Advertisement

ಭಾರತದ ಸಮಗ್ರತೆಯ ಶಿಲ್ಪಿ ಸರ್ದಾರ್‌ ಪಟೇಲ್‌

11:14 PM Oct 30, 2021 | Team Udayavani |

ಹುಡುಗನೊಬ್ಬನ ಕಂಕುಳಲ್ಲಿ ದೊಡ್ಡ ಕುರು ಎದ್ದಿತ್ತು… ಕಬ್ಬಿಣದ ಸಲಾಕೆಯನ್ನು ಕಾಯಿಸಿ ಅದರಿಂದ ಕುರುವನ್ನು ಸುಟ್ಟು ತೆಗೆಯುವುದು ಆ ಊರಿನ ವೈದ್ಯಪದ್ಧತಿ. ಆ ಹುಡುಗನನ್ನೂ ಅಲ್ಲಿಗೆ ಕರೆತಂದರು. ವೈದ್ಯ ಸಲಾಕೆ ಕಾಯಿಸಿದ. ಆದರೆ ಈ ಪುಟ್ಟ ಹುಡುಗನಿಗೆ ಹೇಗೆ ತಾನೇ ಬರೆ ಹಾಕಲಿ ಎಂದು ವೈದ್ಯ ಹಿಂಜರಿದ. ಆಗ ಆ ಬಾಲಕ ಆ ಸಲಾಕೆಯನ್ನು ತಾನೇ ಕಸಿದುಕೊಂಡು, ತನ್ನ ಕುರುವನ್ನು ಸುಟ್ಟುಕೊಂಡ.. ಸುತ್ತಲಿನ ಮಂದಿ ಚೀರಿದರು, ಆದರೆ ಹುಡುಗನ ಮುಖದಲ್ಲಿ ನೋವಿನ ಛಾಯೆಯೇ ಇರಲಿಲ್ಲ. “ಅಬ್ಟಾ ಎಂತಹ ಸಹನಾ ಶಕ್ತಿ ಈ ಹುಡುಗನದ್ದು ಎಂದು ಜನ ನಿಬ್ಬೆರಗಾಗಿ ನೋಡುತ್ತಿದ್ದರು. ಆ ಹುಡುಗನನ್ನೇ ಮುಂದೆ ದೇಶದ ಜನ ಪ್ರೀತಿಯಿಂದ, ಹೆಮ್ಮೆಯಿಂದ “ಉಕ್ಕಿನ ಮನುಷ್ಯ’ನೆಂದೇ ಕರೆದರು. ಹೌದು ಆ ಬಾಲಕನೇ ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಭಾಯಿ ಪಟೇಲ್‌. 1875ರ ಅ.31ರಂದು ಗುಜರಾತಿನ ಕರಮಸದ್‌ ಎಂಬ ಹಳ್ಳಿಯಲ್ಲಿ ಪಟೇಲರ ಜನನವಾ ಗಿತ್ತು. ಸೇವೆ ಹಾಗೂ ಅನ್ಯಾಯದ ವಿರುದ್ಧ ಸಿಡಿದು ನಿಲ್ಲುವ ಪ್ರವೃತ್ತಿ ವಲ್ಲಭಭಾಯಿ ಪಟೇಲ್‌ಗೆ ಜನ್ಮಜಾತವಾಗಿ ಬಂದಿತ್ತು.

Advertisement

ಮುಂದೆ ಬ್ಯಾರಿಸ್ಟರ್‌ ಆಗಬೇಕೆಂದು ಕನಸು ಕಂಡರು. ಆದರೆ ಇಂಗ್ಲೆಂಡಿಗೆ ಹೋಗಿ ಓದು ವಷ್ಟು ಅನುಕೂಲವಿರಲಿಲ್ಲ. ಆ ಕನಸನ್ನು ಜೀವಂತ ವಾಗಿರಿಸಿಕೊಂಡೇ ವಕೀಲ ವೃತ್ತಿಯನ್ನು ಪ್ರಾರಂಭಿಸಿದರು. ತಮ್ಮ ಜಾಣ್ಮೆಯಿಂದಾಗಿ ಬಹಳ ಬೇಗ ಪ್ರಸಿದ್ಧ ವಕೀಲರೆಂದೂ ಜನ ಗುರುತಿಸುವಂತಾಯಿತು. ತನ್ನ ಬ್ಯಾರಿಸ್ಟರ್‌ ಕನಸನ್ನು ನನಸು ಮಾಡುವುದಕ್ಕಾಗಿ ಸಂಪನ್ಮೂಲಗಳ ಸಂಗ್ರಹ ಮಾಡಿಕೊಂಡರು, ಜತೆಗೆ ಅಧ್ಯಯನವೂ ಭರದಿಂದ ಸಾಗಿತು. 17 ಕಿ.ಮೀ. ದೂರದ ಗ್ರಂಥ ಭಂಡಾರಕ್ಕೆ ನಡೆದೇ ಹೋಗುತ್ತಿದ್ದರು. ಪರಿಣಾಮ ಬ್ಯಾರಿಸ್ಟರ್‌ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದರು. ಮುಂದೆ ಬ್ಯಾರಿಸ್ಟರ್‌ ವೃತ್ತಿ. ಅಲ್ಪ ಸಮಯದಲ್ಲೇ ಅವರ ಪ್ರಭಾವ, ಕೀರ್ತಿ ಹೆಚ್ಚಾಯಿತು. ಸಹಜವಾಗಿ ಶ್ರೀಮಂತಿಕೆಯೂ ಬೆಳೆಯಿತು. ಅಹ್ಮದಾಬಾದಿನ ಅತೀದೊಡ್ಡ ಬ್ಯಾರಿಸ್ಟರ್‌ ಎನಿಸಿಕೊಂಡರು.

1917; ಗುಜರಾತಿನಲ್ಲಿ ಅತಿವೃಷ್ಟಿಯಾಗಿ ಬೆಳೆಗಳು ಹಾಳಾಗಿ ರೈತರು ಕಂಗಾಲಾದರು. ಇಂತಹ ಸಮಯದಲ್ಲಿಯೂ ಬ್ರಿಟಿಷ್‌ ಸರಕಾರ ಕಂದಾಯದ ಹಣದಲ್ಲಿ ಒಂದು ಕಾಸೂ ಬಿಡದೆ ಕೊಡಬೇಕೆಂದು ತಾಕೀತು ಮಾಡಿತು. ಇದರ ವಿರುದ್ಧದ ಹೋರಾಟದ ಜವಾಬ್ದಾರಿಯನ್ನು ಸ್ವತಃ ಸರ್ದಾರ್‌ ಪಟೇಲರು ವಹಿಸಿಕೊಂಡರು. ಜನರಲ್ಲಿ ಧೈರ್ಯ ತುಂಬುತ್ತಾ ಸಾಗಿದರು. ಪಟೇಲರ ಮಾತಿಗಾಗಿ ಪ್ರಾಣ ಕೊಡುವಷ್ಟು ರೈತರು ಮಾನಸಿಕವಾಗಿ ಗಟ್ಟಿಯಾದರು. ಇದರಿಂದಾಗಿ ಬ್ರಿಟಿಷ್‌ ಸರಕಾರಕ್ಕೆ ಬೆನ್ನು ಬಾಗಿಸದೇ ವಿಧಿಯಿರಲಿಲ್ಲ. 1920ರಲ್ಲಿ ಅಖೀಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಇಂಗ್ಲೀಷರ ವಿರುದ್ಧ ಅಸಹಕಾರ ಚಳವಳಿಯ ನಿರ್ಣಯವನ್ನು ಸ್ವೀಕರಿಸಿದಾಗ ಪಟೇಲರು ಬ್ಯಾರಿಸ್ಟರ್‌ ವೃತ್ತಿಗೆ ತಿಲಾಂಜಲಿ ಇಟ್ಟು ನೇರ ಚಳವಳಿಗೆ ಧುಮುಕಿದರು. ಬಾಲ್ಯದಲ್ಲಿಯೇ ದೇಶಭಕ್ತಿಯ ಶಿಕ್ಷಣ ಮಕ್ಕಳಿಗೆ ಸಿಗಬೇಕೆಂಬ ಹಂಬಲದಿಂದ ಲಕ್ಷಾಂತರ ರೂ.ಗಳನ್ನು ಸಮಾಜದಿಂದ ಸಂಗ್ರಹಿಸಿ ಗುಜರಾತ್‌ ವಿದ್ಯಾಪೀಠ ಎಂಬ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು. ಇದರಿಂದಾಗಿಬ್ರಿಟಿಷರೇ ನಡೆಸುತ್ತಿದ್ದ ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳ ಸಂಖ್ಯೆ ಕ್ರಮೇಣ ಕಡಿಮೆಯಾಯಿತು.

1922; ಬೋರಸದ್‌ ತಾಲೂಕಿನಲ್ಲಿ ದರೋಡೆಕೋರರ ಹಾವಳಿ ಹೆಚ್ಚಾದಾಗ ಗ್ರಾಮಗಳ ಯುವಕರನ್ನೇ ಸೇರಿಸಿ ಸ್ವಯಂಸೇವಕರ ಕಾವಲು ಪಡೆಯನ್ನು ಕಟ್ಟಿದರು. ಅವರಿಗೆ ತರಬೇತಿ ನೀಡಿದರು. ಊರಿನ ಯುವಕರೇ ದಂಡಧಾರಿಗಳಾಗಿ ಕಾವಲಿಗೆ ನಿಲ್ಲುತ್ತಲೇ ಡಕಾಯಿತರು ಅಲ್ಲಿಂದ ಕಾಲ್ಕಿತ್ತರು. ಆಗ ಪಟೇಲರು ಬ್ರಿಟಿಷರಿಗೆ “ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳುತ್ತೇವೆ. ನಿಮ್ಮ ಪೊಲೀಸರು ನಮಗೆ ಬೇಕಾಗಿಲ್ಲ ಮತ್ತು ಅವರಿಗಾಗಿ ಹೊಸ ತೆರಿಗೆಯನ್ನೂ ನಾವು ಕೊಡುವುದಿಲ್ಲ’ ಎಂದು ಸವಾಲು ಹಾಕಿದರು. 1923; ನಾಗಪುರದಲ್ಲಿ ಬ್ರಿಟಿಷ್‌ ಅಧಿಕಾರಿಗಳು ವಾಸಿಸುತ್ತಿದ್ದ ಬೀದಿಗೆ ಯಾರೂ ತ್ರಿವರ್ಣ ಧ್ವಜದೊಂದಿಗೆ ಬರಬಾರದು ಎಂಬ ಆಜ್ಞೆಯಾಯಿತು. ಇದರಿಂದ ಕುಪಿತರಾದ ಜನರು ಪಟೇಲರ ಮಾರ್ಗದರ್ಶನ ಕೋರಿದರು. ಪಟೇಲರು ಬರುತ್ತಲೇ ಹೋರಾಟಕ್ಕೆ ಕಳೆ ಏರಿತು. ಬೇರೆ ಬೇರೆ ಪ್ರಾಂತ್ಯಗಳಿಂದಲೂ ಸತ್ಯಾಗ್ರಹಿಗಳು ಬೃಹತ್‌ ಸಂಖ್ಯೆ ಯಲ್ಲಿ ಬರಲಾರಂಭಿಸಿದರು. ಸತತ ಮೂರೂವರೆ ತಿಂಗಳುಗಳ ಕಾಲ ನಡೆಯಿತು ಸತ್ಯಾಗ್ರಹ. ಹೀಗೆ ಪಟೇಲರು ಬ್ರಿಟಿಷರ ಪಾಲಿಗೆ ಬಿಸಿ ತುಪ್ಪವಾದರು.

ಇದನ್ನೂ ಓದಿ:80 ಸಾವಿರ ಫ‌ಲಾನುಭವಿಗಳಿಗೆ ಅನುಗ್ರಹ ಯೋಜನೆ ಲಾಭ: ಪ್ರಭು ಚೌವ್ಹಾಣ್‌

Advertisement

ಮುಂದೆಯೂ ಅನೇಕ ಹೋರಾಟಗಳಲ್ಲಿ ಪಟೇಲರು ಬ್ರಿಟಿಷರಿಗೆ ಸಿಂಹಸ್ವಪ್ನವಾಗುತ್ತಾರೆ. ಇಡೀ ಹಿಂದೂಸ್ಥಾನದ ಜನ ಅವರನ್ನು ಸರ್ದಾರ್‌ ಎಂದು ಕರೆಯುತ್ತಾರೆ. ತಮಗಾದ ಅವಮಾನಕ್ಕೆ ಪ್ರತಿಯಾಗಿ ಬ್ರಿಟಿಷರು ಎರಡು ಬಾರಿ ಪಟೇಲರನ್ನು ಬಂಧಿಸುತ್ತಾರೆ, ಚಿತ್ರಹಿಂಸೆ ನೀಡುತ್ತಾರೆ. ಆದರೆ ಅದ್ಯಾವುದೂ ಪಟೇಲರ ಸ್ವರಾಜ್ಯದ ಕನಸಿಗೆ ಅಡ್ಡಿ ಮಾಡಲಿಲ್ಲ. ಯಾಕೆಂದರೆ ಅವರು ಉಕ್ಕಿನ ಮನುಷ್ಯ.

ಸ್ವತಂತ್ರ ಭಾರತದ ಮೊದಲ ಗೃಹ ಸಚಿವರಾಗಿ ನೇಮಕವಾದರು ಸರ್ದಾರ್‌ ಪಟೇಲ್‌. ಆಗ ಭಾರತದಲ್ಲಿ 600ಕ್ಕೂಹೆಚ್ಚು ಸಂಸ್ಥಾನಗಳಿದ್ದವು. ಈ ರಾಜ್ಯಗಳೆಲ್ಲ ಸ್ವತಂತ್ರ ಭಾರತದಲ್ಲಿ ಲೀನವಾಗದಿದ್ದಲ್ಲಿ ಮುಂದೆ ರಾಷ್ಟ್ರದ ಅಖಂಡತೆಗೆ ಬಹಳ ದೊಡ್ಡ ಅಪಾಯವಿದೆ ಎಂದರಿತ ಪಟೇಲರು ತಮ್ಮ ಕಾರ್ಯ ಪ್ರಾರಂಭಿಸಿದರು. ಅನೇಕ ರಾಜರನ್ನು ತಾವೇ ಭೇಟಿಯಾಗಿ ಮಾತುಕತೆ ನಡೆಸಿದರು, ದೇಶದ ಭವಿಷ್ಯಕ್ಕಾಗಿ ಒಂದಾಗೋಣ ಎಂದು ಕೈಮುಗಿದರು, ಕೆಲವರಿಗೆ ಎಚ್ಚರಿಕೆಯನ್ನೂ ಕೊಟ್ಟರು! ಉಕ್ಕಿನ ಮನುಷ್ಯನ ಗರ್ಜನೆಯ ಪರಿಣಾಮದ ಅರಿವಿದ್ದ ಬಹುತೇಕ ರಾಜರು ಭಾರತದ ಒಕ್ಕೂಟದೊಳಗೆ ಸೇರಿಕೊಂಡರು. ಆದರೆ ಜುನಾಗಢದ ನವಾಬ ಮತ್ತು ಹೈದರಾಬಾದಿನ ನಿಜಾಮ ಪಾಕಿಸ್ಥಾನದ ಜತೆ ಸೇರಿಕೊಳ್ಳಲು ಒಳಗಿಂದೊಳಗೆ ಪಿತೂರಿ ನಡೆಸಿದ್ದರು. ಆ ಸಂಚಿನ ಅರಿವಿದ್ದ ಪಟೇಲರು, ಬ್ರಿಗೇಡಿಯರ್‌ ಗುರುದಯಾಳ ಸಿಂಹರನ್ನು ಸೈನ್ಯ ಸಹಿತವಾಗಿ ಜುನಾಗಢಕ್ಕೆ ಕಳುಹಿಸುತ್ತಾರೆ. ತಾವು ಭಾರತಕ್ಕೇ ಸೇರಬೇಕೆಂದುಕೊಂಡಿದ್ದ ಜುನಾಗಢದ ಜನರೂ ನವಾಬನ ವಿರುದ್ಧ ತಿರುಗಿ ನಿಂತರು. ಪರಿಣಾಮ ಜುನಾಗಢದ ನವಾಬ ಪ್ರಾಣ ರಕ್ಷಿಸಿಕೊಳ್ಳಲು ಪಾಕಿಸ್ಥಾನಕ್ಕೆ ಓಡಿಹೋದ. 1947 ನವೆಂಬರ್‌ 12ರಂದು ಜುನಾಗಢ ತಲುಪಿದ ಸರ್ದಾರ್‌ ಪಟೇಲ್‌ ಅಲ್ಲಿಂದಲೇ ಹೈದರಾಬಾದಿನ ನಿಜಾಮನಿಗೆ ಎಚ್ಚರಿಕೆ ನೀಡಿದರೂ ನಿಜಾಮನಿಗೆ ಬುದ್ಧಿ ಬರಲಿಲ್ಲ. ಅವನ ಪೈಶಾಚಿಕ ಕೃತ್ಯಗಳು, ದೇಶದ್ರೋಹದ ಕೆಲಸಗಳು ಮಿತಿ ಮೀರತೊಡಗಿತು. ದಂಡಂ ದಶಗುಣಂ..ಪಟೇಲರು ಮತ್ತೆ ರಂಗಕ್ಕಿಳಿದರು. ಜನರಲ್‌ ಚೌಧರಿಯವರನ್ನು ಸೈನ್ಯದೊಂದಿಗೆ ಕಳುಹಿಸಿ ಪೊಲೀಸ್‌ ಕಾರ್ಯಾಚರಣೆ ನಡೆಸಿದರು. ಕೇವಲ ಐದೇ ದಿನಗಳಲ್ಲಿ ನಿಜಾಮ ಶರಣಾದ, ಅವನ ಬಲಗೈ ಆಗಿದ್ದ ಖಾಸಿಂ ರಜ್ವಿà ಪಾಕಿಸ್ಥಾನಕ್ಕೆ ಪಲಾಯನ ಮಾಡಿದ.

ಇನ್ನುಳಿದಿದ್ದು ಕಾಶ್ಮೀರ.. ಕಾಶ್ಮೀರದ ರಾಜ ಹರಿಸಿಂಗನ ಮನವೊಲಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಗಿನ ಸರಸಂಘಚಾಲಕರಾಗಿದ್ದ ಶ್ರೀ ಮಾಧವ ಸದಾಶಿವ ಗೋಳ್ವಲ್ಕರ್‌ ಅವರನ್ನು ಕಳುಹಿಸುತ್ತಾರೆ ಪಟೇಲರು. “ಭಾರತದೊಂದಿಗೆ ಸೇರಿಕೊಳ್ಳದಿದ್ದರೆ ಕಾಶ್ಮೀರ ನಾಳೆ ಪಾಕಿಸ್ಥಾನದ ಕಪಿಮುಷ್ಟಿಯಲ್ಲಿರುತ್ತದೆ. ನಿಮ್ಮ ಭವಿಷ್ಯಕ್ಕೂ ಗಂಡಾಂತರವಿದೆ’ ಎಂಬುದನ್ನು ಶ್ರೀಗುರೂಜಿಯವರು ಮನವರಿಕೆ ಮಾಡಿದ ಅನಂತರ ಹರಿಸಿಂಗ್‌ ಭಾರತದೊಂದಿಗೆ ಸೇರಿಕೊಳ್ಳಲು ಒಪ್ಪುತ್ತಾರೆ. ಆದರೆ ಅಷ್ಟರಲ್ಲಿ ಪಾಕಿಸ್ಥಾನ ತನ್ನ ಕುತಂತ್ರವನ್ನು ಆರಂಭಿಸಿತ್ತು. ಕಾಶ್ಮೀರದ ಐದನೇ ಒಂದು ಭಾಗವನ್ನು ವಶಪಡಿಸಿಕೊಂಡಾಗಿತ್ತು. ಪಾಕ್‌ ಸೈನ್ಯ ಅಲ್ಲಿಂದ ಮುಂದೆ ಬಾರ ದಂತೆ ತಡೆಯುವಲ್ಲಿ ನಮ್ಮ ಸೈನಿಕರು ಯಶಸ್ವಿಯಾದರು. ತಮ್ಮ ಮುತ್ಸದ್ದಿತನದಿಂದ ನೂರಾರು ಸಂಸ್ಥಾನಗಳನ್ನು ಭಾರತದೊಂದಿಗೆ ವಿಲೀನವಾಗಿಸಿದ ಸಮಗ್ರತೆಯ ಶಿಲ್ಪಿ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌.

ಭಾರತ ಸ್ವತಂತ್ರವಾದರೂ ಮಹ್ಮದ್‌ ಘಜ್ನಿಯಿಂದ ಪ್ರಾರಂಭಿಸಿ ಪರಕೀಯರ ದಾಳಿಯಿಂದ ಪಾಳುಬಿದ್ದಿದ್ದ ಪವಿತ್ರ ಸೋಮನಾಥ ದೇವಾಲಯ ಅವರ ಮನಸ್ಸನ್ನು ಇರಿಯುತ್ತಿತ್ತು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪಟೇಲರು ಕಟಿಬದ್ಧರಾಗಿ ನಿಂತರು. ಕೆಲವೇ ವರ್ಷಗಳಲ್ಲಿ ಶತಶತಮಾನಗಳ ದಾಸ್ಯವನ್ನು ಕೊಡವಿಕೊಂಡು ಸೋಮನಾಥ ಮಂದಿರ ಮೇಲೆದ್ದು ನಿಂತಿತು. ಭಾರತದ ಅದ್ಭುತ ಚೈತನ್ಯ ಮತ್ತು ವಿಜಯದ ಸಂಕೇತವಾಗಿ ಅದು ಮೆರೆಯುವಂತೆ ಮಾಡಿದ ಕೀರ್ತಿ ಸರ್ದಾರ್‌ ಪಟೇಲರಿಗೇ ಸಲ್ಲಬೇಕು.

ಇಂದು ಸರ್ದಾರ್‌ ಪಟೇಲರ 147ನೇ ಜನ್ಮದಿನ. ಅವರ ಆ ಪುರುಷ ಸಿಂಹ ವ್ಯಕ್ತಿತ್ವವನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾ ಅವರ ದಾರಿಯಲ್ಲಿ ಒಂದೆರಡು ಹೆಜ್ಜೆಗಳನ್ನಾದರೂ ಹಾಕುತ್ತಾ ಸಮಾಜಮುಖಿಗಳಾಗೋಣ.

– ಪ್ರಕಾಶ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next