Advertisement

ಸಾಲೂರಿನ ಆಂಜನೇಯ : ಭಕ್ತರ ಪಾಲಿನ ಆಪದ್ಬಾಂದವ

04:40 PM Sep 15, 2018 | |

ಸಾಲೂರಿನಲ್ಲಿ, ವೀರಶೈವ ಲಿಂಗಾಯತ ಮತಕ್ಕೆ ಸೇರಿದ ಗುರುಪರಂಪರೆಯ ಹಿನ್ನೆಲೆ ಹೊಂದಿದ ಮಠಗಳಿವೆ. ಸಂಪೂರ್ಣ ಶಿವಾರಾಧನೆಯ ವಾತಾರವಣ ಹೊಂದಿರುವ ಈ ಗ್ರಾಮದಲ್ಲಿ ಆಂಜನೇಯನ ದೇವಾಲಯ ಇರುವುದು ಸ್ವಾರಸ್ಯದ ಸಂಗತಿಯಾಗಿದೆ. 

Advertisement

ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲೂಕಿನ ಸಾಲೂರು ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ, ಭಕ್ತರ ಕಷ್ಟಕ್ಕೆ ನೆರವಾಗುವ ಆಪದ್ಭಾಂದವ ಎನ್ನುವ ಖ್ಯಾತಿ ಗಳಿಸಿದೆ. ಶಿಕಾರಿಪುರ-ಆನಂದಪುರ ಮುಖ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಈ ದೇವಾಲಯ ಪೂರ್ವಾಭಿಮುಖವಾಗಿದೆ. ದೇವಾಲಯಕ್ಕೆ ಪ್ರಾಚೀನ ಇತಿಹಾಸವಿದೆ. ಕೆಳದಿ ಅರಸು ಮನೆತನದ ಪ್ರಸಿದ್ಧ ರಾಜ ಶಿವಪ್ಪನಾಯಕನ ಸಾಮ್ರಾಜ್ಯ ಇಲ್ಲಿಯವರೆಗೂ ವಿಸ್ತರಿಸಿತ್ತು ಎಂಬ ಮಾತುಗಳಿವೆ. ಸುಂಕ ವಸೂಲಿ ಮತ್ತು ಆಡಳಿತದ ಭದ್ರತೆಗೆ ಶಿವಪ್ಪ ನಾಯಕನು ಹಲವು ಗ್ರಾಮಗಳಲ್ಲಿ ತನ್ನ ನಂಬಿಗಸ್ಥ ಕುಟುಂಬಸ್ಥರನ್ನು ನೇಮಿಸಿದ್ದನು. ಸಾಲೂರಿಗೆ ಹಿಂದೆ ಭದ್ರಗಿರಿನಗರ ಎಂಬ ಹೆಸರಿತ್ತು. ಊರಿನ ಬಾಗಿಲಿನಲ್ಲಿರುವ ಈ ಆಂಜನೇಯ ಗುಡಿಯನ್ನು ಶಿವಪ್ಪ ನಾಯಕ ಅಭಿವೃದ್ಧಿ ಪಡಿಸಿ, ನಿತ್ಯ ಪೂಜೆಗೆ ವ್ಯವಸ್ಥೆ ಕಲ್ಪಿಸಿದ್ದನು ಎನ್ನುತ್ತದೆ ಇತಿಹಾಸ. ಈ ಗ್ರಾಮದ ಮುಖ್ಯ ರಸ್ತೆಯ ಬದಿಗಳಲ್ಲಿ ಸಾಲಾಗಿ ಮಾವು, ಹುಣಸೆ, ಆಲ ಇತ್ಯಾದಿ ಮರಗಳನ್ನು ಬೆಳೆಸಲಾಗಿತ್ತು. ಸಾಲಾಗಿ ಮರಗಳಿರುವ ಊರು ಎಂಬ ಕಾರಣದಿಂದ ಸಾಲು ಮರದೂರು ಎಂಬ ಹೆಸರು ಬಂದು, ಆನಂತರ ಸಾಲೂರು ಎಂದಾಯಿತು. ಬಿದನೂರು ನಗರದ ದಾಳಿಯ ಸಂದರ್ಭದಲ್ಲಿ ಪರಕೀಯರ ದಾಳಿ ಈ ಗ್ರಾಮದ ವರೆಗೂ ತಟ್ಟಿತ್ತು. ಪರಕೀಯರ ದಾಳಿಯಿಂದ ದೇಗುಲ ಹಾಳಾಗಿದ್ದರಿಂದ ಮತ್ತು ಸುತ್ತಮುತ್ತಲ ಜನರ ವಲಸೆಯ ಕಾರಣದಿಂದ  ಹಲವು ವರ್ಷ ಪೂಜೆ ಪುನಸ್ಕಾರಗಳಿಲ್ಲದೆ ಉಳಿದಿತ್ತು. 

ಸಾಲೂರು  ಗ್ರಾಮದಲ್ಲಿ, ಕರ್ನಾಟಕದಲ್ಲಿಯೇ ಅಪರೂಪವೆನಿಸುವಂಥ ಪುರಾಣ ಪ್ರಸಿದ್ಧವಾದ ಪಂಚಲಿಂಗ ದೇವಾಲಯಗಳಿವೆ. ಶಿಕಾರಿಪುರ-ಆನಂದಪುರಂ ಮುಖ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಖಂಡುಗ ಶಿವಾಲಯ, ಪೂರ್ವ ದಿಕ್ಕಿನ ಗಡಿಭಾಗದಲ್ಲಿ ಭದ್ರೇಶ್ವರ ಶಿವಾಲಯ, ಪಶ್ಚಿಮ ದಿಕ್ಕಿನ ಗಡಿಭಾಗದಲ್ಲಿ ವಿಶ್ವೇಶ್ವರ ಶಿವಾಲಯ, ಹಿರೇಮಠದ ಮುಂಭಾಗದಲ್ಲಿ ಬ್ರಹೆ¾àಶ್ವರ, ಗ್ರಾಮವು ಮಧ್ಯಭಾಗದಲ್ಲಿ ರುದ್ರೇಶ್ವರ ಶಿವಾಲಯವೂ ಇದೆ. ಇಷ್ಟೇ ಅಲ್ಲದೆ, ಈ ಗ್ರಾಮದಲ್ಲಿ ವೀರಶೈವ ಲಿಂಗಾಯತ ಮತಕ್ಕೆ ಸೇರಿದ ಐದು ಗುರುಪರಂಪರೆ ಹೊಂದಿರುವ ಐದು (ಪಂಚ) ಮಠಗಳನೂ ಹೊಂದಿತ್ತು. ಅವುಗಳೆಂದರೆ ಹಿರೇಮಠ, ಆರಾಧ್ಯಮಠ, ಗಡ್ಲಮಠ, ಚಿಕ್ಕಮಠ ಮತ್ತು ಸಾವಿರ ಮಠ. ಆದರೆ ಈಗ ಅಸ್ತಿತ್ವದಲ್ಲಿರುವ ಮಠಗಳು ಹಿರೇಮಠ ಮತ್ತು ಆರಾಧ್ಯ ಮಠಗಳು ಮಾತ್ರ.

ಈ ಎಲ್ಲ ದೃಷ್ಟಿಯಿಂದ ನೋಡಿದರೆ, ಶಿವಾರಾಧನೆಯ ವಾತಾವರಣ ಹೊಂದಿರುವ ಈ ಗ್ರಾಮದ ಹೃದ್ಯಭಾಗದಲ್ಲಿ ಶ್ರೀ ಆಂಜನೇಯ ದೇವಾಲಯ ಇರುವುದು ಸ್ವಾರಸ್ಯ ಸಂಗತಿಯಾಗಿದೆ. 

ಈಗ ದೇವಾಲಯ ಇರುವ ಸ್ಥಳದಲ್ಲಿ ಸುಮಾರು 50 ವರ್ಷಗಳ ಹಿಂದೆ ಗರಡಿ ಮನೆ ಇತ್ತು. ಇದೇ ಗರಡಿಮನೆಯ ಆವರಣವನ್ನು ಸೇರಿಸಿ ಸರಕಾರಿ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗಿತ್ತು.   ಶಾಲೆಯಲ್ಲಿ ನಡೆಯುವ ಪ್ರಮುಖ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಈ ದೇವರಿಗೂ ಪೂಜೆ ಸಲ್ಲಿಸಲಾಗುತ್ತಿತ್ತು. ಸರಕಾರಿ ಪ್ರಾಥಮಿಕ ಶಾಲೆಗೆ ಪ್ರತ್ಯೇಕ ಕಟ್ಟಡ ನಿರ್ಮಾಣವಾದ ನಂತರ ಈ ಸ್ಥಳ ದೇವರ ಗುಡಿಯಾಗಿ ಬದಲಾಯಿತು.  2008ರಲ್ಲಿ ಈ ಸ್ಥಳದಲ್ಲಿ ಸರಕಾರದ ಅನುದಾನದಿಂದ ಸಮುದಾಯ ಭವನ ನಿರ್ಮಿಸಲಾಯಿತು. ಇದರಿಂದ ದೇವರ ಪೂಜೆ, ಉತ್ಸವಗಳಿಗೆ ಹೆಚ್ಚು ಅನುಕೂಲವಾಯಿತು. ದೇವರ ವಿಗ್ರಹ ಭಿನ್ನವಾದ ಕಾರಣ ಶಿಕಾರಿಪುರ ತಾಲೂಕಿನ ನೂಲಿಗೆರೆಯ ಶಿಲ್ಪಿಯೊಬ್ಬರಿಂದ ಮೂಲ ಮೂರ್ತಿಯ ಮಾದರಿಯ ಹೊಸ ವಿಗ್ರಹ ಕೆತ್ತಿಸಿ, ಪುನರ್‌ ಪ್ರತಿಷ್ಠಾಪನಾ ಮಹೋತ್ಸವ ನಡೆಸಲಾಯಿತು.

Advertisement

ಸಾಲೂರಿನ ಹನುಮನಿಗೆ ಶ್ರಾವಣ ಮಾಸದಲ್ಲಿ ನಿತ್ಯವೂ ಬೆಳಗ್ಗೆ ವಿಶೇಷ ಅಲಂಕಾರ, ಪೂಜೆ ನಡೆಯುತ್ತದೆ. ದಸರಾ ಸಂದರ್ಭದಲ್ಲಿ ಪಾಡ್ಯ ದಿಂದ ನವಮಿಯವರೆಗೆ ವಿಜೃಂಭಣೆಯ ಪೂಜೆ ಮತ್ತು ಕೊನೆಯ ದಿನ  ವಿಜಯದಶಮಿಯಂದು ಸೀಮೋಲ್ಲಂಘನ ಮತ್ತು ಪಲ್ಲಕ್ಕಿ ಉತ್ಸವ ನಡೆಸಲಾಗುತ್ತದೆ. ಎಲ್ಲಾ ಹಬ್ಬಗಳಂದು ಗ್ರಾಮದ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. 

ಫೋಟೋ ಮತ್ತು ಲೇಖನ-ಎನ್‌.ಡಿ.ಹೆಗಡೆ ಆನಂದಪುರಂ

Advertisement

Udayavani is now on Telegram. Click here to join our channel and stay updated with the latest news.

Next