Advertisement

ವಿ.ವಿಯೊಳಗೆ ಕಲಾರಾಧನೆ

03:25 AM Nov 03, 2018 | |

ವಿಶ್ವವಿದ್ಯಾಲಯದಲ್ಲಿ ಅಧ್ಯಯನ, ಅಧ್ಯಾಪನ, ಸಂಶೋಧನೆಯಷ್ಟೇ ನಡೆಯುತ್ತದೆ ಎಂಬುದು ಹಲವರ ಕಲ್ಪನೆ . ಆದರೆ, ವಿವಿಯ ಅಂಗಳದೊಳಗೆ ಅಪರೂಪದ ಕಲಾಕೃತಿಗಳು, ವೀರಗಲ್ಲುಗಳು, ಶಾಸನಗಳನ್ನೂ ಸಂಗ್ರಹಿಸಿ ಇಟ್ಟಿರುವ ತುಮಕೂರು ವಿವಿ, ಆ ಮೂಲಕ ಹೊಸದೊಂದು ಪದ್ಧತಿಗೆ ನಾಂದಿ ಹಾಡಿದೆ. 

Advertisement

ಸುತ್ತಲೂ ಹಚ್ಚ ಹಸಿರು. ನಡುವೆ ಸಾಂಪ್ರದಾಯಿಕ, ಕಲಾತ್ಮಕ ಶೈಲಿಯಲ್ಲಿರುವ ವಿಗ್ರಹಗ‌ಳ ಸೌಂದರ್ಯವನ್ನು ಆಸ್ವಾದಿಸುತ್ತಾ ಒಳಗೆ ಕಾಲಿಟ್ಟರೆ  ಕಾಣುವುದು ಹಳ್ಳಿಯ ಸಂರಕ್ಷಣೆ ಮಾಡಲು ಕಾದಾಡಿ ಮಡಿದ ವೀರರ ಶಿಲ್ಪ, ನಾಡಿಗಾಗಿ ಹೋರಾಡಿದ ವೀರಗಲ್ಲು, ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಕಲಾ ಪ್ರಕಾರಗಳು, ಹಳ್ಳಿ ಸೊಗಡಿನ ಕೃಷಿ ಸಾಮಗ್ರಿಗಳು, ಹಿಂದಿನ ಕಾಲದಲ್ಲಿ ಪೂಜಿಸಲಾಗುತ್ತಿದ್ದ ವಿವಿಧ ದೇವತೆಗಳ ಶಿಲ್ಪಕಲಾ ಮೂರ್ತಿಗಳು… ಇವೆಲ್ಲವೂ ಪ್ರಕೃತಿದೇಯ ಆರಾಧನೆಯಲ್ಲಿರುವಂತೆ ಭಾಸವಾಗುತ್ತದೆ.

ಅರೆ, ಇದ್ಯಾವುದೋ ಮಲೆನಾಡಿನ ಪ್ರಕೃತಿಯ ದೇವರ ಮನೆಯಲ್ಲ. ಇದು, ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ‘ಕಲಾರಾಧನೆ’ಯ ಕಲಾಸಂಪತ್ತು.  ಪ್ರವೇಶದ್ವಾರದಿಂದ ಕುಲಪತಿಗಳ ಕಾರ್ಯಾಲಯದತ್ತ ಸಾಗಿದರೆ ರಸ್ತೆಯ ಎರಡೂ ಬದಿಗಳಲ್ಲಿ ಕಾಣಸಿಗುವ ಕಲಾ ಸೌಂದರ್ಯ ನೋಡುಗರನ್ನು ಕೈಬೀಸಿ ಕರೆಯುತ್ತದೆ. 

ವಿಶ್ವವಿದ್ಯಾನಿಲಯವೆಂದರೆ ಗಂಭೀರ ಅಧ್ಯಯನ, ಅಧ್ಯಾಪನ, ಸಂಶೋಧನೆಗಳಷ್ಟೇ ನಡೆಯುವ ಸ್ಥಳ ಎಂಬುದು ಜನಸಾಮಾನ್ಯರ ಕಲ್ಪನೆ. ಆದರೆ ತುಮಕೂರು ವಿಶ್ವವಿದ್ಯಾನಿಲಯ, ಈ ಪರಿಕಲ್ಪನೆಯಿಂದಾಚೆ ಹೊಸ ಹೆಜ್ಜೆ ಇರಿಸಿದೆ. ಜನಸಾಮಾನ್ಯರನ್ನೂ, ಪ್ರವಾಸಿಗರನ್ನೂ ತನ್ನತ್ತ ಸೆಳೆಯುವ ಪ್ರಯತ್ನ ಮಾಡಿದೆ. ನಾಡಿನ ವಿಶಿಷ್ಟ ಶಾಸನ, ಶಿಲ್ಪಗಳನ್ನು ಒಂದೇ ಕಡೆ ಸಂಗ್ರಹಿಸಿ ವಸ್ತುಸಂಗ್ರಹಾಲಯದ ಮಾದರಿಯೊಂದನ್ನು ಕ್ಯಾಂಪಸ್‌ ಒಳಗೆ ಇಟ್ಟುಕೊಂಡಿದೆ.  

ದನಗಳನ್ನು ಸಂರಕ್ಷಿಸಲು ಹೋರಾಡಿದ ವೀರ ಮಹನೀಯನ ಜಾnಪಕಾರ್ಥವಾಗಿರುವ 44 ಇಂಚು ಎತ್ತರ, 22 ಇಂಚು ಅಗಲದ ಕ್ರಿ.ಶ. 11ನೇ ಶತಮಾನದ ತುರುಗೊಳ್‌ ವೀರಗಲ್ಲನ್ನು ಕಾಣಬಹುದು. ಇದನ್ನು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ನೆಲ್ಲುಕುದುರೆಯಿಂದ ಸಂಗ್ರಹಿಸಲಾಗಿದೆ. ಇವುಗಳ ಜೊತೆಗೆ, ಹೊಯ್ಸಳರ ಕಾಲದ ಶಿಲ್ಪಕೃತಿಗಳೂ ಇವೆ. 16 ಇಂಚು ಅಗಲ, 27 ಇಂಚು ಎತ್ತರ, 33 ಇಂಚು ಉದ್ದದ ನಂದಿ ವಿಗ್ರಹವು  ಕ್ರಿ. ಶ. 12 ನೇ ಶತಮಾನದ್ದಾಗಿದೆ. ಸೂರ್ಯನಾರಾಯಣ ಶಿಲ್ಪ, ಪದ್ಮಶಿಲೆಯೊಡನೆ 13ನೇ ಶತಮಾನದ ನರಸಿಂಹ ವಿಗ್ರಹ ಹಾಗೂ ಉಗ್ರನರಸಿಂಹ ಮತ್ತು ಹರಿಹರ ಕಲಾಮೂರ್ತಿಯನ್ನು ಒಟ್ಟಿಗೆ ಕಾಣಬಹುದು. ಇವುಗಳೆಲ್ಲವೂ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣವಾರದ ಬಾಣವೇಶ್ವರ ದೇವಾಲಯದಿಂದ ತರಿಸಲಾದ ಭಿತ್ತಿ ಶಿಲ್ಪಗಳು.

Advertisement

ಈ ವಸ್ತು ಸಂಗ್ರಹಾಲಯದ ಪ್ರಮುಖ ಆಕರ್ಷಣೆ, ಚಾಲುಕ್ಯರ ಶಾಸನ. ವಿಜಯ ಪಾಂಡ್ಯ ದೇವರು ಆಳ್ವಿಕೆ ಮಾಡುತ್ತಿದ್ದ ಕ್ರಿ.ಶ 1175ರ ಕಾಲದ ಶಾಸನ ಇದಾಗಿದೆ. ಇದು 48 ಸಾಲುಗಳನ್ನೊಳಗೊಂಡಿದ್ದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಪೊನ್ನವ್ವ ಎಂಬಾಕೆ ಅಲ್ಲಿನ ಈಶ್ವರ ದೇವಸ್ಥಾನದ ನಿರ್ಮಾಣಕ್ಕೆ 1200 ಕಂಬ ಹಡಗುಲವನ್ನು ದಾನ ಮಾಡುತ್ತಾಳೆ. ಹೆಣ್ಣೊಬ್ಬಳು ದಾನಕೊಟ್ಟಿದ್ದು ಶಾಸನದಲ್ಲಿರುವ ಪ್ರಮುಖ್ಯ ಅಂಶ. ಈ ಶಾಸನ, ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಂಚಿಕೆರೆಯಲ್ಲಿ ಸಂಗ್ರಹಿಸಿ ತಂದದ್ದು. 

ಗೋವರ್ಧನ ಗಿರಿಧಾರಿ, ನಂದಿ ಹಳ್ಳಿಯಿಂದ ತರಲಾದ ಗಾಣದಕಲ್ಲು, ತುಮಕೂರು ತಾಲೂಕಿನ ದುರ್ಗದಹಳ್ಳಿಯಿಂದ ತರಲಾದ ಕಾಳಿಕಾದೇವಿ ವಿಗ್ರಹ, ಧಾನ್ಯಗಳನ್ನು ಬೇರ್ಪಡಿಸುವ ರೋಣದ ಕಲ್ಲನ್ನು ಬೆಳ್ಳಗಿರಿ ಗ್ರಾಮದಿಂದ ಸಂಗ್ರಹಿಸಿ ತರಲಾಗಿದೆ. ಶೈವ ದ್ವಾರಪಾಲಕರ ಕಲ್ಲಿನ ಸ್ತಂಭಗಳು, ಸ್ತ್ರೀದೇವತೆಗಳ ವಿಗ್ರಹ, ವಿಷ್ಣುಶಿಲ್ಪ ಎಲ್ಲವೂ ಸೇರಿ- “ಕಲಾರಾಧನೆ’ ಹೆಸರಿಗೆ ತಕ್ಕಂತೆ ವೈವಿಧ್ಯಮಯವೆನಿಸಿದೆ.

ವಿವಿ ಕಲಾ ಕಾಲೇಜಿನ ಮೈದಾನದಲ್ಲಿರುವ ಸ್ಮಾರ್ಟ್‌ಪಾರ್ಕ್‌ನಲ್ಲಿ ಯುವಜನರು ಸೆಲ್ಫಿ ತೆಗದುಕೊಳ್ಳಲು ವಿಶೇಷವಾದ ಅಂಕಣ ನಿರ್ಮಿಸಲಾಗಿದ್ದು, ಉದ್ಯಾನದಲ್ಲಿ ಡೊಳ್ಳುಕುಣಿತ, ವೀರಗಾಸೆ ಸೇರಿದಂತೆ ಜಿಲ್ಲೆಯ ಸಾಂಸ್ಕೃತಿಕ ಕಲೆಯನ್ನು ಬಿಂಬಿಸುವ ಚಿತ್ರಗಳನ್ನೂ ಬಿಡಿಸಲಾಗಿದೆ.  ಇದರಿಂದಾಗಿ ಇಡೀ ಪ್ರಾಂಗಣಕ್ಕೆ ಮತ್ತಷ್ಟು ಮೆರುಗು ನೀಡಿದಂತಾಗಿದೆ.

ಕಾವ್ಯ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next