Advertisement

ಕೋವಿಡ್ 19 ವೈರಸ್ ತಡೆಗೆ ಪಣ; ಜನಪರ ಸೇವೆ ಅನಾವರಣ..

05:55 AM May 02, 2020 | Hari Prasad |

ಚಿತ್ರದುರ್ಗ: ಕೋವಿಡ್ 19 ವೈರಸ್ ಎಂಬ ಮಹಾಮಾರಿ ತನ್ನ ಕಬಂಧ ಬಾಹುಗಳನ್ನು ಜಗತ್ತಿನೆಲ್ಲೆಡೆ ನಿಧಾನವಾಗಿ ಚಾಚುತ್ತಿತ್ತು. ಸಾಕಷ್ಟು ಜನರಿಗೆ ಈ ಬಗ್ಗೆ ಸರಿಯಾದ ಮಾಹಿತಿಯೂ ಇರಲಿಲ್ಲ.

Advertisement

ಕೆಲವರು ಇದೇನು ಮಹಾರೋಗ ಎಂಬ ತಾತ್ಸಾರ ಮನೋಭಾವ ಪ್ರದರ್ಶಿಸುತ್ತಿದ್ದ ಸಂದರ್ಭ. ಆದರೆ ಇದರ ಅಪಾಯದ ಮುನ್ಸೂಚನೆ ಅರಿತ ಚಿತ್ರದುರ್ಗದ ಹಿರಿಯ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಕೋವಿಡ್‌-19 ಬಗ್ಗೆ ಆಳ ಅಗಲದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಜನರಲ್ಲಿ ಜಾಗೃತಿ ಮೂಡಿಸಲು ಪ್ರಾರಂಭಿಸಿದರು.

ಪ್ರತಿ ದಿನ ತಮ್ಮ ಭೇಟಿಗಾಗಿ ಬರುತ್ತಿದ್ದ ಕ್ಷೇತ್ರದ ಜನರನ್ನು ಇನ್ನು ಮನೆ ಬಳಿ ಬರಬೇಡಿ. ಏನೇ ಸಂಕಷ್ಟ ಇದ್ದರೂ ಫೋನ್‌ ಮಾಡಿ ತಿಳಿಸಿ. ನಾನು ಇಲ್ಲಿ ಕುಳಿತೇ ಬಗೆಹರಿಸುತ್ತೇನೆ ಎಂದು ಅಭಯ ನೀಡಿದ್ದರು.

ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅವರ ಕಾಳಜಿ ಯಾವ ಪ್ರಮಾಣದಲ್ಲಿ ಇತ್ತು ಅಂದರೆ ಕೋವಿಡ್ 19 ವೈರಸ್ ಕುರಿತು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಅವರು ತಿಂಗಳ ಹಿಂದೆ ಸುದ್ದಿಗೋಷ್ಠಿ ಕರೆದಿದ್ದಾಗ ಏಕಾಏಕಿ ಅಲ್ಲಿಗೆ ಆಗಮಿಸಿದ ಶಾಸಕರು, ಕೋವಿಡ್ 19 ವೈರಸ್ ವ್ಯಾಪಿಸದಂತೆ ಏನೇನು ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸಲಹೆ ನೀಡಿದ್ದರು.

ಅಲ್ಲದೆ ಮಾಸ್ಕ್, ಸ್ಯಾನಿಟೈಸರ್‌, ಪಿಪಿಇ ಕಿಟ್‌ ಬಗ್ಗೆ ಮಾತನಾಡತೊಡಗಿದ್ದರು. ಜಿಲ್ಲೆಗೆ ವೆಂಟಿಲೇಟರ್‌ ಬೇಕು ಎಂಬ ಬೇಡಿಕೆಯನ್ನು ಆಗಲೇ ಮುಂದಿಟ್ಟಿದ್ದರು. ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಕೋವಿಡ್ 19 ವೈರಸ್ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಮಾರ್ಗೋಪಾಯಗಳ ಬಗ್ಗೆ ಖುದ್ದಾಗಿ ತಮ್ಮ ಪುತ್ರ ಡಾ| ಸಿದ್ಧಾರ್ಥ್ ಗುಂಡಾರ್ಪಿ ಜತೆಗೆ ಚರ್ಚಿಸಿ ಜಿಲ್ಲೆಯ ಜನರನ್ನು ಎಚ್ಚರಿಸುವ ಕೆಲಸ ಆರಂಭಿಸಿದ್ದರು.


ಚಿತ್ರದುರ್ಗ: ಪೌರಕಾರ್ಮಿಕರಿಗೆ ಆಹಾರ ಕಿಟ್‌ ವಿತರಣೆ ಮಾಡಿದ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ.

Advertisement

ಜಿಲ್ಲಾ ಕೇಂದ್ರದಲ್ಲಿರುವ ಶಾಸಕರಿಗೆ ಸಾಮಾನ್ಯವಾಗಿ ಹೆಚ್ಚು ಜವಾಬ್ದಾರಿ ಇರುತ್ತದೆ. ಜತೆಗೆ ಜಿಲ್ಲೆಯ ಹಿರಿಯ ಶಾಸಕರೂ ಆಗಿರುವ ಜಿ.ಎಚ್‌. ತಿಪ್ಪಾರೆಡ್ಡಿ ಅವರು, ಎಲ್ಲರಿಗಿಂತ ಮೊದಲು ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಕಮ್ಮಾರೆಡ್ಡಿ ಜನಸಂಘ ಹಾಗೂ ಶಾಸಕರ ನಿಧಿಯಿಂದ ದೇಣಿಗೆ ನೀಡಿದ್ದರು. ಜತೆಗೆ ವಿಶ್ವ ಹಿಂದೂ ಪರಿಷತ್‌ ಹಾಗೂ ವೀರಮದಕರಿ ಟ್ರಸ್ಟ್‌ ಮೂಲಕ ಕೋವಿಡ್ ವಾರ್‌ ರೂಂ ಸ್ಥಾಪನೆಗೂ ಹಣಕಾಸಿನ ನೆರವು ನೀಡಿ ಬಡವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದರು.


ಚಿತ್ರದುರ್ಗ: ಪೊಲೀಸರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್‌ ವಿತರಿಸಿದ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ.

22 ಲಕ್ಷ ರೂ. ದೇಣಿಗೆ
ಕೋವಿಡ್ 19 ವೈರಸ್ ವಿರುದ್ಧ ಸೆಣಸುತ್ತಿರುವವರಿಗೆ ಸ್ಪಂದಿಸುವ ನಿಟ್ಟಿನಲ್ಲಿ ವಿವಿಧ ರೂಪದಲ್ಲಿ 22 ಲಕ್ಷ ರೂ.ಗಳನ್ನು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಮ್ಮಾ ರೆಡ್ಡಿ ಜನಸಂಘದ ಮೂಲಕ 5 ಲಕ್ಷ ರೂ. ಹಾಗೂ ವಿಶ್ವಹಿಂದೂ ಪರಿಷತ್‌ ಹಾಗೂ ಬಜರಂಗದಳದ ನೇತೃತ್ವದಲ್ಲಿ ಕೈಗೊಳ್ಳಲಿರುವ ಸೇವಾ ಚಟುವಟಿಕೆಗಳಿಗೆ 2 ಲಕ್ಷ ರೂ., ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರು, ಪತ್ರಕರ್ತರು ಸೇರಿದಂತೆ ಅನೇಕರಿಗೆ ಸ್ಯಾನಿಟೈಸರ್‌, ಗ್ಲೌಸ್‌, ಮಾಸ್ಕ್ ಮತ್ತಿತರೆ ಆರೋಗ್ಯ ಪರಿಕರಗಳನ್ನು ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಿ ವಿತರಿಸುವ ಮೂಲಕ ಆಪತ್ತಿನಲ್ಲಿ ಜನರೊಂದಿಗೆ ನಾವಿದ್ದೇವೆ ಎಂಬ ಸಂದೇಶ ಸಾರಿದರು.

ರೆಡ್ಡಿ ಜನಸಂಘದಿಂದ 12 ಲಕ್ಷ ರೂ. ಹಾಗೂ ಶಾಸಕರ ನಿಧಿ ಯಿಂದ 10 ಲಕ್ಷ ಸೇರಿ ಒಟ್ಟು 22 ಲಕ್ಷ ರೂ. ನೆರವು ನೀಡಿರುವ ಅವರು, ಮುಖ್ಯಮಂತ್ರಿ ಪರಿಹಾರ ನಿಧಿಗೆ ಶಾಸಕರ ನಿಧಿಯಿಂದಲೂ ಹತ್ತು ಲಕ್ಷ ರೂ. ಕೊಡುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಚಿತ್ರದುರ್ಗ ಕ್ಷೇತ್ರದ ಜನತೆಯ ಯೋಗಕ್ಷೇಮ ಹಾಗೂ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶಾಸಕರು ಅಹರ್ನಿಶಿ ಶ್ರಮಿಸುತ್ತಿದ್ದಾರೆ.

ಸೋಂಕು ನಿವಾರಕ ಮಾರ್ಗ


ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಸಾರ್ವಜನಿಕರಿಗಾಗಿ ಸೋಂಕು ತಡೆ ಮಾರ್ಗಗಳನ್ನು ನಿರ್ಮಿಸಿ ಕೋವಿಡ್ 19 ವೈರಸ್ ಸೋಂಕು ಹರಡದಂತೆ ತಡೆಯುವ ಪ್ರಯತ್ನ ಮಾಡಲಾಗಿತ್ತು. ಈ ಪ್ರಯತ್ನ ದೆಹಲಿ, ತಮಿಳುನಾಡು ಮೈಸೂರು ಜಿಲ್ಲೆಗಳಲ್ಲಿ ಮೊದಲು ಪ್ರಯೋಗಕ್ಕೆ ಬಂದಿತ್ತು. ತಕ್ಷಣ ಚಿತ್ರದುರ್ಗ ಜಿಲ್ಲೆಯಲ್ಲೂ ಇದನ್ನು ನಿರ್ಮಿಸಿ ಜಯದೇವ ಕ್ರೀಡಾಂಗಣದಲ್ಲಿ ನಡೆಯುವ ಮಾರುಕಟ್ಟೆ ಪ್ರದೇಶದಲ್ಲಿ ಅಳವಡಿಸುವಲ್ಲಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅವರ ಪಾತ್ರ ದೊಡ್ಡದು.

ತಂದೆಗೆ ಮಗನೇ ಸಾರಥಿ
ಕೋವಿಡ್‌-19 ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಸಾಮಾಜಿಕ ಅಂತರದ ಬಗ್ಗೆ ಹೆಚ್ಚು ಒತ್ತು ನೀಡಲಾಯಿತು. ಈ ವೇಳೆ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಎಲ್ಲ ಕಡೆ ತಮ್ಮ ಚಾಲಕರನ್ನು ಅವಲಂಬಿಸದೆ ಪುತ್ರ ಡಾ| ಸಿದ್ಧಾರ್ಥ್ ಅವರ ಜತೆಗೆ ಆಗಮಿಸುತ್ತಿದ್ದರು. ಸಿದ್ಧಾರ್ಥ್ ಕಾರು ಚಾಲನೆ ಮಾಡಿದರೆ, ಶಾಸಕರು ಪಕ್ಕದಲ್ಲಿ ಕುಳಿತಿರುತ್ತಿದ್ದರು.

ಉತ್ತರಪ್ರದೇಶ ಕಾರ್ಮಿಕರಿಗೆ ನೆರವು


ನಗರದ ದಾವಣಗೆರೆ ರಸ್ತೆಯಲ್ಲಿಯಲ್ಲಿರುವ ಜೆಎಂಐಟಿ ವೃತ್ತದ ಬಳಿ ಉತ್ತರಪ್ರದೇಶದಿಂದ ಬಂದು ಟೆಂಟ್‌ಗಳಲ್ಲಿ ವಾಸ ಮಾಡುತ್ತಿರುವ ಜನರಿಗೆ ಕೋವಿಡ್ 19 ವೈರಸ್ ಲಾಕ್‌ಡೌನ್‌ ಸಂಕಷ್ಟ ಬಾಧಿಸದಿರಲಿ ಎಂದು ಮಾನವೀಯತೆಯಿಂದ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಆಹಾರ ಸಾಮಗ್ರಿ ವಿತರಿಸಿದರು. ಸುಮಾರು 150 ಮಂದಿಯಿದ್ದ ಈ ಗುಂಪಿಗೆ ಶಾಸಕರು ಸರ್ಕಾರದ ಪಡಿತರವನ್ನೂ ಕೊಡಿಸಿದರು. ಕ್ಷೇತ್ರದಲ್ಲಿ ಯಾರು ಕೂಡಾ ಉಪವಾಸ ಇರಬಾರದು. ಈ ನಿಟ್ಟಿನಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದರು.


ಚಿತ್ರದುರ್ಗ: ಪೌರಕಾರ್ಮಿಕರಿಗೆ ಮೊಟ್ಟೆ ವಿತರಣೆ ಮಾಡಿದ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ.


ಚಿತ್ರದುರ್ಗ: ಕೋವಿಡ್ ವಾರಿಯರ್ಸ್ ಗೆ ಕುಟುಂಬದ ಜತೆಗೂಡಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ
ಶಾಸಕರು.


ಚಿತ್ರದುರ್ಗ: ಕೋವಿಡ್ ವಿರುದ್ಧ ಹೋರಾಡುವಲ್ಲಿ ಇಡೀ ದೇಶ ಒಟ್ಟಾಗಿದೆ ಎಂಬ ಸಂದೇಶ ಸಾರಿ ದೀಪ ಬೆಳಗಿಸುವ ಅಭಿಯಾನದಲ್ಲಿ ಭಾಗಿಯಾದ ಶಾಸಕರು.

 

Advertisement

Udayavani is now on Telegram. Click here to join our channel and stay updated with the latest news.

Next