Advertisement

ಸಂಕಲಕರಿಯ ಸಂಕ; ಇನ್ನೂ ಮುಗಿದಿಲ್ಲ ಆತಂಕ

10:24 PM Mar 26, 2019 | Team Udayavani |

ಬೆಳ್ಮಣ್‌: ಸಂಕಲಕರಿಯದ ಶಾಂಭವಿ ಸೇತುವೆಗೆ ಬೊಲೆರೋ ಢಿಕ್ಕಿ ಹೊಡೆದು ನದಿಗೆ ಬಿದ್ದು ಜೀವ ಹಾನಿಯಾಗಿ 3 ತಿಂಗಳು ಕಳೆದರೂ ಲೋಕೋಪಯೋಗಿ ಇಲಾಖೆ ಎಚ್ಚೆತ್ತು ಕೊಂಡಿಲ್ಲ. ಬಣ್ಣ ಬಳಿದಿದ್ದು ಬಿಟ್ಟರೆ ಇನ್ನೂ ಇಕ್ಕೆಲಗಳಿಗೆ ತಡೆ ಗೋಡೆ ನಿರ್ಮಿಸಿಲ್ಲ. ಆ ಜೀಪು ಪಲ್ಟಿ ಪ್ರಕರಣದಲ್ಲಿ ಓರ್ವ ಮಹಿಳೆ ನೀರಿನಲ್ಲಿ ಮುಳುಗಿ ಜೀವ ಸಮಾಧಿಯಾಗಿದ್ದರೆ ಇನ್ನು ಮೂವರನ್ನು ಸ್ಥಳೀಯ ಯುವಕರ ತಂಡ ರಕ್ಷಿಸಿತ್ತು.

Advertisement

65 ವರ್ಷಗಳ ಹಳೆ ಸೇತುವೆ
ಸುಮಾರು 65 ವರ್ಷಗಳ ಹಿಂದಿನ ಹಳೆ ಸೇತುವೆ ಇದಾಗಿದ್ದು, ಸಿಮೆಂಟಿನ ಪುಟ್ಟ ಕಂಬಗಳು ಮಾತ್ರ ಇವೆ. ಪೂರ್ಣ ಪ್ರಮಾಣದ ತಡೆಗೋಡೆ ಇಲ್ಲ. ಬಳಿಕ ತಡೆಗೋಡೆ ಒತ್ತಾಯ ಬಲವಾಗಿ ಕೇಳಿ ಬಂದಿತ್ತು. ಈ ಬಗ್ಗೆ ಇಲಾಖೆಯ ಜನ ಮರುದಿನವೇ ಬಂದು ಸರ್ವೆ ಮುಗಿಸಿಯೂ ತೆರಳಿದ್ದರು. ಆದರೆ ಆ ಸರ್ವೆಯ ಕಡತ ಕಸದ ಬುಟ್ಟಿ ಸೇರಿರ ಬಹುದೇನೋ ಎನ್ನುವ ಶಂಕೆ ಜನರಲ್ಲಿ ದಟ್ಟವಾಗಿದೆ. ಅಪಘಾತ ವೇಳೆ ಕಂಬ ಗಳು ಮತ್ತು ಪುಟ್ಟ ಸಿಮೆಂಟಿನ ಕಟ್ಟೆ ಒಡೆದು ಹೋಗಿದ್ದು ಈಗಲೂ ಹಾಗೇ ಇದೆ.

ಸೇತುವೆಯಲ್ಲೂ ಬಿರುಕು
ಈ ಹಳೇ ಸೇತುವೆ ಅಲ್ಲಲ್ಲಿ ಬಿರುಕು ಬಿಟ್ಟಿದ್ದು ಉದಯವಾಣಿ ಈ ಹಿಂದೆಯೇ ಸಚಿತ್ರ ವರದಿ ಪ್ರಕಟಿಸಿದ್ದು ಈ ಬಗ್ಗೆಯೂ ಇಲಾಖೆ ನಿರ್ಲಕ್ಷé ತೋರಿದೆ. ಈ ಬಗ್ಗೆ ಒಂದಿಷ್ಟೂ ಕಾಳಜಿ ತೋರದೇ ಹೋದಲ್ಲಿ ಮುಂದೆ ಇನ್ನಷ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ.

ಗಡಿಯ ಗೊಂದಲ
ಈ ಸೇತುವೆ ಮಂಗಳೂರು ಮತ್ತು ಉಡುಪಿಯನ್ನು ಬೇರ್ಪಡಿಸುವ ಗಡಿ ಯಾದ್ದರಿಂದ ಇಲಾಖೆಗಳ ನಡುವೆ ಒಂದಿಷ್ಟು ಗಡಿಯ ಬಗ್ಗೆ ಗೊಂದಲವಿದೆ.
ಜನವರಿಯ ದುರಂತದಲ್ಲಿ ಕಂದಾಯ ಇಲಾಖೆಯ ಸಹಕಾರದಿಂದ ಸೇತುವೆಯನ್ನು ಅಳೆದ ಬಳಿಕ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯವರು ಕೇಸು ಸ್ವೀಕರಿಸಿದ್ದರು. ದುರಂತದಲ್ಲಿ ಮಡಿದವರಿಗೆ ವಿಮಾ ಯೋಜನೆ ಪಡೆಯುವಲ್ಲಿ ತೊಂದರೆ ಯಾಗುವುದು ಬೇಡ ಎನ್ನುವ ಉದ್ದೇಶವೂ ಪೊಲೀಸರಲ್ಲಿದ್ದುದರಿಂದ ಈ ಚರ್ಚೆ ಸಹಜವಾಗಿಯೇ ನಡೆದು ತಾರ್ಕಿಕ ಅಂತ್ಯ ಕಂಡಿತ್ತು. ಆದರೆ ಸೇತುವೆಗೆ ತಡೆಗೋಡೆ ನಿರ್ಮಿಸಲು ಮಂಗಳೂರಿನ ಲೋಕೋಪಯೋಗಿ ಇಲಾಖೆ ಸ್ಪಂದಿಸಬೇಕಾಗಿದೆ ಎನ್ನುವುದು ಪರಿಣತರ ವಾದ.

ತಡೆಬೇಲಿ ಅಗತ್ಯ
ಈ ಹಳೇ ಸೇತುವೆಗೆ ಕಾಯಕಲ್ಪ ಒದಗಿಸಬೇಕಾದುದು ಇಲಾಖೆಯ ಕರ್ತವ್ಯ, ಕೇವಲ ಸುಣ್ಣ ಬಣ್ಣ ಬಳಿದರೆ ಸಾಲದು ದುರಸ್ತಿ ಸಹಿತ ಇಕ್ಕೆಲಗಳಿಗೆ ತಡೆಬೇಲಿ ಅಗತ್ಯ.
-ಸ್ವರಾಜ್‌ ಶೆಟ್ಟಿ, ಮುಂಡ್ಕೂರು ದೊಡ್ಡಮನೆ

Advertisement

ಕ್ರಮ ಕೈಗೊಳ್ಳಿ
ಈ ಹಳೇ ಸೇತುವೆಯ ಬಗ್ಗೆ ಇಲಾಖೆಯ ಈ ಬಗೆಗಿನ ನಿರ್ಲಕ್ಷé ಖಂಡನೀಯ, ಇನ್ನೊಂದು ದುರಂತ ಸಂಭವಿಸುವ ಮುನ್ನ ಕ್ರಮ ಕೈಗೊಳ್ಳಿ.
-ರಮೇಶ್‌ ಪಿ.ಉಳೆಪಾಡಿ, ಗ್ರಾಮಸ್ಥ

ಕಂಬಗಳ ಪುನರ್‌ ನಿರ್ಮಾಣ
ಸಂಕಲಕರಿಯ ಶಾಂಭವಿ ನದಿ ಸೇತುವೆ ಮುಳುಗುವ ಸೇತುವೆಯ ಪಟ್ಟಿಯಲ್ಲಿದ್ದು, ಸೇತುವೆಗೆ ತಡೆಗೋಡೆ ನಿರ್ಮಿಸುವ ಸಾಧ್ಯತೆ ಇಲ್ಲ. ಬದಲಾಗಿ ಎಚ್ಚರಿಕೆ ಫಲಕ ಅಥವಾ ಹಂಪ್ಸ್‌ ಗಳನ್ನು ನಿರ್ಮಿಸಬಹುದು. ಈಗಾಗಲೇ ಜನವರಿಯ ದುರಂತದ ಬಳಿಕ ಕಾರ್ಕಳ ಪೊಲೀಸ್‌ ಇಲಾಖೆಯಿಂದ ನಮ್ಮ ಇಲಾಖೆಗೆ ಪತ್ರ ಬಂದಿದ್ದು, ಉತ್ತರಿಸಲಾಗಿದೆ. ಸದ್ಯ ಸೇತುವೆಯ ಮುರಿದ ಕಂಬಗಳನ್ನು ಪುನರ್‌ ನಿರ್ಮಿಸಲಾಗುವುದು. ಮುಂದೆ ಸರಕಾರದ ಗಮನಕ್ಕೆ ತಂದಲ್ಲಿ ಸೇತುವೆಯನ್ನು ಮೇಲ್ಮಟ್ಟಕ್ಕೇರಿಸಿ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಬಹುದು.
-ರವಿ ಕುಮಾರ್‌, ಎಇ ಲೋಕೋಪಯೋಗಿ ಇಲಾಖೆ ದ.ಕ.

Advertisement

Udayavani is now on Telegram. Click here to join our channel and stay updated with the latest news.

Next