Advertisement

ಹಳೆಯ ವಾಹನಕ್ಕೆ ಗುಜರಿಯ ಹಾದಿ : 15 ದಿನಗಳಲ್ಲೇ ಈ ನೀತಿಯ ಅನುಷ್ಠಾನ 

01:47 AM Feb 02, 2021 | Team Udayavani |

ಪರಿಸರಕ್ಕೂ, ಆರೋಗ್ಯಕ್ಕೂ ನಡುವೆ ಅವಿನಾಭಾವ ಸಂಬಂಧವಿದೆ. ಪರಿಸರ ಮಾಲಿನ್ಯದ ಹೆಚ್ಚಳವು ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರವು ಹಳೆಯ ಹಾಗೂ ಮಾಲಿನ್ಯಕಾರಕ ವಾಹನಗಳನ್ನು ರದ್ದುಗೊಳಿಸುವ ಮಹತ್ವದ ಘೋಷಣೆ ಮಾಡಿದೆ. ಈ ಹಿಂದೆಯೇ ಪ್ರಸ್ತಾಪಿಸಿರುವಂತೆ, ಈ ಬಜೆಟ್ನಲ್ಲಿ “ವಾಹನ ಗುಜರಿ ನೀತಿ’ಯನ್ನು ಸಚಿವೆ ನಿರ್ಮಲಾ ಘೋಷಿಸಿದ್ದಾರೆ.

Advertisement

ಅದರಂತೆ, 20 ವರ್ಷ ದಾಟಿರುವ ಖಾಸಗಿ ವಾಹನಗಳು ಹಾಗೂ 15 ವರ್ಷ ತುಂಬಿರುವ ವಾಣಿಜ್ಯ ವಾಹನಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಅಂದರೆ, ಖಾಸಗಿ ವಾಹನಗಳು 20 ವರ್ಷ ತುಂಬಿದೊಡನೆ, ವಾಣಿಜ್ಯ ವಾಹನಗಳು 15 ವರ್ಷ ದಾಟಿದೊಡನೆ “ಫಿಟ್ನೆಸ್‌ ಪರೀಕ್ಷೆ’ಗೆ ಒಳ ಪಡಬೇಕಾಗುತ್ತದೆ. ಇದರಿಂದಾಗಿ ಇಂಧನ ದಕ್ಷತೆಯ ಹಾಗೂ ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ ಸಿಗುವುದರ ಜೊತೆಗೆ, ದೇಶದ ಆಮದಿನ ಬಿಲ್‌ ಕೂಡ ಕಡಿಮೆಯಾಗುತ್ತದೆ.

ಇದನ್ನೂ ಓದಿ:ಕೇಂದ್ರ ಬಜೆಟ್ : ಚಿನ್ನ, ಬೆಳ್ಳಿ ಸುಂಕ ಇಳಿಕೆ ; ಎನ್ಆರ್‌ಐಗಳಿಗೆ ಅನುಕೂಲ

ಅನುಕೂಲತೆಗಳೇನು?: ದೇಶದಲ್ಲಿನ ವಾಯುಮಾಲಿನ್ಯಕ್ಕೆ ಹಳೆಯ ವಾಹನಗಳೂ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿವೆ. ಇಂಥ ಅನೇಕ ವಾಹನಗಳು ಸರಿಯಾಗಿ ನಿರ್ವಹಣೆಯಾಗದೇ, ರಸ್ತೆಗಳಲ್ಲಿ ಓಡಾಡಲು ಅರ್ಹವಲ್ಲದ ಸ್ಥಿತಿಯಲ್ಲಿವೆ. ಇವುಗಳನ್ನು ರಸ್ತೆಗಿಳಿಸಿದರೆ ಮಾಲಿನ್ಯ ಹೆಚ್ಚಳದ ಜೊತೆಗೆ, ಹೆಚ್ಚಿನ ಇಂಧನವೂ ವೆಚ್ಚವಾಗುತ್ತದೆ ಮತ್ತು ಇವುಗಳಲ್ಲಿ ಸಂಚರಿಸುವುದು ಸುರಕ್ಷಿತವೂ ಅಲ್ಲ. ಹೊಸ ನೀತಿಯಿಂದಾಗಿ ಇವುಗಳ ಸಂಚಾರ ರದ್ದಾದರೆ, ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ. ಅಲ್ಲದೆ, ವಾಹನವನ್ನು ಗುಜರಿಗೆ ನೀಡುವವರು ಮತ್ತೆ ಹೊಸ ವಾಹನ ಖರೀದಿಸುತ್ತಾರೆ. ಒಟ್ಟಾರೆಯಾಗಿ ಈ ವಾಹನ ಗುಜರಿ ನೀತಿಯಿಂದ 10 ಸಾವಿರ ಕೋಟಿ ರೂ.ಗಳಷ್ಟು ಹೊಸ ಬಂಡವಾಳ ಹೂಡಿಕೆ ಆಗುತ್ತದೆಯಲ್ಲದೇ, ಇದು 50 ಸಾವಿರದಷ್ಟು ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿದೆ.

ಹೆಚ್ಚುವರಿ 5 ಲಕ್ಷ ವಾಹನಗಳ ಮಾರಾಟ?
ಮುಂದಿನ 15 ದಿನಗಳಲ್ಲೇ ವಾಹನ ಗುಜರಿ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಈ ನೀತಿಯು ಮಾಲಿನ್ಯ ನಿಯಂತ್ರಣಕ್ಕೆ ಮಾತ್ರವಲ್ಲದೇ ದೇಶದ ಆಟೋಮೊಬೈಲ್‌ ಉದ್ಯಮದ ಚೇತರಿಕೆಗೂ ಸಹಾಯಕವಾಗಲಿದೆ. ದೇಶದಲ್ಲಿ ಪ್ರಸ್ತುತ ಸುಮಾರು 6 ಲಕ್ಷ ಹಳೆಯ ವಾಹನಗಳು ಸಂಚರಿಸುತ್ತಿವೆ. ಈ ಸ್ವಇಚ್ಛೆಯ ಗುಜರಿ ನೀತಿಯು ಅನುಷ್ಠಾನಗೊಂಡಾಗ ಹೆಚ್ಚುವರಿ 5 ಲಕ್ಷದಷ್ಟು ಹೊಸ ವಾಹನಗಳ ಮಾರಾಟವಾಗಲಿದೆ ಎಂದು ಅಂದಾಜಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next