Advertisement

ಸ್ವಯಂ ರಕ್ಷಣೆಯೇ ಮೂಲ ಮಂತ್ರವಾಗಲಿ ; ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ

09:07 AM Jun 29, 2020 | mahesh |

ಮನ್‌ ಕೀ ಬಾತ್‌ನಲ್ಲಿ ಮಾತನಾಡಿದ ಪ್ರಧಾನಿ
ಲಾಕ್‌ಡೌನ್‌ಗಿಂತಲೂ ಸ್ವಯಂ ರಕ್ಷಣೆಯೇ ಪ್ರಧಾನ ಅಸ್ತ್ರ
ದುಡಿಮೆಯ ಜೊತೆಗೆ ದೇಶದ ಆರ್ಥಿಕತೆಯನ್ನೂ ಬೆಳೆಸಬೇಕು
ದೇಶದ ಜನತೆಗೆ ಪ್ರಧಾನಿಯ ಕರೆ

Advertisement

ಹೊಸದಿಲ್ಲಿ: “”ಮಾನವನ ಅಸ್ತಿತ್ವಕ್ಕೆ ಸವಾಲೊಡ್ಡಿ­ರುವ ಕೋವಿಡ್ ನ್ನು ಮಣಿಸುವುದೆಂದರೆ ಲಾಕ್‌ಡೌನ್‌ ಮಾಡಿಕೊಂಡು ಮನೆಯಲ್ಲಿ ಕುಳಿತುಕೊಳ್ಳುವುದಲ್ಲ… ಬದಲಿಗೆ, ಸ್ವಯಂ ರಕ್ಷಣೆಯನ್ನು ಮಾಡಿಕೊಳ್ಳುತ್ತಲೇ ನಾವು ದಿನಂಪ್ರತಿ ಈ ಪಿಡುಗಿನ ಜೊತೆಗೆ ಹೋರಾಡ­ಬೇಕಿದೆ” ಎಂದು ಪ್ರಧಾನಿ ನರೇಂದ್ರ ಮೋದಿ, ದೇಶಬಾಂಧವರಿಗೆ ಕರೆ ನೀಡಿದ್ದಾರೆ.

ರವಿವಾರದಂದು, ಆಕಾಶವಾಣಿಯಲ್ಲಿ ಮೂಡಿಬರುವ ತಮ್ಮ ಮಾಸಿಕ ಕಾರ್ಯ­ಕ್ರಮವಾದ “ಮನ್‌ ಕೀ ಬಾತ್‌’ನ 66ನೇ ಸಂಚಿಕೆಯಲ್ಲಿ ಅವರು ಮಾತನಾಡಿ, “ಅನ್‌ಲಾಕ್‌ ಘಟ್ಟದಲ್ಲಿ ದೇಶದ ಪ್ರತಿಯೊಬ್ಬರು ಎರಡು ಅಂಶಗಳ ಮೇಲೆ ಹೆಚ್ಚಿನ ಗಮನ ಕೊಡಬೇಕಿದೆ. ಒಂದು – ಕೊರೊನಾ ವೈರಸ್‌ ವಿರುದ್ಧ ಹೋರಾಡುವುದು ಹಾಗೂ ಎರಡನೆ­ಯದ್ದು – ದೇಶದ ಆರ್ಥಿಕತೆ ಬೆಳೆಸುವುದು. ಲಾಕ್‌ಡೌನ್‌ ಅವಧಿಯಲ್ಲಿ ನಾವೆಷ್ಟು ಹುಷಾ­ರಾಗಿದ್ದೆವೋ ಅದಕ್ಕಿಂತ ಹೆಚ್ಚು ಹುಷಾರು­ತನವನ್ನು ನಾವು ಅನ್‌ಲಾಕ್‌ ಅವಧಿಯಲ್ಲಿ ಪಾಲಿಸಬೇಕಿದೆ. ಅದಕ್ಕಾಗಿ, ವ್ಯಕ್ತಿಗಳ ನಡುವೆ ಕನಿಷ್ಟ 2 ಅಡಿಗಳ ಅಂತರ ಕಾಪಾಡಿಕೊಳ್ಳ­ಬೇಕಿರುತ್ತದೆ. ಹಾಗೆಯೇ, ಮಾಸ್ಕ್ ಗಳನ್ನು ಧರಿಸುವುದರ ಜೊತೆಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕಿದೆ. ಇದ್ಯಾವು­ದನ್ನೂ ಪಾಲಿಸದೇ ಇದ್ದರೆ, ನಿಮ್ಮ ಕುಟುಂಬ­ದವರನ್ನು, ನಿಮ್ಮ ಮನೆಯ ಮಕ್ಕಳು, ಹಿರಿಯನ್ನು ನೀವೇ ತೊಂದರೆಗೆ ಒಳಪಡಿಸಿ­ದಂತಾಗುತ್ತದೆ” ಎಂದು ತಿಳಿಸಿದರಲ್ಲದೆ, “”ದೇಶದ ಎಲ್ಲಾ ವಾಸಿಗಳೂ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು. ನಿಮ್ಮ ಬಗ್ಗೆ ನಿಮ್ಮ ಕುಟುಂಬದವರ ಬಗ್ಗೆ ಕಾಳಜಿ ವಹಿಸಬೇಕು” ಎಂದು ಕರೆ ನೀಡಿದರು.

“”ದೇಶವಾಸಿಗಳು 2020ನೇ ವರ್ಷ ಯಾವಾಗ ಮುಗಿಯುತ್ತದೋ ಎಂದು ಲೆಕ್ಕ­ಹಾಕು­ತ್ತಿದ್ದಾರೆ. ಈ ವರ್ಷ ಕೊರೊನಾ ಸೇರಿ­ದಂತೆ ಹಲವಾರು ಸವಾಲುಗಳನ್ನು ನಾವು ಎದುರಿಸಿದ್ದೇವೆ. ಕೆಲವು ದಿನಗಳ ಹಿಂದೆ ಅಂಫಾನ್‌, ನಿಸರ್ಗ್‌ ಎಂಬ ಚಂಡಮಾರುತ­ಗಳನ್ನು ಎದುರಿಸಿದೆವು. ಹಲವಾರು ರಾಜ್ಯ­ಗಳಲ್ಲಿ ರೈತರು ಬೆಳ ಭಕ್ಷಕ ಮಿಡತೆಗಳ ಕಾಟ ಎದುರಿಸಿದರು. ಈಗಷ್ಟೇ ಅಲ್ಲ, ನಮ್ಮ ದೇಶ ಇಂಥ ಹಲವಾರು ಸವಾಲುಗಳನ್ನು ಎದುರಿಸಿ­ರುವುದಾಗಿ ನಮ್ಮ ಇತಿಹಾಸ ಹೇಳುತ್ತದೆ. ಹಲವಾರು ಸೋಲುಗಳನ್ನು ಯಶಸ್ಸಿನ ಸೋಪಾನಗಳಾಗಿ ನಾವು ಬದಲಾಯಿಸಿ­ಕೊಂಡಿದ್ದೇವೆ. ಅದೇ ತೆರನಾಗಿ, ಕೊರೊನಾ ಎಂಬ ಹೊಸ ಸವಾಲನ್ನೂ ನಾವು ಮೆಟ್ಟುವ ಸಾಧ್ಯತೆಗಳಿವೆ” ಎಂದು ಪ್ರಧಾನಿ ತಿಳಿಸಿದ್ದಾರೆ.

ಮೇ 30ರಂದು, ಲಾಕ್‌ಡೌನ್‌ 5.0 ಮುಕ್ತಾ­ಯವಾಗಿದ್ದ ಹಿನ್ನೆಲೆಯಲ್ಲಿ ಜೂ. 1ರಿಂದ ಅನ್‌ಲಾಕ್‌ ಆರಂಭವಾಗಿದ್ದು, ಜೂ. 30ರವರೆಗೆ ಮುಂದುವರಿಯಲಿದೆ. ಈ ಹಂತದಲ್ಲಿ ಕೇವಲ ಕಂಟೈನ್‌ಮೆಂಟ್‌ ಝೋನ್‌ಗಳಲ್ಲಿ ಮಾತ್ರ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿದೆ. ಉಳಿದೆಡೆ ಹಲವರು ನಿರ್ಬಂಧಗಳನ್ನು ಸರಳಗೊಳಿಸಲಾಗಿದೆ. ಜೂ. 17ರಂದು ಎಲ್ಲಾ ಮುಖ್ಯಮಂತ್ರಿಗಳ ಸಭೆ ನಡೆಸಿದ್ದ ಪ್ರಧಾನಿ ಮೋದಿ, ಜೂ. 30ರ ನಂತರ ಅನ್‌ಲಾಕ್‌ 2.0ನಲ್ಲಿ ಕೈಗೊಳ್ಳಬೇಕಾದ ನಿರ್ಧಾ­ರಗಳ ಬಗ್ಗೆ ಚರ್ಚಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next