Advertisement

ನವನಿಹಾಳದಲ್ಲಿ ಸತ್ಯಸಾಯಿ ವಿವಿ ಶುಭಾರಂಭ

09:01 AM Jun 04, 2018 | |

ಕಲಬುರಗಿ: ಕಲಬುರಗಿ-ಬೀದರ ರಾಷ್ಟ್ರೀಯ ಹೆದ್ದಾರಿಗೆ ಹತ್ತಿಕೊಂಡಿರುವ ನೂತನ ತಾಲೂಕು ಕಮಲಾಪುರ ಬಳಿಯ
ನವನಿಹಾಳ ಸೀಮಾಂತರದಲ್ಲಿ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ರವಿವಾರ ಶುಭಾರಂಭಗೊಂಡಿತು. 

Advertisement

ವಿಶಾಲವಾದ 51 ಎಕರೆ ಭೂಮಿಯಲ್ಲಿ ಏಳು ವರ್ಷಗಳ ಹಿಂದೆ ತಲೆ ಎತ್ತಿರುವ ಪುಟಪರ್ತಿ ಸಾಯಿಬಾಬಾ ಕೃಪಾಶೀರ್ವಾದದ ಪ್ರಶಾಂತಿ ಬಾಲ ಮಂದಿರ ಟ್ರಸ್ಟ್‌ ಶಾಲಾ ಆವರಣದಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯಕ್ಕೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವರು, ವಿಶ್ವಕ್ಕೆ ತತ್ವಜ್ಞಾನದ ಬೆಳಕು ನೀಡಿದ ಭಾರತದಲ್ಲಿ ಇಂದು ನೈತಿಕ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಆದರೆ ಸತ್ಯಸಾಯಿ ವಿವಿ ಭಾರತೀಯ ಭವ್ಯ ಸಂಸ್ಕೃತಿಯನ್ನು ಮತ್ತೆ ಮರುಕಳಿಸುವತ್ತ ಮುಂದಾಗಿರುವುದು ಶ್ಲಾಘನೀಯ. ಜನತೆ ಇಂಥ ವಿವಿಗಳನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಉಚಿತ ಊಟ, ವಸತಿಸಹಿತ ಸಂಸ್ಕಾರಯುತ ಶಿಕ್ಷಣ ನೀಡುವ ಏಕೈಕ ವಿವಿ ಇದಾಗಿದೆ. ಇಂಥ ವಿವಿ ಹೈದರಾಬಾದ ಕರ್ನಾಟಕದಲ್ಲಿ ಸ್ಥಾಪಿತವಾಗುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಕೊಡುಗೆ ನೀಡಲಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ದೇಶದಲ್ಲಿಂದು ಇಂಥ ವಿಶ್ವವಿದ್ಯಾಲಯಗಳ ಅಗತ್ಯವಿದೆ. ಉತ್ತಮ ಶಿಕ್ಷಣ ನೀಡಿದರೆ ಸಾಲದು, ಸಂಸ್ಕಾರಯುತ ಶಿಕ್ಷಣ ನೀಡುವುದು ಇಂದಿನ ಜರೂರಿಯಾಗಿದೆ ಎಂದು ಹೇಳಿದರು.

Advertisement

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಮಾನವೀಯ ಮೌಲ್ಯ ಕಳೆದುಕೊಳ್ಳುತ್ತಿರುವ ಇಂದಿನ
ದಿನಗಳಲ್ಲಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಶ್ರೀ ಸತ್ಯಸಾಯಿ ಟ್ರಸ್ಟ್‌ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.

ಸತ್ಯಸಾಯಿ ಮಾನವ ಅಭ್ಯುದಯ ಕುಲಪತಿ ಡಾ| ಎ.ಆರ್‌. ಮಂಜುನಾಥ, ಕುಲಾಧಿಪತಿ ಬಿ.ಎನ್‌.ನರಸಿಂಹಮೂರ್ತಿ
ಮಾತನಾಡಿ, ಮಾನವ ಅಭ್ಯುದಯ ವಿಶ್ವವಿದ್ಯಾಲಯ ವಿಶ್ವದಲ್ಲೇ ಪ್ರಥಮ. ನಗರ ಪ್ರದೇಶ ಬಿಟ್ಟು ಗ್ರಾಮೀಣ ಭಾಗದಲ್ಲಿ ವಿವಿ ಸ್ಥಾಪಿಸುವ ಮೂಲಕ ಸಂಸ್ಥೆ ಹಳ್ಳಿ ಮಕ್ಕಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಮುಂದೆ ಬಂದಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಈ ವಿವಿ ಹಾಗೂ ಶಾಲಾ-ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದಾಗಿದೆ. ಊಟ, ವಸತಿ ಸಹಿತ ಉಚಿತ ಶಿಕ್ಷಣ ನೀಡಲಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಐದನೇ ತರಗತಿ ಮುಗಿಸುವ ಬಡ ಮಕ್ಕಳಿಗೆ ನಮ್ಮ ಸಂಸ್ಥೆ ಶಾಲೆಗಳಲ್ಲಿ ಆರನೇ ತರಗತಿ ಪ್ರವೇಶಕ್ಕೆ ಅವಕಾಶವಿದೆ ಎಂದು ಹೇಳಿದರು.

ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ|
ಎಚ್‌.ಎಂ.ಮಹೇಶ್ವರಯ್ಯ, ಕುಲಪತಿ ಪಿ.ಡಿ.ಎನ್‌ ಶ್ರೀನಿವಾಸ್‌, ಮಧುಸೂದನ ನಾಯ್ಡು, ಟ್ರಸ್ಟ್‌ ಆಡಳಿತಾಧಿಕಾರಿ ಶಿವಸುಬ್ರಹ್ಮಣ್ಯಂ ಸದಸ್ಯರಾದ ಇಂದುಲಾಲ್‌ ಡಾ| ಸಾಯಿಲೀಲಾ, ಡಾ| ಮಂಜುನಾಥ, ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಎಂ.ಬಿ ಅಂಬಲಗಿ, ಉಮೇಶ ಶೆಟ್ಟಿ , ರವಿ ಬಿರಾದಾರ, ವೈಜನಾಥ ತಡಕಲ್‌, ಶರಣು ಸಲಗರ, ಶಿವಪ್ರಭು ಪಾಟೀಲ, ಯಶ್ವಂತ ಅಷ್ಟಗಿ ಮುಂತಾದವರು ಇದ್ದರು.

ಗಮನ ಸೆಳೆದ ವಿದೇಶಿಗರು
ನವನಿಹಾಳದಲ್ಲಿ ಸುಂದರವಾದ ವಿವಿ ಕಟ್ಟ ತಲೆ ಎತ್ತಲು ಸಹಾಯ ಮಾಡಿರುವ ವಿದೇಶಿಗರು ಸಮಾರಂಭದಲ್ಲಿ ಭಾಗವಹಿಸಿರುವುದು ಗಮನ ಸೆಳೆಯಿತು. ಅದರಲ್ಲೂ 20 ದೇಶಗಳಿಂದ ಆಗಮಿಸಿದ್ದ ವಿದೇಶಿ ಮಹಿಳೆಯರು ಸೀರೆ ಉಟ್ಟು, ಹಣೆಯಲ್ಲಿ ತಿಲಕವಿಟ್ಟುಕೊಂಡು ಗಮನ ಸೆಳೆದರು. ಭಾರತೀಯ ಸಂಸ್ಕೃತಿಯನ್ನು ಶ್ಲಾಘಿಸಿದರು. ವಿಶ್ವದ ಎಲ್ಲ ದೇಶದ ಮಹಿಳೆಯರು ಸೀರೆ ತೊಟ್ಟರೆ ಅತ್ಯಾಚಾರ ಪ್ರಕರಣಗಳು ನಿಯಂತ್ರಣಕ್ಕೆ ಬರುವುದರಲ್ಲಿ ಸಂದೇಹವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next