Advertisement

ಸಾಲಿಗ್ರಾಮ ಪ.ಪಂ. ಸಾಮಾನ್ಯ ಸಭೆಯಲ್ಲಿ  ಕಸ… ಕಸ…ಕಸ…

07:30 AM Sep 07, 2017 | |

ಕೋಟ: ಸಾಲಿಗ್ರಾಮ ಪ.ಪಂ. ಸಾಮಾನ್ಯ ಸಭೆ ಸೆ. 5ರಂದು ಪ.ಪಂ. ಅಧ್ಯಕ್ಷೆ ರತ್ನಾ ನಾಗರಾಜ್‌ ಗಾಣಿಗ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ಪ.ಪಂ. ವ್ಯಾಪ್ತಿಯ ಕಸ ವಿಲೇವಾರಿಯ ಸಮಸ್ಯೆ ಹಾಗೂ ಶಾಶ್ವತ ಪರಿಹಾರ, ವಾಮಮಾರ್ಗದ ಮೂಲಕ ಕಸ ಹೆಚ್ಚುವಂತೆ ಮಾಡುತ್ತಿರುವುದು, ಕಸ ವಿಲೇವಾರಿ ಮಾಡುವ ಪೌರಕಾರ್ಮಿಕರ ಸಮಸ್ಯೆ ಸೇರಿದಂತೆ ಬಹುತೇಕ ಕಸ ಕೇಂದ್ರೀಕೃತವಾಗಿ   ಚರ್ಚೆ ನಡೆಯಿತು.

Advertisement

ಕಸ ವಿಲೇವಾರಿಯಲ್ಲಿ 
ಅಕ್ರಮವೆಂಬ ಆರೋಪ

ಸಾಲಿಗ್ರಾಮ ತಾತ್ಕಾಲಿಕ ಡಂಪಿಂಗ್‌ಯಾರ್ಡ್‌ಗೆ ಬೇರೆ ಗ್ರಾ.ಪಂ.ನಿಂದ ಕಸವನ್ನು ಅಕ್ರಮವಾಗಿ ತಂದು ಹಾಕಿ ಕಸ ಹೆಚ್ಚವಂತೆ ಮಾಡುತ್ತಿರುವುದು ಸಾಕ್ಷಿ ಸಮೇತ ಪತ್ತೆಯಾಗಿದೆ. ಈ ರೀತಿ ಹಲವು ವರ್ಷದಿಂದ ನಡೆಯುತ್ತಿದ್ದು ಇದರಲ್ಲಿ  ಕಸವಿಲೇವಾರಿ ಮಾಡುವ ಗುತ್ತಿಗೆದಾರರು ನೇರವಾಗಿ ಭಾಗಿಯಾಗಿದ್ದಾರೆ.  ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮಕೃಗೊಳ್ಳಬೇಕು ಎಂದು ಉಪಾಧ್ಯಕ್ಷ ಉದಯ ಪೂಜಾರಿ ಆಗ್ರಹಿಸಿದರು. ನೀವು ಆರೋಪ ಮಾಡುತ್ತಿರುವ ಗುತ್ತಿಗೆದಾರ ಸುರೇಶ ಶೆಟ್ಟಿ ಅವರ ಗುತ್ತಿಗೆ ಅವಧಿ ಇದೀಗ ಮುಗಿದಿದ್ದು, ಸಾಮಾನ್ಯಸಭೆಯ ಅನುಮೋದನೆ ಇಲ್ಲದೆ  ಕಸ ಸಾಗಾಟಕ್ಕೆ ಮತ್ತೆ ಟೆಂಡರ್‌ ಕರೆಯಲಾಗಿದೆ. ಪುನಃ ಯಾರ ಗಮನಕ್ಕೂ ತಾರದೆ ಟೆಂಡರ್‌ ಕರೆದಿದ್ದು ಯಾಕೆ ಎಂದು  ಸದಸ್ಯ ಶ್ರೀನಿವಾಸ್‌ ಅಮೀನ್‌ ಪ್ರಶ್ನಿಸಿದರು ಹಾಗೂ ಪ.ಪಂ ಕೂಡ ಕ್ರಮಬದ್ಧವಾಗಿ ಕಸವಿಲೇವಾರಿ ಮಾಡುವ ಕುರಿತು ಆಲೋಚಿಸಬೇಕಿದೆ ಎಂದರು.

ಕಸ ಸಮಸ್ಯೆಗೆ ಶಾಶ್ವತ 
ಪರಿಹಾರ ಬೇಕಿದೆ

ಸಾಲಿಗ್ರಾಮದಲ್ಲಿ ಹತ್ತಾರು ವರ್ಷದಿಂದ ಕಸದ ಸಮಸ್ಯೆ ಬಗೆಹರಿಯದ ಸಮಸ್ಯೆಯಾಗಿದ್ದು  ಈ ಕುರಿತು ಗಂಭೀರ ಚಿಂತನೆಯಾಗಬೇಕು ಎಂದು ಸದಸ್ಯರು ಅಭಿಪ್ರಾಯಪಟ್ಟರು. ಈ ಕುರಿತು ಮಾತನಾಡಿದ ಸದಸ್ಯ ಕಾರ್ಕಡ ರಾಜು ಪೂಜಾರಿ, ಕಸದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ.  ಹಿಂದೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕೆದೂರಿನಲ್ಲಿ ಜಾಗ ಖರೀದಿ ಮಾಡಿ ಡಂಪಿಂಗ್‌ಯಾರ್ಡ್‌ ನಿರ್ಮಿಸಲು ಪ್ರಯತ್ನಿಸಲಾಗಿತ್ತು. ಆದರೆ ಸ್ಥಳೀಯಾಡಳಿತದ ಆಕ್ಷೇಪದಿಂದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಅನಂತರ ಈ ಕುರಿತು ಹೋರಾಟ ನಡೆಸಿದ್ದೇವೆ. ಬೇರೆ-ಬೇರೆ ಕಾರಣದಿಂದ ಇಲ್ಲಿಯ ತನಕ ಶಾಶ್ವತ ಪರಿಹಾರ ಸಾಧ್ಯವಾಗಿಲ್ಲ.  ಇನ್ನೂ ಕೂಡ ಈ ನಿಟ್ಟಿನಲ್ಲಿ ಗಂಭೀರ ಚಿಂತನೆಯಾಗಬೇಕಿದೆ ಎಂದರು. ಆಧುನಿಕ ವಿಧಾನಗಳನ್ನು ಬಳಸಿಕೊಂಡು, ಹಸಿ ಕಸಗಳನ್ನು ಮನೆಯಲ್ಲೇ ವಿಲೇವಾರಿ ಮಾಡಿದರೆ ಕಸದ ಸಮಸ್ಯೆಯಿಂದ ಮುಕ್ತವಾಗಬಹುದು. ಇಲ್ಲವಾದರೆ ಇದು ಬಗೆಹರಿಯದ ಸಮಸ್ಯೆ ಎಂದು ನಾಮನಿರ್ದೇಶಿತ ಸದಸ್ಯ ಅಚ್ಯುತ್‌ ಪೂಜಾರಿ ಅಭಿಪ್ರಾಯಪಟ್ಟರು.

ಕಸ ವಿಲೇವಾರಿ ಮಾಡುವ 
ಪೌರ ಕಾರ್ಮಿಕರ ಸಮಸ್ಯೆ

ಪ.ಪಂ.ನಲ್ಲಿ  ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ  ಪೌರಕಾರ್ಮಿಕರ ಪರಿಸ್ಥಿತಿ ತುಂಬಾ ಶೋಚನೀಯವಾಗಿದ್ದು, ಅತ್ಯಂತ ಕಡಿಮೆ ವೇತನದಲ್ಲಿ ಹೆಚ್ಚು ಕೆಲಸ ಮಾಡುತ್ತಿದ್ದೇವೆ. ಕನಿಷ್ಠ ಉಪಹಾರವನ್ನಾದರು ನೀಡುವಂತೆ ಮನವಿ ಮಾಡಿದರು,  ಖಾಯಂ ನೌಕರರಿಗೆ ಮಾತ್ರ ಉಪಹಾರ ನೀಡಿ ನಮಗೆ ತಾರತಮ್ಯ ಮಾಡಲಾಗುತ್ತಿದೆ. ಯಾರು  ನಮ್ಮ ಗೋಳು ಕೇಳುವವರಿಲ್ಲ  ಎಂದು ಪೌರಕಾರ್ಮಿಕರ ನಾಯಕಿ,  ಪ.ಪಂ. ಸದಸ್ಯೆ ಇಂದಿರಾ ತಿಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರು ಈ ಕುರಿತು ಬೇಸರ ವ್ಯಕ್ತಪಡಿಸಿದರು. ಮುಖ್ಯಾಧಿಕಾರಿ ಶ್ರೀಪಾದ್‌ ಪುರೋಹಿತ್‌ ಮಾತನಾಡಿ, ಪೌರ ಕಾರ್ಮಿಕರ ಸಮಸ್ಯೆಗೆ ನಾವು ಕಾರಣರಲ್ಲ, ಸಂಬಂಧಪಟ್ಟ ಇಲಾಖೆ ನಮಗೆ ಅನುದಾನ ನೀಡಿದರೆ  ಸೌಲಭ್ಯಗಳನ್ನು ನೀಡಬಹುದು. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಗುತ್ತಿಗೆ ಆಧಾರದ ನೌಕರರಿಗೆ ಸೌಕರ್ಯ ನೀಡಲು ಸಾಧ್ಯವಿಲ್ಲ ಎನ್ನುವ ಉತ್ತರ ಬಂದಿದೆ ಎಂದರು. ಈ ಸಮಸ್ಯೆಯನ್ನು ಯಾರು ನನ್ನ ಗಮನಕ್ಕೆ ತಂದಿಲ್ಲ ಎಂದು ಅಧ್ಯಕ್ಷೆ ರತ್ನಾ ನಾಗರಾಜ್‌ ತಿಳಿಸಿದರು. ಉಪಹಾರ ಮುಂತಾದ ಕನಿಷ್ಠ ಸೌಲಭ್ಯಗಳನ್ನು ಪ.ಪಂ. ಬೇರೆ ಮೂಲದಿಂದ  ಭರಿಸುವಂತೆ ನಿರ್ಣಯಿಸಲಾಯಿತು.

ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಎಲ್ಲ ಸದಸ್ಯರು ಕಡ್ಡಾಯವಾಗಿ ಹಾಜರಿಬೇಕು. ಗೈರಾದರೆ ಅದು ಪೌರಕಾರ್ಮಿಕರಿಗೆ ಅವಮಾನ ಮಾಡಿದಂತೆ ಎಂದು ಸದಸ್ಯೆ ಸಾಧು ಪಿ. ತಿಳಿಸಿದರು.  ಸಾಲಿಗ್ರಾಮಪ.ಪಂ. ವ್ಯಾಪ್ತಿಯಲ್ಲಿನ ಪರಿಶಿಷ್ಠ ಪಂಗಡದ ಜಾಗವನ್ನು ಅಳತೆ ಮಾಡಿಸಿ ಹೆಚ್ಚುವರಿ ಲಭ್ಯವಿರುವ ಜಾಗವನ್ನು ಬೇರೆ ಫಲಾನುಭವಿಗಳಿಗೆ ನೀಡುವಂತೆ ಅಚ್ಯುತ್‌ ಪೂಜಾರಿ ಮನವಿ ಸಲ್ಲಿಸಿದ್ದು ಈ ಕುರಿತು ಪರ-ವಿರೋಧ ಚರ್ಚೆ ನಡೆಯಿತು. ಸಾಮಾನ್ಯಸಭೆ ಶಿಸ್ತಿನಿಂದ ನಡೆಯಬೇಕು. ಚರ್ಚೆ ನಡೆಯುವಾಗ ಸದಸ್ಯರು ಬೇರೆ ವಿಚಾರದ ಕುರಿತು ಮಾತನಾಡುವುದು, ಕಾರ್ಯಸೂಚಿ ಬಿಟ್ಟು ಚರ್ಚಿಸುವುದು ಸರಿಯ್ಲಲ ಎಂದು ಸದಸ್ಯ ಸಂಜೀವ ದೇವಾಡಿಗ ವಿನಂತಿಸಿದರು. ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಕರುಣಾಕರ ಪೂಜಾರಿ ಆಯ್ಕೆಯಾಗಿರುವುದಾಗಿ ಸಭೆಯ ಗಮನಕ್ಕೆ ತರಲಾಯಿತು.

Advertisement

ಬಟ್ಟೆ  ಬೇಡ ಸರ್‌ ಹೊಟ್ಟೆಗೆ ಏನ್‌ ಕೊಟ್ಟಿದ್ದೀರಿ
ಗುತ್ತಿಗೆ ಆಧಾರದ ಪೌರಕಾರ್ಮಿಕರಿಗೆ ಯಾವ ಸೌಕರ್ಯ ಕೊಟ್ಟಿದ್ದೀರಿ ಎಂಬ ಸದಸ್ಯೆ ಇಂದಿರಾ ಅವರ ಪ್ರಶ್ನೆಗೆ, ಒಂದು ಜತೆ ಸಮವಸ್ತ್ರ,  ಕೈಗೆ ಗ್ಲೌಸ್‌ ಕೊಟ್ಟಿದ್ದೀವಿ ಎಂದು ಮುಖ್ಯಾಧಿಕಾರಿಗಳು ಉ¤ತರಿಸಿದಾಗ, ದಿನಕ್ಕೆ 200ರೂ ಸಂಬಳ ಕೊಡ್ತೀರಿ. ಇದ್ರಲ್ಲಿ ಸಂಸಾರ ನಡೆಸಲು ಸಾಧ್ಯವಾ? ಉಪಹಾರ ಕೇಳಿದ್ರೆ ಇಲ್ಲ ಅಂತೀರಿ, ನಾವು ಬಟ್ಟೆ ಬಗ್ಗೆ ಕೇಳೊಲ್ಲ   ಸರ್‌ ನಮ್ಮ ಹೊಟ್ಟೆಗೆ ಏನ್‌ ಕೊಟ್ಟಿದ್ದೀರಿ ಎಂದು ಬಾವುಕರಾಗಿ ಮಾತನಾಡಿದ್ದು  ಪೌರಕಾರ್ಮಿಕರ ಸಮಸ್ಯೆಯ ಕುರಿತು ಬೆಳಕು ಚೆಲ್ಲಿತು.

ಇಂದಿರಾ ಕ್ಯಾಂಟಿನ್‌ಗೆ ಮನವಿ ಸಲ್ಲಿಸಬಹುದೇ ? 
ಗುತ್ತಿಗೆ ಪೌರಕಾರ್ಮಿಕರಿಗೆ ಉಪಹಾರಕ್ಕೆ ಹೆಚ್ಚೆಂದರೆ ಇಪ್ಪತ್ತು ರೂ ಪ.ಪಂ.ನಿಂದ ನೀಡಬಹುದು ಎಂದು ಮುಖ್ಯಾಧಿಕಾರಿಗಳು ತಿಳಿಸಿದಾಗ, ಆ ಹಣಕ್ಕೆ ಒಂದು ಪ್ಲೇಟ್‌ ತಿಂಡಿ ಬರುವುದಿಲ್ಲ  ಎಂಬ ಅಭಿಪ್ರಾಯ ವ್ಯಕ್ತವಾಯಿತು.ಹಾಗಾದರೆ  ಪೌರಕಾರ್ಮಿಕರಿಗೆ ಹಾಗೂ ಬಡವರಿಗೆ ಅನುಕೂಲವಾಗುವಂತೆ ಸಾಲಿಗ್ರಾಮದಲ್ಲಿ ಇಂದಿರಾ ಕ್ಯಾಂಟಿನ್‌ ತೆರೆಯಲು ಬೇಡಿಕೆ ಸಲ್ಲಿಸಿದರೆ ಹೇಗೆ ಎಂದು ಉಪಾಧ್ಯಕ್ಷ ಉದಯ್‌ ಪೂಜಾರಿ ತಮಾಷೆಯಾಗಿ ಸಲಹೆ ನೀಡಿದ್ದು ಸ್ವಾರಸ್ಯಕರವಾಗಿತ್ತು.

ವೈನ್‌ಶೋಪ್‌ಗೆ ಪರ -ವಿರೋಧ
ಸಾಲಿಗ್ರಾಮ ಕಾರಂತ ಬೀದಿಯಲ್ಲಿ ವೈನ್‌ಶೋಪ್‌ ಪುನಃ ಆರಂಭಿಸಲಾಗುತ್ತಿದೆ. ಆದರೆ ಇದರ ಪಕ್ಕದಲ್ಲೇ  20ಲಕ್ಷ ರೂ ವೆಚ್ಚದಲ್ಲಿ ಪ.ಪಂ. ಶೌಚಾಲಯ ನಿರ್ಮಾಣವಾಗುತ್ತಿದೆ. ಹೀಗಾಗಿ ಅಲ್ಲಿ ವೈನ್‌ಶೋಪ್‌ ಇದ್ದರೆ  ಸಾರ್ವಜನಿಕರಿಗೆ ಸಮಸ್ಯೆಯಾಗಲಿದೆ. ಅದನ್ನು  ಸ್ಥಳಾಂತರಿಸಬೇಕು ಹಾಗೂ ಪರವಾನಿಗೆ ನವೀಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ಎಂದು ಸದಸ್ಯ ಶ್ರೀನಿವಾಸ್‌ ಅಮೀನ್‌ ಆಗ್ರಹಿಸಿದರು. ಕೇವಲ ಕಾರಂತ ಬೀದಿಯ ವೈನ್‌ಶೋಪ್‌ಗೆ ಮಾತ್ರ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಅಬಕಾರಿ ಕಾನೂನಿನಂತೆ ಮುಂದುವರಿಯಬೇಕು ಎಂದು ಸದಸ್ಯ  ಕರುಣಾಕರ ಪೂಜಾರಿ, ರಾಜು ಪೂಜಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next