Advertisement

ಕೃಷಿ ಪ್ರದೇಶಗಳಿಗೆ ಉಪ್ಪು ನೀರಿನ ಹಾವಳಿ

11:33 PM Feb 27, 2020 | Sriram |

ಕುಂದಾಪುರ: ಹತ್ತಾರು ಎಕರೆ ಕೃಷಿ ಪ್ರದೇಶಗಳಿದ್ದರೂ, ಉತ್ತಮ ಬೆಳೆ ತೆಗೆಯಲಾಗದ, ಬಾವಿ, ಕೆರೆಗಳಲ್ಲಿ ಸಮೃದ್ಧ ನೀರಿದ್ದರೂ, ಕುಡಿಯಲು, ಕೃಷಿಗೆ ಬಳಸಲಾಗದ ಸ್ಥಿತಿ ಇಲ್ಲಿನದು. ಇಲ್ಲಿರುವ ಹೊಳೆಗೆ ಎತ್ತರದಲ್ಲಿ ನದಿ ದಂಡೆಯನ್ನು ನಿರ್ಮಿಸಿದಲ್ಲಿ ಉಪ್ಪು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ ಎನ್ನುವುದು ಈ ವಾರ್ಡಿನ ಜನರ ಬೇಡಿಕೆ. “ಸುದಿನ ವಾರ್ಡ್‌’ ಸುತ್ತಾಟದ ವೇಳೆ ಕೋಡಿ ದಕ್ಷಿಣ ವಾರ್ಡ್‌ (ವಾರ್ಡ್‌ ಸಂಖ್ಯೆ -14)ನ ಜನರು ಪತ್ರಿಕೆ ಗಮನಕ್ಕೆ ತಂದ ಪ್ರಮುಖ ಸಮಸ್ಯೆಯಿದು.

Advertisement

ಅಸಮರ್ಪಕ ಕಾಮಗಾರಿ
ಇಲ್ಲಿನ ಶ್ರೀ ರಾಮ ವಿದ್ಯಾ ಕೇಂದ್ರದ ಬಳಿಯಿಂದ ಸೌಹಾರ್ದ ಕೇಂದ್ರದವರೆಗೆ ಹೊಸದಾಗಿ ವಿನಾಯಕ – ಕೋಡಿಯ ಮುಖ್ಯ ರಸ್ತೆಯ ಬದಿಗೆ ಇಂಟರ್‌ಲಾಕ್‌ಗಳನ್ನು ಅಳವಡಿಸಿದ್ದಾರೆ. ಆದರೆ ಅಸಮರ್ಪಕ ಕಾಮಗಾರಿಯಿಂದಾಗಿ ರಸ್ತೆ ಹಾಗೂ ಇಂಟರ್‌ಲಾಕ್‌ ಮಧ್ಯೆ ಬಿರುಕು ಕಾಣಿಸಿಕೊಳ್ಳುತ್ತಿದೆ. ಮಳೆಗಾಲದಲ್ಲಿ ಇದು ಮತ್ತಷ್ಟು ಬಿಗಡಾಯಿಸುವ ಸ್ಥಿತಿ ಬರಬಹುದು ಎನ್ನುವುದು ಜನರ ಅಭಿಪ್ರಾಯ.

ಬೀದಿದೀಪಗಳಿಲ್ಲ
ಇಲ್ಲಿರುವ ಅನೇಕ ರಸ್ತೆಗಳಿಗೆ ಬೀದಿ ದೀಪಗಳೇ ಇಲ್ಲ. ಕತ್ತಲೆ ವೇಳೆ ಇಲ್ಲಿ ಸಂಚರಿಸುವುದು ಕೂಡ ಕಷ್ಟಕರ. ಅನೇಕ ಸಮಯಗಳಿಂದ ಈ ಬಗ್ಗೆ ಪುರಸಭೆ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಜನ.

ಕಸಕ್ಕೆ ಕಡಿವಾಣ?
ಇದು ಕಡಲ ತೀರದ ವಾರ್ಡ್‌ ಆಗಿದ್ದು, ಇಲ್ಲಿಗೆ ಅನೇಕ ಮಂದಿ ಪ್ರವಾಸಿಗರು ದೂರ- ದೂರದ ಊರುಗಳಿಂದ ಬರುತ್ತಾರೆ. ಆದರೆ ಇಲ್ಲಿರುವ ಬೀಚ್‌ ಬದಿಗಳಲ್ಲಿ ಸ್ವತ್ಛತೆಗೆ ಆದ್ಯತೆಯೇ ನೀಡಿಲ್ಲ. ಎಷ್ಟೇ ಸ್ವತ್ಛ ಮಾಡಿದರೂ, ವಾಹನಗಳಲ್ಲಿ ಬೇರೆ ಬೇರೆ ಕಡೆಗಳಿಂದ ಬರುವ ಜನರು ಇಲ್ಲಿನ ಬೀಚ್‌ ಬದಿ ಕಸ ಎಸೆದು ಹೋಗುತ್ತಾರೆ. ಇದಕ್ಕೆ ಕಡಿವಾಣ ಹಾಕುವುದು ಯಾರು ಎನ್ನುವುದು ನಾಗರೀಕರ ಪ್ರಶ್ನೆಯಾಗಿದೆ.

ಕಾಮಗಾರಿ
15ನೇ ವಾರ್ಡ್‌ ಹಾಗೂ 14 ನೇ ವಾರ್ಡ್‌ ಒಳಗೊಂಡಂತೆ ಕೋಡಿ ದಕ್ಷಿಣ ವಾರ್ಡ್‌ ಭಾಗದಲ್ಲಿ ಸುಮಾರು 2.50 ಲಕ್ಷ ರೂ. ವೆಚ್ಚದಲ್ಲಿ ತೋಡಿಗೆ ದಂಡೆ ನಿರ್ಮಿಸಲಾಗಿದೆ. ಆದರೆ ಅದಕ್ಕೆ ಕೊನೆಯಲ್ಲಿ ಹಲಗೆ ಅಳವಡಿಸಬೇಕು ಎನ್ನುವುದು ಜನರ ಬೇಡಿಕೆಯಾಗಿದೆ. ಇದಲ್ಲದೆ 4 ಲಕ್ಷ ರೂ. ವೆಚ್ಚದಲ್ಲಿ 49 ಮೀಟರ್‌ ಕಾಂಕ್ರೀಟಿಕರಣ ಕಾಮಗಾರಿ ಆಗಿದೆ. ಇಲ್ಲಿನ ಎಲ್ಲ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಈಗಾಗಲೇ ನೀರು ಪೂರೈಕೆಗೆ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದೆ.

Advertisement

ರಸ್ತೆ ವಿಸ್ತರಣೆ
ವಿನಾಯಕದಿಂದ ಕೋಡಿಗೆ ಸಂಪರ್ಕಿಸುವ ರಸ್ತೆ ಹಾಗೂ ಎಂ. ಕೋಡಿಯಿಂದ ಆರಂಭಗೊಂಡು, ಕೋಡಿ ತಲೆಯವರೆಗಿನ ರಸ್ತೆ ಕಿರಿದಾಗಿದ್ದು, ಈ ಮಾರ್ಗದಲ್ಲಿ ನಿತ್ಯ ಬಸ್‌ಗಳು, ಶಾಲಾ ಮಕ್ಕಳ ಬಸ್‌ಗಳು ಸಂಚರಿಸುತ್ತವೆ. ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬಸ್‌ ಅಥವಾ ಇತರೆ ವಾಹನ ಬಂದರೆ, ಇನ್ನೊಂದು ವಾಹನ ರಸ್ತೆಯಿಂದ ಕೆಳಗಿಳಿಯಬೇಕು. ರಸ್ತೆ ಅಗಲೀಕರಣವಾದರೆ ಅನುಕೂಲವಾಗುತ್ತದೆ ಎನ್ನುವುದು ಇಲ್ಲಿನ ನಾಗರೀಕರ ಅಭಿಪ್ರಾಯ.

ಆಗಬೇಕಾದ್ದೇನು?
ಗಡಿಯಾರ ಹಿತ್ಲು – ಚಕ್ರಮ್ಮ ದೇವಸ್ಥಾನ ಸಂಪರ್ಕ ರಸ್ತೆ ಕಾಮಗಾರಿ
 ಉಪ್ಪು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
 ಮೀನಿನ ಕೆರೆ ಸ್ವತ್ಛತೆ

ಮೀನಿನ ಕೆರೆ ಸ್ವತ್ಛಗೊಳಿಸಲಿ
ಈ ವಾರ್ಡ್‌ನಲ್ಲಿ 8 ಎಕರೆ ವಿಸ್ತೀರ್ಣದಲ್ಲಿರುವ ಮೀನಿನ ಕೆರೆಯನ್ನು ಮೀನು ಸಾಕಾಣಿಕೆಗೆ ಲೀಸ್‌ಗೆ ಕೊಡಲಾಗಿದೆ. ಆದರೆ ನಿಯಮದ ಪ್ರಕಾರ ಆ ಕೆರೆಯ ನೀರು ಪ್ರತಿ ದಿನ ಹೊರಗೆ ಬಿಟ್ಟು ಹೊಸ ನೀರು ಬಿಡಬೇಕು. ಆದರೆ ಇಲ್ಲಿ ಆ ಕೆಲಸ ಆಗುತ್ತಿಲ್ಲ. ಇದರಿಂದ ಕೆರೆಯ ನೀರು ಸಂಪೂರ್ಣ ಕಲುಷಿತಗೊಂಡಿದೆ. ಇಲ್ಲಿ ಕಸ – ಕಡ್ಡಿಗಳೆಲ್ಲ ಸೇರಿಕೊಂಡು, ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಈ ಭಾಗದಲ್ಲಿ ಸಾಂಕ್ರಾಮಿಕ ರೋಗ ಭೀತಿ ಕೂಡ ಆವರಿಸಿದೆ. ಆ ಕೆರೆಯನ್ನು ಸ್ವತ್ಛಗೊಳಿಸಲಿ. ಇದರ ಹೂಳೆತ್ತದೆ ಹಲವು ವರ್ಷಗಳಾಗಿವೆ. ಕೃಷಿಗೆ ಅನುಕೂಲವಾಗುವಂತೆ ನದಿ ದಂಡೆ ನಿರ್ಮಿಸಲಿ.
– ದೀಪಕ್‌ ಪೂಜಾರಿ, ಕೋಡಿ ದಕ್ಷಿಣ

ತಡೆಗೋಡೆ ಬೇಕು
ಈ ವಾರ್ಡ್‌ನಲ್ಲಿ ಗರಿಷ್ಠ ಪ್ರಮಾಣದ ಕೃಷಿ ಭೂಮಿಯಿದೆ. ಆದರೆ ಗದ್ದೆಗಳಿಗೆ ಭರತದ ಸಮಯದಲ್ಲಿ ಉಪ್ಪು ನೀರು ಹಾವಳಿ ಇಡುವುದರಿಂದ ಕೃಷಿ ಬೆಳೆಗಳಿಗೆ ತೊಂದರೆಯಾಗುತ್ತಿದೆ. ಬೆಳೆದ ಕೃಷಿಯೆಲ್ಲ ನಾಶವಾಗುತ್ತಿದೆ. ಇದರಿಂದ ಗದ್ದೆಗಳನ್ನು ಹಡಿಲು ಬಿಡುವಂತಾಗಿದೆ. ನೀರಿನ ಪೂರೈಕೆಗೆ ಪೈಪ್‌ಲೈನ್‌ಗಾಗಿ ರಸ್ತೆಯೆಲ್ಲ ಅಗೆದಿದ್ದಾರೆ. ಆದರೆ ಇನ್ನೂ ಅದಕ್ಕೆ ಡಾಮರೀಕರಣ ಕಾಮಗಾರಿ ಆಗದೇ ರಸ್ತೆಯಿಡೀ ಹೊಂಡ – ಗುಂಡಿಗಳಂತೆ ಆಗಿದೆ.
– ಆನಂದ, ಕೋಡಿ ದಕ್ಷಿಣ

ನದಿ ದಂಡೆ ನಿರ್ಮಾಣಕ್ಕೆ 400 ಮೀ.ಗೆ
ಈಗಾಗಲೇ ಶಾಸಕರಿಗೆ ಬೇಡಿಕೆ ಸಲ್ಲಿಸಲಾಗಿದೆ. ಇದಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದೆ. ಇದಲ್ಲದೆ ಎಂ.ಕೋಡಿಯಲ್ಲೊಂದು ಸುಂದರ ಸರ್ಕಲ್‌ ನಿರ್ಮಾಣದ ಪ್ರಸ್ತಾವವಿದೆ. ಇಲ್ಲಿ ಸ್ವಾಗತ ಗೋಪುರ, ವಿನಾಯಕ ಬಳಿ ಕೋಡಿಗೆ ಸ್ವಾಗತ ಗೋಪುರದ ಬೇಡಿಕೆಯಿದೆ. 4 ನೇ ಕ್ರಾಸ್‌ ರಸ್ತೆಗೆ ಪೈಪ್‌ಲೈನ್‌ ಕಾಮಗಾರಿ ನಿರ್ವಹಿಸುವವರೇ ಡಾಮರೀಕರಣ ಮಾಡಿಕೊಡುತ್ತಾರೆ ಅಂತ ಭರವಸೆ ಕೊಟ್ಟಿದ್ದಾರೆ.
– ಅಶ#ಕ್‌, ಸದಸ್ಯರು, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next