Advertisement

ಮತ್ತೆ ಕ್ಯಾಮೆರಾ ಮುಂದೆ ಸಾಂಗ್ಲಿಯಾನ

11:55 AM May 27, 2017 | |

ನಿವೃತ್ತ ಪೊಲೀಸ್‌ ಅಧಿಕಾರಿ ಸಾಂಗ್ಲಿಯಾನ ಅವರ ಕುರಿತ ಮೂರು ಚಿತ್ರಗಳು ಬಂದಿದ್ದು, ಆ ಸಿನಿಮಾಗಳೂ ಸೂಪರ್‌ಹಿಟ್‌ ಆಗಿದ್ದು ಎಲ್ಲರಿಗೂ ಗೊತ್ತಿದೆ. ಈಗ ಹೊಸ ವಿಷಯ ಏನೆಂದರೆ, ನಿವೃತ್ತ ಪೊಲೀಸ್‌ ಅಧಿಕಾರಿ ಸಾಂಗ್ಲಿಯಾನ ಅವರು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ “ಸಂತ’ ಚಿತ್ರದಲ್ಲಿ ಅವರು ಪೊಲೀಸ್‌ ಕಮೀಷನರ್‌ ಆಗಿ ನಟಿಸಿದ್ದುಂಟು. ಬಹಳ ವರ್ಷಗಳ ಗ್ಯಾಪ್‌ ಬಳಿಕ ಮತ್ತೆ ಅವರು ತೆರೆಯ ಮೇಲೆ ಪೊಲೀಸ್‌ ಅಧಿಕಾರಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ವಿಶೇಷ.

Advertisement

ಅಂದಹಾಗೆ, ಅವರು ನಟಿಸುತ್ತಿರುವ ಚಿತ್ರದ ಹೆಸರು “ಶಿವನಪಾದ’. ಮಾ. ಚಂದ್ರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಟಿ.ಮಂಜುನಾಥ್‌ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಕಥೆ ಹಾಗೂ ಪಾತ್ರವನ್ನು ಮೆಚ್ಚಿಕೊಂಡಿರುವ ಸಾಂಗ್ಲಿಯಾನ, ನಟಿಸಲು ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಇಷ್ಟರಲ್ಲೇ ಅವರ ಫೋಟೋ ಶೂಟ್‌ ಕೂಡ ನಡೆಸುವ ಯೋಚನೆಯಲ್ಲಿದ್ದಾರೆ ನಿರ್ದೇಶಕರು. ಇನ್ನುಳಿದಂತೆ ಚಿತ್ರಕ್ಕೆ ಕೃಷ್ಣ ಮತ್ತು ಆನಂದ್‌ಕುಮಾರ್‌ ಇಬ್ಬರು ಹೀರೋಗಳು.

ಕೃಷ್ಣ “ಮಾತುಕತೆ’ ಚಿತ್ರದಲ್ಲಿ ನಟಿಸಿದ್ದರೆ, ಆನಂದ್‌, ಕೆಲವು ಶಾರ್ಟ್‌ಫಿಲ್ಮ್ಸ್ನಲ್ಲಿ ನಟಿಸಿದ್ದಾರೆ. ಚಿರಶ್ರೀ ನಾಯಕಿಯಾಗಿದ್ದಾರೆ. ತುಳು ಹಾಗೂ ತೆಲುಗಿನ ಕೆಲ ಚಿತ್ರಗಳಲ್ಲಿ ನಟಿಸಿರುವ ಚಿರಶ್ರೀ, ಕನ್ನಡದಲ್ಲಿ “ಉಡುಂಬ’, “ಹುಲಿರಾಯ’ ಮತ್ತು “ಕರಿ ಕಂಬಳಿಯಲ್ಲಿ ಮಿಡಿ ನಾಗ’ ಚಿತ್ರದಲ್ಲಿ ನಟಿಸಿದ್ದಾರೆ. ಮಮತಾರಾವತ್‌ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯಾಗಿದ್ದು, ಜತೆಯಲ್ಲಿ ಹಾರರ್‌ ಟಚ್‌ಕೂಡ ಇದೆ ಎನ್ನುವ ನಿರ್ದೇಶಕರು.

ಸಂಪೂರ್ಣ ಜರ್ನಿಯಲ್ಲೇ ಕಥೆ ಸಾಗಲಿದೆ. ಬೆಂಗಳೂರು, ಮೈಸೂರು ಹಾಗೂ ತಲಕಾಡು ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗುವುದು ಎಂದು ವಿವರ ಕೊಡುತ್ತಾರೆ. ವೀರ್‌ಸಮರ್ಥ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಎರಡು ಹಾಡು ಒಂದು ಬಿಟ್‌ ಚಿತ್ರದಲ್ಲಿರಲಿದೆ. ನಂದಕುಮಾರ್‌ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಅರ್ಜುನ್‌ (ಕಿಟ್ಟು) ಸಂಕಲನ ಮಾಡುತ್ತಿದ್ದಾರೆ. ಜೂನ್‌ 23 ಕ್ಕೆ ಚಿತ್ರದ ಮುಹೂರ್ತ ನೆರವೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next