Advertisement

ದ್ವಿತೀಯ ಹಂತದ ನಗರಗಳಲ್ಲಿ ಮಹಿಳಾ ಮದ್ಯಪಾನಿಗಳೇ ಹೆಚ್ಚು!

12:53 PM May 21, 2017 | Team Udayavani |

ಬೆಂಗಳೂರು: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂéಎಚ್‌ಒ)ಸಹಯೋಗದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌)ನಡೆಸಿದ ಸಮೀಕೆಯಲ್ಲಿ ರಾಜ್ಯದ ದ್ವಿತೀಯ ಹಂತದ ನಗರಗಳಲ್ಲಿ ಮಹಿಳಾ ಮದ್ಯಪಾನಿಗಳ ಸಂಖ್ಯೆ ಹೆಚ್ಚಾಗಿರುವ ಸಂಗತಿ ಬೆಳಕಿಗೆ ಬಂದಿದೆ.

Advertisement

ಕೌಟುಂಬಿಕ ಕಲಹ, ನಿರುದ್ಯೋಗ, ಪತಿ-ಪತ್ನಿಯಿಂದ ದೂರವಿರುವುದು, ಒಂಟಿತನ ಇತರೆ ಕಾರಣಗಳು ಮಹಿಳೆ ಹಾಗೂ ಪುರುಷರಿಗೆ ಮದ್ಯಪಾನಕ್ಕೆ ಪ್ರೇರಣೆ ನೀಡುತ್ತವೆ ಎಂಬುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಡಬ್ಲೂéಎಚ್‌ಒ ಮದ್ಯಪಾನಿಗಳಿಂದ ಸ್ವತಃ ಅವರಿಗೆ ಹಾಗೂ ಅವರಿಂದ ಇತರರಿಗೆ ಉಂಟಾಗುವ ತೊಂದರೆಗಳನ್ನು ಪತ್ತೆ ಹಚ್ಚಲು ನಿರ್ಧರಿಸಿ, “ಹಾರ್ಮ್ ಟು ಅದರ್’ (ಎಚ್‌ಟುಒ) ಪರಿಕಲ್ಪನೆಯಡಿ ಭಾರತ, ಚಿಲಿ, ನೈಜೀರಿಯಾ, ಲಾವೋಸ್‌, ಥೈಲ್ಯಾಂಡ್‌, ವಿಯಟ್ನಾಂ, ಶ್ರೀಲಂಕಾದಲ್ಲಿ ಸಮೀಕ್ಷೆಗೆ ಮುಂದಾಯಿತು. ಅದರಂತೆ ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರು, ಕೋಲಾರ, ಹುಬ್ಬಳ್ಳಿ-ಧಾರವಾಡ ಹಾಗೂ ಮಂಗಳೂರು- ಮಣಿಪಾಲವನ್ನು ಆಯ್ಕೆ ಮಾಡಿಕೊಂಡು ನಡೆಸಿದ ಸಮೀಕ್ಷೆಯಲ್ಲಿ ಈ ಕುತೂಹಲಕಾರಿ ಅಂಶ ಬಯಲಾಗಿದೆ.

ಆ ಪೈಕಿ ನಗರ, ನಗರದ ಕೊಳೆಗೇರಿ, ದ್ವಿತೀಯ ಹಂತದ ನಗರ ಹಾಗೂ ಗ್ರಾಮೀಣ ಪ್ರದೇಶ ಎಂದು ವರ್ಗೀಕರಣ ಮಾಡಿಕೊಂಡು ನಿಮ್ಹಾನ್ಸ್‌ ಸಮೀಕ್ಷೆ ನಡೆಸಿದ್ದು, ಮಹಾನಗರ ಪ್ರದೇಶದಲ್ಲಿ ಶೇ.40ರಷ್ಟು ಪುರುಷರು ಮದ್ಯಪಾನಿಗಳಾಗಿದ್ದರೆ, ಮಹಿಳಾ ಮದ್ಯಪಾನಿಗಳ ಪ್ರಮಾಣ ಶೇ.1ರಷ್ಟಿದೆ. ನಗರದ ಕೊಳೆಗೇರಿಯಲ್ಲಿ ಶೇ.47 ಮಂದಿ ಪುರುಷರಿಗೆ ಮದ್ಯಪಾನದ ಅಭ್ಯಾಸವಿದ್ದರೆ ಅಲ್ಲಿ ಶೇ.13ರಷ್ಟು ಮಹಿಳೆಯರಿಗೆ ಮದ್ಯಪಾನ ಅಭ್ಯಾಸವಿದೆ.

ದ್ವಿತೀಯ ಹಂತದ ನಗರಗಳಲ್ಲಿ ಶೇ.53ರಷ್ಟು ಪುರುಷರು ಮದ್ಯಪಾನಿಗಳಾಗಿದ್ದರೆ, ಶೇ.10ರಷ್ಟು ಮಹಿಳಾ ಮದ್ಯಪಾನಿಗಳಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ.45ರಷ್ಟು ಪುರುಷರು ಮದ್ಯಪಾನಿಗಳಾಗಿದ್ದರೆ, ಮಹಿಳಾ ಮದ್ಯಪಾನಿಗಳ ಸಂಖ್ಯೆ ಶೇ.13ರಷ್ಟಿದೆ ಎಂಬುದು ಪತ್ತೆಯಾಗಿದೆ.

Advertisement

ಅತಿಯಾಗಿ ಮದ್ಯಸೇವನೆಯಲ್ಲೂ ಮುಂದು: ಇನ್ನು ಅತಿಯಾದ ಮದ್ಯಸೇವನೆ (ಒಮ್ಮೆ 4 ಪೆಗ್‌ಗಿಂತ ಹೆಚ್ಚು ಸೇವನೆ)ಯಲ್ಲೂ
ಮಹಾನಗರಗಳ ಮಹಿಳೆಯರಿಗಿಂತ ಶೇ.2.7ರಷ್ಟು ದ್ವಿತೀಯ ಹಂತದ ನಗರಗಳ ಮಹಿಳೆಯರು ಅತಿಯಾಗಿ ಮದ್ಯ ಸೇವಿಸುತ್ತಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. 

ಮದ್ಯಪಾನವನ್ನು ತೀವ್ರಗೊಳಿಸುವ ಅಂಶಗಳು ಹಾಗೂ ಅದು ಇತರರ ಮೇಲೆ ಬೀರುವ ಪರಿಣಾಮದ ಬಗ್ಗೆಯೂ ಅಧ್ಯಯನ ನಡೆದಿದ್ದು, ಪೋಷಕರೊಂದಿಗೆ ವಾಸವಿಲ್ಲದವರು ಪೋಷಕರೊಂದಿಗೆ ವಾಸವಿರುವವರಿಗಿಂತ ಹೆಚ್ಚು ಆಕ್ರಮಣಕಾರಿ ಮನೋಭಾವದವರಾಗಿರಬಹುದು. ಮದ್ಯಪಾನಿಗಳಲ್ಲಿ ಪತಿ/ ಪತ್ನಿಯೊಂದಿಗೆ ಇಲ್ಲದವರು, ನಿರುದ್ಯೋಗ, ಕೆಲಸದ ಒತ್ತಡ, ಒಂಟಿತನ ಇತರೆ ಕಾರಣಗಳಿಂದ ತಮಗೂ ತೊಂದರೆ ಮಾಡಿಕೊಳ್ಳುವುದು ಹಾಗೂ ಇತರರಿಗೂ ತೊಂದರೆ ಮಾಡುವ ಪ್ರಮಾಣ ಹೆಚ್ಚಾಗಿರಬಹುದು ಎಂಬ ಅಂಶವನ್ನು ಅಧ್ಯಯನ ಉಲ್ಲೇಖೀಸಿದೆ.

ವರದಿ ಶಿಫಾರಸು: ಧೂಮಪಾನ, ಮದ್ಯಪಾನ ಮಾಡುವುದು ಜನರ ವೈಯಕ್ತಿಕ ಆಯ್ಕೆಯಾಗಿದ್ದು, ಅದನ್ನು ಪ್ರಶ್ನಿಸಲಾಗದಿರಬಹುದು. ಆದರೆ ಇದರಿಂದ ಅವರ ಸುತ್ತಮುತ್ತಲಿನವರು ಹಾಗೂ ಸಮಾಜ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಪ್ರಶ್ನಿಸುವುದು ಅನಿವಾರ್ಯ. ಹಾಗಾಗಿ ಮದ್ಯಪಾನಿಗಳ ನಿಖರ ಮಾಹಿತಿ ಕಲೆ ಹಾಕುವ ಕಾರ್ಯಕ್ಕೆ ಸರ್ಕಾರದ ಸಂಬಂಧಪಟ್ಟ ಎಲ್ಲ ಇಲಾಖೆಗಳು
ಕಾರ್ಯಪ್ರವೃತ್ತವಾಗಬೇಕು. ನಂತರ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ವರದಿ ಶಿಫಾರಸು ಮಾಡಿದೆ. 

ಮದ್ಯಪಾನದ ದುಷ್ಪರಿಣಾಮ ಗಳನ್ನು ದಾಖಲಿಸುವುದು ಆರೋಗ್ಯ ವ್ಯವಸ್ಥೆಯ ಮೊದಲ ಆದ್ಯತೆಯಾಗಬೇಕು. ಯಾವುದೇ ಆರೋಗ್ಯ ಸಮಸ್ಯೆ ತಲೆದೋರಿದಾಗ ಮದ್ಯಪಾನಕ್ಕೆ ಸಂಬಂಧಪಟ್ಟ ಅಂಶ ಪತ್ತೆ ಹಚ್ಚುವುದು, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡುವುದು ಜರೂರಾಗಿ ಆಗಬೇಕಿದೆ.
– ಡಾ.ಗಿರೀಶ್‌,
ನಿಮ್ಹಾನ್ಸ್‌ನ ಜನಾರೋಗ್ಯ ವಿಭಾಗದ ಪ್ರಾಧ್ಯಾಪಕ

– ಎಂ.ಕೀರ್ತಿಪ್ರಸಾದ್‌ 

Advertisement

Udayavani is now on Telegram. Click here to join our channel and stay updated with the latest news.

Next