Advertisement

ಶಾಲಾ ಶಿಕ್ಷಣ: ಸಾಮುದಾಯಿಕ ಮರುವಿನ್ಯಾಸ ಅಗತ್ಯ

02:17 AM Dec 28, 2020 | sudhir |

ಈ ಹಿಂದಿನ ಯಾವುದೇ ಆರೋಗ್ಯ ತುರ್ತು ಪರಿಸ್ಥಿತಿಗಳು ಕೊರೊನಾ ಸಾಂಕ್ರಾಮಿಕವು ಪಸರಿ ಸಿದಷ್ಟು ಋಣಾತ್ಮಕ ಪರಿಣಾಮ ಗಳನ್ನು ಶಿಕ್ಷಣ ವ್ಯವಸ್ಥೆಯ ಮೇಲೆ ಬೀರಿದ ಪುರಾವೆಗಳಿಲ್ಲ. ಈ ಸಾಂಕ್ರಾಮಿಕವು ಜಾಗತಿಕ ಶೈಕ್ಷಣಿಕ ಸಮುದಾಯವನ್ನು ಹಾಲಿ ಬೋಧನ ವ್ಯವಸ್ಥೆಯಿಂದ ದೂರ ಉಳಿಯವಂತೆ ಮತ್ತು ಆನ್‌ಲೈನ್‌ನಂತಹ ಬೋಧನ ವಿಧಾನಗಳತ್ತ ಚಿತ್ತ ಹರಿಸುವಂತೆ ಮಾಡಿದೆ.

Advertisement

ಶಾಲೆಗಳನ್ನು ಯಾವಾಗ ಮತ್ತು ಹೇಗೆ ತೆರೆಯಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳುವಲ್ಲಿ ಸ್ಥಳೀಯ ಪರಿಸ್ಥಿತಿಗಳು ಮತ್ತು ಸಮುದಾಯದ ಗ್ರಹಿಕೆಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ರಾಜ್ಯದಲ್ಲಿ ಕಾಲೇಜು ಶಿಕ್ಷಣದ ಪುನರಾರಂಭದ ಅನಂತರದ ಕೊರೊನಾ ಬೆಳವಣಿಗೆಗಳು ಮಕ್ಕಳ ಹೆತ್ತವರನ್ನು ಮತ್ತಷ್ಟು ಭೀತಿಗೆ ತಳ್ಳುವಂತೆ ಮಾಡಿವೆ. ಈ ಕಾರಣದಿಂದಾಗಿಯೇ ಶಾಲೆಗಳನ್ನು ನಿಯಮಿತ ಕ್ರಮದಲ್ಲಿ ಪುನರಾರಂಭಿಸುವುದಕ್ಕೆ ಮಕ್ಕಳ ಹೆತ್ತವರು ಸಹಮತವನ್ನು ವ್ಯಕ್ತಪಡಿಸುತ್ತಿಲ್ಲ ಹಾಗೂ ಈಗಾಗಲೇ ಚಾಲ್ತಿಯಲ್ಲಿರುವ ವರ್ಚುವಲ್‌ ಶಿಕ್ಷಣ ವ್ಯವಸ್ಥೆಯ ಬಗೆಗೆ ಹೆಚ್ಚು ಒಲವನ್ನು ಹೊಂದಿದ್ದಾರೆ.

ವರ್ಚುವಲ್‌ ಶಿಕ್ಷಣವು ಒಂದು ಕಡೆ ಬೋಧನೆ- ಕಲಿಕೆ ಯಲ್ಲಿ ನಿರಂತರತೆಯನ್ನು ಪ್ರತಿಪಾದಿಸಿದರೆ ಮತ್ತೂಂದೆಡೆ ಈ ಸಾಂಕ್ರಾಮಿಕ ಸಮಯದಲ್ಲಿ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಸಂದಿಗ್ಧ ಪರಿಸ್ಥಿತಿಯ ನಿವಾರಕವಾಗಿ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯೂ ವರ್ಚುವಲ್‌ ಶಿಕ್ಷಣವು ತನ್ನದೇ ಆದ ಸವಾಲುಗಳನ್ನು ಎದುರಿಸುತ್ತಿದ್ದು, ತಾಂತ್ರಿಕತೆ, ಯೋಜನೆ ಮತ್ತು ಸಂಘಟನೆ ವಿಷಯದ ಕಾರಣಗಳಿಂದಾಗಿ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆ ಮೇಲೆ ಹಾಗೂ ಶಿಕ್ಷಕ-ವಿದ್ಯಾರ್ಥಿ ನಡುವಿನ ಶೈಕ್ಷಣಿಕ ಅನುಸಂಧಾನದ ಮೇಲೆ ಅಷ್ಟು ರಚನಾತ್ಮಕ ಪರಿಣಾಮವನ್ನು ಬೀರುತ್ತಿಲ್ಲ ಎಂಬುದನ್ನು ಮರೆಮಾಚಲಾಗದು. ಶಾಲಾ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಕಾರ್ಯಕ್ರಮಗಳನ್ನು ಹೇಗೆ ವಿನ್ಯಾಸಗೊಳಿಸುವುದು ಮತ್ತು ಆಯೋಜಿಸುವುದು ಎಂಬುದರ ಕುರಿತು ಪ್ರಸ್ತುತ ನಮ್ಮಲ್ಲಿ ಯಾವುದೇ ನಿಖರ ಮಾರ್ಗಸೂಚಿ ಅಥವಾ ನೀತಿಗಳಿಲ್ಲ. ಈ ಕಾರಣದಿಂದಾಗಿ ಖಾಸಗಿ ಶಾಲೆಗಳು ಅನು ಕೂಲತೆ, ತಿಳಿವಳಿಕೆ ಹಾಗೂ ಸಂಪನ್ಮೂಲಗಳ ಲಭ್ಯತೆಗೆ ಅನುಗುಣವಾಗಿ ತಮ್ಮದೇ ಆದ ಆವೃತ್ತಿಯನ್ನು ಹೊಂದಿವೆ. ಅಲ್ಲದೆ ವರ್ಚುವಲ್‌ ಶಿಕ್ಷಣಕ್ಕೆ ಎಲ್ಲಿಲ್ಲದ ಮಹತ್ವವನ್ನು ನೀಡು ವುದು ದೀರ್ಘಾವಧಿಯಲ್ಲಿ ಶಿಕ್ಷಣ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಕಾರಣವಾಗಬಹುದು. ಆನ್‌ಲೈನ್‌ ಶಿಕ್ಷಣದ ತಾಂತ್ರಿಕತೆಯು ಮುಂದೊಂದು ದಿನ ತರಗತಿ ಬೋಧನೆಯ ರಚನಾತ್ಮಕತೆಯನ್ನೇ ಹಿನ್ನೆಲೆಗೆ ಸರಿಸುವ ಅಪಾಯವನ್ನು ಅಲ್ಲಗಳೆಯುವಂತಿಲ್ಲ.

ಮಕ್ಕಳು ಬಹುಶಃ ಮೊದಲ ಕೆಲವು ದಿನಗಳು ಶಾಲೆಗೆ ಹೋಗದಿರುವುದನ್ನು ಆನಂದಿಸಿರಬಹುದು. ಆದರೆ ಶಾಲೆಯ ಪರಿಚಿತ ವಾತಾವರಣದಲ್ಲಿ ಮಕ್ಕಳು ತಮ್ಮದೇ ಆದ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಂಡು ಎಲ್ಲ ರೊಂದಿಗೂ ಬೆರೆಯುತ್ತಿದ್ದ, ನಲಿಯುತ್ತಿದ್ದ ಸುಂದರ ಕ್ಷಣ ಗಳಿಂದ ವಂಚಿತವಾಗಿರುವುದು ಮಾತ್ರ ಸುಳ್ಳಲ್ಲ. ಶಾಲೆ ಯಲ್ಲಿ ಕಲಿಯುವುದು ಕಲಿಕೆಯ ಒಂದು ಪ್ರಮುಖ ಮಾರ್ಗ. ಶಾಲೆಗಳನ್ನು ಮುಚ್ಚಿದ ಅನಂತರ ಮಕ್ಕಳು ತಮ್ಮ ಬೆಳವಣಿಗೆಗೆ ಇದ್ದಂಥ ಅನೇಕ ಅವಕಾಶಗಳನ್ನು ಕಳೆದುಕೊಂಡಿ ದ್ದಾರೆ. ಅಲ್ಲದೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾ ರ್ಥಿಗಳು ಹೆಚ್ಚು ತೊಂದರೆ ಗೊಳಗಾಗಿದ್ದಾರೆ.

ಮಕ್ಕಳಲ್ಲಿ ಬೌದ್ಧಿಕ ಬೆಳವಣಿಗೆಯ ವೇಗ ಹೆಚ್ಚಿರುತ್ತದೆ. ಕ್ಷಿಪ್ರ ಮೆದುಳಿನ ಬೆಳವಣಿಗೆಯ ಸಮಯದಲ್ಲಿ ಆರಂಭಿಕ ಶಿಕ್ಷಣವು ಮಕ್ಕಳ ಮೇಲೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಸಂದರ್ಭದಲ್ಲಿ ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾದರೆ ಅದು ಶಾಶ್ವತವಾಗಿ ನಕಾರಾತ್ಮಕ ಪರಿಣಾಮವನ್ನು ಮಕ್ಕಳ ಮೇಲೆ ಬೀರಬಹುದು. ಕಲಿಕೆಯಲ್ಲಿ ಮಕ್ಕಳ ವಿಶ್ವಾಸವನ್ನು ಕುಗ್ಗಿಸುವುದು ಸುಲಭ. ಆದರೆ ಅನಂತರ ಅದನ್ನು ಪುನರ್‌ ಸ್ಥಾಪಿಸುವುದು ಕಷ್ಟ. ಅಂದರೆ ವಾರ್ಷಿಕ, ಅರ್ಧ ವಾರ್ಷಿಕ ರಜಾ ಅವಧಿಯು ಮಕ್ಕಳ ಮೇಲೆ ಅಗಾಧವಾದ ಪರಿಣಾಮಗಳನ್ನು ಬೀರುತ್ತದೆ. ಶಾಲೆಗಳನ್ನು ದೀರ್ಘಾ ವಧಿಯವರೆಗೆ ಮುಚ್ಚಿದರೆ, ಬಹುತೇಕ ಮಕ್ಕಳು ಈಗಾಗಲೇ ತಿಳಿದಿರುವುದನ್ನು ಮರೆಯಲು ಪ್ರಾರಂಭಿಸುತ್ತಾರೆ. ಅಲ್ಲದೆ ಮತ್ತೆ ಅದನ್ನು ಸರಿಪಡಿಸುವುದು ಹೆಚ್ಚು ಕಷ್ಟ. ಇದಕ್ಕೆ ಒಂದು ಸಣ್ಣ ಉದಾಹರಣೆ ಎಂದರೆ, ಬೇಸಗೆ ರಜೆಯ ಅನಂತರ ಮಕ್ಕಳನ್ನು ಪುನಃ ಶಾಲಾ ಕ್ರಮಗಳಿಗೆ ಒಗ್ಗಿಕೊಳ್ಳುವಂತೆ ಮಾಡುವುದು ಎಷ್ಟು ಕಷ್ಟ ಎಂಬುದು ಹೆತ್ತವರು ಮತ್ತು ಶಿಕ್ಷಕರಿಗೆ ಮಾತ್ರ ಗೊತ್ತು.

Advertisement

ಶಾಲೆಗಳನ್ನು ಯಾವಾಗ ಮತ್ತು ಏಕೆ ಪುನಃ ತೆರೆಯ ಬೇಕೆಂಬುದರ ಬಗೆಗಿನ ನಿರ್ಧಾರ ಹೆಚ್ಚು ಸಮತೋಲನ ದಲ್ಲಿರಬೇಕು. ಶಾಲೆಗಳನ್ನು ಮುಚ್ಚುವುದು ಅಥವಾ ತೆರೆಯುವುದು ಮಕ್ಕಳ ಒಟ್ಟಾರೆ ಯೋಗಕ್ಷೇಮದ ಮೇಲೆ ಬೀರಬಹುದಾದ ಋಣಾತ್ಮಕ ಪರಿಣಾಮಗಳ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ. ಶಾಲೆಗಳನ್ನು ತೆರೆಯುವಾಗ ಮಕ್ಕಳಿಗೆ ಕೊರೊನಾ ವೈರಸ್‌ ಹರಡದಂತೆ ಮುಂಜಾಗರೂಕತೆಯನ್ನು ತೆಗೆದುಕೊಳ್ಳಬೇಕಿದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಮರು ವಿನ್ಯಾಸವನ್ನು ಸಹ ಮಾಡಬೇಕಾಗುತ್ತದೆ. ಶಾಲೆಗಳನ್ನು ಪುನರಾರಂಭಿ ಸುವುದು ಮಕ್ಕಳ ಶೈಕ್ಷಣಿಕ ವ್ಯಕ್ತಿತ್ವದ ಹಿತದೃಷ್ಟಿಯಿಂದ ಅತ್ಯಾವಶ್ಯಕ.

ಈಗಿನ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಮಗು ಸುರಕ್ಷಿತವಾಗಿ ಮನೆಯಲ್ಲಿದ್ದರೆ ಸಾಕು ಎಂಬ ಆಲೋಚನೆ ಹೆತ್ತವರದ್ದು. ಮಕ್ಕಳು ಶಾಲೆಗೆ ಹೋಗಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುವ ಅಧಿಕಾರವನ್ನು ಮಕ್ಕಳ ಹೆತ್ತವರಿಗೆ ನೀಡುವ ಬದಲು, ಆಡಳಿತ ಯಂತ್ರವು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇನ್ನು ಹೆಚ್ಚು ಜವಾಬ್ದಾರಿಯುತವಾಗಿ ಕಾರ್ಯನಿರ್ವ ಹಿಸುವ ಅಗತ್ಯವಿದೆ. ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ರಚನಾತ್ಮಕ ಸಾಧ್ಯತೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಸಮ ತೋಲನದ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ.

ಲಸಿಕೆ ಬರುವ ಮೊದಲು ಶಾಲೆಗಳು ಮತ್ತೆ ವಿದ್ಯಾರ್ಥಿಗಳಿಗೆ ತೆರೆದುಕೊಳ್ಳಲು ಸಾಧ್ಯವಿಲ್ಲ ಎಂಬ ನಿರ್ಣಯಕ್ಕೆ ಬರಬಾರದು. ಈ ನಿಟ್ಟಿನಲ್ಲಿ ಶಾಲೆಗಳನ್ನು ಪುನಃ ತೆರೆಯುವ ಪ್ರಕ್ರಿಯೆಯನ್ನು ಸರಕಾರಗಳು ಸಮುದಾಯಗಳೊಂದಿಗೆ ಸೇರಿ ಮರುವಿನ್ಯಾಸಗೊಳಿಸ ಗೊಳಿಸಬೇಕು. ಹಾಗಾದಾಗ ಮಾತ್ರ ಮುಂದಿನ ಕೆಲವು ತಿಂಗಳುಗಳಲ್ಲಿ ನಮ್ಮ ಶಾಲಾ ವ್ಯವಸ್ಥೆಯನ್ನು ಪುನರ್‌ಸ್ಥಾಪಿಸುವಲ್ಲಿ ಯಶಸ್ಸು ಕಾಣಬಹುದು.

– ಡಾ|ಯುವರಾಜ ಯು. ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next