Advertisement

ಕೆರೆಕಟ್ಟೆಗಳನ್ನು ಉಳಿಸಿ: ಸಚಿವ ಗೋವಿಂದ ಕಾರಜೋಳ

02:49 PM Aug 18, 2021 | Team Udayavani |

ಮಹಾಲಿಂಗಪುರ: ಗ್ರಾಮದೊಳಗೆ ನದಿ ನೀರು ಬರಲು ಒತ್ತುವರಿ ಕಾರಣ. ಕೆರೆ ಹಾಗೂ ಹೊಳೆಗಳನ್ನು ಅವುಗಳ ಅಗತ್ಯಕ್ಕೆ ತಕ್ಕಂತೆ ಹಾಗೆಯೇ
ಬಿಟ್ಟಿದ್ದರೆ ಗ್ರಾಮದಲ್ಲಿ ನೀರು ಬರುತ್ತಿರಲಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ರನ್ನಬೆಳಗಲಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಡಿಯಲ್ಲಿ 9 ಕೋಟಿ 90 ಲಕ್ಷ ರೂ. ವೆಚ್ಚದಲ್ಲಿ ಇಂಗು ಕೆರೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಾನವನ ದುರಾಸೆಯಿಂದ ಪ್ರಕೃತಿ ಮೇಲೆ ದೌರ್ಜನ್ಯ ಆಗಿ ಪ್ರಕೃತಿ ವಿಕೋಪಗಳು
ಸಂಭವಿಸುತ್ತಿವೆ ಎಂದರು.

ಒಂದು ಕೆರೆ ಕಟ್ಟಿದರೆ ನಾಲ್ಕು ಊರುಗಳು ಬದುಕುತ್ತವೆ. ನಾನು ಮೊದಲನೇ ಬಾರಿ ಶಾಸಕನಾಗಿದ್ದಾಗ ವರ್ಚಗಲ್‌ ಗ್ರಾಮದ ಹತ್ತಿರ ಎರಡು
ಗುಡ್ಡಗಳ ಮಧ್ಯ ಹಳ್ಳಕ್ಕೆ ಕೆರೆ ನಿರ್ಮಾಣ ಮಾಡಿದ್ದೇವೆ. ಈ ಮುಂಚೆ ಆ ಗ್ರಾಮದವರು ನೀರಿಗಾಗಿ ಲೋಕಾಪುರಕ್ಕೆ ಹೋಗಬೇಕಾಗಿತ್ತು. ಬಟಕುರ್ಕಿಗೆ ಲೋಕಾಪುರದಿಂದ ನೀರು ಸರಬರಾಜಾಗುತ್ತಿತ್ತು. ಕೆರೆ ನಿರ್ಮಾಣ ಮಾಡಿದ ನಂತರ ಅಂತರ್ಜಲ ಹೆಚ್ಚಾಗಿ ವರ್ಚಗಲ್‌, ಬಟಕುರ್ಕಿ, ಲೋಕಾಪುರ ರೈತರು ಕಬ್ಬು, ದ್ರಾಕ್ಷಿ ಬೆಳೆಯುತ್ತಿದ್ದಾರೆ. ಅದಕ್ಕಾಗಿ ಗ್ರಾಮಸ್ಥರು ಕೆರೆ ಕಟ್ಟೆಗಳನ್ನು ಉಳಿಸಿ-ರಕ್ಷಿಸಬೇಕು ಎಂದರು.

ಇದನ್ನೂ ಓದಿ:ಸೂರು ಕಳೆದುಕೊಂಡು 6 ವರ್ಷವಾದ್ರೂ ಪರಿಹಾರವಿಲ್ಲ

ಬೆಳಗಲಿ ಪಟ್ಟಣದಲ್ಲಿ ಇಲ್ಲಿಯವರೆಗೆ ಒಟ್ಟು ಮೂರು ಕೆರೆಗಳ ನಿರ್ಮಾಣವಾಗಿದ್ದು, ಒಟ್ಟು 7 ಸಾವಿರ ಎಕರೆ ಭೂಮಿಗೆ ನೀರು ಲಭ್ಯವಾಗುತ್ತಿದೆ.
ನೂತನ ಕೆರೆಯ ಕಾಮಗಾರಿ 4 ತಿಂಗಳಲ್ಲಿ ಮುಗಿಯಲ್ಲಿದು, ಕಾಮಗಾರಿ ಪೂರ್ಣಗೊಂಡ ಕೂಡಲೇ ಬೇಸಿಗೆ ಪ್ರಾರಂಭದ ಮೊದಲೇ ಕಾಲುವೆಗಳಿಂದ ಕೆರೆಗೆ ನೀರು ತುಂಬಿಸಲಾಗುವುದು. ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

Advertisement

ಬಿಜೆಪಿ ಮುಖಂಡ ಪಂಡಿತ ಪೂಜೇರಿ ಮಾತನಾಡಿ, 1994ರಿಂದಲೂ ಸಚಿವ ಗೋವಿಂದ ಕಾರಜೋಳ ರನ್ನಬೆಳಗಲಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈಗ ನಿರ್ಮಿಸುತ್ತಿರುವ ಐತಿಹಾಸಿಕ ಕೆರೆಯು 74 ಎಕರೆ ವಿಶಾಲ ಜಾಗದಲ್ಲಿ ನೀರು ತುಂಬಿ ನಿಲ್ಲಲಿದೆ. ಒಟ್ಟು 110 ಎಕರೆ ಜಾಗೆಯನ್ನು ಕೆರೆಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಪಟ್ಟಣಕ್ಕೆ ಮೊರಾರ್ಜಿ ವಸತಿ ಶಾಲೆ, ವಿವಿಧ ಸಮಾಜಗಳಿಗೆ ಸಮುದಾಯ ಭವನ,ಜಿಎಲ್‌ಬಿಸಿ ಕಾಲುವೆಗಳ ಅಭಿವೃದ್ಧಿ ಸೇರಿದಂತೆ ರನ್ನಬೆಳಗಲಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.

ಕಾಂಗ್ರೆಸ್‌ ಮುಖಂಡ ಧರೆಪ್ಪ ಸಾಂಗ್ಲಿಕರ ಮಾತನಾಡಿದರು. ಚಿಮ್ಮಡದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರನ್ನಬೆಳಗಲಿ ಪಟ್ಟಣದ ವತಿಯಿಂದ ಸಚಿವ ಕಾರಜೋಳ ಅವರಿಗೆ ಬೆಳ್ಳಿಗದೆ ನೀಡಿ, ಪೌರ ಸನ್ಮಾನದೊಂದಿಗೆ ಗೌರವಿಸಿದರು. ಈ ಸಂದರ್ಭದಲ್ಲಿ 2 ಕೋಟಿ ವೆಚ್ಚದ ಬೆಳಗಲಿಯಿಂದ ನಂದಗಾಂವ ವಿತರಣಾ ಕಾಲುವೆವರೆಗಿನ 4 ಕಿ.ಮೀ. ರಸ್ತೆ ಸುಧಾರಣೆ ಕಾಮಗಾರಿ, 2 ಕೋಟಿ ವೆಚ್ಚದ ಬೆಳಗಲಿಯಿಂದ ಕಲ್ಲೋಳ್ಳಿವರೆಗಿನ 4 ಕಿ.ಮೀ ರಸ್ತೆ ಸುಧಾರಣಾ ಕಾಮಗಾರಿ, ಬೆಳಗಲಿ ಪಟ್ಟಣದಲ್ಲಿ 2ಕೋಟಿ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಜಿಲ್ಲಾ ಮತ್ತು ಇತರೆ ರಸ್ತೆಗಳ ಸುಧಾರಣೆ ಅಡಿಯಲ್ಲಿ 397 ಲಕ್ಷ ವೆಚ್ಚದ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳು ಸೇರಿದಂತೆ ಒಟ್ಟು 20 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ, ಮುಖಂಡರಾದ ಶಿವನಗೌಡ ಪಾಟೀಲ, ಚಿಕ್ಕಪ್ಪ ನಾಯಿಕ, ಸಂಗನಗೌಡ ಪಾಟೀಲ, ಅಶೋಕ ಸಿದ್ದಾಪೂರ, ರಂಗಪ್ಪ ಒಂಟಗೋಡಿ, ರಾಮನಗೌಡ ಪಾಟೀಲ, ಕೆ.ಆರ್‌.ಮಾಚಪ್ಪನವರ, ಅರುಣ ಕಾರಜೋಳ, ಮಹಾಂತೇಶ ಹಿಟ್ಟಿನಮಠ, ರಂಗಪ್ಪ ಒಂಟಗೊಡಿ, ಮೋಹನರಾವ್‌ ಕುಲಕರ್ಣಿ, ಪುಟ್ಟು ಕುಲಕರ್ಣಿ, ಪ್ರಕಾಶ ವಸ್ತ್ರದ, ಡಾ.ರವಿ ನಂದಗಾಂವಿ, ನಿಂಗನಗೌಡ ಪಾಟೀಲ, ಬಸವರಾಜ ಪುರಾಣಿಕ, ಶ್ರೀಶೈಲ ಹೊಸಮನಿ, ಮಲ್ಲು ಕ್ವಾನ್ಯಾಗೋಳ, ಬಿ.ಪಿ.ದೊಡಹಟ್ಟಿ ಇದ್ದರು. ಶಿಕ್ಷಕ ಕೆ.ಬಿ.ಕುಂಬಾಳೆ ಸ್ವಾಗತಿಸಿದರು. ಕೆ.ಎ.ಧಡೂತಿ ನಿರೂಪಿಸಿ-ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next