈಸೂರಿನ ನೃತ್ಯ ಕಲಾ ಪರಿಷತ್‌ನ “ನೃತ್ಯ ವಿದ್ಯಾನಿಧಿ’, 2001ರ ಅಖಿಲ ಭಾರತ ನೃತ್ಯ ಸಮಾವೇಶದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯರಿಂದ “ನೃತ್ಯ ಕಲಾ ಪ್ರಭಾಕರ’ ಬಿರುದು ಪಡೆದಿದ್ದರು. 2003ರಲ್ಲಿ “ಕರ್ನಾಟಕ ಕಲಾಶ್ರೀ’ ಬಿರುದು ಗೌರವ ಪ್ರಶಸ್ತಿ ನೀಡಿದೆ. 2004ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು. 2023ರ ಅ. 1ರಂದು ತಮ್ಮ 87ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next