Advertisement

Shanta Nagaraj: ಶಾಂತಾ ಆಪ್ತ ಸಮಾಲೋಚನೆ

04:25 PM Nov 19, 2023 | Team Udayavani |

ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಹಿರಿಯ ಲೇಖಕಿ ಮತ್ತು ಆಪ್ತ ಸಮಾಲೋಚಕಿ  ಶಾಂತಾ ನಾಗರಾಜ್‌. ಪ್ರಸ್ತುತ ಸಂಘಟಕಿಯಾಗಿ, ಲೇಖಕಿಯಾಗಿ ಶಾಂತಾ ನಾಗರಾಜ್‌, ತಮ್ಮ ಬದುಕಿನ ಕೆಲವು ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

Advertisement

ಲೇಖಕಿಯಾಗಿಯೂ, ಸಂಘಟಕರಾಗಿಯೂ ನೀವು ಪ್ರಸಿದ್ದರು. ಬಹುಮುಖೀ ಪ್ರತಿಭೆಯ ನೀವು ಯಾವ ಕ್ಷೇತ್ರದಲ್ಲಿ ಹೆಚ್ಚಾಗಿ ಗುರುತಿಸಬೇಕೆಂದು ಬಯಸುವಿರಿ?

ಯಾವ ಕ್ಷೇತ್ರದಲ್ಲಿ ಜನ ನಮ್ಮನ್ನು ಗುರುತಿಸಬೇಕು ಎಂದು ಬಯಸುವುದು ನಮ್ಮ ಆಯ್ಕೆಯಾಗುವುದಿಲ್ಲ. ಯಾವ ಕ್ಷೇತ್ರದಲ್ಲಿ ವ್ಯಕ್ತಿ ಹೆಚ್ಚು ತೊಡಗಿಕೊಂಡು ಫ‌ಲಪ್ರದವಾಗುವಂತೆ ಕೆಲಸ ಮಾಡುತ್ತಾನೋ, ಆ ಕ್ಷೇತ್ರ ಅಂಥವರನ್ನು ಗುರುತಿಸುತ್ತದೆ. ನನ್ನನ್ನು ಜನ ಆಪ್ತ ಸಲಹಾ ಆಧಾರದ ಮೇಲೆ ಬರೆದ ಕಾಲಂಗಳು ಮತ್ತು ಪುಸ್ತಕಗಳಿಂದ ಗುರುತಿಸುತ್ತಾರೆ.

ಲೇಖಕಿಯ ಸಂಘದ ಕಾರ್ಯದರ್ಶಿಯಾಗಿ ಹೊಸ ಬರಹಗಾರ್ತಿಯರನ್ನು ಬೆಳೆಸಲು ಯಾವ ಯಾವ ಯೋಜನೆಗಳನ್ನು ಹಾಕಿಕೊಂಡಿದ್ದಿರಿ?

ಲೇಖಕಿಯರ ಸಂಘದ ಪ್ರಾರಂಭಿಕ ಹಂತಗಳಲ್ಲಿ ಹದಿನಾರು ವರ್ಷ ಕೆಲಸ ಮಾಡಿದ ನಮಗೆಲ್ಲಾ ಕರ್ನಾಟಕದ ತುಂಬೆಲ್ಲಾ ಚದುರಿ ಹೋಗಿದ್ದ ಪ್ರಸಿದ್ಧ ಮತ್ತು ಉದಯೋನ್ಮುಖ ಲೇಖಕಿಯರನ್ನು ಒಂದು ವೇದಿಕೆಯಡಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡುವುದೇ ಸವಾಲಾಗಿತ್ತು. ನಂತರ ಕಥಾ ಶಿಬಿರ, ಕಾವ್ಯ ಶಿಬಿರ, ನಾಟಕ ಶಿಬಿರ, ರೇಡಿಯೋ ನಾಟಕ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡೆವು. ನಮ್ಮ ಕಾಲದಲ್ಲಿ ನಡೆದ ಸಮ್ಮೇಳನಗಳೂ ಸಾಕಷ್ಟು ಹೊಸ ಬರಹಗಾರ್ತಿಯರನ್ನು ಒಳಗೊಳ್ಳುತ್ತಿತ್ತು.

Advertisement

ನೀವು ಹಾಕಿಕೊಂಡ ಯೋಜನೆಗಳನ್ನು ಮುಂದಿನವರು ಬೆಳೆಸಲಿಲ್ಲ ಎನ್ನುವ ಕೊರಗು ನಿಮಗಿದೆಯೆ?

ಖಂಡಿತಾ ಇಲ್ಲ. ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟು ನಮ್ಮ ಕುರ್ಚಿಗಳನ್ನು ಬಿಟ್ಟು ನಿರ್ಗಮಿಸಿದೆವು. ಮುಂದಿನವರು ತಮ್ಮ ಶೈಲಿಯಲ್ಲಿ ಸಂಘವನ್ನು ಮುನ್ನಡಿಸಿದರು. ಆದ್ದರಿಂದಲೇ ಇಂದಿಗೂ ಸಂಘ ಕಾರ್ಯೋನ್ಮುಖವಾಗಿದೆ.

ನೀವು ನಿಟ್ಟಿಂಗ್‌ ಗೊಂಬೆಯ ತಯಾರಿ, ನಾಟಕ ಶಿಬಿರ ಇತ್ಯಾದಿಗಳಲ್ಲಿ ತೊಡಗಿಸಿಕೊಂಡ ಕಾರಣದಿಂದ ಹೆಚ್ಚು ಬರೆಯಲಾಗಲಿಲ್ಲ ಎನ್ನಿಸುತ್ತದೆಯೆ?

ಹಾಗೇನಿಲ್ಲ. ನನ್ನ ಸಾಹಿತ್ಯೇತರ ಚಟುವಟಿಕೆ­ಗಳೂ ನನ್ನ ಬರವಣಿಗೆಗೆ ವೈವಿಧ್ಯವನ್ನೇ ತಂದುಕೊಟ್ಟಿದೆ. ನನ್ನ ಪಟ್ಟದ ಗೊಂಬೆಯೂ ಪರದೇಶವೂ ಕಥೆಯಲ್ಲಿ (ಇದು ಮಂಗಳೂರು ವಿ.ವಿ.ಯ ಪಠ್ಯದಲ್ಲಿ ಸೇರಿತ್ತು) ನವರಾತ್ರಿಯ ಗೊಂಬೆಯನ್ನು ಬದುಕಿಗೆ ಸಮೀಕರಿಸಿದ್ದೇನೆ.

ಎಂ. ವೈ ಘೋರ್ಪಡೆಯಂಥವರ ಕೃತಿಗಳನ್ನು ಅನುವಾದಿಸುವಾಗ ಆದ ವಿಶೇಷ ಅನುಭವಗಳೇನು?

ಅದೊಂದು ನನ್ನ ಬದುಕಿನ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಕಾಲಮಾನ. ರಾಜವಂಶಸ್ಥರಾದ ಮಹಾನ್‌ ವ್ಯಕ್ತಿಯ ಜೊತೆಗಿನ ಒಡನಾಟ ಬರೆದಿಡಲು ಭಾಷೆಗೆ ಸಿಲುಕದಷ್ಟು ಭಾವಪೂರ್ಣವಾಗಿತ್ತು. ಒಬ್ಬ ಅಪೂರ್ವ ಸಂತನ ಮತ್ತು ಮೇಧಾವಿಯ ದರ್ಶನವಾಯಿತು.

ಇವತ್ತಿನ ಸಾಮಾಜಿಕ ಬದುಕಿನ ತಲ್ಲಣಗಳಿಗೆ ಮಾನಸಿಕ ಶಿಕ್ಷಣ ಆರೈಕೆ ಇಲ್ಲದಿರುವುದೇ ಕಾರಣ ಎನಿಸುತ್ತದೆಯೆ?

ಖಂಡಿತಾ ಹೌದು. ಈ ಇಪ್ಪತ್ತೇಳು ವರ್ಷಗಳಿಂದ ನಾನು ಆಪ್ತ ಸಲಹಾ ಕ್ಷೇತ್ರದಲ್ಲಿ ತೊಡಗಿಕೊಂಡು, ಗಮನಿಸುತ್ತಿರುವು­ದೇನೆಂದರೆ ಕುಟುಂಬದಲ್ಲಿ ಕಳಚುತ್ತಿರುವ ಭರವಸೆಯ ನಂಬಿಕೆಗಳು. ಎಲ್ಲರೂ ಸುಲಭ ಸುಖದ ಹಿಂದೆ ಬಿದ್ದು ಹಣಗಳಿಸುವುದೇ ಬದುಕಿನ ಏಕೈಕ ಗುರಿಯೆಂದು ಭಾವಿಸಿರು­ವುದರಿಂದ ಇವತ್ತು ಮಕ್ಕಳು ಇನ್ನಿಲ್ಲದಂತೆ ಗೊಂದಲದ ಬಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಬಾಲ್ಯದ ಸುಖವನ್ನೇ ಕಳೆದುಕೊಳ್ಳುತ್ತಿದ್ದಾರೆ. ಮದುವೆ ಎನ್ನುವ ಸಂಸ್ಥೆ ಕಗ್ಗಂಟಾಗುತ್ತಿದೆ. ಶಿಕ್ಷಣ ವ್ಯವಸ್ಥೆ ಯಾಂತ್ರಿಕವೂ ಒತ್ತಡ ಪೂರ್ಣವೂ ಆಗುತ್ತಿದೆ. ಇದಕ್ಕೆ ಮನಃಶಾಸ್ತ್ರವನ್ನು ಶಾಲೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಕಲಿಸಿ, ಜೀವನ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಮಾಡುವ ಅಗತ್ಯವಿದೆ.

ಮಕ್ಕಳಿಗೆ ಇವತ್ತು ಯಾವ ರೀತಿಯ ಪುಸ್ತಕಗಳುಬೇಕು?

ಮೊದಲು ಮಕ್ಕಳನ್ನು ಕನ್ನಡದ ಓದಿಗೆ ಪರಿಚಯಿ­ಸಬೇಕು. ಮಕ್ಕಳ ವಯಸ್ಸಿಗೆ ಹಿತವೂ, ಆಹ್ಲಾದಕರವೂ, ಆದ ಸಚಿತ್ರ ಲೇಖನಗಳ ಪುಸ್ತಕವಿದ್ದರೆ ಒಳ್ಳೆಯದು. ಚಿಕ್ಕಚಿಕ್ಕ ಕಥೆಗಳು ಚೇತೋಹಾರಿಯಾಗಿರಬೇಕು. ನೀತಿಯನ್ನು ವಿಪರೀತ ಹೇರಬಾರದು.

ನಿಮ್ಮ ಕೆಲಸಗಳನ್ನು ಸಹಕಾರ ಸಂಘ-ಸಂಸ್ಥೆಗಳು ಹೆಚ್ಚು ಗುರುತಿಸಿಲ್ಲ ಎಂಬ ಅಭಿಪ್ರಾಯ ಯಾವತ್ತಾದರೂ ನಿಮ್ಮ ಮನಸ್ಸಿಗೆ ಬಂದಿದೆಯೆ?

ನನಗೇನೂ ಆ ಕೊರತೆಯಿಲ್ಲ. ನನ್ನ ಬರವಣಿಗೆ ತಕ್ಕಷ್ಟು ಮನ್ನಣೆ ನನಗೆ ಸಿಕ್ಕಿದೆ. ಅದರಿಂದ ನನಗೆ ತೃಪ್ತಿಯೂ ಇದೆ.

ಕಲೆಯ ಬಹುಮುಖಿ ಪ್ರಯೋಗಗಳಲ್ಲಿ ತೊಡಗಿಸಿಕೊಂಡ ನೀವು ಕಾಲದ ಯುವತಿಯರಿಗೆ ನೀಡುವ ಸಂದೇಶಏನು?

ಯುವತಿಯರಿಗೆ ಸಂದೇಶ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಕಾಲೇಜುಗಳಲ್ಲಿ ಜೀವನ ಕೌಶಲ್ಯಗಳ ಶಿಬಿರಗಳನ್ನು ಮಾಡುವಾಗ ಇಂದಿನ ಯುವ ಜನತೆ ನಮಗಿಂತಾ ಬಹಳ ಚುರುಕಾಗಿ ಮತ್ತು ನಿಖರವಾಗಿ ಯಾವುದೇ ಹಿಂಜರಿಕೆಯಿಲ್ಲದೇ ಅಭಿಪ್ರಾಯಗಳನ್ನು ಮಂಡಿ­ ಸುವುದನ್ನು ನೋಡಿದ್ದೇನೆ. ನಮ್ಮ ಮುಂದಿನ ಪೀಳಿಗೆ ಖಂಡಿತಾ ಕನ್ನಡವನ್ನು ಉಳಿಸಿ ಬೆಳೆಸುತ್ತದೆ ಎನ್ನುವ ನಂಬಿಕೆ ನನಗಿದೆ.

-ವಾರದ ಅತಿಥಿ:  ಶಾಂತಾ ನಾಗರಾಜ್‌, ಸಂದರ್ಶನ: ಪಿ. ಚಂದ್ರಿಕಾ 

Advertisement

Udayavani is now on Telegram. Click here to join our channel and stay updated with the latest news.

Next