Advertisement

ವಿಜ್ಞಾನ ಜಗತ್ತಿನ ಮೇಲೆ “ರಾಮನ್‌ ಎಫೆಕ್ಟ್’

03:45 AM Feb 22, 2017 | |

ಎಚ್ಚರಿಕೆಯ ಕ್ರಮಬದ್ಧ ಪ್ರಯತ್ನಗಳಿಲ್ಲದೇ ವೈಜ್ಞಾನಿಕ ಆವಿಷ್ಕಾರ ಅಸಂಭವ. ರಾಮನ್‌ ಮತ್ತು ರಾಮನ್‌ ಪರಿಣಾಮ ಇದಕ್ಕೆ ಅತ್ಯುತ್ತಮ ನಿದರ್ಶನ. ತತ್ಪರಿಣಾಮ ಬೆಳಕಿನ ನೂತನ ವಿದ್ಯಮಾನದ ಆವಿಷ್ಕಾರವನ್ನು ದೇಶದಲ್ಲಿ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ.

Advertisement

ನಿಸರ್ಗದ ವಿದ್ಯಮಾನಗಳ ತಳದಲ್ಲಿರುವ ನಿಯಮಗಳ ಅನ್ವೇಷಣೆಯೇ ವಿಜ್ಞಾನ.  ಏನು (What),  ಏಕೆ (Why), ಯಾವಾಗ (wHEN), ಯಾರು (who), ಯಾವುದು (Which), ಎಲ್ಲಿ (Where), ಹೇಗೆ (how) ಎನ್ನುವ ಸಪ್ತ  ಪ್ರಶ್ನೆಗಳಿಗೆ ಉತ್ತರದ ಹುಡುಕಾಟದಲ್ಲಿ ವಿಜ್ಞಾನ ಮೈದಳೆಯುತ್ತದೆ; ವಿಜ್ಞಾನದ ಹಾದಿ ರೂಪಿಸಲ್ಪಡುತ್ತದೆ. ಹೊಸ ಪರಿಕಲ್ಪನೆ, ಸಿದ್ಧಾಂತವನ್ನು ವಿಜ್ಞಾನ ಪ್ರಪಂಚವೂ ಸುಲಭದಲ್ಲಿ ಒಪ್ಪಿಕೊಳ್ಳುವುದಿಲ್ಲ. ಭೂಮಿಯೇ ವಿಶ್ವದ ಕೇಂದ್ರವೆಂಬ ರೂಢಮೂಲ ಪರಿಕಲ್ಪನೆಯಿಂದ ಕಳಚಿಕೊಳ್ಳಲು ವಿಜ್ಞಾನಕ್ಕೂ ಸಾವಿರಾರು ವರ್ಷಗಳು ಬೇಕಾಯಿತು – ಹಲವು ಸೈದ್ಧಾಂತಿಕ ತಿಕ್ಕಾಟಗಳು, ದಮನಗಳು, ಹೋರಾಟಗಳು ನಡೆದುವು.  ಅಂದರೆ ವಿಜ್ಞಾನದ ಹಾದಿ ಎಂದೂ ಸುಗಮವಲ್ಲ.

ಭೌತವಿಜ್ಞಾನದ ಇತಿಹಾಸವನ್ನು ಗಮನಿಸಿದವರಿಗೆ ತಿಳಿದಿದೆ – ಬೆಳಕಿನ ಸ್ವರೂಪದ ಕುರಿತಾಗಿಯೇ ನಡೆದ ಚಿಂತನೆಗಳು ಭೌತವಿಜ್ಞಾನವನ್ನು ಕಳೆದ ಐನೂರು ವರ್ಷಗಳಿಂದ ಮುನ್ನಡೆಸುತ್ತ ಬಂದಿದೆ. ಬೆಳಕೆನ್ನುವುದು ಶಕ್ತಿಶಾಲೀ ಕಣಗಳ ನಿರಂತರ ಧಾರೆ ಎಂದು ನ್ಯೂಟನ್‌ ಮತ್ತಿತರ ವಿಜ್ಞಾನಿಗಳು (ಹದಿನಾರನೆ ಶತಮಾನ) ಹೇಳಿದರೆ, ಇಲ್ಲ, ಬೆಳಕೆನ್ನುವುದು ಅಲೆಗಳ ರೂಪದಲ್ಲಿದೆ ಎಂದು ಹೈಗೆನ್‌ ಮತ್ತಿತರ ಸಮಕಾಲೀನ ವಿಜ್ಞಾನಿಗಳು ದನಿ ಎತ್ತಿದರು.  ಅಲೆ ಎಂದ ಮೇಲೆ ಪ್ರವಹಿಸುವುದಕ್ಕೆ ಅಗತ್ಯ ಮಾಧ್ಯಮ ಬೇಕು ತಾನೇ. ವಿಶ್ವದೆಲ್ಲೆಡೆ ವ್ಯಾಪಿಸಿರುವ, ಸಂಪೂರ್ಣ ಪಾದರರ್ಶಕ ಹಾಗೂ ಪರಿಪೂರ್ಣ ಸ್ಥಿತಿಸ್ಥಾಪಕ ಗುಣ ವಿಶೇಷ ಹೊಂದಿರುವ ಈಥರ್‌ ಎಂಬ  ಮಾದ್ಯಮದ  ಪತ್ತೆಗೆ ಎಷ್ಟು ಪ್ರಯತ್ನಿಸಿದರೂ ಯಶಸ್ಸು ಸಿಗಲಿಲ್ಲ. ಈಥರ್‌ ಇಲ್ಲವೆಂದು ಹೆಳುವುದಕ್ಕೆ ಐನ್‌ ಸ್ಟೈನ್‌  ಬರಬೇಕಾಯಿತು. ಬೆಳಕಿನ ಚಲನೆಗೆ ಮಾಧ್ಯಮದ ಅಗತ್ಯವಿಲ್ಲ, ಅದು ನಿರ್ವಾತದಲ್ಲಿಯೇ ಚಲಿಸುತ್ತದೆಂದು  ಹೇಳುವುದರೊಂದಿಗೆ ಈಥರ್‌ ಇಲ್ಲವೆಂದು ಸಾರಿದರು. ಅಂದರೆ ಇದುವೇ ಅಂತಿಮ ಸತ್ಯವೆಂದು ವಿಜ್ಞಾನ ಎಂದಿಗೂ ಹೇಳಲಾರದು. ಇಂದು ಒಪ್ಪಿದ ಸತ್ಯ  ಮುಂದೊಂದು ದಿನ ಇನ್ನಷ್ಟು ಪರಿಷ್ಕರಣೆಗೆ ಒಳಪಡಬಹುದು, ಬದಲಾಗಬಹುದು, ಹೊಸ ವ್ಯಾಖ್ಯಾನಗಳಿಗೆ ತೆರೆದುಕೊಳ್ಳಬಹುದು, ಅಥವಾ ಸಂಪೂರ್ಣ ಮೂಲೆಗೆ ಸೇರಬಹುದು. ಎಂದೇ ವಿಜ್ಞಾನ ಸದಾ ರೋಚಕವಾಗಿರುತ್ತದೆ.  

ಇದರೊಂದಿಗೆ ಅನಿರಿಕ್ಷಿತ ಅಥವಾ ನಾಟಕೀಯ ಆವಿಷ್ಕಾರಗಳು ವಿಜ್ಞಾನದ ರೋಚಕತೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಯಾವುದೋ ಗುರಿಯತ್ತ ಪ್ರಯೋಗ ನಡೆಸುತ್ತಿರುವಾಗ ಇನ್ನಾವುದೋ  ಹೊಸದೊಂದು ಗೋಚರವಾಗುತ್ತದೆ. ಉದಾಹರಣೆಗೆ,  ಸ್ನಾನದ ತೊಟ್ಟಿಯಲ್ಲಿ ಇಳಿದ ಆರ್ಕಿಮಿಡಿಸ್‌ ತೊಟ್ಟಿಯಲ್ಲಿ ನೀರಿನ ಮಟ್ಟ ಏರುವುದನ್ನು ಗಮನಿ ವಸ್ತುಗಳ ತೇಲುವ ನಿಯಮವನ್ನು ರೂಪಿಸಿದ್ದು,  ತೊಟ್ಟಿನಿಂದ ಕಳಚಿದ ಸೇಬು ಹಣ್ಣು ಭೂಮಿಗೆ ಬೀಳುವುದನ್ನು ಕಂಡ ನ್ಯೂಟನ್‌ ಗುರುತ್ವ ಬಲದ ಸಿದ್ಧಾಂತವನ್ನು ನಿಗಮಿಸಿದ್ದು, ರಸಾಯನ ವಿಜ್ಞಾನಿ ಕುಕುಲೆಗೆ ಬೆನಿjàನ್‌ ರಚನೆಯನ್ನು ವಿವರಿಸಲು ಹಾವಿನ ಜೋಡಣೆಯ ಕನಸು ಪ್ರೇರಣೆಯಾದದ್ದು, ತಟ್ಟೆಯಲ್ಲಿದ್ದ ಬ್ರೆಡ್ಡಿನ ತುಣುಕಿಗೆ ಬಂದ ಬೂಸುರುವಿನಲ್ಲಿ ಪೆನ್ಸಿಲಿನ್‌ ಔಷಧವನ್ನು ಜೀವ ವಿಜ್ಞಾನಿ ಪ್ಲೆಮಿಂಗ್‌ ಶೋಧಿಸಿದ್ದು,  ಅನಿಲನಳಿಗೆಯಲ್ಲಿ ವಿದ್ಯುತ್ತು ಪ್ರವಹಿಸುವಾಗ ಕೋಣೆಯ ಮೂಲೆಯಲ್ಲಿದ್ದ ರಾಸಾಯನಿಕ ಪರದೆ ಮಿನುಗುತ್ತಿದ್ದುದನ್ನು ಕಂಡ ಹೆನ್ರಿಕ್‌   ರಂಟ್ಜನ ಎಕÕ…-ಕಿರಣಗಳನ್ನು ಪತ್ತೆ ಮಾಡಿದ್ದು, ಯುರೇನಿಯಮ… ಸಲ್ಫೆ„ಡ… ಎಂಬ ರಾಸಾಯನಿಕ ಸಂಯುಕ್ತದಿಂದ ಅನೈಚ್ಛಿಕ‌ವಾಗಿ ಶಕ್ತಿಶಾಲಿ ವಿಕಿರಣಗಳು ಉತ್ಸರ್ಜನೆಗೊಳ್ಳುವ ವಿಕಿರಣ ಪಟುತ್ವ (ರೇಡಿಯೋ ಎಕ್ಟಿವಿಟಿ) ವಿದ್ಯಮಾನವನ್ನು ಹೆನ್ರಿ ಬೆಕೆರೆಲ… ತೀರ ಅನಿರಿಕ್ಷಿತವಾಗಿ ಆವಿಷ್ಕರಿಸಿದ್ದು….  ಹೀಗೆ ಪಟ್ಟಿಯನ್ನು ಬೆಳೆಸಬಹುದು. ಈ ಸಾಲಿಗೆ ಸಿವಿ ರಾಮನ್‌ ಅವರ ರಾಮನ್‌ ಪರಿಣಾಮದ ಆವಿಷ್ಕಾರವನ್ನೂ ಸೇರಿಸಬಹುದು. 

ರಾಮನ್‌ ಪರಿಣಾಮ 
ರಾಮನ್‌ ಅವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್‌. 1988, ನವೆಂಬರ್‌ 7ರಂದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಜನನ. ತಂದೆ ಚಂದ್ರಶೇಖರ ಅಯ್ಯರ… ಭೌತಶಾಸ್ತ್ರ ಪ್ರಾದ್ಯಾಪಕ. ತಾಯಿ ಪಾರ್ವತಿ ಅಮ್ಮಾಳ್‌. ಈ ದಂಪತಿಗಳ ಎಂಟು ಮಂದಿ ಮಕ್ಕಳಲ್ಲಿ ರಾಮನ್‌ ಎರಡನೇಯವರು. ಮೊದಲಿನವರು ಚಂದ್ರಶೇಖರ್‌ ಸುಬಹ್ಮಮಣ್ಯನ್‌ – ನೊಬೆಲ… ಪ್ರಶಸ್ತಿ ವಿಜೇತ ಖಗೋಳ ವಿಜ್ಞಾನಿಯಾದ ಎಸ್‌.ಚಂದ್ರಶೇಖರ್‌ (ಚಂದ್ರಶೇಖರ್‌ ಪರಿಮಿತಿಯ ದೃಷ್ಟಾರ) ಅವರ ತಂದೆ. ಅಂದರೆ ಸಿವಿ.ರಾಮನ್‌- ಚಂದ್ರಶೇಖರ್‌ ಅವರ ಚಿಕ್ಕಪ್ಪ.  

Advertisement

ರಾಮನ್‌ ಅವರದು ಬಾಲ್ಯ ಪ್ರತಿಭೆ. ದಾಖಲೆ ಅಂಕಗಳೊಂದಿಗೆ 12ರ ವಯಸ್ಸಿಗೇ ಮೆಟ್ರಿಕ್ಯುಲೇಶನ್‌ ಮುಗಿಸಿ (1900) ರಲ್ಲಿ ಮದ್ರಾಸಿನ ಪ್ರಸಿಡೆನ್ಸಿ ಕಾಲೇಜಿಗೆ ಸೇರಿದರು. ಹತ್ತೂಂಬತ್ತರ ಹರೆಯದಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಕಾಲೇಜು ದಿನಗಳಲ್ಲಿಯೇ  ರಾಯಲ… ಸೊಸೈಟಿ ಫಿಲಸಾಫಿಕಲ… ಟ್ರಾನ್ಸಾಕ್ಷನ್‌ನಲ್ಲಿ ಸಂಶೋಧನ ಲೇಖನಗಳ ಪ್ರಕಟಣೆ. ತಂದೆಯ ಒತ್ತಾಯಕ್ಕೆ ಭಾರತೀಯ ಹಣಕಾಸು ಸಂಸ್ಥೆಯ ಪ್ರವೇಶ ಪರೀಕ್ಷೆ ಬರೆದು, ಅದರಲ್ಲೂ ಪ್ರಥಮ ಸ್ಥಾನ ಪಡೆದು, ಕೋಲ್ಕತಾದಲ್ಲಿ  ಇಂಡಿಯನ… ಅಡಿಟ್‌ ಎಂಡ್‌ ಎಕೌಂಟ್ಸ್‌ ವಿಭಾಗದಲ್ಲಿ ಅಧಿಕಾರಿಯಾದರು. ಇಂಡಿಯನ್‌ ಕಲ್ಟಿವೇಷನ್‌ ಆಫ್ ಸೈ®Õ… ಎಂಬ ಸಂಸ್ಥೆಯ ಚಿಕ್ಕ ಪ್ರಯೋಗಾಲಯದಲ್ಲಿ ಬಿಡು ಹೊತ್ತಿನಲ್ಲಿ ಪ್ರಯೋಗ ಮಾಡುತ್ತ ಪ್ರತಿಷ್ಠಿತ ಸಂಶೋಧನ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದಂತೆ ಹೊಸ ಅವಕಾಶ ಬಂತು – ಕೋಲ್ಕತ್ತಾ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿಯುಕ್ತರಾದರು. (1913).

1921, ಸೆಪ್ಟೆಂಬರ್‌ ತಿಂಗಳು. ಇಂಗ್ಲೆಂಡಿನಲ್ಲಿ ವೈಜ್ಞಾನಿಕ ಸಮ್ಮೇಳನವೊಂದರಲ್ಲಿ ಭಾಗವಹಿಸಿ ಮರಳಿ ತವರಿಗೆ ರಾಮನ್‌ ಪ್ರಯಾಣಿಸುತ್ತಿ¨ªಾರೆ. ಹಡಗು ಮೆಡಿಟರೇನಿಯನ್‌ ಸಮುದ್ರದಲ್ಲಿ ಸಾಗುತ್ತಿದೆ. ಸಮುದ್ರದ  ಅಚ್ಚ ನೀಲಿ ಬಣ್ಣವನ್ನು ಕಂಡ ರಾಮನ್‌ ಬೆರಗಾದರು. ಅರೇ ಇದೇನಿದು – ಎಂಥ ನೀಲಿ – ಎಂಥ ಚೆಲುವು! ಬಣ್ಣನೆಗೆ ನಿಲುಕದ ಈ ಬಣ್ಣವು ಸಮುದ್ರಕ್ಕೆ ಬಂದದ್ದು ಹೇಗೆ ಎಂಬ ಪ್ರಶ್ನೆ ಅವರನ್ನು ಕಾಡತೊಡಗಿತು.  

ಹಾಗೆ ನೋಡಿದರೆ ಶುಭ್ರ ಬಾನಿನ ಬಣ್ಣವೂ ನೀಲಿಯೇ. ಬಾನಿನಿನ ನೀಲಿಗೆ ಅದಾಗಲೇ ಪರಿಪೂರ್ಣ ವಿವರಣೆಯನ್ನು ಬ್ರಿಟೀಷ್‌ ಭೌತ ವಿಜ್ಞಾನಿ ಲಾರ್ಡ್‌ರ್ಯಾಲೆ ಕೊಟ್ಟಿದ್ದರು.  ಭೂಮಿಯ ವಾಯುಮಂಡಲದ ಅಣು ಮತ್ತು ದೂಳಿನ ಕಣಗಳಿಂದ ಬಿಳಿಯ ಬೆಳಕಿನ  ಭಾಗವಾದ ನೀಲಿ ಬಣ್ಣ ಅತೀ ಹೆಚ್ಚು ಪ್ರಮಾಣದಲ್ಲಿ ಚದರಿಸಲ್ಪಟ್ಟು (ಖcಚಠಿಠಿಛಿrಜಿnಜ) ಇಡೀ ಬಾನು ನೀಲಿ ಬಣ್ಣದಿಂದ ಗೋಚರಿಸುತ್ತದೆ ಎಂದು ರ್ಯಾಲೆಯ ವಿವರಣೆಯಾಗಿತ್ತು.   ಬಾನಿಗೆ ನೀಲಿಯನ್ನು  ವಿವರಿಸಿದ ರ್ಯಾಲೆ, ಅದೇಕೋ ಏನೋ, ಸಾಗರದ ನೀಲಿಯನ್ನು ವಿವರಿಸುವಲ್ಲಿ ಎಡವಿದರು.  ಬಾನಿನ ನೀಲಿ ಸಾಗರದ ನೀರಿನಿಂದ ಪ್ರತಿಫ‌ಲಿಸಲ್ಪಟ್ಟು ಸಾಗರ ನೀಲವಾಗಿ ಕಾಣಿಸುತ್ತದೆಂದು ವಿವರಣೆ ನೀಡಿ ಸುಮ್ಮನಾದರು.  

ಆದರೆ ರಾಮನ್‌ ತನ್ನೆದುರು ಹರಡಿ ಚೆಲ್ಲಿದ ನೀಲ ನೀರಿನ ರಾಶಿಯನ್ನು ನೋಡುತ್ತಿದ್ದಂತೆ ನೀರಿನ ಅಣುಗಳಿಂದ ನೀಲಿ ಬಣ್ಣದ ಬೆಳಕು ಅತ್ಯಧಿಕ ಪ್ರಮಾಣದಲ್ಲಿ ಚದರಿಸಲ್ಪಡುವುದೇ ಕಾರಣವೆಂದು ಅವರಿಗನ್ನಿಸಿತು. ಹಡಗಿನಲ್ಲಿಯೇ ಸಮುದ್ರದ ನೀರನ್ನು ಬಾಟಲಿಗಳಲ್ಲಿ ಸಂಗ್ರಹಿಸಿದರು. ಅವರ ಕಿಸೆಯಲ್ಲಿರುತ್ತಿದ್ದ ಚಿಕ್ಕ ರೋಹಿತ ದರ್ಶಕ ರೋಹಿತದರ್ಶಕವನ್ನು ಬಳಸಿಕೊಂಡು ನೀರಿನಲ್ಲಿ ಬೆಳಕಿನ ಚದರಿಕೆಯನ್ನು ಪರೀಕ್ಷಿಸಿದರು. ಮುಂದಿನ ಹದಿನೈದು ದಿನಗಳ ಪಯಣದುದ್ದಕ್ಕೂ ಪ್ರಯೋಗ ಸಾಗಿತು. ಫ‌ಲಿತಾಂಶಗಳು ಸಂಶೋಧನ ಲೇಖನವಾಯತು.  ಮುಂಬಯಿಯಲ್ಲಿ ಇಳಿಯುತ್ತಲೇ ಪ್ರತಿಷ್ಠಿತ ನೇಚರ್‌ ಪತ್ರಿಕೆಗೆ ಲೇಖನವನ್ನು ರವಾನಿಸಿದರು. ಪ್ರಕಟವಾದ  ಆ ಲೇಖನದಲ್ಲಿ ಸಮುದ್ರದ ನೀಲಿಗೆ ಬೇರೆಯ ಕಾರಣವಿರಬಹುದೆನ್ನುವ ಗುಮಾನಿ ವ್ಯಕ್ತ ಪಡಿಸುತ್ತ ಇನ್ನಷ್ಟು ಸಂಶೋಧನೆಯ ಅಗತ್ಯವನ್ನು ಹೇಳಿದರು. 

ರಾಮನ್‌ ಮತ್ತು ಅವರ ಸಹದ್ಯೋಗಿ ಕೆ.ಎಸ್‌. ಕೃಷ್ಣನ್‌ ಪ್ರಯೋಗ ಆರಂಭಿಸಿದರು. ಏಳು ವರ್ಷಗಳ ಸತತ ಪರಿಶ್ರಮದ ಬಳಿಕ, 1928, ಫೆಬ್ರವರಿ 28, ಬೆಳಗ್ಗೆ ಹತ್ತರ ಹೊತ್ತಿಗೆ ತಮ್ಮ ಪ್ರಯೋಗದಲ್ಲಿ ರಾಮನ್‌ ಯಶಸ್ಸು ಕಂಡರು. ದ್ರವ  ಮಾಧ್ಯಮದಲ್ಲಿ ಅಣುಗಳು ಬೆಳಕಿನ ಅಲೆಗಳನ್ನು ಚದರಿಸುವ ಮೂಲಕ ಬೆಳಕಿನ ರೋಹಿತ ರೇಖೆಯ ಅಲೆಯುದ್ದ ವ್ಯತ್ಯಾಸವಾಗಿ ಹೊಸ ರೇಖೆಗಳು ಪ್ರಕಟವಾಗುವ ವಿನೂತನ ವಿದ್ಯಮಾನವನ್ನು ಅಂದು ರೋಹಿತ ದರ್ಶಕದಲ್ಲಿ ಗಮನಿಸಿದರು ಮತ್ತು ಆ ರೋಹಿತದ ಛಾಯಾ ಚಿತ್ರವನ್ನು ಪಡೆಯುವಲ್ಲಿ ಯಶಸ್ವಿಯಾದರು. 

ಅದೊಂದು ಯುರೇಕಾ ಎನ್ನಬಹುದಾದ ಪರಮೋತ್ಕೃಷ್ಟ ಕ್ಷಣವಾಗಿತ್ತು. ಸಂಜೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಮ್ಮ ಆವಿಷ್ಕಾರವನ್ನು ಘೋಷಿಸಿದರು. ಮರುದಿನ ಎಲ್ಲ ಪತ್ರಿಕೆಗಳಲ್ಲಿ ಕೋಲ್ಕತಾದ ಪೊ›ಫೆಸರ್‌ ಅವರಿಂದ ಬೆಳಕಿನ ನೂತನ ವಿದ್ಯಮಾನದ ಆವಿಷ್ಕಾರ ಎನ್ನುವ ಶಿರೋನಾಮೆಯಲ್ಲಿ ವಿವರವಾದ ವರದಿ ಪ್ರಕಟವಾಯಿತು. ಅಂದು ರಾಮನ್‌ ಘೋಷಿಸಿದ ಆ  ವಿದ್ಯಮಾನ ಮುಂದೆ ರಾಮನ್‌ ಪರಿಣಾಮ (Raman Effect)  ಎಂಬ ಹೆಸರಿನಲ್ಲಿ  ಸುಪ್ರಸಿದ್ಧವಾಯಿತು. ರಾಮನ್‌ ಪರಿಣಾಮವನ್ನು ಪ್ರಪಂಚಕ್ಕೆ ಪರಿಚಯಿಸಲಾದ ಫೆಬ್ರವರಿ 28ನ್ನು ದೇಶದಾದ್ಯಂತ ವಿಜ್ಞಾನ ದಿನವಾಗಿ 1987ರಿಂದ ಆಚರಿಸಲಾಗುತ್ತಿದೆ. 

ಲೇಸರ್‌ ಕಿರಣಗಳ ಆವಿಷ್ಕಾರವಾದ ಮೇಲೆ ಮೇಲೆ ರಾಮನ್‌ ಪರಿಣಾಮದ ಉಪಯುಕ್ತತೆ ಇನ್ನಷ್ಟು ವಿಸ್ತರಿಸಿತು. ಲೇಸರ್‌, ಇನಾ›ರೆಡ್‌, ಆಲ್ಟ್ರಾವಯೋಲೆಟ್‌ ಮತ್ತು ಎಕÕ…-ರೇ ರಾಮನ್‌ ಸ್ಪೆಕ್ಟ್ರೋಸ್ಕೋಪಿ ಇಂದು ಮುಂಚೂಣಿಯಲ್ಲಿರುವ ಸಂಶೋಧನಾ ಕ್ಷೇತ್ರಗಳು. ಭೌತ, ಜೀವ, ರಸಾಯನ ಮತ್ತು ಖಗೋಳ ವಿಜ್ಞಾನ ಹಾಗೂ ನ್ಯಾನೋ ತಂತ್ರಜ್ಞಾನದ ಹಲವು ವಿಭಾಗಗಳಲ್ಲಿ ರಾಮನ್‌ ಪರಿಣಾಮ ತನ್ನ ಪರಿಣಾಮ ಬೀರುತ್ತಿದೆ. 

ಈ  ಆಧಾರದಲ್ಲಿ ಕ್ಯಾನ್ಸರ್‌, ಡಯಾಬಿಟೀಸ್‌, ಮಲೇರಿಯಾ, ಆಸ್ತಮಾದ ಪತ್ತೆ ಮತ್ತು ಚಿಕಿತ್ಸೆಯಲ್ಲಿ  ರೆಸೊನೆಂಟ… ರಾಮನ್‌ ಸ್ಪಕ್ಟ್ರೋಸ್ಕೋಪಿ ಮಹತ್ತರ ಪಾತ್ರ ವಹಿಸುತ್ತಿದೆ. ಸ್ವಯಂ ರಾಮನ್‌ ನಾಟಕೀಯ ಆವಿಷ್ಕಾರಗಳ ಕುರಿತು ಹೇಳಿ¨ªಾರೆ  ವೈಜ್ಞಾನಿಕ ಆವಿಷ್ಕಾರ ಆಕಸ್ಮಿಕವಾಗಿ ಸಂಭವಿಸುತ್ತದೆನ್ನುವುದನ್ನು ಒಪ್ಪುವಂತಿಲ್ಲ. ಹಾಗೆ ಆಗುವುದಿದ್ದರೂ ಅದು ಅರ್ಹ ವ್ಯಕ್ತಿಗಳಿಗೆ ಮಾತ್ರ. ಎಚ್ಚರಿಕೆಯ ಕ್ರಮಬದ್ಧ ಪ್ರಯತ್ನಗಳಿಲ್ಲದೇ ವೈಜ್ಞಾನಿಕ ಆವಿಷ್ಕಾರ ಅಸಂಭವ. ರಾಮನ್‌ ಮತ್ತು ರಾಮನ್‌ ಪರಿಣಾಮ ಇದಕ್ಕೆ ಅತ್ಯುತ್ತಮ ನಿದರ್ಶನ. 

 ಡಾ| ಎ.ಪಿ.ರಾಧಾಕೃಷ್ಣ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next