Advertisement

ಟೆಂಡರ್‌ ಪ್ರಕ್ರಿಯೆ ಆರಂಭ; ಜ್ಞಾನಪೀಠ ಪುರಸ್ಕೃತರು ಕಲಿತ ಶಾಲೆಗೆ ಅಭಿವೃದ್ಧಿ ಭಾಗ್ಯ

12:53 AM Feb 14, 2022 | Team Udayavani |

ಕೋಟ: ರಾಜ್ಯದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಶಿಕ್ಷಣ ಪಡೆದ ಶಾಲೆಗಳನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುವ ಯೋಜನೆಯೊಂದನ್ನು ಸರಕಾರ ಈ ಹಿಂದೆ ಜಾರಿಗೊಳಿಸಿತ್ತು. ಆದರೆ ಇದರ ಅನುಷ್ಠಾನ ವಿಳಂಬವಾಗಿ ಹಳ್ಳಹಿಡಿಯುವ ಆತಂಕ ಎದುರಾಗಿತ್ತು. ಈಗ ಆ ಎಲ್ಲ ಶಾಲೆಗಳ ಕಾಮಗಾರಿ ಟೆಂಡರ್‌ಗೆ ಅನುಮೋದನೆ ನೀಡ ಲಾಗಿದ್ದು, ಹಲವು ಕಡೆ ಟೆಂಡರ್‌ ಪೂರ್ಣಗೊಂಡಿದೆ ಹಾಗೂ ಹಂತಹಂತವಾಗಿ ಕಾಮಗಾರಿ ನಡೆಯಲಿದೆ ಎಂದು ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

Advertisement

ರಾಜ್ಯದ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳು ಶಿಕ್ಷಣ ಪಡೆದ 11 ಸರಕಾರಿ ಶಾಲೆಗಳನ್ನು 16.88 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಯೋಜನೆಯನ್ನು ರಾಜ್ಯ ಸರಕಾರ 2021ರ ಬಜೆಟ್‌ನಲ್ಲಿ ಘೋಷಿಸಿತ್ತು. ಅನಂತರ ಇದಕ್ಕಾಗಿ ಅನುದಾನ ಮೀಸಲಿರಿಸಿ, 2021-22ನೇ ಆರ್ಥಿಕ ವರ್ಷ ಕೊನೆಗೊಳ್ಳುವುದರೊಳಗೆ ಅನುಷ್ಠಾನಗೊಳಿಸುವಂತೆ 2021 ಜು. 17ರಂದು ಮರು ಆದೇಶ ನೀಡಿತ್ತು. ಆದರೆ ಹಲವು ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿರಲಿಲ್ಲ. ಈ ಬಗ್ಗೆ ಉದಯವಾಣಿ 2021 ಡಿ. 26ರಂದು “ಜ್ಞಾನಪೀಠ ಪುರಸ್ಕೃತರು ಕಲಿತ ಶಾಲೆಗಳಿಗೆ ಇನ್ನೂ ಕೈಗೂಡದ ಅಭಿವೃದ್ಧಿ ಭಾಗ್ಯ’ ಎನ್ನುವ ವಿಶೇಷ ವರದಿ ಪ್ರಕಟಿಸಿತ್ತು. ಈಗ ಕಾಮಗಾರಿ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದ್ದು, ಯೋಜನೆ ಶೀಘ್ರದಲ್ಲಿ ಕೈಗೂಡಲಿದೆ.

11 ಶಾಲೆಗಳ ಪೈಕಿ ಈಗಾಗಲೇ ಹಲವು ಶಾಲೆಗಳ ಅಭಿವೃದ್ಧಿ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಬಾಕಿ ಉಳಿದವುಗಳ ಬಗ್ಗೆ ಕೆಲವೇ ದಿನದಲ್ಲಿ ಟೆಂಡರ್‌ ಮುಗಿಸಿ ಕಾಮಗಾರಿ ಆರಂಭಿಸಲಾಗುತ್ತದೆ. ಆಯಾಯ ಜಿ.ಪಂ. ಸಿಇಒಗೆ ಕಾಮಗಾರಿಯ ಕಾರ್ಯಾನುಷ್ಠಾನದ ಹೊಣೆಗಾರಿಕೆ ನೀಡಲಾಗಿದ್ದು, ಯಾವುದಾದರು ಶಾಲೆಯ ಕಾಮಗಾರಿಗೆ ಹಿನ್ನಡೆಯಾದಲ್ಲಿ ಸಿಇಒ ಗಮನಕ್ಕೆ ತರಬಹುದು.
-ಡಾ| ವಿಶಾಲ್‌ ಆರ್‌., ಆಯುಕ್ತರು,
ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ

Advertisement

Udayavani is now on Telegram. Click here to join our channel and stay updated with the latest news.

Next