Advertisement

ಏನೇನಾಯ್ತು: ಅತೃಪ್ತ ಶಾಸಕರ ಅರ್ಜಿ ವಿಚಾರಣೆ, ನಾಳೆ ಬೆಳಗ್ಗೆ “ಸುಪ್ರೀಂ” ತೀರ್ಪು ಪ್ರಕಟ

09:14 AM Jul 17, 2019 | Nagendra Trasi |

ನವದೆಹಲಿ: ಕಾಂಗ್ರೆಸ್, ಜೆಡಿಎಸ್ ನ ಅತೃಪ್ತ ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ವಾದ, ಪ್ರತಿವಾದ ಆಲಿಸಿದ ಸಿಜೆಐ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಬುಧವಾರ ಬೆಳಗ್ಗೆ 10-30ಕ್ಕೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.

Advertisement

ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಹಾಗೂ ಅನರ್ಹತೆ ಕುರಿತು ನಾಳೆ ಬೆಳಗ್ಗೆವರೆಗೂ ಯಥಾಸ್ಥಿತಿ ಮುಂದುವರಿಯಲಿದೆ ಎಂದು ಸುಪ್ರೀಂ ಪೀಠ ಈ ಸಂದರ್ಭದಲ್ಲಿ ಸೂಚನೆ ನೀಡಿದೆ.

ಇಂದು ಬೆಳಗ್ಗೆ ಹತ್ತು ಮಂದಿ ಅತೃಪ್ತ ಶಾಸಕರ ಕುರಿತು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರು. ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಕೂಡಲೇ ಅಂಗೀಕರಿಸಬೇಕು ಎಂದು ವಾದಿಸಿದ್ದರು.

ಅತೃಪ್ತ ಶಾಸಕರ ಪರ ಮುಕುಲ್ ರೋಹ್ಟಗಿ ವಾದ ಮಂಡನೆ ಮುಕ್ತಾಯವಾದ ನಂತರ ಸ್ಪೀಕರ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಪ್ರತಿವಾದ ಮಂಡಿಸಿದ್ದರು.

ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡ ಇದೆ. ಸ್ಪೀಕರ್ ಅವರು ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ ಎಂದು ಸಿಂಘ್ವಿ ಪ್ರತಿವಾದ ಮಂಡಿಸಿದ್ದರು.

Advertisement

ಶಾಸಕರು ರಾಜೀನಾಮೆ ನೀಡಿ ಇಷ್ಟು ದಿನ ಕಳೆದರೂ ಸ್ಪೀಕರ್ ರಾಜೀನಾಮೆ ಯಾಕೆ ಸ್ವೀಕರಿಸಿಲ್ಲ. ನಾವು ಸ್ಪೀಕರ್ ಅವರ ಕಾರ್ಯವ್ಯಾಪ್ತಿಯನ್ನು ಪ್ರಶ್ನಿಸುವುದಿಲ್ಲ. ಆದರೆ ನೀವು ನಿಮ್ಮ ಅನುಕೂಲತೆಗೆ ತಕ್ಕಂತೆ ನಮ್ಮನ್ನು ಪ್ರಶ್ನಿಸುವಂತಿಲ್ಲ ಎಂದು ಸಿಜೆಐ ಅಭಿಪ್ರಾಯವ್ಯಕ್ತಪಡಿಸಿದ್ದರು.

ಭೋಜನ ವಿರಾಮದ ನಂತರ ಸಿಎಂ ಕುಮಾರಸ್ವಾಮಿ ಪರ ವಕೀಲರಾದ ರಾಜೀವ್ ಧವನ್ ವಾದ ಮಂಡಿಸಿ, ಶಾಸಕರು ಸಚಿವರಾಗುವ ಆಮಿಷಕ್ಕೊಳಗಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವದ ಬುಡವನ್ನೇ ಅಲುಗಾಡಿಸುತ್ತಿದೆ. ಗುರುವಾರ ಅಧಿವೇಶನ ನಡೆಯಲಿದ್ದು, ಅಂದು ಹಣಕಾಸು ವಿಧೇಯಕ ಮಂಡನೆಯಾಗಲಿದೆ. ಇಂತಹ ಸಂದರ್ಭದಲ್ಲಿ ಶಾಸಕರು ಸರ್ಕಾರವನ್ನು ಬೀಳಿಸುವ ಯೋಜನೆ ರೂಪಿಸಿದ್ದಾರೆ. ಹೀಗಾಗಿ ಇಂತಹ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಬಾರದು ಎಂದು ವಾದ ಮಂಡಿಸಿದ್ದರು.

ಸುದೀರ್ಘವಾಗಿ ವಾದ, ಪ್ರತಿವಾದ ಆಲಿಸಿದ ಸಿಜೆಐ ನೇತೃತ್ವದ ಸುಪ್ರೀಂಕೋರ್ಟ್ ಪೀಠ ತೀರ್ಪನ್ನು ಕಾಯ್ದಿರಿಸಿದ್ದು, ಬುಧವಾರ ಬೆಳಗ್ಗೆ 10-30ಕ್ಕೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next