Advertisement

ನೈಜತೆ ಕಳೆದುಕೊಂಡ ಶಾಲಾ ಮೈದಾನ

06:26 PM Oct 28, 2021 | Team Udayavani |

ಹುಬ್ಬಳ್ಳಿ: ಟೋಕಿಯೋ ಮತ್ತು ಪ್ಯಾರಾ ಒಲಿಂಪಿಕ್‌ ನಲ್ಲಿನ ಸಾಧನೆ ದೇಶದಲ್ಲಿ ಕ್ರೀಡಾಸಕ್ತಿ ಹಾಗೂ ಹೊಸ ಪ್ರತಿಭೆಗಳಿಗೆ ಪ್ರೇರಣೆ ನೀಡಿದೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಶಾಲಾಭಿವೃದ್ಧಿ ಹೆಸರಲ್ಲಿ ಶಾಲಾ ಮೈದಾನಗಳಿಗೆ ಪೇವರ್ (ಸಿಮೆಂಟ್‌ ಇಟ್ಟಿಗೆ ನೆಲಹಾಸು) ಗಳನ್ನು
ಹಾಕಲಾಗುತ್ತಿದ್ದು, ಸರಕಾರಿ ಶಾಲೆಗಳ ವೈಶಿಷ್ಟ್ಯ ಸಾರುವ ಕ್ರೀಡಾ ಮೈದಾನಗಳು ನೈಜತೆ ಕಳೆದುಕೊಳ್ಳುತ್ತಿವೆ. ಈ ಕಾರ್ಯ ಕ್ರೀಡಾ ಪ್ರತಿಭೆ ಅರಳುವ ಮುನ್ನವೇ ಚಿವುಟುವಂತಹ ಕೆಲಸ ಆಗುತ್ತಿದೆ.

Advertisement

ಜ್ಞಾನಾರ್ಜನೆಗೆ ವಿದ್ಯಾ ದೇಗುಲಗಳಿಗೆ ತರಗತಿ ಕೊಠಡಿಗಳಷ್ಟೇ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಆಟದ ಮೈದಾನಗಳು ಅತೀ ಮುಖ್ಯ. ಹೀಗಾಗಿ ಶಾಲೆಗಳು ಕನಿಷ್ಟ ಆಟದ ಮೈದಾನ ಹೊಂದಿರಬೇಕು ಎನ್ನುವುದು ಸರಕಾರದ ನಿಯಮವೇ ಇದೆ. ಜಿಲ್ಲೆಯ ಆದೆಷ್ಟೋ ಶಾಲೆಗಳ ಶಿಕ್ಷಕರು ಅಕ್ಕಪಕ್ಕದ ಮೈದಾನಗಳಿಗೆ ಅಲೆದಾಡುತ್ತಾರೆ. ಪರಿಸ್ಥಿತಿ ಇಷ್ಟೊಂದು ಶೋಚನೀಯವಾಗಿರುವಾಗ ಇರುವ ಮೈದಾನಗಳಿಗೆ ಶಾಲೆ ಅಭಿವೃದ್ಧಿಯ ಹೆಸರಲ್ಲಿ ಪೇವರ್ ಹಾಕಲಾಗುತ್ತಿದೆ. ಕೋವಿಡ್‌ ಸಂದರ್ಭದಲ್ಲಿ ಪೇವರ್ ಗಳು ಹಾಕಲಾಗಿದ್ದು, ಇದೀಗ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿರುವಾಗ ಮೈದಾನದ ಮಹತ್ವ ಅರಿವಾಗುತ್ತಿದೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಈ ಕಾರ್ಯಕ್ಕೆ ಜಿಲ್ಲೆಯ ಕ್ರೀಡಾಸಕ್ತರೇ ದಂಗಾಗಿದ್ದಾರೆ.

ಸರಕಾರಿ ಯೋಜನೆ: ಮಳೆಗಾಲದಲ್ಲಿ ನೀರು ಮೈದಾನದಲ್ಲಿ ಸಂಗ್ರವಾಗಿ ಮಕ್ಕಳಿಗೆ ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಲು ಕಷ್ಟವಾಗುತ್ತದೆ ಎನ್ನುವ ಕಾರಣದಿಂದಾಗಿ ಶಾಲಾಭಿವೃದ್ಧಿ ಹೆಸರಲ್ಲಿ 303 ಶಾಲೆಗಳಿಗೆ ಪೇವರ್ ಹಾಕಲು ಕ್ರಿಯಾ ಯೋಜನೆ ರೂಪಿಸಿದ್ದರು. ಸದಸ್ಯವಾರು ಹಂಚಿಕೆಯಾಗಿದ್ದ ಅನುದಾನದಲ್ಲಿ ಬಹುತೇಕ ಶಾಲೆಗಳಲ್ಲಿ ಈ ಕಾರ್ಯ ಮುಗಿದಿದ್ದು, ಕೆಲವೆಡೆ ಕೆಲಸ ಪ್ರಗತಿಯಲ್ಲಿದೆ. ಸಣ್ಣ-ಪುಟ್ಟ ಶಾಲೆಗಳ ಇಡೀ ಮೈದಾನವನ್ನು ಪೇವರ್ ಆವರಿಸಿಕೊಂಡಿವೆ.

ಇನ್ನೂ ದೊಡ್ಡ ಮೈದಾನಗಳಿದ್ದಲ್ಲಿ ಅರ್ಧ ಮೈದಾನ ಪೇವರ್ ಮಯವಾಗಿದೆ. ಹೀಗಾಗಿ ಅದೆಷ್ಟೋ ಶಾಲೆಗಳಲ್ಲಿ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಖೋಖೋ ಮೈದಾನಗಳನ್ನು ಪೇವರ್ ನುಂಗಿ ಹಾಕಿದೆ. ವಿಪರ್ಯಾಸ ಅಂದರೆ ಇಂತಹ ಯೋಜನೆ ಕೈಗೊಳ್ಳಲಾಗುತ್ತಿದೆ ಎನ್ನುವ ಮಾಹಿತಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಇರಲಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಯಾವ ಲಾಬಿ?: ನೀಡಿರುವ ಅನುದಾನವನ್ನು ಶಾಲೆಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಬಳಸುವುದಾದರೆ ಸಾಕಷ್ಟು ಕಾರ್ಯಗಳಿವೆ. ಇತ್ತೀಚೆಗಿನ ನೆರೆಯಿಂದಾಗಿ ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಇನ್ನೂ ಹಳೇ ಶಾಲೆಗಳು ಪುನರುಜ್ಜಿವನಕ್ಕೆ ಕಾಯುತ್ತಿವೆ. ಸುಮಾರು 150 ಶಾಲೆಗಳಲ್ಲಿ 385 ಕೊಠಡಿಗಳು ದುರಸ್ತಿಗೆ ಕಾದಿವೆ. ಇದಲ್ಲಿದೆ ಶಾಲೆಗೆ ಬೇಕಾದ ಮೂಲ ಸೌಲಭ್ಯಗಳಾದ ಶೌಚಾಲಯ, ಕುಡಿಯುವ ನೀರು, ಕ್ರೀಡಾ ಸಾಮಗ್ರಿಗಳು, ಮೈದಾನದ ಅಭಿವೃದ್ಧಿಯಂತಹ ಹಲವು ಕಾರ್ಯಗಳನ್ನು ಕೈಗೊಳ್ಳಬಹುದಾಗಿದೆ.

Advertisement

ಆದರೆ, ಇಷ್ಟೆಲ್ಲಾ ಸಮಸ್ಯೆಗಳನ್ನು ಬಿಟ್ಟು ಜಿಲ್ಲಾದ್ಯಂತ ಶಾಲೆಗಳಿಗೆ ಪೇವರ್ ಹಾಕಲು ಮುಂದಾಗಿರುವುದರ ಹಿಂದೆ ಯಾವ ಲಾಬಿ ಕೆಲಸ ಮಾಡುತ್ತಿದೆ ಎಂಬುವುದು ಕ್ರೀಡಾಸಕ್ತರ ಪ್ರಶ್ನೆಯಾಗಿದೆ.

ಮೈದಾನದ ನೈಜತೆ ಉಳಿಸಬೇಕಾಗಿದೆ
ಒಂದಲ್ಲೊಂದು ಕಾರಣದಿಂದ ಶಾಲಾ ಮೈದಾನಗಳಲ್ಲಿ ಇಂತಹ ಅಭಿವೃದ್ಧಿ ಕಾಮಗಾರಿ ಪ್ರಯೋಗ ನಡೆದರೆ ಗ್ರಾಮೀಣ ಪ್ರತಿಭೆಗಳಿಗೆ ಕನಿಷ್ಟ ಸೌಲಭ್ಯವೂ ಇಲ್ಲದಂತಾಗಿ ಬೆಳೆಯುವ ಸಿರಿಯನ್ನು ಮೊಳಕೆಯಲ್ಲೇ ಚಿವುಟಿದಂತಾಗಲಿದೆ. ಮಳೆಗಾಲದ ಸಂದರ್ಭಲ್ಲಿ ಶಾಲೆಯ ಪ್ರಾಂಗಣದಲ್ಲಿ ಪ್ರಾರ್ಥನೆ ಇತರೆ ಚಟುವಟಿಕೆಗಳು ನಡೆಸಬಹುದು. ಆದರೆ, ಸಣ್ಣ ಮೈದಾನಗಳು ಪೇವರ್ಗಳು ನುಂಗಿ ಹಾಕಿರುವಾಗ ಸಣ್ಣ-ಪುಟ್ಟ ಆಟದ ಸಮಯದಲ್ಲಿ ಏನಾದರೂ ಅವಘಡವಾದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಆಗಿರುವ ಯಡವಟ್ಟು ಸರಿಪಡಿಸಿ ಉಳಿದ ಶಾಲೆಗಳ ಮೈದಾನಗಳನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕಾಗಿದೆ.

ಕ್ರೀಡೆಗೆ ಕೊಡಲಿ ಪೆಟ್ಟು
ಶತಮಾನ ಕಂಡ ಶಾಲೆಗಳು ಲಕ್ಷಾಂತರ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಿದೆ. ಆದರೆ, ದುರಸ್ತಿಗೆ ಅನುದಾನ ಕೊರತೆಯಿಂದ ಸ್ಮಾರಗಳಾಗುತ್ತಿವೆ. ಇಂತಹ ಶಾಲೆಗಳನ್ನು ಉಳಿಸಿಕೊಳ್ಳಲು ಕೆಲವೆಡೆ ಸ್ಥಳೀಯರು, ಹಳೇ ವಿದ್ಯಾರ್ಥಿಗಳು ದೇಣಿಗೆ ಎತ್ತಿ ದುರಸ್ತಿ ಕೆಲಸಕ್ಕೆ ಮುಂದಾಗಿದ್ದಾರೆ. ಅಂತಹ ಶಾಲೆಗಳು ಜಿಪಂ ಅಧಿಕಾರಿಗಳು, ಜನಪ್ರತಿನಿಧಿಗಳ ಕಣ್ಣಿಗೆ ಕಾಣುತ್ತಿಲ್ಲವೇನೋ?. ಮಳೆಗಾಲದ ಮೂರ್‍ನಾಲ್ಕು ತಿಂಗಳು ಮೈದಾನ ಕೆಸರಾಗುತ್ತಿದೆ ಎನ್ನುವ ಕಾರಣಕ್ಕೆ ಮೈದಾನದ ನಡುವೆ ಪೇವರ್, ಕೆಲವಡೆ ಇಡೀ ಮೈದಾನವೇ ಪೇವರ್ಮಯವಾಗಿದೆ. ಪೇವರ್ ವುಳ್ಳ ಮೈದಾನಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸುವುದು ಅಸಾಧ್ಯವಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಗೆ ಕೊಡಲಿಪೆಟ್ಟು ಬೀಳುತ್ತಿದೆ.

ಗ್ರಾಮೀಣ ಭಾಗದಲ್ಲಿ ಅದೆಷ್ಟೋ ದಾನಿಗಳು ತಮ್ಮ ಗ್ರಾಮದ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ಭೂ ದಾನ ಮಾಡಿದ್ದಾರೆ. ಆದರೆ ಮುಂದಾಲೋಚನೆ ಇಂದಿನ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಲ್ಲಿ ಇಲ್ಲದಿರುವುದು ದುರದುಷ್ಟಕರ. ಶಾಲೆಗಳು ಹಲವು ಸೌಲಭ್ಯಗಳ ಕೊರತೆಯಿದ್ದರೂ ಜಿಲ್ಲಾದ್ಯಂತ ನೂರಾರು ಶಾಲೆಗಳಿಗೆ ಪೇವರ್ ಹಾಕಲು ಮುಂದಾಗಿರುವುದರ ಹಿಂದೆ ಏನಿದೆ ಎಂಬುವುದು ಅರ್ಥವಾಗುತ್ತಿಲ್ಲ.
ಮಲ್ಲಿಕಾರ್ಜುನ ಬಡಿಗೇರ,
ಹೆಬಸೂರು ಗ್ರಾಮ

*ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next