Advertisement

ಹೈನುಗಾರಿಕೆಯಿಂದ ಸ್ವಾವಲಂಬನೆ: ಕೆ.ಎಂ.ಶಿವಲಿಂಗೇಗೌಡ

09:38 PM Nov 12, 2019 | Team Udayavani |

ಅರಸೀಕೆರೆ: ತಾಲೂಕಿನಲ್ಲಿ ಉತ್ತಮ ಮಳೆ ಬೆಳೆ ಇಲ್ಲದೇ ತೀವ್ರ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವ ರೈತರು ಗೋವುಗಳ ಸಾಕಾಣಿಕೆಯಿಂದ ಸ್ವಉದ್ಯೋಗ ಕಲ್ಪಿಸಿಕೊಳ್ಳುವ ಜೊತೆಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.

Advertisement

ನಗರದ ಹುಳಿಯಾರು ರಸ್ತೆಯ ವೃತ್ತದಲ್ಲಿ ಮತ್ತು ಪ್ರವಾಸಿ ಮಂದಿರದ ಮುಂಭಾಗ ಹಾಗೂ ಹಾಸನ ರಸ್ತೆಯಲ್ಲಿ ನಂದಿನಿ ಹಾಲಿನ ಮಾರಾಟ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಉತ್ತಮ ಮಳೆ, ಬೆಳೆಯಿಲ್ಲದೇ ಬರಗಾಲ ಪೀಡಿತ ಪ್ರದೇಶವಾಗಿರುವ ಕಾರಣ ಕೃಷಿಗೆ ಪೂರಕವಾದ ಗೋವುಗಳ ಸಾಕಾಣಿಕೆಯನ್ನು ರೈತರು ಸೇರಿದಂತೆ ಅನೇಕರು ಕೈಗೊಂಡಿರುವ ಕಾರಣ ಲಕ್ಷಾಂತರ ಜನರ ಜೀವನಕ್ಕೆ ಉತ್ತಮ ದಾರಿಯಾಗಿದೆ ಇಂತಹ ಉದ್ಯಮವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳ ಮೂಲಕ ಉತ್ತೇಜನ ನೀಡುತ್ತಿವೆ ಎಂದರು.

ಗ್ರಾಮೀಣ ಜನರ ಬದುಕನ್ನು ಹಸನು ಮಾಡುವ ಜೊತೆಗೆ ದೇಶದ ಆರ್ಥಿಕತೆ ಉತ್ತಮಗೊಳಿಸಿ ನಿರುದ್ಯೋಗ ಸಮಸ್ಯೆಯನ್ನು ದೂರ ಮಾಡುವ ಹೈನುಗಾರಿಕೆಗೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಹೈನುಗಾರಿಕೆ ರೈತರಿಗೆ ವರದಾನ: ತಾಲೂಕಿನ ರೈತರಿಗೆ ಗೋವುಗಳ ಸಾಕಾಣಿಕೆ ಹಾಗೂ ಹೈನುಗಾರಿಕೆ ವರವಾಗಿದೆ. ಕಷ್ಟಪಟ್ಟು ಸಾಕುತ್ತಿರುವ ಗೋವುಗಳು ಬಡ ಹಾಗೂ ಮಧ್ಯಮ ವರ್ಗದ ಜನತೆ ಪಾಲಿಗೆ ಕಾಮಧೇನುವಾಗಿದೆ ರೈತನ ಕುಟುಂಬವನ್ನು ಸಂಕಷ್ಟದಿಂದ ಮೇಲೆತ್ತುತ್ತಿರುವ ಗೋವುಗಳ ಸಾಕಾಣಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ತಾಲೂಕಿನಲ್ಲಿ ಹಾಲು ಉತ್ಪಾದನೆಯೂ ಹೆಚ್ಚಾಗುತ್ತಿದೆ ಎಂದರು.

ಹಾಸನ ಕೆಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಮಾತನಾಡಿ, ಸಂಗ್ರಹವಾಗುವ ಹಾಲನ್ನು ಬಳಸಿಕೊಂಡು ನಂದಿನಿ ಹೆಸರಿನಲ್ಲಿ 80ಕ್ಕೂ ಹೆಚ್ಚು ಬಗೆಯ ಉತ್ಪನ್ನಗಳನ್ನು ತಯಾರಿಸಿ ಬರುವ ಲಾಭದಲ್ಲಿ ಶೇಕಡವಾರು ರೈತರಿಗೆ ನೀಡುವುದಲ್ಲದೇ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಜನಸ್ನೇಹಿಯಾಗಿರುವ ನಂದಿನಿ ಉತ್ಪನ್ನಗಳ ಬೇಡಿಕೆ ಹೆಚ್ಚಾಗಿರುವುದರಿಂದ ಜಿಲ್ಲಾದ್ಯಂತ 40 ಕ್ಕೂ ಹೆಚ್ಚು ನಂದಿನಿ ಉತ್ಪನ್ನಗಳ ಮಾರಾಟ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಅರಸೀಕೆರೆ ನಗರದ ಆಯ್ದ ಭಾಗಗಳಲ್ಲಿ ಮೂರು ಕೇಂದ್ರಗಳು ಕಾರ್ಯ ನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.

Advertisement

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಂ ಸಮೀವುಲ್ಲಾ, ಜಿಪಂ ಸದಸ್ಯ ಬಿಳಿಚೌಡಯ್ಯ, ಜೆಡಿಎಸ್‌ ಮುಖಂಡರಾದ ಧರ್ಮಶೇಖರ್‌, ಧರ್ಮೇಶ್‌, ಸುಬ್ರಹ್ಮಣ್ಯಬಾಬು, ಸಿಖಂದರ್‌, ನಗರಸಭೆ ಸದಸ್ಯರಾದ ಮೇಲಗಿರಿಗೌಡ, ಹರ್ಷವರ್ಧನ್‌, ಪುಟ್ಟರಾಜು, ಹಾಸನ ಕೆಎಂಎಫ್ನ ಸಹಾಯಕ ವ್ಯವಸ್ಥಾಪಕ ಮೋಹನ್‌ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಹಾಲು ಮಾರಾಟ ಕೇಂದ್ರ ಸ್ಥಾಪನೆ: ರೈತರ ಹಿತದೃಷ್ಟಿಯಿಂದ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಹಾಲಿನ ಮಾರಾಟ ಕೇಂದ್ರಗಳನ್ನು ಸ್ಥಾಪಿಸಲು ಒತ್ತು ನೀಡಲಾಗಿದ್ದು, ಈ ಕೇಂದ್ರಗಳು ಎಲ್ಲೆಡೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಶಾಸಕ ಶಿವಲಿಂಗೇಗೌಡ ತಿಳಿಸಿದರು.

10 ಲಕ್ಷ ಲೀ. ಹಾಲು ಸಂಗ್ರಹ: ಹಾಸನ ಕೆಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಮಾತನಾಡಿ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಮಾರ್ಗದರ್ಶನದಲ್ಲಿ ಹಾಸನದ ಹಾಲು ಉತ್ಪಾದರ ಸಂಘ ಹಾಗೂ ಕೆಎಂಎಫ್ ಯಶಸ್ವಿಯಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಪ್ರತಿದಿನ ಹತ್ತು ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next