Advertisement

ಎಸ್ಸಿ ಎಸ್ಟಿ ಮುಂಬಡ್ತಿ ಪ್ರಕರಣ:ಆ 14 ಕ್ಕೆ ವಿಚಾರಣೆ ಮುಂದೂಡಿಕೆ

06:55 AM Jul 28, 2018 | Team Udayavani |

ಬೆಂಗಳೂರು:ಎಸ್ಸಿ ಎಸ್ಟಿ ನೌಕರರಿಗೆ ಮುಂಬಡ್ತಿ ಸಂಬಂಧ ರಾಜ್ಯ ಸರ್ಕಾರದ  ನೂತನ ಕಾಯ್ದೆ ಅನುಷ್ಠಾನಗೊಳಿಸುವ ಕುರಿತ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಒಂದು ವಾರ ಸಮಯ ನೀಡಿದ್ದು, ಆಗಸ್ಟ್‌ 14 ಕ್ಕೆ ವಿಚಾರಣೆ ಮುಂದೂಡಿದೆ.

Advertisement

ಬಿ.ಕೆ. ಪವಿತ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ 2017 ರ ಫೆಬ್ರವರಿ 9 ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿಗೆ ಪರ್ಯಾಯವಾಗಿ ಎಸ್ಸಿ ಎಸ್ಟಿ ನೌಕರರ ಹಿತ ಕಾಯಲು 2018 ಜೂನ್‌ ತಿಂಗಳಲ್ಲಿ ಹೊಸ ಕಾಯ್ದೆ ತಂದಿದ್ದು, ರಾಜ್ಯ ಸರ್ಕಾರದ ನೂತನ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದರಿಂದ ರಾಜ್ಯ ಸರ್ಕಾರ ಕಾಯ್ದೆ ಅನುಷ್ಠಾನ ಗೊಳಿಸಲು ಮುಂದಾಗಿತ್ತು.

ರಾಜ್ಯ ಸರ್ಕಾರದ ಹೊಸ ಕಾಯ್ದೆಯನ್ನು ಅಹಿಂಸಾ (ಅಲ್ಪ ಸಂಖ್ಯಾತ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ) ಸಂಘಟನೆಯವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ ಆದೇಶ ಪಾಲಿಸದೇ ರಾಜ್ಯ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿದೆ. ಅಲ್ಲದೇ ಹೊಸ ಕಾಯ್ದೆ ತಂದಿರುವುದು ಕಾನೂನು ಬಾಹಿರ ಎಂದು ಮೇಲ್ಮನವಿ ಸಲಿಸಿದ್ದರು.

ರಾಜ್ಯ ಸರ್ಕಾರವೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದರಿಂದ ಈ ಕುರಿತು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ಆಗಸ್ಟ್‌ 14 ಕ್ಕೆ ಮುಂದೂಡಿದೆ.ಈ ನಡುವೆ ರಾಜ್ಯ ಸರ್ಕಾರ ನೂತನ ಕಾಯ್ದೆಯನ್ವಯ ಎಸ್ಸಿ ಎಸ್ಟಿ ನೌಕರರಿಗೆ ಯಾವುದೇ ಮುಂಬಡ್ತಿ ನೀಡದಂತೆ ಮೌಖೀಕ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next