Advertisement

ವಿಜ್ಞಾನ ವಿಭಾಗ: ನ್ಯೂ ಜನರೇಷನ್‌ ಕೋರ್ಸ್‌ಗಳಲ್ಲಿವೆ ಅವಕಾಶಗಳು

01:08 AM May 05, 2019 | Sriram |

ದ್ವಿತೀಯ ಪಿಯುಸಿ ಉತ್ತೀರ್ಣರಾಗಿ ಮುಂದಿನ ಶಿಕ್ಷಣ ಅವಕಾಶಗಳ ಆಯ್ಕೆಯಲ್ಲಿರುವವಿದ್ಯಾರ್ಥಿಗಳಿಗೆ ಕೆರಿಯರ್‌ ಮಾರ್ಗದರ್ಶನ ನೀಡುವ ಸದುದ್ದೇಶದಿಂದ “ಉದಯವಾಣಿ’ ಪತ್ರಿಕೆಯು ಶನಿವಾರ ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲ್‌ನ “ಶ್ರೀ ಭುವನೇಂದ್ರ’ ಸಭಾಭವನದಲ್ಲಿ
“ಪಿಯುಸಿ ಬಳಿಕ ಮುಂದೇನು’ ಎಂಬ ವಿಷಯವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ತಮ್ಮ ಪ್ರಶ್ನೆ, ಗೊಂದಲಗಳನ್ನು ಪರಿಣತರ ಬಳಿ ಕೇಳಿ ಬಗೆಹರಿಸಿಕೊಂಡರು.

Advertisement

ತಮ್ಮನ್ನು ಇನ್ನೊಬ್ಬರ ಜತೆ ಹೋಲಿಕೆ, ಅನುಕರಣೆ ಸಲ್ಲದು. ಪ್ರತಿಯೋರ್ವರ ಬೌದ್ಧಿಕ ಸಾಮರ್ಥ್ಯ ವಿಭಿನ್ನ. ಆದುದರಿಂದ ಮತ್ತೂಬ್ಬ ಏನು ಆಯ್ಕೆ ಮಾಡಿಕೊಂಡಿದ್ದಾನೆ ಎಂಬುದನ್ನು ಗಮನಿಸಿ ನಾವು ಆಯ್ಕೆ ಮಾಡಿಕೊಳ್ಳುವುದು ಸೂಕ್ತವಲ್ಲ. ಅದರ ಬದಲು ತನಗೆ ಯಾವುದು ಆಸಕ್ತಿ ಮತ್ತು ಕಾರ್ಯಸಾಧ್ಯವಾದ ವಿಷಯ ಎಂಬುದನ್ನು ಅರಿತು ಮುಂದಿನ ಶಿಕ್ಷಣ ಪಥವನ್ನು ನಿರ್ಧರಿಸಬೇಕು.

ನ್ಯೂಜನರೇಶನ್‌ ಕೋರ್ಸ್‌ಗಳು
ವಿಜ್ಞಾನ ಕ್ಷೇತ್ರದಲ್ಲಿ ಪ್ರಸ್ತುತ ಅನೇಕ ಕೋರ್ಸ್‌ ಗಳಿವೆ. ಜತೆಗೆ ಎರೋನಾಟಿಕಲ್‌ ಎಂಜಿನಿಯರಿಂಗ್‌, ಎರೋಸ್ಪೇಸ್‌ ಎಂಜಿಯನಿರಿಂಗ್‌, ರೋಬೋಕ್ಸ್‌, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸಿ, ತ್ರಿಡಿ ಪ್ರಿಂಟಿಂಗ್‌, ಸೈಬರ್‌ ಲಾ, ಗ್ರೀನ್‌ ಆರ್ಕಿ ಟೆಕ್ಚರ್‌, ಫಿಸಿಯೋಥೆರಪಿ ಸೇರಿದಂತೆ ಹಲವು ನ್ಯೂ ಜನರೇಶನ್‌ ಕೋರ್ಸ್‌ಗಳು ಮುಂದಿನ 10 ವರ್ಷಗಳಲ್ಲಿ ಬಹು ಬೇಡಿಕೆಯ ಕ್ಷೇತ್ರಗಳಾಗಲಿವೆ.

ಸಾಧ್ಯತೆಗಳು
ಪಿಸಿಎಂಬಿ, ಪಿಸಿಬಿ ಹಾಗೂ ಪಿಸಿಎಂ ಕಾಂಬಿ ನೇಶನ್‌ಗಳನ್ನು ಆಯ್ಕೆ ಮಾಡಿಕೊಂಡು ಪಿಯುಸಿ ಯಲ್ಲಿ ವ್ಯಾಸಂಗ ಮಾಡಿದವರಿಗೆ ಎಂಜಿನಿಯರ್‌, ವೈದ್ಯಕೀಯ, ದಂತ ವೈದ್ಯಕೀಯ, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಮೀನುಗಾರಿಕಾ ವಿಜ್ಞಾನ, ಬಿಎಸ್ಸಿ, ಎಂಎಸ್ಸಿ, ನರ್ಸಿಂಗ್‌, ಪೊರೋನ್ಸಿಕ್‌, ಬಿಎಎಂಎಸ್‌, ಬಿಫಾರ್ಮಾ, ಎಂಫಾರ್ಮಾ, ಪೈಲೆಟ್‌ ಲೈಸನ್ಸ್‌-ಎಸ್‌ಪಿಎಲ್‌, ಪಿಪಿಎಲ್‌, ಸಿಪಿಎಲ್‌, ಸಂಶೋಧನೆ, ಹೋಮ್‌ ಸೈನ್ಸ್‌ ಸೇರಿದಂತೆ ಅನೇಕ ಕೋರ್ಸ್‌ಗಳಿವೆ. ಸಿಇಟಿ, ನೀಟ್‌ಗಳಲ್ಲಿ ಇರುವ ಸೀಟುಗಳು ಹಾಗೂ ಪ್ರಸ್ತುತ ಹೊಂದಿರುವ ಉದ್ಯೋಗ ಅವಕಾಶಗಳ ಮಾಹಿತಿ ಪಡೆದುಕೊಂಡು ತಮ್ಮ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಬೇಕು.

ಸಿದ್ಧತೆ ಅಗತ್ಯ
ಎಂಜಿನಿಯರಿಂಗ್‌ ಶಿಕ್ಷಣಕ್ಕೆ ಸಿಇಟಿ, ವೈದ್ಯಕೀಯ ಶಿಕ್ಷಣಕ್ಕೆ ನೀಟ್‌ ಪರೀಕ್ಷೆ ಬರೆಯಬೇಕು. ಪರೀಕ್ಷೆಯಲ್ಲಿ ಮಾಡುವ ನಿರ್ವಹಣೆ ಮೂಲಕ ಸೀಟುಗಳ ಪಡೆಯುವ ಅವಕಾಶವಿರುತ್ತದೆ. ಸಿಇಟಿಯಲ್ಲಿ ಉತ್ತಮ ರ್‍ಯಾಂಕ್‌ ಪಡೆದರೆ ಸರಕಾರಿ ಸೀಟು, ಇಲ್ಲದಿದ್ದರೆ ಪಾವತಿ ಸೀಟು ಅಥವಾ ಮ್ಯಾನೇಜ್‌ಮೆಂಟ್‌ ಕೋಟಾದಲ್ಲಿ ಸೀಟು ಪಡೆಯಲು ಅವಕಾಶವಿದೆ. ಆದುದರಿಂದ ವಿದ್ಯಾರ್ಥಿಗಳು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.

Advertisement

ಸ್ಪರ್ಧಾತ್ಮಕ ಪರೀಕ್ಷೆಗಳತ್ತಲೂ ಗಮನವಿರಲಿ
ಪ್ರಸುತ್ತ ಐಎಎಸ್‌, ಐಪಿಎಸ್‌, ಕೆಪಿಎಸ್‌ ಕೆಎಎಸ್‌, ಐಆರ್‌ಎಸ್‌ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರ ಭಾಗವಹಿಸುವಿಕೆ ಅತ್ಯಂತ ಕಡಿಮೆ. ಇತ್ತೀಚಿನ ವರ್ಷಗಳ ಉದಾ ಹರಣೆ ತೆಗೆದುಕೊಂಡರೆ ಜಿಲ್ಲೆಯ ಇಬ್ಬರು ಮಾತ್ರ ಐಪಿಎಸ್‌ ಹುದ್ದೆಗೇರಿದ್ದಾರೆ. ಆದುದರಿಂದ ಜಿಲ್ಲೆಯ ಯುವಜನತೆ ಇಂತಹ ಸ್ಪರ್ಧಾತ್ಮಕ ಪರೀಕ್ಷಗಳತ್ತಲೂ ಗಮನ ಹರಿಸಬೇಕು.

-ಡಾ| ಅನಂತ ಪ್ರಭು
ಪ್ರೊ| ಸಹ್ಯಾದ್ರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ನ ಪ್ರೊಫೆಸರ್‌

ಕಳೆದ ಕೆಲವು ವರ್ಷಕ್ಕೆ ಹೋಲಿಸಿದರೆ ವಾಣಿಜ್ಯವಿಭಾಗಕ್ಕೆ ಹೆಚ್ಚಿನ ಅವಕಾಶಗಳು ಒದಗಿಬರುತ್ತಿವೆ. ದ್ವಿತೀಯ ಪಿಯುಸಿ ಪೂರ್ಣಗೊಂಡ ಬಳಿಕ ಮುಂದೇನು? ಎಂದು ಆಲೋಚನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಲವು ಅವಕಾಶಗಳಿವೆ. ಪಿಯುಸಿಯಲ್ಲಿ ವಾಣಿಜ್ಯ ವಿಭಾಗಗಳನ್ನು ಆಯ್ಕೆ ಮಾಡಿದರೆ ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ಅಧ್ಯಯನ ಮಾಡಬಹುದು.
-ಸುಧೀರ್‌ ಎಸ್‌. ಶೆಣೈ

ಕಲಾವಿಭಾಗವನ್ನು ಆಯ್ಕೆಮಾಡಿಕೊಂಡು ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಮುಂದಿನ ಹೆಜ್ಜೆ ಬಗ್ಗೆ ಗೊಂದಲಕೀಡಾಗಿರುತ್ತಾರೆ. ಇದರಿಂದಾಗಿ ಅವರು ಸೂಕ್ತ ಆಯ್ಕೆ ಮಾಡುವಲ್ಲಿ ಎಡವುತ್ತಾರೆ. ಹಾಗಾಗಿ ಭವಿಷ್ಯವನ್ನೇ ನಿರ್ಧರಿಸುವ ಕಾಲಘಟ್ಟದಲ್ಲಿ ಉತ್ತಮ ಹಾಗೂ ಅರ್ಹ ಕೋರ್ಸ್‌ ಆಯ್ಕೆ ಪ್ರತಿಯೊಬ್ಬರ ಹೊಣೆ
-ಡಾ| ನೋರ್ಬರ್ಟ್‌ ಲೋಬೋ

ಯಾವುದೇ ಕ್ಷೇತ್ರದಲ್ಲಿ ಉದ್ಯೋಗ ಗಳಿಸುವುದಕ್ಕಿಂತ ಮುನ್ನ ಆಯಾ ಕ್ಷೇತ್ರದ ಬಗ್ಗೆ ವಿದ್ಯಾರ್ಥಿಗಳು ಪ್ರತಿದಿನ ಅಪ್‌ಡೇಟ್‌ ಆಗುತ್ತಿರಬೇಕು. ಆಗ ಅವಕಾಶಗಳು ತಾವಾಗಿಯೇ ಹುಡುಕಿಕೊಂಡು ಬರುತ್ತವೆ.
-ಡಾ| ಅನಂತ್‌ ಪ್ರಭು ಜಿ.

ಪ್ರಯೋಜನಕಾರಿ ಕಾರ್ಯಕ್ರಮ
ವಿದ್ಯಾರ್ಥಿಗಳಿಗೆ ಪಿಯುಸಿ ಶಿಕ್ಷಣದ ಬಳಿಕ ಮುಂದಿನ ಆಯ್ಕೆಗಳ ಬಗ್ಗೆ ಮಾಹಿತಿ ನೀಡುವ ಉದಯವಾಣಿಯ ಈ ಕಾರ್ಯಕ್ರಮ ಉಪಯುಕ್ತ ವಾಗಿದೆ. ಸಂಪನ್ಮೂಲ ವ್ಯಕ್ತಿಗಳು ಉತ್ತಮ ಮಾಹಿತಿ ನೀಡಿದ್ದು, ಹೆಚ್ಚು ಪ್ರಯೋಜನಕಾರಿಯಾಗಿದೆ.
-ರೇಖಾ,
ಪೋಷಕರು ಮಂಗಳೂರು

ಸೂಕ್ತ ಮಾರ್ಗದರ್ಶನ
ಕಾಮರ್ಸ್‌ ಶಿಕ್ಷಣದಲ್ಲಿ ಮುಂದಿನ ಅವಕಾಶಗಳ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ಎದುರು ನೋಡುತ್ತಿದ್ದೆ. ಈ ಕಾರ್ಯಕ್ರಮದಲ್ಲಿ ಆವಶ್ಯಕ ಮಾಹಿತಿಗಳು ಸಿಕ್ಕಿವೆ.ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಹೆಚ್ಚು ಉಪಯುಕ್ತ.
-ಶ್ರವಣ್‌,
ವಿದ್ಯಾರ್ಥಿ, ಮೂಡುಬಿದಿರೆ

ಹೊಸ ವಿಷಯ ತಿಳಿಯಿತು
ಕಾರ್ಯಕ್ರಮ ತುಂಬಾ ಖುಷಿ ನೀಡಿದೆ. ಪಿಯುಸಿ ಬಳಿಕ ಮುಂದೇನು ಎಂಬ ಬಗ್ಗೆ ವಿದ್ಯಾರ್ಥಿಗಳು ತಜ್ಞರಿಂದ ಮಾರ್ಗದರ್ಶನ ಬಯಸುತ್ತಾರೆ. ಕಾರ್ಯಕ್ರಮದಲ್ಲಿ ಉಪಯುಕ್ತ ಮಾಹಿತಿಗಳು ದೊರಕಿವೆ. ಅನೇಕ ಹೊಸ ವಿಷಯಗಳ ಬಗ್ಗೆಯೂ ತಿಳಿದುಕೊಳ್ಳುವಂತಾಗಿದೆ.
-ಶ್ರೇಯಾ,
ವಿದ್ಯಾರ್ಥಿನಿ, ಮಂಗಳೂರು

ವಿದ್ಯಾರ್ಥಿಗಳಿಗೆ ಅನುಕೂಲ
ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ ಅವಕಾಶಗಳು ಹಾಗೂ ಸಾಧ್ಯತೆಗಳ ಬಗ್ಗೆ ಕಾರ್ಯಕ್ರಮದಲ್ಲಿ ಒಳ್ಳೆಯ ಮಾಹಿತಿಗಳು ಲಭ್ಯವಾಗಿದೆ. ವಿದ್ಯಾರ್ಥಿಗಳಿಗೆ ಇಂಥ ಕಾರ್ಯಕ್ರಮಗಳು ತುಂಬಾ ಅನುಕೂಲವಾಗಿವೆ.
-ನಮ್ರತಾ,
ವಿದ್ಯಾರ್ಥಿನಿ, ಮಡಿಕೇರಿ

ಒಳ್ಳೆಯ ಕಾರ್ಯಕ್ರಮ
ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅಗತ್ಯವಿದೆ. ಉದಯವಾಣಿ ಆಯೋಜಿಸಿರುವ ಕಾರ್ಯಕ್ರಮದಿಂದ ಸಾಕಷ್ಟು ಮಾಹಿತಿಗಳು ದೊರಕಿದೆ. ಒಳ್ಳೆಯ ಕಾರ್ಯಕ್ರಮ.
-ಪ್ರಮೀತಾ,
ವಿದ್ಯಾರ್ಥಿನಿ, ಪುತ್ತೂರು

ಮಾಹಿತಿಪೂರ್ಣ ಕಾರ್ಯಕ್ರಮ
ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ಯೋಜನೆ ರೂಪಿಸಲು ಇಂತಹ ಕಾರ್ಯಕ್ರಮಗಳು ಅನುಕೂಲ. ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಒಳ್ಳೆಯ ಮಾಹಿತಿಗಳು ಸಿಕ್ಕಿವೆ.
-ರೋನಾಲ್ಡ್‌,
ಪೋಷಕರು ಮಂಗಳೂರು

ಬೇಡಿಕೆ ಕೋರ್ಸ್‌ ಬಗ್ಗೆ ತಿಳಿಸಿತು
ಈಗ ಇರುವ ಕೋರ್ಸ್‌ ಗಳಲ್ಲದೆ ಮುಂದಕ್ಕೆ ಹೆಚ್ಚು ಬೇಡಿಕೆ ಪಡೆದುಕೊಳ್ಳಲಿರುವ ಕೆಲವು ಕೋರ್ಸ್‌ಗಳ ಬಗ್ಗೆಯೂ ಕಾರ್ಯಕ್ರಮ ಬೆಳಕು ಚೆಲ್ಲಿದೆ. ಉಪಯುಕ್ತ ಮಾಹಿತಿಗಳು ದೊರಕಿವೆ.
-ದಾಮೋದರ ನಾೖಕ್‌,
ಪೋಷಕರು, ಉರ್ವಸ್ಟೋರ್‌

ಗೊಂದಲ ನಿವಾರಣೆಗೆ ಸಹಕಾರಿ
ಪಿಯುಸಿ ಬಳಿಕ ಮುಂದೇನು ಎಂಬ ಬಗ್ಗೆ ಬಹಳಷ್ಟು ಗೊಂದಲಗಳಿರುತ್ತವೆ. ಇದನ್ನು ನಿವಾರಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ. ಇನ್ನು ಮುಂದಕ್ಕೂ ಇಂತಹ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿ.
ಸೌಮ್ಯಾ ರೈ,
ಪೋಷಕರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next