Advertisement

ಮಾಧ್ಯಮದಲ್ಲಿ ಸರಿಗನ್ನಡ ಬಳಕೆ ಅಭಿಯಾನ: ಯರ್ರಿಸ್ವಾಮಿ

08:22 PM Mar 31, 2021 | Team Udayavani |

ದಾವಣಗೆರೆ : ಕನ್ನಡ ಅಭಿವೃದ್ಧಿ ಪ್ರಾಧಿಕಾರ ನವೆಂಬರ್‌ 2020ರಿಂದ ಅಕ್ಟೋಬರ್‌ 2021ರವರೆಗೆ ಕನ್ನಡ ಕಾಯಕ ವರ್ಷವನ್ನಾಗಿ ಆಚರಿಸಲು ನಿರ್ಧರಿಸಿದೆ. ಈಗ ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಅಭಿಯಾನ ಆರಂಭಿಸಿದ್ದು, ಅಭಿಯಾನದ ಅಂಗವಾಗಿ ಜಿಲ್ಲೆಯ ಮಾಧ್ಯಮ ಕಚೇರಿಗಳಿಗೆ ಹೋಗಿ ಈ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯ ಎನ್‌.ಟಿ. ಯರ್ರಿಸ್ವಾಮಿ ತಿಳಿಸಿದರು.

Advertisement

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಪ್ರಾಧಿಕಾರದಿಂದ ಪತ್ರಕರ್ತರಿಗೆ ಕಾರ್ಯಾಗಾರ, ಪದಕೋಶ ಪಟ್ಟಿ ವಿತರಣೆಯ ಚಿಂತನೆಯೂ ನಡೆದಿದೆ. ಈ ಅಭಿಯಾನವನ್ನು ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂಎಲ್ಲ ದೃಶ್ಯ, ಶ್ರವ್ಯ ಮತ್ತು ಮುದ್ರಣ ಮಾಧ್ಯಮಗಳ ಸಂಪಾದಕರು, ಮುಖ್ಯಸ್ಥರು ಮತ್ತು ಎಲ್ಲ ಮಾಧ್ಯಮ ಪ್ರತಿನಿಧಿಗಳ ಸಹಕಾರ ಬಯಸುತ್ತದೆ ಎಂದರು.

ಪ್ರಾಧಿಕಾರವು ಆಡಳಿತದಲ್ಲಿ ಕನ್ನಡ, ಬ್ಯಾಂಕ್‌ ಗಳಲ್ಲಿ ಕನ್ನಡ, ನಾಮಫಲಕಗಳಲ್ಲಿ ಕನ್ನಡ ಹಾಗೂ ನ್ಯಾಯಾಲಯಗಳಲ್ಲಿ ಕನ್ನಡ ಎಂಬ ಕಾರ್ಯಕ್ರಮಗಳ ಮೂಲಕ ಕನ್ನಡ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಸವಿಗನ್ನಡ ಸರಿಗನ್ನಡವಾಗಬೇಕು ಎಂದು ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಅಭಿಯಾನ ಹಮ್ಮಿಕೊಂಡಿದೆ ಎಂದರು.

ಇನ್ನೋರ್ವ ಸದಸ್ಯ ಭಾ.ಮ. ಬಸವರಾಜಯ್ಯ ಮಾತನಾಡಿ, ವ್ಯಾಪಾರ ಪರವಾನಗಿ ನೀಡುವ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿದರೆ ಕನ್ನಡದಲ್ಲಿ ನಾಮಫಲಕ ಕಡ್ಡಾಯಗೊಳಿಸಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು. ಕನ್ನಡ ಜಾಗೃತ ವೇದಿಕೆ ಸದಸ್ಯರಾದ ಮಹಾಲಿಂಗಪ್ಪ, ಭಿಕ್ಷಾವರ್ತಿಮಠ, ಸತ್ಯಭಾಮ, ದೇವಿಕಾ, ದಿಳ್ಳೆಪ್ಪ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next