ಉಪ್ಪಿನಂಗಡಿ: ಮಠ- ಕೊಪ್ಪಳ ಎಂಬಲ್ಲಿ ಮನೆಗೆ ತಾಗಿಕೊಂಡಿರುವ ಧರೆ ಕುಸಿಯುವ ಹಾಗೂ ಮನೆ ಬೀಳುವ ಹಂತದಲ್ಲಿದ್ದು, ಮನೆ ಮಂದಿ ಅಪಾಯದಲ್ಲೇ ದಿನ ಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ.
ಸಮಸ್ಯೆ ಬಗೆಹರಿಸಿ ನ್ಯಾಯ ಒದಗಿಸಿಕೊಡಬೇಕೆಂದು ಕೊಪ್ಪಳ ನಿವಾಸಿ ಮಹಮ್ಮದ್ ಎಂಬವರು ಉಪ್ಪಿನಂಗಡಿ ಗ್ರಾ.ಪಂ.ಗೆ ದೂರು ನೀಡಿದ್ದಾರೆ.
ಮಠ- ಕೊಪ್ಪಳದಲ್ಲಿ ನನ್ನ ಮನೆ ಎತ್ತರದ ಗುಡ್ಡದ ಮೇಲಿದೆ. ನನ್ನ ಮನೆಯ ಕೆಳಗೆ ಇಬ್ರಾಹಿಂ ಎಂಬವರ ಮನೆ ಇದ್ದು, ಅವರು ಮನೆಯ ಹಿಂಭಾಗದಲ್ಲಿರುವ ಧರೆಯನ್ನು ನನ್ನ ಮನೆಯ ಹತ್ತಿರದ ತನಕವೂ ಅಗೆದಿದ್ದಾರೆ. ಧರೆಯ ಪಕ್ಕದಲ್ಲಿ ನೀರು ಹರಿಯುವ ಚರಂಡಿ ಇದ್ದುದನ್ನೂ ತೆಗೆದಿದ್ದಾರೆ. ಇದರಿಂದಾಗಿ ಮಳೆಯ ನೀರು ಹೋಗಲು ಜಾಗವಿಲ್ಲದೆ ನನ್ನ ಮನೆಯ ಧರೆಯ ಬದಿಯಲ್ಲಿ ಇರುವ ಶೌಚಾಲಯದ ಗುಂಡಿಯ ನೀರು ಸೋರಿಕೆ ಆಗತೊಡಗಿದೆ. ಹೀಗಾಗಿ ಮನೆಯ ಗೋಡೆ ಬದಿಯಲ್ಲಿ ಒರತೆ ಬರತೊಡಗಿದ್ದು, ಮನೆ ಬೀಳುವ ಹಂತಕ್ಕೆ ತಲುಪಿದೆ ಎಂದು ದೂರಿನಲ್ಲಿ ಆಪಾದಿಸಿದ್ದಾರೆ.
ಶೌಚಾಲಯಕ್ಕೆ ಬೇರೆಯೇ ಇಂಗು ಗುಂಡಿ ತೆಗೆಯಬೇಕಾದರೆ ಮನೆಯ ಮತ್ತೂಂದು ಬದಿಯಲ್ಲಿ ತೆಗೆಯಬೇಕಾಗಿದೆ. ಆ ಬದಿಗೆ ಹೋಗಲು ರಸ್ತೆಯ ಅಗತ್ಯವಿದ್ದು, ಪ್ರಸಕ್ತ ಇದ್ದ ರಸ್ತೆಯನ್ನು ಅತಿಕ್ರಮಿಸಲಾಗಿದೆ. ಗ್ರಾ.ಪಂ. ವತಿಯಿಂದ ರಸ್ತೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಾರೆ.
ರಸ್ತೆ ಅತಿಕ್ರಮಣದಿಂದ ಸಮಸ್ಯೆ
ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಪ್ರತಿಕ್ರಿಯಿಸಿ, ಮಹಮ್ಮದ್ ಅವರು ನೀಡಿರುವ ದೂರಿನ ಮೇರೆಗೆ ಘಟನೆಯ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಅಪಾಯದಲ್ಲಿ ಇರುವ ಮನೆಯ ಬದಿಯಲ್ಲಿ ಧರೆ ತೆಗೆದಿರುವ ಇಬ್ರಾಹಿಂ ಧರೆಯನ್ನು ಜಾಸ್ತಿಯೇ ತೆಗೆದಿದ್ದಾರೆ. ರಸ್ತೆಯನ್ನು ಅತಿಕ್ರಮಿಸಿ ಶೌಚಾಲಯದ ಇಂಗು ಗುಂಡಿ ನಿರ್ಮಿಸಿದ್ದಾರೆ. ಮಹಮ್ಮದ್ ಅವರು ಇಂಗುಗುಂಡಿ ಬೇರೆ ಕಡೆಗೆ ಸ್ಥಳಾಂತರಿಸಲು ಸಿದ್ಧರಿದ್ದು, ಅವರಿಗೆ ಜೆಸಿಬಿ ಯಂತ್ರ ಹೋಗಲು ರಸ್ತೆಯೇ ಇಲ್ಲದಂತಾಗಿದೆ. ಅಬ್ದುಲ್ ರಜಾಕ್ ಮನೆಯವರಿಗೆ ಅತಿ ಕ್ರಮಿಸಿರುವ ರಸ್ತೆ ತೆರವು ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.