Advertisement

ಸಿಖ್‌ ಹತ್ಯಾಕಾಂಡದ ಮರು ತನಿಖೆ: ಕೊನೆಗಾದರೂ ನ್ಯಾಯ ಸಿಗಲಿ 

10:05 AM Jan 12, 2018 | |

1984ರ ಸಿಖ್‌ ಹತ್ಯಾಕಾಂಡ ಪ್ರಕರಣ ಬರೋಬ್ಬರಿ 34 ವರ್ಷಗಳ ಬಳಿಕ ಮತ್ತೂಮ್ಮೆ ತನಿಖೆಗೊಳಪಡಲಿದೆ. ಇದಕ್ಕಾಗಿಯೇ ಸುಪ್ರೀಂ ಕೋರ್ಟ್‌ ದಿಲ್ಲಿ ಹೈಕೋರ್ಟ್‌ ನ್ಯಾಯಾಧೀಶ ಶಿವ ನಾರಾಯಣ್‌ ದಿಂಗ್ರ ನೇತೃತ್ವದಲ್ಲಿ ಹೊಸದಾಗಿ ಮೂರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಐಪಿಎಸ್‌ ಅಧಿಕಾರಿಗಳಾದ ರಾಜದೀಪ್‌ ಸಿಂಗ್‌ ಮತ್ತು ಅಭಿಷೇಕ್‌ ಧುಲರ್‌ ಸಿಟ್‌ನ ಉಳಿದಿಬ್ಬರು ಸದಸ್ಯರು. ಈ ಪೈಕಿ ಸಿಂಗ್‌ ಸೇವಾ ನಿವೃತ್ತರಾಗಿದ್ದಾರೆ. ವಿಶೇಷವೆಂದರೆ ಇದೇ ದಿಂಗ್ರ ದಿಲ್ಲಿಯ ಸೆಶನ್ಸ್‌ ನ್ಯಾಯಾಧೀಶರಾಗಿದ್ದ ವೇಳೆ ಸಿಖ್‌ ಹತ್ಯಾಕಾಂಡ ಪ್ರಕರಣದ ವಿಚಾರಣೆ ನಡೆಸಿದ್ದರು. ಹತ್ಯಾಕಾಂಡದ 186 ಪ್ರಕರಣಗಳನ್ನು ಮರು ತನಿಖೆಗೊಳಪಡಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. 2014ರಲ್ಲಿ ರಚಿಸಿದ ಸಿಟ್‌ಗೆ 293 ಪ್ರಕರಣಗಳ ತನಿಖೆ ನಡೆಸಲು ಸೂಚಿಸಲಾಗಿತ್ತು. ಈ ಪೈಕಿ 250 ಪ್ರಕರಣಗಳ ತನಿಖೆ ನಡೆಸಿದ ಸಿಟ್‌ 241 ಪ್ರಕರಣಗಳಲ್ಲಿ ತನಿಖೆ ಮುಕ್ತಾಯ ವರದಿ ಸಲ್ಲಿಸಿತ್ತು. ಇದಕ್ಕೆ ಬಲವಾದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ವೋತ್ಛ ನ್ಯಾಯಾಲಯ ಹೊಸ ಸಿಟ್‌ ರಚಿಸಿದೆ. ಹಿಂದಿನ ಸಿಟ್‌ನಲ್ಲಿದ್ದವರು ಸುಪ್ರೀಂ ಕೋರ್ಟಿನ ಇಬ್ಬರು ವಿಶ್ರಾಂತ ನ್ಯಾಯಾಧೀಶರು ಎನ್ನುವುದು ಗಮನಾರ್ಹ ಅಂಶ. ಈ ಸಿಟ್‌ 186 ಪ್ರಕರಣಗಳ ತನಿಖೆ ನಡೆಸದೆಯೇ ಮುಕ್ತಾಯ ವರದಿ ಸಲ್ಲಿಸಿತ್ತು. ಹೀಗಾಗಿ ನ್ಯಾಯಾಲಯವೇ ರಚಿಸುವ ಸಿಟ್‌ಗಳು ಎಷ್ಟು ವಿಶ್ವಾಸಾರ್ಹ ಎಂಬ ಸಂದೇಹ ಇದೆ.. 

Advertisement

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಅವರ ಸಿಖ್‌ ಅಂಗರಕ್ಷಕರೇ ಗುಂಡಿಕ್ಕಿ ಕೊಂದ ಘಟನೆಗೆ ಪ್ರತೀಕಾರವಾಗಿ ನಡೆದ ಸಿಖVರ ಮಾರಣಹೋಮ ದೇಶದ ಇತಿಹಾಸದಲ್ಲಿ ಎಂದೂ ಅಳಿಸಲಾಗದ ಕಪ್ಪು ಚುಕ್ಕೆ. ಬಾಬರಿ ಕಟ್ಟಡ ನೆಲಸಮವಾದ ಬಳಿಕ ನಡೆದ ದಂಗೆ ಹಾಗೂ 2002ರ ಗುಜರಾತ್‌ ಹಿಂಸಾಚಾರಗಳನ್ನು ಈ ಸಾಲಿಗೆ ಸೇರಿಸಬಹುದು. ಈ ಎಲ್ಲ ಪ್ರಕರಣಗಳಲ್ಲಿ ಆಡಳಿತ ವ್ಯವಸ್ಥೆ ನಡೆದುಕೊಂಡ ರೀತಿ ಇಂದಿಗೂ ಶಂಕಾಸ್ಪದವಾಗಿಯೇ ಉಳಿದಿದೆ. ಇಂದಿರಾ ಹತ್ಯೆಯಿಂದ ರೊಚ್ಚಿಗೆದ್ದ ಜನರು ತೋರಿಸಿದ ಆವೇಶದ ಪ್ರತಿಸ್ಪಂದನವೇ ಸಿಖರ ಮಾರಣಹೋಮ ಎಂದು ನಂಬಿಸುವ ಪ್ರಯತ್ನಗಳು ಆಗಿದ್ದರೂ ಅನಂತರ ನಡೆದ ತನಿಖೆಗಳು ಇದೊಂದು ವ್ಯವಸ್ಥಿತ ಹತ್ಯಾಕಾಂಡ ಎನ್ನುವುದನ್ನು ರುಜು ಪಡಿಸಿವೆ. ದಿಲ್ಲಿಯೊಂದರಲ್ಲೇ ಸುಮಾರು 3000 ಸಿಖರನ್ನು ಕೊಲ್ಲಲಾಗಿತ್ತು. ದೇಶಾದ್ಯಂತ ಸುಮಾರು 5000 ಸಿಖರು ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ. ಕಾನ್ಪುರ, ಬೊಕಾರೊ ಸೇರಿ ಹಲವು ನಗರಗಳಲ್ಲೂ ಹಿಂಸಾಚಾರ ನಡೆದಿತ್ತು. ಹೀಗಾಗಿ ಲೆಕ್ಕಕ್ಕೆ ಸಿಗದ ಹತ್ಯೆಗಳು ಇನ್ನೆಷ್ಟೋ ಇವೆ ಎನ್ನುತ್ತಿವೆ ಮಾನವ ಹಕ್ಕುಗಳ ಸಂಘಟನೆಗಳು.ಕಾಂಗ್ರೆಸ್‌ ನಾಯಕರ ಕುಮ್ಮಕ್ಕಿನಲ್ಲಿ ಮತ್ತು ನೇರ ಭಾಗೀದಾರಿಕೆಯಲ್ಲಿ ನಡೆದ ಹತ್ಯಾಕಾಂಡಕ್ಕೆ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ನೂರಾರು ಕುಟುಂಬಗಳನ್ನು ಬೀದಿಗೆ ತಳ್ಳಿದ , ಮಕ್ಕಳನ್ನು ತಬ್ಬಲಿಯಾಗಿಸಿದ ಈ ಹತ್ಯಾಕಾಂಡದ ಸಂತ್ರಸ್ತರು ಮೂರೂವರೆ ದಶಕಗಳ ಅನಂತರವೂ ನ್ಯಾಯಕ್ಕಾಗಿ ಗೋಗರೆಯುತ್ತಿರುವುದು ನಮ್ಮ ವ್ಯವಸ್ಥೆಯ ಜಡತ್ವಕ್ಕೆ ಹಿಡಿದ ಕೈಗನ್ನಡಿ. 

ಇಂದಿರಾ ಗಾಂಧಿಯ ಹತ್ಯೆಯ ಬಳಿಕ ಭರ್ಜರಿ ಬಹುಮತ ಪಡೆದುಕೊಂಡು ಪ್ರಧಾನಿಯಾದ ಅವರ ಪುತ್ರ ರಾಜೀವ್‌ ಗಾಂಧಿ ಸಿಖರ ಮಾರಣಹೋಮವನ್ನು ದೊಡ್ಡ ಮರ ಉರುಳಿದಾಗ ನೆಲ ನಡುಗಿ ಚಿಕ್ಕಪುಟ್ಟ ಗಿಡಗಳು ಸಾಯುವುದು ಸಾಮಾನ್ಯ ವಿಷಯ ಎಂಬ ಲಘು ಹೇಳಿಕೆ ನೀಡಿದ್ದರು. ಹಾಗೆಂದು ಹತ್ಯಾಕಾಂಡದ ತನಿಖೆ ನಡೆದಿಲ್ಲ ಎಂದಲ್ಲ. ಗಲಭೆ ಶಮನಗೊಂಡ ಬೆನ್ನಿಗೆ ರಂಗನಾಥ ಮಿಶ್ರ ನೇತೃತ್ವದಲ್ಲಿ ನ್ಯಾಯಾಂಗ ಆಯೋಗವನ್ನು ನೇಮಿಸಲಾಗಿತ್ತು. ಅನಂತರವೂ ಹಲವು ಆಯೋಗಗಳು ಮತ್ತು ಸಿಟ್‌ಗಳು ತನಿಖೆ ನಡೆಸಿದ್ದರೂ ನ್ಯಾಯ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಆರೋಪಿಗಳೆಂದು ಹೆಸರಿಸಲ್ಪಟ್ಟಿದ್ದ ಜಗದೀಶ್‌ ಟೈಟ್ಲರ್‌, ಎಚ್‌.ಕೆ.ಎಲ್‌.ಭಗತ್‌ ಅವರಂತಹ ಹಲವು ನಾಯಕರನ್ನು ಕಾಂಗ್ರೆಸ್‌ ಸರಕಾರ ಅನಂತರ ಉನ್ನತ ಅಧಿಕಾರಗಳನ್ನು ಪುರಸ್ಕರಿಸಿದೆ. ಗಲಭೆ ಸಂದರ್ಭದಲ್ಲಿ ನಿಷ್ಕ್ರಿಯತೆ ತೋರಿಸಿದ ಆರೋಪ ಹೊತ್ತಿದ್ದ ಹಲವು ಪೊಲೀಸ್‌ ಅಧಿಕಾರಿಗಳು ಅನಂತರ ಉನ್ನತ ಹುದ್ದೆಗಳನ್ನು ಪಡೆದುಕೊಂಡು ನಿವೃತ್ತರಾಗಿದ್ದಾರೆ. ರಾಜಕೀಯ ಪಕ್ಷಗಳು ಮುಖ್ಯವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಹತ್ಯಾಕಾಂಡವನ್ನು ಪರಸ್ಪರರ ಮೇಲೆ ದೋಷಾರೋಪ ಹೊರಿಸಲು ಬಳಸಿಕೊಂಡದ್ದೂ ಇದೆ. 34 ವರ್ಷದ ಬಳಿಕ ಮತ್ತೂಮ್ಮೆ ಪ್ರಕರಣದ ತನಿಖೆ ನಡೆಸುವ ಅಗತ್ಯವಿದೆಯೇ? ನಡೆಸಿದರೂ ಆರೋಪಿಗಳಿಗೆ ಶಿಕ್ಷೆಯಾಗುವ ಸಾಧ್ಯತೆಯಿದೆಯೇ ಎಂದೆಲ್ಲ ಕೇಳಲಾಗುತ್ತಿದೆ. ಘಟನೆ ಸಂಭವಿಸಿ ಎಷ್ಟೇ ಸಮಯವಾಗಿದ್ದರೂ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗುವ ತನಕ ತನಿಖೆ ನಡೆಸುವ ಅಗತ್ಯವಿದೆ. ಇಲ್ಲದಿದ್ದರೆ ರಾಜಕೀಯ ಕೃಪಾಶ್ರಯದಲ್ಲಿ ಘೋರ ಪಾತಕಗಳನ್ನು ಎಸಗಿದರೆ ನ್ಯಾಯದ ಕೈಯಿಂದ ಪಾರಾಗಿ ಬಿಡಬಹುದು ಎಂಬ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯಿದೆ. ಹೀಗಾದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆಯಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next