Advertisement

ತಾಯಿ ಮಡಿಲಿನಿಂದ ಶಾಲೆ ಮಡಿಲಿಗೆ ಸಾಗಿದ ಅಕ್ಷರ ಬಂಡಿ

01:31 AM May 31, 2019 | mahesh |

ಸುಬ್ರಹ್ಮಣ್ಯ: ಮಾವಿನ ಎಲೆಯ ಹಸುರು ತೋರಣ, ಹೆತ್ತವರ ವಾಹನ ಗಳ ಮೇಲೆ ಅಕ್ಷರಗಳ ಬಣ್ಣದಾಕರ. ಅಲಂಕೃತ ಆಟೋ ರಿಕ್ಷಾ ಬಂಡಿ ಜಾಥಾ, ಬಾಳೆಗಿಡ ಗಳಿಂದ ಸಿಂಗರಿಸಿದ ಶಾಲೆ, ಆವರಣ ಮತ್ತು ವಿದ್ಯೆ ಕುರಿತಾದ ಧ್ಯೇಯ ವಾಕ್ಯಗಳ ಭಿತ್ತಿಪತ್ರ, ಘೋಷಣೆ, ತೊಟ್ಟಿಲಿನ ಸಿಂಗಾರ, ವೇದಿಕೆಯ ಅಲಂಕಾರ, ಘಮಘಮ ಪಾಯಸದ ಸುವಾಸನೆ. ಇವೆಲ್ಲವೂ ಕಂಡುಬಂದಿದ್ದು ಶಾಲಾ ಪ್ರಾರಂಭೋತ್ಸವದ ದಿನ ಬುಧವಾರ ಕೈಕಂಬ ದ.ಕ.ಜಿ.ಪಂ. ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ.

Advertisement

ಶಾಲೆಗೆ ಸೇರಿದ ಪುಟಾಣಿಗಳನ್ನು ಸ್ವಾಗತಿಸಲು ಮತ್ತೆ ರಜೆ ಮುಗಿಸಿ ಶಾಲೆಗೆ ಮರಳಿ ಬಂದ ಮಕ್ಕಳಲ್ಲಿ ಹೊಸ ಉತ್ಸಾಹ ತುಂಬಲು ಶಾಲೆ ಹಾಗೂ ಊರವರು ಸೇರಿ ನಡೆಸಿದ ವಿನೂತನ ಕಾರ್ಯಕ್ರಮ ಶಾಲಾ ಪರಿಸರದಲ್ಲಿ ಹಬ್ಬದ ವಾತಾವರಣವನ್ನೆ ಸೃಷ್ಟಿಸಿತ್ತು. ಶಾಲೆಯನ್ನು ಸ್ವಚ್ಛಗೊಳಿಸಿ ಪ್ರಾರಂಭೋ ತ್ಸವಕ್ಕೆ ಸಿದ್ಧತೆಗೊಳಿಸಲಾಗಿತ್ತು.

ಹಸುರು ಶಾಲೆ ಪ್ರಶಸ್ತಿ
1949ರಲ್ಲಿ ಸ್ಥಾಪನೆಯಾಗಿ ವಜ್ರ ಮಹೋತ್ಸವವನ್ನು ಆಚರಿಸಿಕೊಂಡು ಮೆಚ್ಚುಗೆಗೆ ಪಾತ್ರವಾಗಿರುವ ಕೈಕಂಬ ಶಾಲೆ ಪುತ್ತೂರು ತಾ|ನ ವಿಷನ್‌ ಪುತ್ತೂರು ಶಾಲೆ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ. ಸುಂದರ ಹೂದೋಟ, ಮಧ್ಯಾಹ್ನದ ಅನ್ನ ದಾಸೋಹಕ್ಕೆ ಬಯೋಗ್ಯಾಸ್‌ ಹಾಗೂ ತರಕಾರಿ ತೋಟವಿದೆ. ಮಳೆ ನೀರನ್ನು ಇಂಗಿಸುವ ಮಳೆಕೊಯ್ಲು, ಜಲ ಮರುಪೂರಣವೂ ಇದೆ. ಗುರುಕುಲ ಶಿಕ್ಷಣ ಪದ್ಧತಿ ನೆನಪಿಸುವ ವರ್ಣ ಕುಟೀರ ಕಾಣಬಹುದು. ವರಾಂಡದಲ್ಲಿ ಹೂವಿನ ಮತ್ತು ಔಷಧೀಯ ಗಿಡಗಳನ್ನು ಬೆಳೆಯಲಾಗಿದೆ. ಸತತ ಮೂರು ವರ್ಷಗಳಿಂದ ಹಸುರು ಶಾಲಾ ಪ್ರಶಸ್ತಿ ಈ ಶಾಲೆಗೆ ಸಂದಿದೆ.

ಸ್ಮಾರ್ಟ್‌ ತರಗತಿ
ವಿದ್ಯಾರ್ಥಿಗಳ ಬುದ್ಧಿಮತ್ತೆ ಹೆಚ್ಚಿಸಲು ಸ್ಮಾರ್ಟ್‌ ತರಗತಿ ವ್ಯವಸ್ಥೆ ಇದೆ. ಪ್ರಸಕ್ತ ವರ್ಷದಲ್ಲಿ ಆನ್‌ಲೈನ್‌ ಲೈಬ್ರರಿ ತೆರೆಯಲಾಗುತ್ತಿದೆ. ವಿಜ್ಞಾನ ಗ್ರಂಥಾಲಯ, ಕಲಿಕೆ ಜತೆ ಕೃಷಿ ಪಾಠ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಕುರಿತು ಮಾಹಿತಿ, ದೇಶಭಕ್ತಿ, ಸಾಮಾಜಿಕ ಚಟುವಟಿಕೆ, ಪ್ರತಿಭಾ ಕಾರಂಜಿ ಮೊದಲಾದ ಕ್ಷೇತ್ರಗಳ ಕುರಿತು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತದೆ.

ಪ್ರಾರಂಭೋತ್ಸವ ಉದ್ಘಾಟನೆ
ಬುಧವಾರ ನಡೆದ ಶಾಲಾ ಪ್ರಾರಂಭೋತ್ಸವವನ್ನು ಬಿಳಿನೆಲೆ ಗ್ರಾ.ಪಂ. ಸದಸ್ಯ ಶಿವಪ್ರಸಾದ್‌ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಮೋಹನ್‌ ಪಳ್ಳಿಗದ್ದೆ, ಮುಖ್ಯ ಶಿಕ್ಷಕಿ ಪುಷ್ಪಾವತಿ ಕೆ.ಬಿ. ಶಿಕ್ಷಕಿಯರಾದ ಪವಿತ್ರಾ, ಅಂಬಿಕಾ, ವನಿತಾ, ಸಿದ್ಧಲಿಂಗಸ್ವಾಮಿ, ಸಿಬಂದಿಗಳು, ವಿದ್ಯಾರ್ಥಿಗಳು, ನಾಗೇಶ್‌ ಕೋಟೆಬೈಲು, ಹೂವಪ್ಪ ಬ್ರಾಂತಿಕೊಚ್ಚಿ, ಮೋಹನ್‌ ಕಳಿಗೆ, ನೀಲಪ್ಪ ಗೌಡ ಕಳಿಗೆ, ಧರ್ಮಪಾಲ ಗೌಡ, ಕೇಶವ ಗೌಡ, ತಿಲೇಶ್‌, ಡೀಕಯ್ಯ ಗೌಡ, ಪುಷ್ಪಾವತಿ, ದಮಯಂತಿ, ಸುಕುಮಾರ ಗೌಡ ಚೇರು, ದೇವಪ್ಪ ಗೌಡ ಚೇರು, ದಿನೇಶ್‌ ಗುಂಡಿಗದ್ದೆ, ರೇಖಾ ಚಾವಡಿಬಾಗಿಲು, ಗಿರಿಧರ ಗೌಡ, ಆಶಾ ಕಾರ್ಯಕರ್ತೆ ಕುಸುಮಾವತಿ, ಊರ ಶಾಲಾಭಿಮಾನಿಗಳು ಉಪಸ್ಥಿತರಿದ್ದರು.

Advertisement

ಸ. ಶಾಲೆ ಎಲ್ಲರ ಸಹಕಾರದಿಂದ ಸಾಧ್ಯ
ಮಕ್ಕಳ ಶಿಕ್ಷಣಕ್ಕೆ ಯಾವುದೇ ಕೊರತೆ ಆಗದಂತೆ ಉತ್ತಮ ವಾತಾವರಣ ಸೃಷ್ಟಿಸಲಾಗುತ್ತಿದೆ. ಶಿಕ್ಷಣ ಇಲಾಖೆ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕ ವೃಂದ, ಪೋಷಕರು, ಶಿಕ್ಷಣ ಪ್ರೇಮಿಗಳ ಜತೆಗೆ ದಾನಿಗಳ ಸಹಕಾರದಿಂದ ಇದೆಲ್ಲವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿದೆ.
– ಪುಷ್ಪಾವತಿ ಕೆ.ಬಿ. ಮುಖ್ಯ ಶಿಕ್ಷಕಿ

ಆಟೋದಲ್ಲಿ ಸಂಚರಿಸಿದರು
ಮುಖ್ಯ ಶಿಕ್ಷಕಿ, ಸಹಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳ ಹೆತ್ತವರು, ಊರವರು, ಶಿಕ್ಷಣ ಪ್ರೇಮಿ ಗಳು ಸಕಲ ತಯಾರಿಯೊಂದಿಗೆ ಅಕ್ಷರ ಬಂಡಿಯ ಜಾಥಕ್ಕೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next