Advertisement

ಸಂತು ಲವ್ಸ್‌ ಸಂಧ್ಯಾ 

10:21 AM Apr 24, 2019 | Lakshmi GovindaRaju |

ಕನ್ನಡದಲ್ಲಿ ಈಗಾಗಲೇ “ನಂದ ಲವ್ಸ್‌ ನಂದಿತಾ’, “ರಾಜ ಲವ್ಸ್‌ ರಾಧೆ’, “ಶಶಿಕಲಾ ಲವ್ವರ್‌ ಆಫ್ ಪುಟ್ಟರಾಜು’ ಸೇರಿದಂತೆ ಹಲವು ಚಿತ್ರಗಳು ಬಂದು ಹೋಗಿವೆ. ಈಗ “ಸಂತು ಲವ್ಸ್‌ ಸಂಧ್ಯಾ’ ಎಂಬ ಹೊಸಬರ ಚಿತ್ರವೂ ಸೇರ್ಪಡೆಯಾಗಿದೆ. ಆರ್‌.ಕೆ.ಗಾಂಧಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Advertisement

ಈ ಚಿತ್ರದ ಮೂಲಕ ಜೈ ಸುಬ್ರಮಣಿ ನಾಯಕರಾಗುತ್ತಿದ್ದಾರೆ. ಈ ಹಿಂದೆ ಜೈ ಸುಬ್ರಮಣಿ ಹಲವು ಚಿತ್ರಗಳಲ್ಲಿ ಸಾಹಸ ಕಲಾವಿದರಾಗಿ ಕೆಲಸ ಮಾಡಿದ್ದಾರೆ. “ಸಂತು ಲವ್ಸ್‌ ಸಂಧ್ಯಾ’ ನೈಜ ಘಟನೆ ಆಧರಿಸಿ ತಯಾರಾಗುತ್ತಿರುವ ಚಿತ್ರ. ಕಳೆದ ನಾಲ್ಕು ವರ್ಷಗಳ ಹಿಂದೆ ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದಲ್ಲಿ ನಡೆದ ಒಂದು ಘಟನೆ ಚಿತ್ರದ ಹೈಲೈಟ್‌.

ಇತ್ತೀಚೆಗೆ ಯಲ್ದೂರು ಗ್ರಾಮದ ಗಂಗಾ ಭವಾನಿ ದೇವಸ್ಥಾನದಲ್ಲಿ ಚಿತ್ರಕ್ಕೆ ಪೂಜೆ ನೆರವೇರಿದೆ. ನಿವೃತ್ತ ಅರಣ್ಯಾಧಿಕಾರಿ ಕೆಂಪಣ್ಣ ಮೊದಲ ದೃಶ್ಯಕ್ಕೆ ಕ್ಯಾಮೆರಾ ಚಾಲನೆ ಮಾಡಿದರೆ, ನಿರ್ಮಾಪಕ ಶಿವಕುಮಾರ್‌ ಕ್ಲಾಪ್‌ ಮಾಡಿದ್ದಾರೆ. ಶೀರ್ಷಿಕೆಯೇ ಹೇಳುವಂತೆ, ಇದೊಂದು ಪಕ್ಕಾ ಲವ್‌ಸ್ಟೋರಿ ಚಿತ್ರ.

ಪ್ರೇಮಿಗಳ ನಡುವೆ ಜಾತಿ ಎಂಬ ವಿಲನ್‌ ಎದುರಾದಾಗ, ಆ ಪ್ರೇಮಿಗಳ ಬದುಕಲ್ಲಿ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ, ಆ ಸಮಸ್ಯೆಗಳನ್ನು ಆ ಪ್ರೇಮಿಗಳು ಹೇಗೆ ಎದುರಿಸುತ್ತಾರೆ ಎಂಬುದು ಕಥೆ. ನೈಜ ಘಟನೆಗೆ ಸಾಕ್ಷಿಯಾಗಿರುವ ಯುವಕ ವೆಂಕಟ್‌ ಈಗಲೂ ಯಲ್ದೂರು ಗ್ರಾಮದಲ್ಲಿ ಮಾನಸಿಕ ಅಸ್ವಸ್ಥನಾಗಿ ಅಲೆದಾಡುತ್ತಿದ್ದು, ಆ ಸನ್ನಿವೇಶ ಕೂಡ ಚಿತ್ರದಲ್ಲಿರಲಿದೆ ಎಂಬುದು ನಿರ್ದೇಶಕರ ಮಾತು.

ಚಿತ್ರವನ್ನು ಶಿವಕುಮಾರ್‌ ಜೊತೆಗೆ ದೇವರಾಜ್‌, ಶಬರೀಶ್‌ ನಿರ್ಮಾಣ ಮಾಡುತ್ತಿದ್ದಾರೆ. ಪೌಲ್‌ ರಾಜು ಛಾಯಾಗ್ರಹಣವಿದೆ. ಗಂಟಾಡಿ ಕೃಷ್ಣ ಸಂಗೀತ ನೀಡುತ್ತಿದ್ದು, ಸುರೇಶ್‌ ಕಂಬಳಿ ಸಾಹಿತ್ಯ, ಶಂಕರ್‌ ಸಾಹಸವಿದೆ. ಸಾನ್ವಿ ನೃತ್ಯ ನಿರ್ದೇಶನ ಮಾಡಿದರೆ, ವಿನಯ್‌ ಜಿ. ಆಲೂರು ಸಂಕಲನವಿದೆ. ಚಿತ್ರದಲ್ಲಿ ಸುಶ್ಮಾ ಗೌಡ, ಕಿಲ್ಲರ್‌ ವೆಂಕಟೇಶ್‌, ಬ್ಯಾಂಕ್‌ ಜನಾರ್ಧನ್‌, ಹೊನ್ನವಳ್ಳಿ ಕೃಷ್ಣ, ಕಾವ್ಯ ಪ್ರಕಾಶ್‌, ದಿಂಬಾಲ ಅಶೋಕ್‌, ಕೋಲಾರ ಬಾಬು ಇತರರು ನಟಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next