Advertisement

ಸಮಷ್ಟಿ ಹಿತದ ತರ್ಕಬದ್ಧ ಭಾಷೆಯಾದ ಸಂಸ್ಕೃತ ಲೋಕಭಾಷೆಯಾಗಲಿ!

11:25 PM Nov 26, 2019 | mahesh |

ಸಂಸ್ಕೃತ ಭಾಷೆಯ ಅಸಾಮಾನ್ಯ ನಮ್ಯತೆ (flexibility) ವಿಸ್ಮಯಕಾರಿಯೆನ್ನಲು ಒಂದು ಶ್ಲೋಕ ಇದೆ. ಇಡೀ ಶ್ಲೋಕ ಎಡದಿಂದ ಬಲಕ್ಕೆ ರಾಮನ ಕಥೆಯಾದರೆ ಬಲದಿಂದ ಎಡಕ್ಕೆ ಕೃಷ್ಣನ ಕಥೆ ಆಗುತ್ತದೆ! ಕವಿಗೆ ಇದು ಸಾಧ್ಯವಾದುದು ಹೇಗೆ?

Advertisement

“ನೀವೂ ಸಂಸ್ಕೃತ ಕಲಿಯಿರಿ’
“ವಿಪರೀತ ಕಷ್ಟವಂತೆ. ಅನ್ಯ ಭಾಷೆಗಳ ಜ್ಞಾನವಿದೆಯಲ್ಲ ಬಿಡಿ ಸಾಕು. ಆದರೂ ಅಭ್ಯಸಿಸಲು ಪಾಠಶಾಲೆಗೆ ಪ್ರವೇಶ ಪಡೆಯುವೆ’ “ಕಷ್ಟವಿಲ್ಲ. ನೀವೀಗಾಗಲೇ ಸಂಸ್ಕೃತದಲ್ಲಿ ಮಾತನಾಡುತ್ತಿದ್ದೀರಿ!’
“ಹೌದಾ? ನೀವೇನು ಹೇಳುತ್ತಿದ್ದೀರಿ?’

“ವಿಪರೀತ, ಕಷ್ಟ, ಅನ್ಯ, ಜ್ಞಾನ, ಅಭ್ಯಾಸ, ಪಾಠಶಾಲೆ, ಪ್ರವೇಶ, ಸತ್ಯ….ಇವೆಲ್ಲ ಸಂಸ್ಕೃತ ಪದಗಳೇ!’
ಮೇಲಿನ ಉಭಯಕುಶಲೋಪರಿಯು ಸಂಸ್ಕೃತ ಭಾಷೆ ನಮಗೆ ಅಪರಿಚಿತವೇನೂ ಅಲ್ಲವೆನ್ನಲು ಒಂದು ನಿದರ್ಶನ ಮಾತ್ರ. ಸಂಸ್ಕೃತ ಏನಿದ್ದರೂ ದೇವಭಾಷೆ, ಕಠಿಣ, ಕಬ್ಬಿಣದ ಕಡಲೆ, ಮಂತ್ರ ಪಠಣಕ್ಕೆ ಮಾತ್ರ ಎಂದೆಲ್ಲ ವಿಶೇಷಣಗಳು. ಆದರೆ ವಾಸ್ತವವಾಗಿ ವಿಶ್ವದಲ್ಲೇ ಅತ್ಯಂತ ಪ್ರಾಚೀನ ಭಾಷೆಯಾದ ಸಂಸ್ಕೃತ ಸರಳ, ಸುಂದರ, ವೈಜ್ಞಾನಿಕ, ಕ್ರಮಶಾಸ್ತ್ರೀಯ. “ಸಂಸ್ಕೃತ’ ಎಂದರೇನೆ ಸಂಸ್ಕರಿಸಿದ, ಅಲಂಕರಿಸಿದ, ಪೂರ್ಣ ಸ್ವರೂಪದಲ್ಲಿ ಹದಗೊಂಡ ಭಾಷೆ ಎಂದರ್ಥ. 3500 ವರ್ಷಗಳ ಸುದೀರ್ಘ‌ ಇತಿಹಾಸವುಳ್ಳ ಭಾರತೀಯ ಭಾಷೆಯಾದ ಸಂಸ್ಕೃತದ ಒಂದೊಂದು ಶಬ್ದವೂ ಅರ್ಥ, ಭಾವ, ವೈಚಾರಿಕತೆಯಿಂದ ಸಮೃದ್ಧವಾಗಿದೆ. ನೇರ ಸೇವಿಸಿ ಸವಿಯಬಹುದಾದ ಸಿಹಿಪಾಕದಂತೆ ಅದು. “ಕನ್ನಡದಲ್ಲಿ ಎಷ್ಟೊಂದು ಮಲೆಯಾಳಂ ಪದಗಳಿವೆ’ ಎಂದು ಒಬ್ಬರೆಂದರೆ ಇನ್ನೊಬ್ಬರು “ಅರೆ! ಮಲೆಯಾಳಂನಲ್ಲಿ ಅದೆಷ್ಟು ಕನ್ನಡ ಪದಗಳು’ ಅಂತ ಅಚ್ಚರಿಪಡುತ್ತಾರೆ. ಇವರೀರ್ವರ ಆಶ್ಚರ್ಯಗಳು “ಸಂಸ್ಕೃತದಲ್ಲಿ ಎಷ್ಟೊಂದು ಕನ್ನಡ, ಮಲೆಯಾಳಂ ಪದಗಳು!’ ಎನ್ನುವುದರಲ್ಲಿ ಸಮನ್ವಯಗೊಂಡಿರುತ್ತವೆ. “ಇಂಡೊ-ಆರ್ಯನ್‌’ ಭಾಷೆಯೆಂದು ಗುರುತಿಸಬಹುದಾದ ಸಂಸ್ಕೃತ ಎಲ್ಲ ಭಾಷೆಗಳ ತಾಯಿ. ಸಂಸ್ಕೃತ ವಾš¾ಯವು ವೇದ, ಸ್ಮತಿ, ಪುರಾಣೇತಿಹಾಸಗಳನ್ನು ಸೇರಿದಂತೆ ಆಧ್ಯಾತ್ಮಿಕ ಪಠ್ಯ, ಕಾವ್ಯ, ಸಂಗೀತ, ನಾಟಕ, ವಿಜ್ಞಾನ, ಗಣಿತ, ವಿಚಾರಭರಿತ ಸಿರಿವಂತ ಸಾಹಿತ್ಯ ಪರಂಪರೆಯನ್ನೊಳಗೊಂಡಿದೆ.

ಕ್ರಿ. ಪೂ. ಮೊದಲನೇ ಸಹಸ್ರಮಾನಕ್ಕೆ ಮುನ್ನವೆ ಸಂಸ್ಕೃತ ಬಳಕೆಯಿತ್ತೆನ್ನಲು ವೇದಗಳೇ ಪುರಾವೆ. ಋಗ್ವೇದದ ಬಹು ಭಾಗ ನಮ್ಮ ಏಕೈಕ ಪರಿಸರವನ್ನು ಸಂರಕ್ಷಿಸುವುದೇ ಆಗಿದೆ. ಇನ್ನು “ವೇದ ಗಣಿತ’ ಮನೆ ಮಾತಾಗಿದೆ. ಯೂರೋಪಿನ ಪ್ರಭಾವದಿಂದ ಅನೇಕ ಪದಗಳು ಇಂಗ್ಲಿಷಿನವುಗಳನ್ನು ಹೋಲುತ್ತವೆ. ಮದರ್‌-ಮಾತಾ, ಬ್ರದರ್‌-ತೃ, ಫಾದರ್‌-ಪಿತಾ, ಸಿಸ್ಟರ್‌-ಸಹೋದರಿ… ಇತ್ಯಾದಿ. ಹಾಗಾಗಿ ಸಂಸ್ಕೃತ “ಇಂಡೊ ಯೂರೋಪಿಯನ್‌’ ಸಹ ಹೌದು. ಗ್ರೀಕ್‌, ಲ್ಯಾಟಿನ್‌, ಜರ್ಮನ್‌ ಭಾಷೆಗಳನ್ನು ಬೆಳೆಸಿರುವ ಸಂಸ್ಕೃತ ಭಾರತೀಯ ನಾಗರಿಕತೆಯ ಅವಿತ್ಛನ್ನತೆಯನ್ನು ಪೋಷಿಸಿಕೊಂಡು ಬಂದಿದೆ. ಅದರ ಅಭಿವ್ಯಕ್ತಿ ಸಾಮರ್ಥ್ಯ, ಒಗ್ಗಿಕೊಳ್ಳುವ ಗುಣ, ಹೊಸ ಪದೋಕ್ತಿಗಳನ್ನು ಸೃಷ್ಟಿಸಿಕೊಳ್ಳುವ ಕೌಶಲ ಅಸದೃಶ. ಒಮ್ಮೆ ಒಂದು ಕಮ್ಮಟದಲ್ಲಿ ಭಾಗಿಯೊಬ್ಬರು ಸಂಪನ್ಮೂಲ ಭಾಷಣಕಾರರನ್ನು “ಸಂಸ್ಕೃತದಲ್ಲಿ ಡೈನಾಸರ್‌ಗೆ ಸಮಾನ ಪದ ಯಾವುದೆಂದು’ ಕೇಳಿದರಂತೆ. “ನೋಡಿ, ಇದೇನು ತ್ರಾಸವಲ್ಲ. ಡೈನಾಸರ್‌ ಲಕ್ಷಣ ಅವಲೋಕಿಸಿ ನಾವೇ ಒಂದು ಪದ ಟಂಕಿಸಬಹುದು. ಸರಟ ಎಂದರೆ ಹಲ್ಲಿ. ಭೀಮ ಎಂದರೆ ದೊಡ್ಡದು. ಎಂದಮೇಲೆ ಡೈನಾಸರ್‌ಗೆ “ಭೀಮ ಸರಟ’ ಎನ್ನಲೇನಡ್ಡಿ?” ಎಂದು ಉತ್ತರಿಸಿದರಂತೆ ಅತಿಥಿ. ಅಂತೆಯೇ “ಕೆಮರಾ’ಗೆ “ರೂಪ ಗ್ರಾಹಕ’ ಎಂದು ಅರ್ಥವತ್ತಾಗಿ ಕರೆಯಬಹುದು. ಒಂದು ಭಾಷೆಯನ್ನು ದೂರದೆ, ಗೊಣಗದೆ ಕ್ರಿಯಾಶೀಲವಾಗಿ ಬೆಳಸುವು ದೆಂದರೆ ಇದೇ. ಒಂದು ಪದ ಇನ್ನೊಂದನ್ನು ಕುತೂಹಲದಿಂದ ಹುಡುಕಾಡುವುದು ಸಂಸ್ಕೃತ ಭಾಷೆಯಲ್ಲಿ ಮಾತ್ರ.

1980ರಲ್ಲಿ ಅಮೆರಿಕದ ಅಂತರಿಕ್ಷ ಅಂಶೋಧನಾ ಸಂಸ್ಥೆ “ನಾಸಾ’ ಸಂಸ್ಕೃತ ಮನುಷ್ಯನ ವಾಕ್‌ ಪರಂಪರೆಯಲ್ಲೇ ಅತ್ಯಂತ ಸ್ಪಷ್ಟತಮ ಭಾಷೆ, ಅದು ಕಂಪ್ಯೂಟರ್‌ ಪ್ರಕ್ರಿಯೆಗಳಿಗೆ ಹೇಳಿಮಾಡಿಸಿದಂತಿರುವ ಭಾಷೆ ಎಂದಿತ್ತು. ಸಂಸ್ಕೃತದ ಭಾಷಿಕ ರಚನೆ ದೋಷರಹಿತ. ಅದರ ಪದಸಂಪತ್ತಿಗೆ ಸರಿಸಾಟಿಯಿಲ್ಲ. ಬಹುತೇಕ ಭಾಷೆಗಳಲ್ಲಿ ಸಮನಾರ್ಥಕ ಪದಗಳೆಂದರೆ ಅದೇ ಅರ್ಥ ಕೊಡುವ ಪದಗಳೇ ಆಗಿರುತ್ತವೆ. ಆದರೆ ಸಂಸ್ಕೃತದ ಸಂದರ್ಭ ವಿಶಿಷ್ಟ.

Advertisement

ಮೇಲ್ನೋಟಕ್ಕೆ ಅವು ಪರ್ಯಾಯ ಪದಗಳು ಮಾತ್ರ ಎನ್ನಿಸಿದರೂ ಅವು ಒಂದೊಂದರ ಗರ್ಭಿತಾರ್ಥವೂ ವಿಭಿನ್ನ. ಗೊತ್ತಾದ ಗುಣ ಲಕ್ಷಣಗಳನ್ನೇ ಸಾದರಪಡಿಸುವಷ್ಟು ಶಕ್ತಿಯುತ. ಉದಾಹರಿ ಸಬೇಕೆಂದರೆ “ಬೆಂಕಿ’ಗೆ ಅಗ್ನಿಃ, ಜ್ವಲನ, ಪಾವಕಃ, ಅನಲ, ಶುಷ್ಮ….ಹೀಗೆ 34 ಪರ್ಯಾಯ ಪದಗಳಿವೆ. “ಅಗ್ನಿಃ’ ಆರಾಧಿಸುವ ದೈವ, “ಜ್ವಲನ’ ಸುಡುವಂಥದ್ದು, “ಪಾವಕಃ’ ಪವಿತ್ರವಾಗಿಸುವಂಥದ್ದು, “ಅನಲ’ ಎಲ್ಲವನ್ನೂ ಆಹುತಿ ಪಡೆಯುವದು, “ಶುಷ್ಮ’- ಒಣಗಿಸುವಂಥದ್ದು…ಹೀಗೆ ಸಾಗುತ್ತದೆ ಸನ್ನಿವೇಶೋಚಿತ ವ್ಯಾಖ್ಯೆಗಳ ದಿಬ್ಬಣ. ದುರ್ದೈವವೆಂದರೆ ಭಾರತದ‌ಲ್ಲಿ ಒಟ್ಟು ಜನಸಂಖ್ಯೆಯ ಕೇವಲ ಒಂದರಷ್ಟು ಮಂದಿ ಮಾತ್ರ ಸಂಸ್ಕೃತದಲ್ಲಿ ಮಾತನಾಡುತ್ತಾರೆ. ಭಾರತದಾದ್ಯಂತ ಹನ್ನೆರಡು ಸಂಸ್ಕೃತ ನಿಯತಕಾಲಿಕಗಳು ಪ್ರಕಟಗೊಳ್ಳುತ್ತವೆ. ಬಾನುಲಿಯಲ್ಲಿ, ದೂರದರ್ಶನದಲ್ಲಿ ಸಂಸ್ಕೃತದಲ್ಲಿ ಸುದ್ದಿ ಪ್ರಸಾರವಾಗುತ್ತವೆ. ಕರ್ನಾಟಕದ ಮತ್ತೂರು, ಮಧ್ಯಪ್ರದೇಶದ ಮೋಹದ್‌ ಹಾಗೂ ಜಿಹಿರಿ ಮುಂತಾದ ಭಾರತದ ಒಂಬತ್ತು ಗ್ರಾಮಗಳಲ್ಲಿ ಸಂಸ್ಕೃತದಲ್ಲೇ ಜನ ಮಾತನಾಡುತ್ತಾರೆ. ಅಲ್ಲಿನ ಸಂಸ್ಕೃತಿಯೂ ಸುಧಾರಿತವಾಗಿದೆ. ಮಂದಿ ಮದ್ಯ ತ್ಯಜಿಸಿದ್ದಾರೆ ನ್ನುವುದು ಗಮನಾರ್ಹ ಅಂಶ. ಭಾರತದಲ್ಲಿ ಹದಿನೆಂಟು ಸಂಸ್ಕೃತ ವಿಶ್ವವಿದ್ಯಾನಿಲಯಗಳಿವೆ. ಹಾಗಾಗಿ ತೀರಾ ಹತಾಶರಾಗುವ ಅಗತ್ಯವೇನಿಲ್ಲ. ಸಂಸ್ಕೃತ ಆಪ್ತವಾಗಲು ಅದನ್ನು ಕಲಿತೇ ತೀರುತ್ತೇನೆಂಬ ದೃಢ ಸಂಕಲ್ಪ ಬೇಕು. ಅದು ಪಂಡಿತರಾಡುವ ಭಾಷೆ, ವ್ಯಾಕರಣ ಪಾರಂಗತರಾಗದೆ ಅದರ ಕಲಿಕೆ ಅಸಾಧ್ಯ, ಸಂಸ್ಕೃತ ಒಂದು ವರ್ಗದ ಭಾಷೆ ಮುಂತಾದ ನಕಾರಾತ್ಮಕ ಇರಾದೆಗಳನ್ನು ಮನಸ್ಸಿನಿಂದ ಮೊಟ್ಟಮೊದಲು ತೊರೆಯಬೇಕು.

ಪಾಣಿನಿ ಪ್ರಾಚೀನ ಭಾರತದ ಭಾಷಾ ವಿಜ್ಞಾನಿ, ವ್ಯಾಕರಣಕಾರ ಮತ್ತು ಶ್ರೇಷ್ಠ ಪಂಡಿತ‌. ಸ್ವಾರಸ್ಯವೆಂದರೆ ಅವನ ಕೃತಿಗಳನ್ನು ಶೋಧಿಸಿದವರು ಯೂರೋಪಿನ ವಿದ್ವಾಂಸರು. ಪಾಣಿನಿ ವಿರಚಿತ ವ್ಯಾಕರಣ ಗ್ರಂಥ “ಅಷ್ಟಾಧ್ಯಾಯಿ’ಯಲ್ಲಿ 3959 ಸೂತ್ರರೂಪದ ಶ್ಲೋಕಗಳಿವೆ. ಇಂದಿಗೂ ಅವನ್ನು ಆಧುನಿಕ ಭಾಷಾವೈಜ್ಞಾನಿಕ ಸಿದ್ಧಾಂತಗಳಲ್ಲಿ ಬಳಸಿಕೊಳ್ಳಲಾಗಿದೆ. ಈ ಗ್ರಂಥದ ಭಾಷ್ಯಕಾರರ ಪೈಕಿ ಪತಂಜಲಿ ಮುಖ್ಯನೆನಿಸುತ್ತಾನೆ. ಕ್ರಿ. ಶ. ಏಳನೆ ಶತಮಾನದ ನಡು ಅವಧಿಯಲ್ಲಿ ಬಾಣ ಭಟ್ಟ ಎಂಬ ಕವಿ ಸಂಸ್ಕೃತದಲ್ಲಿ “ಕಾದಂಬರಿ’ ಎಂಬ ಪ್ರೇಮ ಕಾದಂಬರಿ ಬರೆದ. ಇದೇ ಸಂಸ್ಕೃತದಲ್ಲಿ ರಚನೆಯಾದ ಮೊಟ್ಟಮೊದಲ ಕಾದಂಬರಿ. ಇದಕ್ಕೆ ಹಿಂದೆ ಭಾಸ, ಕಾಳಿದಾಸ, ಭತೃìಹರಿ, ದಂಡಿ ಮುಂ ತಾದ ಮೇಧಾವಿಗಳು ಅಮೂಲ್ಯ ಸಾಹಿತ್ಯ ಕೃತಿಗಳನ್ನು ಕೊಡುಗೆ ಯಾಗಿತ್ತರು.ಭಾರತ ಕ್ರಿ.ಪೂ.326 ರಿಂದ ಲಾಗಾಯ್ತು ಗ್ರೀಕರು, ಡಚ್ಚರು, ಫ್ರೆಂಚರು, ಇಂಗ್ಲಿಷರಿಂದ ನಮ್ಮ ದೇಶ ವೈದೇಶಿಕ ಆಡಳಿತ ಕೊಳ್ಳಗಾದ ಪರಿಣಾಮವೇನು? ಸಂಸ್ಕೃತ ಹರಿಸುತ್ತಿದ್ದ ಪ್ರಜ್ಞಾ ಪ್ರಭಾವಕ್ಕೆ ತಡೆ ಯಾಯಿತು. ಸಂಸ್ಕೃತ ಭಾಷೆಯ ಅಸಾಮಾನ್ಯ ನಮ್ಯತೆ (flexibility) ವಿಸ್ಮಯಕಾರಿಯೆನ್ನಲು ಒಂದು ಶ್ಲೋಕ ಹೀಗಿದೆ;
“ತಂ ಭೂಸುತಾಮುಕ್ತಿಮುದಾರಹಾಸಂ ವಂದೇ ಯತೋ ಭವ್ಯಭವಂ ದಯಾಶ್ರೀಃ
ಶ್ರೀಯಾದವಂ ಭವ್ಯಬತೋಯದೇವಂ ಸಂಹಾರದಾಮುಕ್ತಿಮುತಾಸುಭೂತಂ’
ಇಲ್ಲಿ ಮೊದಲ ಸಾಲನ್ನು ಬಲದಿಂದ ಎಡಕ್ಕೆ ವಾಚಿಸಿದರೆ ಎರಡನೆ ಸಾಲಾಗುವುದು. ಇಡೀ ಶ್ಲೋಕ ಎಡದಿಂದ ಬಲಕ್ಕೆ ರಾಮನ ಕಥೆಯಾದರೆ ಬಲದಿಂದ ಎಡಕ್ಕೆ ಕೃಷ್ಣನ ಕಥೆಯಾಗುತ್ತದೆ! ಕವಿಗೆ ಇದು ಸಾಧ್ಯವಾದುದು ಹೇಗೆ? ವ್ಯಾಕರಣ, ಅರ್ಥಗೌರವ, ಲಯದಲ್ಲಿನ ಬದ್ಧತೆಯೇ ಈ ಸೃಜನಶೀಲ ವಿನ್ಯಾಸದ ರಹಸ್ಯವೆಂದು ಬೇರೆ ಹೇಳಬೇಕಿಲ್ಲ. ನೀತಿ ಕಥೆಗಳು, ಸುಭಾಷಿತಗಳು ಸಾರ್ವಕಾಲಿಕ ನುಡಿಮುತ್ತುಗಳು. ವಿದ್ಯಾರ್ಥಿಗಳು ಸಂಸ್ಕೃತವನ್ನು ದ್ವಿತೀಯ ಭಾಷೆಯಾಗಿ ಜ್ಞಾನಾರ್ಥವಾಗಿ ಆಯ್ಕೆ ಮಾಡಿಕೊಳ್ಳಬೇಕೇ ಹೊರತು ಕೇವಲ ಶೇಕಡಾವಾರು ಅಧಿಕ ಅಂಕ ಗಳಿಸಲಲ್ಲ. ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯ, ಜರ್ಮನಿಯ ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತ ಬೋಧಿಸಲಾಗುತ್ತಿದೆ. ಅದೇಕೊ ಜರ್ಮನಿ ದೇಶಕ್ಕೂ ಸಂಸ್ಕೃತಕ್ಕೂ ವಿಶೇಷ ನಂಟು. ಅಲ್ಲಿನ 14 ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತ ಅಧ್ಯಯನ, ಸಂಶೋಧನೆಗೆ ಅವಕಾಶ ಕಲ್ಪಿಸಲಾಗಿದೆ. ಜರ್ಮನಿಯ ಹೈಡಲ್‌ಬರ್ಗ್‌ ವಿ.ವಿ. ಯಲ್ಲಿ ಪ್ರತೀ ವರ್ಷ
ಆಗಸ್ಟ್‌ನಲ್ಲಿ ತಿಂಗಳ ಅವಧಿಯ ಬೇಸಿಗೆ ಶಿಬಿರದ ಏರ್ಪಾಟಿದೆ.

ಈ ತನಕ 34 ವಿವಿಧ ದೇಶಗಳಿಂದ 254 ವಿದ್ಯಾರ್ಥಿಗಳು ಭಾಗವಹಿ ಸಿದ್ದಾರೆ. ಸಂಸ್ಕೃತ ಕಲಿಕೆಗೆ ಪೂರಕವಾಗಿ ಯಾವುದೇ ಭಾಷೆ ಅರ್ಥಾತ್‌ ಪೂರ್ವಭಾಷೆ ಅನಗತ್ಯ. ಮಾತುಮಾತಿಗೆ ಸಂಸ್ಕೃತ ಉಕ್ತಿಗಳನ್ನೋ ಶ್ಲೋಕಗಳನ್ನೋ ಉಲ್ಲೇಖೀಸುವುದು ಪಾಂಡಿತ್ಯ ಪ್ರದರ್ಶನವೆಂದುಕೊಳ್ಳಬೇಕಿಲ್ಲ. ಅದು ಸದ್ವಿಚಾರವನ್ನು ಒತ್ತಿ ಹೇಳುವ ರೀತಿಯಷ್ಟೆ. ಸಂಸ್ಕೃತ ಕಲಿಕೆಯಿಂದ ಉಚ್ಚಾರಣೆ ಶುದ್ಧಗೊಳ್ಳುವುದು. ಯಾವುದೇ ಒಂದು ಧರ್ಮಕ್ಕೆ, ರಾಜಕೀಯ ಪಕ್ಷದ ಸಿದ್ಧಾಂತಕ್ಕೆ ಸಂಸ್ಕೃತವನ್ನು ತಳುಕು ಹಾಕುವುದು ಸಲ್ಲದು. ಯಾವುದೇ ಭಾಷೆಯನ್ನು ಅತಿಕ್ರಮಿಸದ, ಸಮಷ್ಟಿ ಹಿತದ ತರ್ಕಬದ್ಧ
ಭಾಷೆಯಾದ ಸಂಸ್ಕೃತ ಲೋಕಭಾಷೆಯಾಗಲರ್ಹ ಎನ್ನುವುದರಲ್ಲಿ ಉತ್ಪ್ರೇಕ್ಷೆಯಿಲ್ಲ.

– ಬಿಂಡಿಗನವಿಲೆ ಭಗವಾನ್‌

Advertisement

Udayavani is now on Telegram. Click here to join our channel and stay updated with the latest news.

Next