Advertisement

Sampaje: ನಡುರಾತ್ರಿ ರಸ್ತೆಯಲ್ಲಿ ಸಿಲುಕಿದವರಿಗೆ ಖಾದರ್‌ ಸಹಾಯಹಸ್ತ

11:55 PM Jul 19, 2024 | Team Udayavani |

ಅರಂತೋಡು: ಮೈಸೂರು-ಮಾಣಿ ಹೆದ್ದಾರಿಯ ಮಡಿಕೇರಿ ಘಾಟಿಯನ್ನು ದಿಢೀರ್‌ ಆಗಿ ಗುರುವಾರ ರಾತ್ರಿ 8 ಗಂಟೆಗೆ ಕೊಡಗು ಮತ್ತು ದ.ಕ. ಜಿಲ್ಲಾಡಳಿತದ ಮುಚ್ಚಿದ ಪರಿಣಾಮ ರಸ್ತೆ ಮಧ್ಯೆ ಬಾಕಿಯಾಗಿ ತೀವ್ರ ಸಂಕಷ್ಟದಲ್ಲಿದ್ದವರಿಗೆ ಸ್ಪೀಕರ್‌ ಯು.ಟಿ. ಖಾದರ್‌ ಅವರು ಸಹಾಯ ಮಾಡಿದ್ದಾರೆ.

Advertisement

ಮಡಿಕೇರಿ ಜನರಲ್‌ ಕಾರ್ಯಪ್ಪ ಸರ್ಕಲ್‌ ಬಳಿ ಮತ್ತು ಘಾಟಿ ಮಧ್ಯೆ ಮದೆನಾಡಿನಲ್ಲಿ ಹಾಗೂ ಸಂಪಾಜೆ ಚೆಕ್‌ಪೋಸ್ಟ್‌ ಬಳಿ ಪೊಲೀಸರು ಬ್ಯಾರಿಕೇಡ್‌ ಹಾಕಿ ರಸ್ತೆ ಬಂದ್‌ ಮಾಡಿದ್ದರು. ಇದರ ಮಾಹಿತಿ ಇಲ್ಲದೆ ಆ ಮಾರ್ಗದಲ್ಲಿ ಬಂದ ಹಲವಾರು ವಾಹನಗಳಲ್ಲಿದ್ದ ಮಹಿಳೆಯರು, ಮಕ್ಕಳು ಸಹಿತ ಅಪಾರ ಸಂಖ್ಯೆಯ ಪ್ರಯಾಣಿಕರು ರಸ್ತೆಯಲ್ಲೇ ಬಾಕಿಯಾದರು. ಈ ಸಂದರ್ಭ ಆ ರಸ್ತೆಯಾಗಿ ಪ್ರಯಾಣಿಸುತ್ತಿದ್ದ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ರಶೀದ್‌ ವಿಟ್ಲ ಅವರು ಸಮಸ್ಯೆ ಬಗ್ಗೆ ಸ್ಪೀಕರ್‌ಯು.ಟಿ.ಖಾದರ್‌ಗೆ ತಿಳಿಸಿದರು.

ಆಗ ರಾತ್ರಿ 12.30 ಆಗಿತ್ತು. ಯು.ಟಿ.ಖಾದರ್‌ ಕೂಡಲೇ ಮಂಗಳೂರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮತ್ತು ಕೊಡಗು ಎಸ್ಪಿ ರಾಮರಾಜನ್‌ ಅವರಿಗೆ ಸಮಸ್ಯೆಯ ಗಂಭೀರತೆ ಬಗ್ಗೆ ತಿಳಿಸಿದರು. ಈ ಇಬ್ಬರು ಅಧಿಕಾರಿಗಳಿಗೆ ರಶೀದ್‌ ವಿಟ್ಲ ಅವರು ವಸ್ತುಸ್ಥಿತಿ ಬಗ್ಗೆ ವಿವರಿಸಿದರು.

ಕೂಡಲೇ ಕಾರ್ಯಪ್ರವೃತ್ತರಾದ ಉನ್ನತ ಅಧಿಕಾರಿಗಳು ಅತಂತ್ರ ಸ್ಥಿತಿಯಲ್ಲಿದ್ದ ಎಲ್ಲಾ ವಾಹನಗಳನ್ನು ರಾತ್ರಿ 1.30ಕ್ಕೆ ಪೊಲೀಸ್‌ ಇಲಾಖೆಯ ಹೈವೇ ಪಟ್ರೋಲ್‌ ಹಾಗೂ ಪೊಲೀಸ್‌ ಕಣ್ಗಾವಲಲ್ಲಿ ಸುರಕ್ಷಿತವಾಗಿ ಮದೆನಾಡು ಪ್ರದೇಶದಿಂದ ಸಂಪಾಜೆಗೆ ತಲುಪಿಸುವ ವ್ಯವಸ್ಥೆ ಮಾಡಿದರು. ಸಂಪಾಜೆಯಿಂದ ಮಡಿಕೇರಿ ಕಡೆ ಹೋಗಬೇಕಾಗಿದ್ದ ವಾಹನಗಳನ್ನು ಮಡಿಕೇರಿಗೆ ತಲುಪಿಸಿದರು. ಇದರಿಂದಾಗಿ ನೂರಾರು ವಾಹನಗಳಲ್ಲಿದ್ದ ಕುಟುಂಬಿಕರು ನಿಟ್ಟುಸಿರು ಬಿಡುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next